ಕೆರೆನೋಟ – ನೋಟ ೬೬ ಆಗ ಹೀಗಿದ್ದವು… ಜೀವಂತ ಕೆರೆಗಳು! – ೪
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ ೮೧ ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ಅರಣ್ಯ ಇಲಾಖೆಯ ಕೆರೆಗಳು
೧೬. ಇಬ್ಬಲೂರು ಪೂರ್ವಭಾಗದಲ್ಲಿರುವ ಕೆರೆ
ಸರ್ಜಾಪುರ ರಸ್ತೆಯ ಸಮೀಪವಿರುವ ಇಬ್ಬಲೂರಿನ ಪೂರ್ವಭಾಗದಲ್ಲಿರುವ ಈ ಕೆರೆ ೯.೦೩ ಹೆಕ್ಟೇರ್ ವ್ಯಾಪ್ತಿ ಹೊಂದಿದೆ. 231ನೇ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯನ್ನು ಉದ್ಯಾನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಾಗಿದೆ. ಕೆರೆಯ ತೀರದಲ್ಲಿ ಸಸ್ಯಗಳನ್ನು ನೆಡಬೇಕು. ಈ ಕೆರೆಯ ಪ್ರದೇಶದ ಸುತ್ತಮುತ್ತ ಅಭಿವೃದ್ಧಿ ಆಗುವ ಸಮಯದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
೧೭. ಅಗರಂ ಕೆರೆ
ಸರ್ಜಾಪುರ ರಸ್ತೆ ಹಾಗೂ ಅಗರಂ ಹಳ್ಳಿಯ ಪಶ್ಚಿಮ ಭಾಗದಲ್ಲಿ ಅಗರಂ ಕೆರೆ ಇದ್ದು, ೪೮.೩೮ ಹೆಕ್ಟೇರ್ ಪ್ರದೇಶದ ವ್ಯಾಪ್ತಿ ಹೊಂದಿದೆ. ೨೭೮ ಸಂಖ್ಯೆಯಲ್ಲಿ ನೋಂದಣಿಯಾಗಿರುವ ಈ ಕೆರೆಯಲ್ಲಿ ಸಾಕಷ್ಟು ನೀರಿದೆ. ಇದರಲ್ಲಿ ಜಲಕಳೆಯೇ ಹೆಚ್ಚು ತುಂಬಿಕೊಂಡಿದೆ. ಇದನ್ನು ಶೀಘ್ರವೇ ತಡೆಯಬೇಕಾಗಿದೆ ಎಂದು ಹೇಳಿರುವ ಸಮಿತಿ, ಕೆರೆಯ ತೀರದಲ್ಲಿ ಸಸ್ಯಗಳನ್ನು ನೆಡಬೇಕು. ಈ ಕೆರೆಯ ಪ್ರದೇಶದ ಸುತ್ತಮುತ್ತ ಅಭಿವೃದ್ಧಿ ಆಗುವ ಸಮಯದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿ ಮಾಡಬೇಕು ಎಂದೂ ಸಲಹೆ ನೀಡಿದೆ. ಈ ಕೆರೆಯ ಪ್ರದೇಶವನ್ನು ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯಲ್ಲಿ ಕೆಎಸ್.ಟಿ.ಡಿ.ಎಸ್. ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ.
೧೮. ವಿಭೂತಿಪುರ- ಊರು ಮುಂದಿನ ಕೆರೆ
ಈ ಕೆರೆಯ ಹೆಸರಿನಲ್ಲೇ ಇರುವಂತೆ ಇದು ವಿಭೂತಿಪುರ ಊರಿನ ಮುಂದಿನ ಭಾಗದಲ್ಲಿ ಇದೆ. ಎಚ್.ಎ.ಎಲ್. ಕೈಗಾರಿಕಾ ಪ್ರದೇಶದ ಉತ್ತರಭಾಗದಲ್ಲಿ ಇರುವ ಈ ಕೆರೆಯ ವಿಸ್ತೀರ್ಣ ೧೪.೮೩ ಹೆಕ್ಟೇರ್. ಸಂಖ್ಯೆ ೩೦೨ರಲ್ಲಿ ನೋಂದಣಿಯಾಗಿದ್ದು, ಕೆರೆಯ ಏರಿಯಲ್ಲಿ ಇಟ್ಟಿಗೆ ಸುಡುವ ಕೆಲಸ ಕಾಣುತ್ತಿವೆ. ಸಿಡಿಪಿಯಲ್ಲಿ ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಗುರುತಿಸಲಾಗಿದೆ. ಈ ಕೆರೆಯ ಅಚ್ಚುಕಟ್ಟು ಹಾಗೂ ತೀರದ ಪ್ರದೇಶವನ್ನು ಸಸಿಗಳನ್ನು ನೆಡುವ ಮೂಲಕ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
೧೯. ಬೈರಸಂದ್ರ- ಮೇಲಿನ ಕೆರೆ
ಬೈರಸಂದ್ರದ ಒಳ ಪ್ರದೇಶದಲ್ಲಿರುವ ಬೈರಸಂದ್ರ-ಮೇಲಿನ ಕೆರೆ ೫.೪೫ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೦೩ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶ ಉತ್ತಮವಾಗಿದೆ. ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಕೆರೆಯ ತೀರದಲ್ಲಿ ಸಸ್ಯಗಳನ್ನು ನೆಡಬೇಕು. ಈ ಕೆರೆಯ ಪ್ರದೇಶದ ಸುತ್ತಮುತ್ತ ಅಭಿವೃದ್ಧಿ ಆಗುವ ಸಮಯದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
೨೦. ಬೈರಸಂದ್ರ- ಕೆಳಗಿನ ಕೆರೆ
ಬೈರಸಂದ್ರದ ಕೆರೆ ಎಚ್.ಎ.ಎಲ್. ಕೈಗಾರಿಕಾ ಪ್ರದೇಶದಲ್ಲಿದ್ದು ೪.೫೨ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೦೪ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಈ ಕೆರೆಯನ್ನು ಕೈಗಾರಿಕೆ ಬಳಕೆಗಾಗಿ ಎಂದು ನಮೂದಿಸಲಾಗಿದೆ. ಹೀಗಾಗಿ ಸಮಿತಿ ಯಾವುದೇ ಪ್ರಸ್ತಾವ, ಸಲಹೆಯನ್ನು ನೀಡಿಲ್ಲ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸುರು ರಸ್ತೆ ಮಧ್ಯಭಾಗದಲ್ಲಿರುವ
ಕೆರೆಗಳ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಇಲ್ಲಿ ಅರಣ್ಯ ಇಲಾಖೆಯ ಸಂಪೂರ್ಣ ಅಧೀನದಲ್ಲಿದ್ದ ನಗರವನ್ನು ಸುತ್ತುವರಿದಿರುವ ಕೆರೆಗಳ ಅಂದಿನ ವಿವರ ಆರಂಭವಾಗಿದ್ದು, ಮುಂದಿನ ನೋಟದಲ್ಲಿ ಇನ್ನಷ್ಟು ವಿವರ ನೀಡಲಾಗುತ್ತದೆ.
…………..ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್