ಹರುಷಧಾರೆ ತಂದ ವರುಷಧಾರೆ
‘ಬರ’ ಎಂಬ ಪದ ಇಲ್ಲಿ ಸಾಮಾನ್ಯವಾಗಿತ್ತು. ಸುತ್ತಲೂ ಆವರಿಸಿದ ಬರದಿಂದ ಎಲ್ಲರೂ ಹೈರಾಣಾಗಿದ್ದವು. ಇದಕ್ಕೆ ಪಕೃತಿ ಕೂಡಾ ಹೊರತಾಗಿರಲಿಲ್ಲ. ನವಿಲು ಹಸಿರು ಕಂಡು ನರ್ತಿಸಿರಲಿಲ್ಲ. ಮಾಮರದ ಚಿಗುರು ಕಾಣದ ಕೋಗಿಲೆಯ ಸ್ವರ ಕಳೆಗುಂದಿತ್ತು. ಬೂದು ಮಂಗಟ್ಟೆ ಕೃಶವಾಗಿತ್ತು. ಇಲ್ಲಿಯ ನೀರನ್ನ್ನೆ ಅವಲಂಬಿಸಿದ್ದ ಬಕಗಳು ವಲಸೆ ಹೋಗಿದ್ದವು. ಆದರೆ ಈ ಬಾರಿಯ ಹಿಂಗಾರಿನ ವರ್ಷಧಾರೆ ಐತಿಹಾಸಿಕ ಊರು ತಲ್ಲೂರಿನ “ಮಾಗಾನಿ’ಕೆರೆಯ ಮಂದಹಾಸಕ್ಕೆ ಕಾರಣವಾಗಿತ್ತು. ಬೋಳುಮರದ ಕೊಂಬೆ ಮೇಲೆ ಕುಳಿತ ಬೂದುಮಂಗಟ್ಟೆ ಮಾಗಾನಿಯ ಈ ಹರ್ಷವನ್ನು ಕಂಡು ಮಾತಿಗೆಳೆಯಿತು.
ಏನಣ್ಣಾ,? ತುಂಬಾ ಹಸನ್ಮುಖಿಯಾಗಿದ್ದಿಯಾ ? ಏನ್ ಸಮಾಚಾರ ಅಂತು. ಅದಕ್ಕೆ ಮಗಾನಿ ಮೇಲಿರುವಾತ ಓಮ್ಮೆ ಕೊಟ್ಟು ನೋಡತಾನೆ.ಇನ್ನೋಮ್ಮೆ ಕಸಗೊಂಡು(ಇಸಿದುಕೊಂಡು) ನೊಡತಾನೆ ಕಷ್ಟಸುಖಗಳನ್ನು ಸಮಚಿತ್ತದಿಂದ ನೋಡಿದ್ದೇನೆ. ನಾನು ಊರಿನ ಜನಕೆ ಅಕ್ಕರೆಯಾದ ಕಾರಣ ನನನ್ನ ಅಕ್ಕರೆಯಿಂದ “ಮಗಾನಿ” ಅಂತಾ ಕರೆದ್ರು. ಹೌದಾ! ಅಣಾ, ನಿನ್ನ ಹಿಂದೆ ದೊಡ್ಡ ಇತಿಹಾಸನೆ ಇರೋ ಹಾಗಿದೆ. ಈಗ ನಾನು ಹೊಟ್ಟೆ ತುಂಬಾ ತಿಂದಿದಿನಿ. ಖಾಲಿ ಕುಳಿತಿರುವೆ ನಿನ್ನ ಇತಿಹಾಸಾನ ಸ್ವಲ್ಪ ಹೇಳಣ್ಣಾ ಅಂದಿತು.
ಹೌದಾ? ಹೇಳುವೆ ಬಾ ಅಂದಿತು.
