ಕೆರೆ ನೀರನ್ನು ಇಂಗಿಸಿ ! ಅಂತರ್ಜಲವನ್ನು ಹೆಚ್ಚಿಸುವ ವಿಧಾನ !!
ಅದು, ಎರಡು ಸಾವಿರದ ಆರನೇ ಇಸವಿ . ಪಾವಗಡದ ರೈತ ಸಂಘದವರು, ನೂರಾರು ಅಡಿ ಆಳದಿಂದ ಬೋರ್ ವೆಲ್ ಗಳಲ್ಲಿ ನೀರು ಎತ್ತಿ, ಕುಡಿಯಲು ಬಳಸುತ್ತಿರುವ ನೀರಿನಲ್ಲಿ ಹೆಚ್ಚು ಪ್ಲೊರೈಡ್ ಇದೆ. ಈ ನೀರು ಕುಡಿಯುತ್ತಿರುವುದರಿಂದ ಜನರಿಗೆ ನಾನಾ ರೀತಿ ಕಾಯಿಲೆಗಳು ಬರುತ್ತಿವೆ. ಸರ್ಕಾರ ಪಾವಗಡದ ಜನಕ್ಕೆ ಶುದ್ಧವಾದ ಕುಡಿಯುವ ನೀರನ್ನು ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕದ ಹೈಕೋರ್ಟ್ ಗೆ ಸಲ್ಲಿಸಿತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ಲೊರೈಡ್ ಸಮಸ್ಯೆಗೆ ಪರಿಹಾರಕ್ರಮಗಳನ್ನು ಕೈಗೊಳ್ಳಲು ಶುರುಮಾಡಿತು. ಸ್ಪಟಿಕದ ಮೂಲಕ ಪ್ಲೋರೈಡ್ ಫಿಲ್ಟರ್ ಮಾಡಲು ಅಲಮ್ ಫಿಲ್ಟರ್ ಗಳನ್ನು ವಿತ್ತರಿಸಿತು. ಹೆಚ್ಚು ಪ್ಲೋರೈಡ್ ಸಮಸ್ಯೆ ಇರುವಹಳ್ಳಿಗಳಿಗೆ ಡಿಪ್ಲೋರೈಡ್ ಘಟಕಗಳನ್ನು ಸ್ಥಾಪಿಸಿತು. ಇನ್ನು, ಇದೆ ಸಮಯದಲ್ಲಿ ಬೈಫ್ ಸಂಸ್ಥೆಯ ವಿಭಿನ್ನ ಯೋಜನೆ, ಸ್ವಭಾವಿಕವಾಗಿ ದೊರೆಯುವ ಮಳೆನೀರನ್ನು ಸಂಗ್ರಹಿಸಿ ಕುಡಿಯಲು ಬಳಸುವುದು ಮತ್ತು ವಿವಿಧ ವಿಧಾನಗಳಿಂದ, ನೀರನ್ನು ಭೂಮಿಗೆ ಇಂಗಿಸಿ. ಪ್ಲೋರೈಡ್ ಸಮಸ್ಯೆಯನ್ನು ಪರಿಹರಿಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿ, ಪ್ರಾರಂಭಮಾಡಿತು.
ಈ ಯೋಜನೆಯ ಅನುಷ್ಠಾನದ ಪ್ರಮುಖವಾದ ಜವಬ್ದಾರಿಯನ್ನು, ಹೊತ್ತು ನಾನು ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ಕೆಲಸ ಮಾಡಿದೆ. ಈ ಯೊಜನೆಯಲ್ಲಿ ಎರಡು ರೀತಿಯ ಪರಿಹಾರಗಳನ್ನು ಕೈಗೆತ್ತಿಕೊಳ್ಳಲಾಯಿತು. ಅದರಲ್ಲಿ ಮೊದಲನೆಯದು ಪ್ಲೋರೈಡ್ ಸಮಸ್ಯೆಗೆ ತಕ್ಷಣದ ಪರಿಹಾರನೀಡುವ ವಿಧಾನಗಳು ಮತ್ತು ಎರಡನೇದು ಶಾಶ್ವತವಾಗಿ ಪರಿಹಾರ ನೀಡುವ ವಿಧಾನಗಳು.
ತಕ್ಷಣದ ಪರಿಹಾರಗಳು :- ಮೇಲ್ಚಾವಣಿ ಮಳೆ ನೀರನ್ನು ಸಂಗ್ರಹಿಸಿ, ಶೋಧಿಸಿ ಕೆಡದಂತೆ ಸಂರಕ್ಷಣೆ ಮಾಡಿ ಕುಡಿಯಲು ಬಳಸುದು.
