ಕೆರೆನೋಟ-76 ಆಗ ಹೀಗಿದ್ದವು… ಜೀವಂತ ಕೆರೆಗಳು! -14
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ನಡುವಿನ ಕೆರೆಗಳು
- ದೊಡ್ಡಕೆರೆ, ಬಾಗಲಕುಂಟೆ
ಬಾಗಲಕುಂಟೆಯ ಪಶ್ಚಿಮ ದಿಕ್ಕಿನಲ್ಲಿರುವ ದೊಡ್ಡಕೆರೆ 543 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 9.36 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯ ಪ್ರದೇಶವನ್ನು ಸಿಡಿಪಿಯಲ್ಲಿ ವಸತಿ ವಲಯ ಎಂದು ಹೇಳಲಾಗಿದ್ದು, ವಿವರಗಳನ್ನು ತೋರಿಸಿಲ್ಲ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಜಲಮೂಲವನ್ನು ಸಂರಕ್ಷಿಸಿಕೊಳ್ಳಬೇಕು. ಬಿಡಿಎ ಬಡಾವಣೆಯಲ್ಲಿ ಉದ್ಯಾನವನ್ನು ನಿರ್ಮಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಮತ್ತು ಬಿಡಿಎ ಈ ಕೆರೆಯ ಜಂಟಿ ಸುಪರ್ದಿ ಹೊಂದಿವೆ.
- ಚಿಕ್ಕಬಾಣಾವರ ಕೆರೆ
ಚಿಕ್ಕಬಾಣಾವರದ ಪಶ್ಚಿಮ ದಿಕ್ಕಿನಲ್ಲಿರುವ ಚಿಕ್ಕ ಬಾಣಾವರ ಕೆರೆ 30.38 ಹೆಕ್ಟೇರ್ ಪ್ರದೇಶದಲ್ಲಿದ್ದು, 510 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಭಾಗಶಃ ಉದ್ಯಾನ ಮತ್ತು ಭಾಗಶಃ ಹಸಿರು ವಲಯ ಎಂದು ಸಿಡಿಪಿಯಲ್ಲಿ ಹೇಳಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಜಲಮೂಲವನ್ನು ಸಂರಕ್ಷಿಸಿಕೊಳ್ಳಬೇಕು. ಕೆ.ಎಸ್.ಟಿ.ಡಿ.ಸಿಯಿಂದ ಇಲ್ಲಿ ಪ್ರವಾಸಿ ಸೌಲಭ್ಯಗಳನ್ನು ಒದಗಿಸಬಹುದು ಎಂದು ಸಮಿತಿ ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಕೆ.ಎಸ್.ಟಿ.ಡಿ.ಸಿ ಜಂಟಿ ಸುಪರ್ದಿಯಲ್ಲಿದೆ.
- ನರಸೀಪುರ ಕೆರೆ
ಜಾಲಹಳ್ಳಿಯ ಪಶ್ಚಿಮ ದಿಕ್ಕಿನಲ್ಲಿ ನರಸೀಪುರದಲ್ಲಿರುವ ನರಸೀಪುರ ಕೆರೆ 4.52 ಹೆಕ್ಟೇರ್ ಪ್ರದೇಶದಲ್ಲಿದ್ದು, 350 ಸಂಖ್ಯೆಯ ನೋಂದಣಿ ಹೊಂದಿದೆ. ಈ ಕೆರೆಯ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.
- ತಿಂಡ್ಲು ಕೆರೆ
ಜಾಲಹಳ್ಳಿಯ ಒಳಭಾಗದಲ್ಲಿರುವ ತಿಂಡ್ಲು ಕೆರೆ 351ನೇ ಸಂಖ್ಯೆಯ ನೋಂದಣಿ ಹೊಂದಿದ್ದು, 3.87 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಹಾಗೂ ಪ್ರಾಂತೀಯ ಉದ್ಯಾನವನ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಜಲಮೂಲವನ್ನು ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.
- ದೊಡ್ಡಬೊಮ್ಮಸಂದ್ರ ಕೆರೆ
ವಿದ್ಯಾರಣ್ಯಪುರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ದೊಡ್ಡಬೊಮ್ಮಸಂದ್ರದ ಬಳಿ ಇರುವ ದೊಡ್ಡಬೊಮ್ಮಸಂದ್ರ ಕೆರೆ 46.24 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ 352 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಪ್ರದೇಶವನ್ನು ಪ್ರಾದೇಶಿಕ ಉದ್ಯಾನವನ ಎಂದು ಸಿಡಿಪಿಯನ್ನು ನಮೂದಿಸಲಾಗಿದೆ. ಈ ಕೆರೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಈ ಕೆರೆ ಸುಪರ್ದಿ ಹೊಂದಿದೆ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿರುವ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳ ಮಾಹಿತಿ, ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳ ವಿವರ, ಹಾಗೂ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳ ವಿವರ ನೀಡಲಾಯಿತು. ಈಗಿನ ನೋಟದಲ್ಲಿ ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ನಡುವಿನ ಕೆರೆಗಳ ಚಿತ್ರಣ ನೀಡಲಾಗುತ್ತಿದೆ.
(ಮುಂದುವರಿಯಲಿದೆ)
ಚಿತ್ರ-ಲೇಖನ: ಕೆರೆ ಮಂಜುನಾಥ್