ಸವದತ್ತಿ ತಾಲೂಕಿನ ಬಹುದೊಡ್ಡ ಕೆರೆಗಳಲ್ಲಿ ನಾನು ಒಬ್ಬ. ಹಿಂದಿನ ಜನಾ ತಮ್ಮೂರಿನ ಬಾಯರಿಕೆಗೆ ನನ್ನನ್ನೂ ಗುಡ್ಡದ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಿದ್ದಾರೆ. ಹಸಿರಿನ ಗುಡ್ಡ ಕೆಳಗೆ ಊರ ಜನವಸತಿ ಇದೆ. ನೋಡಲು ತುಂಬಾ ಸುಂದರವಾಗಿದ್ದೇನೆ. ಅಂತಾ ಜನಾ ಹೇಳತಾರೆ. ನನ್ನ ಇರುವಿಕೆ ಸುಬ್ಬಾಪೂರ ಮತ್ತು ತಲ್ಲೂರ ಗ್ರಾಮದ ನಡುವೆ ಬರುವುದು. ಗುಡ್ಡದ ಮೇಲೆ ಬಿದ್ದ ಮಳೆ ನೀರು ಕಾಲುವೆಗಳ ಮೂಲಕ ಹರಿದು ಬಂದು ನನ್ನ ಒಡಲು ಸೇರುತ್ತದೆ. ದಂಡೆಯ ಮೇಲೆ ರಾಜ್ಯ ಹೆದ್ದಾರಿ ತಿರುವುಗಳಿಂದ ಕೂಡಿರುವದರಿಂದ ತುಂಬಾ ಅಪಾಯಕಾರಿಯಾಗಿದೆ. ಹಲವು ಬಾರಿ ಅಪಘಾತಗಳಾಗಿ ನನಗೆ ಕೆಟ್ಟ ಹೆಸರೂ ಬಂದಿದೆ. ಜನ ಈ ರೀತಿ ತೆಗಳುವಾಗ ನೋವನ್ನು ಅನುಭವಿಸಿದ್ದೇನೆ. ಇನ್ನು ಅಲೆಮಾರಿಗಳಾದ ಕುರಿಗಾಯಿಳು ನನ್ನಲ್ಲಿ ನೆಲೆಕಂಡುಕೊಂಡಿದ್ದರು. ಅವರ ಕಷ್ಟ ನಷ್ಟಗಳನ್ನು ನೋಡಿದ್ದೇನೆ. ಅವರ ಮುದ್ದು ಕಂದಮ್ಮಗಳ ಲಾಲಿಹಾಡಿಗೆ ಕಿವಿಯಾಗದ್ದೇನೆ.ನನ್ನಲ್ಲಿ ನೀರಿಲ್ಲದ ವೇಳೆ ದೂರದೂರಿಂದ ನೀರು ತಂದು ಬೆಳೆ ಬೆಯಿಸಿಕೊಂಡಿದ್ದನ್ನು ಕಂಡು ಮರಗಿದ್ದೇನೆ. ಮರಭೂಮಿಯಂತಾದ ನನ್ನ ಎದೆಯ ಮೇಲೆ ಅವರ ಕುದುರೆ ಹೆಜ್ಜೆ ಗುರುತುಗಳಿವೆ.