ಶಾಶ್ವತ ಪರಿಹಾರಗಳು :-
ಅ) ಇಂಗು ಹೊಂಡಗಳನ್ನು ನಿರ್ಮಿಸಿ ಭೂಮಿಗೆ ಜಲವನ್ನು ತುಂಬುವುದು
ಆ) ಕುಡಿಯಲು ನೀರನ್ನು ಪೂರೈಸುತ್ತಿರುವ ಬೋರ್ ವೆಲ್ ಗಳಿಗೆ ಜಲ ಮರು ಪೂರ್ಣ ಮಾಡುವುದು
ಎ) ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವ ಕೆರೆ ನೀರನ್ನು ಶೋಧಿಸಿ, ಜಲಸ್ಥರಗಳಿಗೆ ಇಂಗಿಸಿ ಅಂತರ್ಜಲವನ್ನು ವೃಧ್ಧಿಸುವುದು. ಇದರ ಮೂಲಕ ಪ್ಲೋರೈಡ್ ಸಮಸ್ಯೆಯನ್ನು ಪರಿಹರಿಸುವುದು.
ಕೆರೆ ನೀರನ್ನು ಇಂಗಿಸುವ “ ಜಲ ಸ್ಥರ ಮರುಪೂರ್ಣ “ ಮಾಡುವ ವಿಧಾನ
ಸ್ಥಳದ ಆಯ್ಕೆ :- ಕನಿಷ್ಟ 4-5 ವರ್ಷಕ್ಕೊಮ್ಮೆ ನೀರು ಬಂದು ತುಂಬುವ ಕೆರೆಯನ್ನು ಈ ಚಟುವಟಿಕೆ ಮಾಡಲು ಆಯ್ಕೆ ಮಾಡಿಕೊಳ್ಳಬೇಕು.ಕನಿಷ್ಟ 3-4 ತಿಂಗಳು ಕೆರೆಯಲ್ಲಿ ನೀರು ನಿಂತ್ತಿದ್ದರೆ ಉತ್ತಮ. ಕೆರೆ ಒಂದೆರಡು ಕಿಮೀ ದೂರವಿದ್ದರೆ ಒಳ್ಳೆಯದು.
ಹಂತ – 1 ಕೆರೆಯ ಸುತ್ತಾ 2-3 ಕಿ ಮೀ ಸುತ್ತಳತೆಯಲ್ಲಿ ಬರುವ ಬೋರ್ ವೆಲ್ ಗಳ ಬೆಗ್ಗೆ ಮಾಹಿತಿ ಸಂಗ್ರಹಿಸಬೇಕು. ಎಷ್ಟು ಆಳದಲ್ಲಿ ನೀರು ಸಿಗುತ್ತಿದೆ ? ಆ ನೀರಿನ ಗುಣ ಮಟ್ಟ ಹೇಗಿದೆ ? ನೀರಿನ ಇಳುವರಿ ಎಷು ಬರುತ್ತಿದೆ ಎನುವುದನ್ನು ಸಂಪೂರ್ಣವಾಗಿ ಅಧ್ಯಯನ ನಡಸಬೇಕು.
ಹಂತ – 2 ಕೆರೆಯಲ್ಲಿ ನೀರು ಹೆಚ್ಚಾಗಿ ಹರಿದು ಹೋಗುವ ಕೆರೆ ಕೋಡಿ ಮತ್ತು ಕೆರೆಯಲ್ಲಿ ಹೆಚ್ಚು ಕಾಲ ನೀರು ನಿಲ್ಲುವ ಜಾಗವನ್ನು ಗುರುತು ಮಾಡಿ ಈ ಎರಡರ ಮಧ್ಯಭಾಗದಲ್ಲಿ ರೀಚಾರ್ಜ್ ಬೋರ್ ವೆಲ್ ನ್ನು ಕೊರೆಯಬೇಕು. ಈ ಬೋರ್ ನ್ನು ಕನಿಷ್ಟ 300 ರಿಂದ 350 ಅಡಿಗಳ ಆಳಕ್ಕೆ ಡ್ರಿಲ್ ಮಾಡಬೇಕು. ರಂಧ್ರಗಳು ಇರುವ ಕೇಸಿಂಗ್ ಪೈಪನ್ನು ಜೋಡಿಸ ಬೇಕು.
