ಮುಖ್ಯ ಪ್ರಾಣ
ಬನ್ನಿ ಮೋಡಗಳೆ ಬನ್ನಿ ನಮ್ಮೆಡೆಗೆ
ತೋರಿ ಸ್ವಲ್ಪ ಕರುಣ
ಮಳೆಯ ಹನಿಗಳ ತುಂಬಿ ಒಡಲೊಳಗೆ
ಉಳಿಸಿ ಜಗದ ಪ್ರಾಣ
ಖಾಲಿ ಹೃದಯದಲಿ ಓಡುವಿರೇಕೆ
ಧಗೆಯ ಬೇಗೆ ಇಲ್ಲಿ
ಒಲವು ಸ್ನೇಹವಾ ತೋರಿ ಭುವಿಯೆದೆಗೆ
ಸುರಿದು ಹೋಗಿ ನಿಲ್ಲಿ
ಸರಿವ ಸರಿತೆ ಸೋತು ಬರಿದಿನ್ನು
ಹನಿಹನಿಗೆ ಕಾಯ್ವ ತುಡಿತ
ಮುಗಿಲತ್ತ ಚಿತ್ತ ಮೇಘಗಳ ಸುತ್ತ
ಅರಿಯದೇ ಹೃದಯಬಡಿತ
ಹಸಿರ ಹೆಸರಿಲ್ಲ ನಿಮ್ಮ ಉಸಿರಿಲ್ಲ
ಅರಿತೆನು ಒಡಲ ನೋವ
ಧಗಧಗಿಸಿ ಸುಡುತಿಹುದು ಜಗವು
ನರಳಿದೆ ಜೀವ ಭಾವ
ಒಂದೊಂದು ಗಿಡವ ಒಬ್ಬೊಬ್ಬ ನೆಡಲು
ನಾಡೆಲ್ಲ ಹಸಿರ ಬನವು
ಮೇಧಿನಿಯ ಮಡಿಲು ತಂಪೊರೆವ ಒಡಲು
ಸುರಿಯುವುದು ಹರ್ಷ ಹೊನಲು
ಸಂದೇಶವಿದನು ಬರೆಯುವೆನು ಮೇಘಗಳ
ಎದೆಯಲ್ಲಿ ಸಾರಿ ಸಾರಿ
ನೀ ನಡೆವ ಮುಗಿಲ ಅಡಿಯಲ್ಲಿ ಬಿತ್ತರಿಸು
ಬಿಸಿಗಾಳಿಯಲ್ಲಿ ಸೇರಿ
ಜಲ ನಮ್ಮ ಪ್ರಾಣ ನೆಲ ನಮ್ಮ ಪ್ರಾಣ
ಉಸಿರುಸಿರು ಜಗದ ಪ್ರಾಣ
ನೀರಿಲ್ಲದೇ ಇಲ್ಲ ಬ್ರಹ್ಮಾಂಡವಿಲ್ಲ
ನೀರೆಮ್ಮ ಮುಖ್ಯ ಪ್ರಾಣ
ಗಾಯತ್ರೀ ರಾಘವೇಂದ್ರ ,ಶಿರಸಿ