ಗಣಪತಿ ಹಬ್ಬಕ್ಕೆ ಅಲ್ಪ ಸ್ವಲ್ಪ ಒಡಲು ತುಂಬಿತ್ತು. ಈ ಬಾರಿ ದೀಪಾವಳಿಗೆ ಪೂರ್ಣವಾಗಿ ತುಂಬಿದ್ದರಿಂದ ನನ್ನಲ್ಲೂ ಬೆಳಕು ಬಂದಿದೆ.ಹುಣ್ಣಿಮೆ ಚಂದ್ರ ತನ್ನ ಮುಖ ನೋಡಲು ಬಂದು ಹೋದಾಗ ನನಗೆ ಎಲ್ಲಿಲ್ಲದ ಉತ್ಸಾಹ. ಬರದಿಂದ ತತ್ತರಿಸಿದ್ದಾಗ ಯಾವ ಚಿಕ್ಕೆಗಳಾಗಲಿ ,ಚಂದ್ರನ ದರ್ಶನವಾಗಲಿ ಆಗಿರಲಿಲ್ಲ.ಈಗ ನವಿಲುಗಳು ಗರಿಬಿಚ್ಚಿ ಕುಣಿಯುತ್ತಿವೆ. ಬಕಗಳು ವಲಸೆಯಿಂದ ಮರಳಿವೆ.ಊರಿನ ಪ್ರಮುಖ ಹೈನುಗಾರಿಕೆ ಉಪಕಸಬಿಗೆ ನೆರವಾದ ಜವಾರಿ ಹಸುಗಳು ಹಸಿರಿನಲ್ಲಿ ಹೊಟ್ಟೆ ತುಂಬಿಸಿಕೊಂಡು ದಾಹ ತಣಿಸಿಕೊಳ್ಳುತ್ತಿವೆ. ಎಲ್ಲರ ಮನಸ್ಸಿಂದ ದೂರವಾಗಿದ್ದ ನಾನಿಗ ಈ ಊರು ಜನರ ಹರ್ಷದ ಕೇಂದ್ರಬಿಂದುವಾಗಿದ್ದೇನೆ. ಹೂಳು ತುಂಬಿತ್ತು. ನೀರಿಲ್ಲದ ವೇಳೆ ಹೂಳೆತ್ತಿದ ಜನರು ಇಲ್ಲಿಯ ಮಣ್ಣುನನ್ನು ರೈತರು ತಮ್ಮ ಜಮೀನುಗಳಿಗೆ ಹಾಕಿ ಫಲವತ್ತತ್ತೆ ಮಾಡಿಕೊಂಡಿದ್ದಾರೆ.
ಇದಕ್ಕೆಲ್ಲಾ ಕಾರಣವಾದ ವರುಣನಿಗೆ ಕೋಟಿ ನಮನಗಳು.ನೋಡು ಪ್ಯಾಟೆ ಹೈಕಳು ಬಂದು ತಮ್ಮ ಕಪ್ಪು ಪೆಟ್ಟಿಗೆ (ಕ್ಯಾಮರಾ)ಯಲ್ಲಿ ನನ್ನ ಸೌಂದರ್ಯವನ್ನು ಸೆರೆಹಿಡಿಯುತ್ತಾರೆ. ಬೆಟ್ಟಗಳ ಮರೆಯಲ್ಲಿ ಬರುವ ಸುರ್ಯೋದಯ ಮತ್ತು ಸುರ್ಯಾಸ್ತ ಸೋಬಗನ್ನು ನೋಡಿ ಕಣ್ಣತುಂಬಿಕೊಳ್ಳುತ್ತಾರೆ.ಇವೆಲ್ಲ ಹರುಷ ಸದಾ ಇರಲಿ. ನನ್ನಿಂದ ಯಾರಿಗೂ ನಷ್ಟವಾಗಬಾರದೆಂಬ ಮಹದಾಸೆಯೊಂದಿಗೆ ಹಾಗೂ ನಾಳಿನ ಸುಂದರ ಕನಸಿನೊಂದಿಗೆ ಮಲಗುತ್ತೇನೆ.” ಎಂದು ಮಗಾನಿ ಹೇಳಿದಾಗ ಮಂಗಟ್ಟೆ ಕಣ್ಣಂಚಲಿ ನೀರು ಬಂತು. ಕತೆ ಹೇಳಿದ ಮಗಾನಿಯ ಹರುಷ ಕುಂದದಿರಲಿ ಎಂದು ಆಶಿಸಿ ಮರಳಿ ಗೂಡಿಗೆ ಸೇರಿತು.
ಲೇಖನ: ಜ್ಯೋತಿ ಪ್ರಕಾಶ ಕೋಟಗಿ ಬೈಲಹೊಂಗಲ
ಚಿತ್ರಗಳು :ವಿನೋದ ರಾ ಪಾಟೀಲ