ಕೆರೆನೋಟ-80 : ಕೆರೆ ಒತ್ತುವರಿ: ನುಂಗಣ್ಣರಿಗೆ ದೊಣ್ಣೆ ಏಟೋ? ತಪ್ಪಿಸಿಕೊಳ್ಳುವ ಜಾಣ್ಮೆಯೋ?
ರಾಜಧಾನಿ ಬೆಂಗಳೂರಿನಲ್ಲಿ ಒಂದಿಂಚು ಭೂಮಿಗೆ ಚಿನ್ನಕ್ಕಿಂತೂ ಹೆಚ್ಚು ಬೆಲೆ. ಅದಕ್ಕೇ ಒತ್ತುವರಿಯೆಂಬ ಪೆಡಂಭೂತಗಳು ಉದ್ಯಾನನಗರಿಯಲ್ಲಿ ಆವರಿಸಿಕೊಂಡು, ಜಲಮೂಲವಾದ ಕೆರೆಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತಿವೆ. ಇದರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಈ ಗುಳುಂ ರಾಜಕಾರಣಿಗಳು, ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಗೊತ್ತಿರುವ “ತೆರೆದ ರಹಸ್ಯ”.
ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಬೇಕೆಂಬ ಪ್ರಯತ್ನ ಆಗಾಗ್ಗೆ, ಅವಕಾಶಕ್ಕೆ ತಕ್ಕಂತೆ ಮಾತುಗಳಲ್ಲಿ ಆಗಿದೆ, ಆಗುತ್ತಲೂ ಇರುತ್ತದೆ. 1985ರಲ್ಲಿ ಲಕ್ಷ್ಮಣರಾವ್ ಸಮಿತಿ ರಚನೆಯಿಂದ ಹಿಡಿದು, ಇತ್ತೀಚಿಗೆ ವಿಧಾನಸಭೆಯಲ್ಲಿ ಮಂಡನೆಯಾದ ಕೋಳಿವಾಡ ನೇತೃತ್ವದ ಸಮಿತಿಯ ವರದಿವರೆಗೂ ಕೆರೆಗಳನ್ನು ಉಳಿಸುವ ಪ್ರಯತ್ನವೇ ಮಾತುಗಳೇ ನಡೆಯುತ್ತಲೇ ಇವೆ. ಆದರೆ, ಇಂತಹ ವರದಿಗಳು ಅನುಷ್ಠಾನ ಸಾಧ್ಯವೇ ಎಂಬುದನ್ನು “ಮಾತನಾಡುವ” ರಾಜಕಾರಣಿಗಳು ಹೇಳಲೇಬೇಕು. ವಿರೋಧಪಕ್ಷದಲ್ಲಿದ್ದಾಗ ವಿರೋಧ ಮಾಡವುದಕ್ಕಾಗಿಯೇ, ನಿಮ್ಮೆಲ್ಲ ರಹಸ್ಯಗಳನ್ನು ಬಿಚ್ಚಿಡುತ್ತೇನೆ ಎಂದು ಅಧಿಕಾರದಲ್ಲಿರುವವರ ಮೇಲೆ ತೋರವ ದರ್ಪ ಅವರೇ ಅಧಿಕಾರಕ್ಕೆ ಬಂದ ಮೇಲೆ ಮೂಲೆಸೇರಿಕೊಳ್ಳುತ್ತದೆ. ಜಾರಿಕೆ ಅಥವಾ ಆ ಸಮಯಕ್ಕೆ ವಿಷಯವನ್ನು ಮರೆಮಾಚಿ, ನುಣುಚಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನಗಳಾಗುತ್ತವೆ. “ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು” ಎಂಬಂತೆ ಎಲ್ಲ ರಾಜಕಾರಣಿಗಳು ಅದರಲ್ಲೂ ಅಧಿಕಾರದಲ್ಲಿರುವಾಗ ರಾಜಕಾರಣಿಗಳು ಮಾಡುವುದೇ ಇದನ್ನು. ಇದಕ್ಕೆ ಪ್ರಖ್ಯಾತ, ಪ್ರಭಾವಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಯಾರೂ ಕಡಿಮೆಯೇನಲ್ಲ.
ಇಂತಹ ಸಂದರ್ಭದಲ್ಲಿ ನಮ್ಮ ವಿಧಾನಸಭೆಯ ಮುಂದೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆಗಳ ಒತ್ತುವರಿ ಅಧ್ಯಯನ ಸಮಿತಿಯ ವರದಿ ಇದೆ. ಈ ಸಮಿತಿ ರಚನೆಗೆ ಕಾರಣವಾದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಇಂದು ಮುಖ್ಯಮಂತ್ರಿಯೂ ಹೌದು. ಈಗ ಅವರ ಮುಂದೆ ಸಮಿತಿ ವರದಿ ಇದೆ. ಅಂದು ತಾವಾಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೋ ಅಥವಾ ಅವರೂ “ಬೀಸೋ ದೊಣ್ಣೆ…” ಗಾದೆಯಂತೆ ಆ ಕಡೆ ತೂರಿಕೊಳ್ಳುತ್ತಾರೋ ಎಂಬುದು ಈಗಿನ ಪ್ರಶ್ನೆ.
ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ಎಚ್.ಡಿ. ಕುಮಾರಸ್ವಾಮಿ ಅವರು ಕೆರೆಗಳ ಒತ್ತುವರಿ ಬಗ್ಗೆ ಅವರಾಡಿದ್ದ ಮಾತುಗಳು ಹಾಗೂ ಅವರೇ ನೀಡಿದ್ದ ದಾಖಲೆಯನ್ನು ಅವರಿಗೇ ಜ್ಞಾಪಿಸಿಕೊಡಬೇಕಿದೆ. ಅದು ಹೀಗಿದೆ…
“ನುಂಗಣ್ಣರ ಪಾಲಾದ ಕೆರೆ: ತನಿಖೆಗೆ ಕರೆ”— ಇದು ಕುಮಾರಸ್ವಾಮಿ ಅವರು ಅಂದು ವಿಧಾನಸಭೆಯಲ್ಲಿ ಕೆರೆಗಳ ಒತ್ತುವರಿ ಸಂದರ್ಭದಲ್ಲಿ ತಮ್ಮ ಮಾತಿನ ಸಂಕ್ಷಿಪ್ತ ಸಂಗ್ರಹಕ್ಕೆ ನೀಡಿದ್ದ ಶೀರ್ಷಿಕೆ. “ಬೆಂಗಳೂರು ನಗರದಲ್ಲಿ ಕೆರೆಗಳ ಒತ್ತುವರಿ ಮತ್ತು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿರುವ ನೂರಾರು ಕೋಟಿ ರೂಪಾಯಿಗಳ ಸತ್ಯ ಹೊರಬರಬೇಕಾದರೆ ಮತ್ತು ರಾಜ್ಯ ಸರ್ಕಾರಕ್ಕೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಮನಸ್ಸು ಇದ್ದರೆ ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸುವುದು ಇಂದಿನ ಅಗತ್ಯವಾಗಿದೆ”… ಹೀಗೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಅವರೇ ಈ ಪ್ರಶ್ನೆಗಳಿಗೆ ಉತ್ತರ ನೀಡುವ, ಕ್ರಮ ಕೈಗೊಳ್ಳುವ ಸ್ಥಾನದಲ್ಲಿದ್ದಾರೆ. ಅವರೇನು ಮಾಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ. ಕುಮಾರಸ್ವಾಮಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲಿ ಇದು ಅಗ್ರಪಂಕ್ತಿಯಲ್ಲಿದೆ. ಇದನ್ನು ಕುಮಾರಸ್ವಾಮಿ ಅವರು ಹೇಗೆ “ನಿಭಾಯಿಸುತ್ತಾರೆ” ಎಂಬುದು ತಕ್ಷಣದ ಕೌತುಕ. ಕೆರೆ ನುಂಗಣ್ಣಿಗೆ ಕಾನೂನಿನ ಕ್ರಮವೆಂಬ ದೊಣ್ಣೆ ಏಟು ನೀಡುತ್ತಾರೋ ಅಥವಾ ದೊಣ್ಣೆ ಏಟು ತಪ್ಪಿಸಿಕೊಂಡರೆ ಎಂಬ ಗಾದೆಗೆ ಅಂಟಿಕೊಳ್ಳುತ್ತಾರೋ ಎಂಬುದೂ ಈಗಿನ ಪ್ರಶ್ನೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆಗಳ ಒತ್ತುವರಿ ಅಧ್ಯಯನ ಸಮಿತಿ ವರದಿಯನ್ನು ಸಂಪೂರ್ಣವಾಗಿ ಬಿಚ್ಚಿಡುವ ಮುನ್ನ ಈ ಸಮಿತಿ ರಚನೆಗೆ ಕಾರಣವಾದ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಎಂತಹ ಮಾಹಿತಿಯನ್ನು ನೀಡಿದ್ದು, ಏನು ಮಾತಾಡಿದ್ದರು, ಯಾವ ಯಾವ ದಾಖಲೆಗಳನ್ನು ನೀಡಿದ್ದರು ಎಂಬುದನ್ನು ಮುಂದಿನ ನೋಟಗಳಲ್ಲಿ ತೆರೆದಿಡಲಾಗುತ್ತದೆ. ನಂತರ ವರದಿಯ ನೋಟ ಬಿಡಿಸಿಕೊಳ್ಳಲಿದೆ.
ಚಿತ್ರ-ಲೇಖನ: ಕೆರೆ ಮಂಜುನಾಥ್