ಹಂತ – 3 ಕೇಸಿಂಗ್ ಪೈಪನ್ನು ಕೇಂಧ್ರ ಬಿಂದುವಾಗಿ ಇರಿಸಿಕೊಂಡು, 1.5 ಮೀಟರ್ ತ್ರಿಜ್ಯಾ ದಂತೆ ವೃತ್ತಾಕಾರದಲ್ಲಿ ಗೆರೆಯನ್ನು ಎಳೆಯಬೇಕು. ಇದರ ವ್ಯಾಸ 3 ಮೀಟರ್. ಗುರುತುಮಾಡಿದ ಜಾಗವನ್ನು ವೃತ್ತಾಕಾರದಲ್ಲಿ 3 ಮೀಟರ್ ಆಳದವರೆಗೆ ಅಗೆದು ಭಾವಿಯಂತೆ ನಿರ್ಮಿಸ ಬೆಕು.
ಹಂತ – 4 ಭೂಮಿಯ ಒಳಭಾಗದಲ್ಲಿ ಅಂದರೆ ಗುಂಡಿಯ ತಳಭಾಗದಿಂದ ವೃತ್ತಾಕಾರವಾಗಿ ಇಟ್ಟಿಗೆ ಅಥವಾ ಕಲ್ಲಿನ ಗೋಡೆಯನ್ನು ನಿರ್ಮಿಸಬೇಕು. ಕೇಸಿಂಗ್ ಪೈಪು ಸುತ್ತಾ, ಚೌಕಾರವಾಗಿ 1 ಮಿಟರ್ ಉದ್ದ 1 ಮೀಟರ್ ಅಗಲ ಮತ್ತು ಎತ್ತರ ಸುಮಾರು 24 ಅಡಿಯಷ್ಟು ಅಥವಾ ಪಿಲ್ಟರ್ ಗೊಡೆ ಸಂಪೂರ್ಣವಾಗಿ ಕಟ್ಟಿಸಿ ಮುಗಿದ ನಂತರ ಆ ಗೋಡೆಗೆ 2 ಅಡಿ ಎತ್ತರದವರೆಗೆ ಒಂದು ಚೇಂಬರ್ ನಿರ್ಮಿಸ ಬೇಕು.
ಹಂತ – 5 ಒಂಬತ್ತು ಮೀಟರ್ ಆಳಕ್ಕೆ ನಿರ್ಮಿಸಿದ ಭಾವಿಯಲ್ಲಿ ತಳಭಾಗದಲ್ಲಿ ಫಿಲ್ಟರ್ ಆದ ನೀರು ಚೇಂಬರ್ ಒಳಗೆ ಹೋಗಲು ನಾಲ್ಕು ಕಡೆ 6 ಇಂಚು ದಪ್ಪದ ಪೈಪುನ್ನು ಜೋಡಿಸ ಬೇಕು, ಈ ಪೈಪಿಗೆ ರಂಧ್ರಗಳನ್ನು ಹಾಕಿರಬೇಕು.
ಹಂತ – 6, 9 ಮೀಟರ್ ಆಳಕ್ಕೆ ನಿರ್ಮಿಸಿದ ಭಾವಿಯಾಕಾರ ಗುಂಡಿಗೆ ಫಿಲ್ಟರ್ ಮೀಡಿಯವನ್ನು ತುಂಬ ಬೇಕು. ತಳಭಾಗದಿಂದ 1 ಮೀಟರ್ ಎತ್ತರದ ವರೆಗೆ 100 ಎಂ ಎಂ ದಪ್ಪವಾಗಿರುವ ಕಾಡು ಕಲ್ಲುಗಳನ್ನು ಹಾಕಿ. ಅದರ ಮೇಲೆ ಪ್ಲಾಸ್ಟಿಕ್ ಮೆಸ್ ಹರಡಿ. ತದನಂತರ 1 ಮೀಟರ್ ದಪ್ಪ 40 ಎಂ ಎಂ ಸೈಜಿನ ಜೆಲ್ಲಿಯನ್ನು ತುಂಬಿ, ಮತ್ತೆ ಒಂದು ಪ್ಲಾಸ್ಟಿಕ್ ಪರದೆ ಹರಡಿ, ಆ ಮೇಲೆ ಭೂಮಿ ಮಟ್ಟಕ್ಕೆ ಮರಳನ್ನು ತುಂಬಬೇಕು.
ಹಂತ – 7 ಫಿಲ್ಟರ್ ತುಂಬಿದ ಮೇಲೆ, ಮತ್ತೆ ಹೊರಭಾಗದ ಗೋಡೆಯನ್ನು 10 ಅಡಿ ಎತ್ತರಕ್ಕೆ ನಿರ್ಮಿಸಬೇಕು. ಮದ್ಯಭಾಗದ ಚೇಂಬರ್ 12 ಎತ್ತರದವರೆಗೆ ನಿರ್ಮಾಣ ಮಾಡಿ, ಎಯರ್ ಪೈಫ್ ಜೋಡಿಸಿ ಮೇಲೆ ಮುಚ್ಚಬೇಕು.
ಹಂತ – 8 ಕೊನೆಯದಾಗಿ, ಕೆರೆಗೆ ನೀರು ಬಂದಾಗ ಫಿಲ್ಟರ್ ನ ಒಳಭಾಗಕ್ಕೆ ಹರಿದು ಬರಲು ನಾಲ್ಕು ಕಡೆ 6 ಇಂಚು ದಪ್ಪವಿರುವ ಪೈಪನ್ನು ಚೋಡಿಸಿ.
ಕೆರೆ ನೀರನ್ನು ಇಂಗಿಸುವುದರಿಂದ ಉಂಟಾದ ಲಾಭಗಳು
ಅ) ಕೆರೆ ನೀರನ್ನು ಮರಳಿನ ಶೋಧಕದ ಮೂಲಕ, ಫಿಲ್ಟರ್ ಮಾಡಿ ಇದರಿಂದ ಮರು ಬಳಕೆ ಮಾಡ ಬಹುದು.
ಆ) 350 ಅಡಿ ಆಳದಲ್ಲಿರುವ ಬರಿದಾದ ಜಲಸ್ಥರಗಳನ್ನು ಮರು ಪೂರ್ಣ ಮಾಡಬಹುದು.
ಈ) ಬತ್ತಿ ಹೋದ ಕೊಳೆವೆ ಭಾವಿಗಳಿಗೆ ಮತ್ತೆ ಜೀವ ತುಂಬಬಹುದು
ಇ) ಕೆರೆಯ ಸುತ್ತಾಮುತ್ತ ಸುಮಾರು 3 – 4 ಕಿಲೋಮೀಟರ್ ಸುತ್ತಳತೆಯಲ್ಲಿ ಬರುವ ಬೋರ್ ವೆಲ್ ಗಳಲ್ಲಿ ನೀರು ಹೆಚ್ಚು ಬರುವಂತೆ ಮಾಡಬಹುದು, ಉಪ್ಪು ನೀರನ್ನು ಸಿಹಿನೀರಾಗ ಪರಿವರ್ತಿಸಬಹುದು.
ಉ) ಪ್ಲೋರೈಡ್ ಅಂಶವನ್ನು ಕಡಿಮೆ ಮಾಡಿ, ಕುಡಿಯಲು ಬಳಸುವ ನೀರಾಗಿ ಪರಿವರ್ತಿಸ ಬಹುದು.
ಈ ವಿಧಾನಗಳು ಜೀವಂತವಾಗಿ ನೋಡಲು ಎಲ್ಲಿ ಸಿಗುತ್ತವೆ ?
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ, ಕನ್ನಮೇಡಿ ಗ್ರಾಮದ ಕೆರೆಯಲ್ಲಿ ಮತ್ತು ಮಂಗಳವಾಡ ಎಂಬ ಊರಿನ ಕೆರೆಯಲ್ಲಿ ಇಂದು ಜೀವಂತವಾಗಿ ನೋಡ ಸಿಗುತ್ತವೆ. ಈ ಯೋಜನೆಗಳನ್ನು ಬೈಪ್ ಸಂಸ್ಥೆ ಸರ್ಕಾರದ ಧನ ಸಹಾಯದೊಂದಿಗೆ ನಿರ್ಮಾಣ ಮಾಡಿದೆ. ಇವುಗಳನ್ನು ಮುಂದಿನ ನಿರ್ವಹಣೆಯನ್ನು ಗ್ರಾಮಪಂಚಾಯತಿಗಳಿಗೆ ನೀಡಿದ್ದು, ಅವು ಕೆರೆಗೆ ನೀರು ಬಂದಾಗ, ಯಾರ ಅಪ್ಪಣೆ ಇಲ್ಲದೆ ಭೂಮಿಗೆ ನೀರಿಂಗಿಸುವ ಕಾರ್ಯ ಮಾಡುತ್ತಾ ಹೋಗುತ್ತಿವೆ !!
ಚಿತ್ರ-ಲೇಖನ: ಜಿ.ಎಸ್. ರಾಮಕೃಷ್ಣ ಗುಂಜೂರು