ನೀರಿರುವಲ್ಲಿ ನೆಲೆಸುವ ಪಕ್ಷಿಗಳು
ಚುಮುಚುಮು ಮುಂಜಾನೆ. ಸೂರ್ಯ ಆಗತಾನೆ ಉದಯಿಸಿದ್ದ. ಪಕ್ಷಿಗಳ ಕಲರವ ಕೇಳಬೇಕೆನ್ನುವ ಆಸೆ ಹೊತ್ತು ನಾವು ರಾಮನಗರದಿಂದ ಅನಮೋಡ ಮಾರ್ಗದಲ್ಲಿ ಸಾಗುತ್ತಿದ್ದೆವು. ಅನತಿ ದೂರ ಸಾಗುತ್ತಿದ್ದಂತೆಯೇ, ಅರಣ್ಯ ಇಲಾಖೆ ಗಾರ್ಡ್ ಗಿರೀಶ, “ಇರಿ..ಇರಿ ಇಲ್ಲೇ ಸ್ವಲ್ಪ ಲೆಫ್ಟ್ಗೆ ಗಾಡಿ ಹಾಕಿ ಸದ್ದು ಮಾಡಬೇಡಿ. ನಿಧಾನವಾಗಿ ನನ್ನ ಹಿಂಬಾಲಿಸಿ”, ಅಂತ ಸೇತುವೆ ಪಕ್ಕದ ಹಾದಿಯಲ್ಲಿ ಕರೆದೊಯ್ದರು. ಅವರ ಹೆಜ್ಜೆ ಹಿಂಬಾಲಿಸುತ್ತ ಹೊರಟ ನಮಗೆ ಅಚ್ಚರಿ, ಸಂತಸ ಕಾದಿತ್ತು.
ಝುಳುಝುಳು ಹರಿಯುತ್ತಿದ್ದ ನೀರಿನ ಸದ್ದಿನ ಆಹ್ಲಾದ ಒಂದೆಡೆ, ಬಣ್ಣಬಣ್ಣದ ಪಕ್ಷಿಗಳ ಹಿಂಡು ಇನ್ನೊಂದೆಡೆ. ನೋಡುತ್ತಿದ್ದಂತೆಯೇ ರೋಮಾಂಚನ ಉಂಟಾಯಿತು. ಗಿರೀಶ ಹೇಳಿದಂತೆ ಸದ್ದಿಲ್ಲದೇ ಹತ್ತಿರದ ಗಿಡಗಳ ಮಧ್ಯೆ ಅವಿತು ಕುಳಿತ ನಾವು ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಮುಂದಾದೆವು. ಇನ್ನೇನು ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ, ಹಾರಿಹೋಗುತ್ತಿದ್ದ ಪಕ್ಷಿಗಳು ನಮ್ಮ ಸಹನೆ ಪರೀಕ್ಷಿಸುತ್ತಿದ್ದವು. ಆದರೂ ಬೇಸರ ಪಟ್ಟುಕೊಳ್ಳದೆ ಕಾಯುತ್ತಿದ್ದೆವು, ಏಕೆಂದರೆ ನಮ್ಮ ಗುರಿ ಪಕ್ಷಿಗಳ ಫೊಟೋಗ್ರಫಿ ಆಗಿತ್ತು.
ಪಕ್ಷಿಗಳು ಈಗ ಬರ್ತಾವೆ ಆಗ ಬರ್ತಾವೆ ಅಂತ ಕುತೂಹಲದಿಂದ ಕಾಯ್ದು ಕುಳಿತಿದ್ದ ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಒಂದೊಂದಾಗಿ ಬೇರೆ ಬೇರೆ ಪ್ರಭೇದದ ಪಕ್ಷಿಗಳು ಬರಲಾರಂಭಿಸಿದವು. ಬ್ಲ್ಯು ಮಾಸ್ಕ್, ಅಲ್ಬಿನೊ, ಫಿಶರ್, ಲುಟಿನೋ ಬಡ್ಗೀಸ್, ಬ್ರೀಡರ್ ಪ್ಯಾರಿಸ್, ಕಿಂಗಫಿಶರ್, ಯಾಲೋ, ಕಾಕಟೇಲ್ ಪ್ಯಾಥಿ – ಹೀಗೆ ಗಿರೀಶ ಅರಳು ಹುರಿದಂತೆ ಪಕ್ಷಿಗಳ ಹೆಸರು ಹೇಳುತ್ತಾ ಹೋಗುತ್ತಿದ್ದರು. ನಮಗೆ ಅವರಿಗಿದ್ದ ಪಕ್ಷಿಗಳ ಪ್ರೇಮ ಮತ್ತು ಜ್ಞಾನದ ಪರಿಚಯವಾಯಿತು. ಬರೀ ಹೆಸರುಗಳನ್ನಷ್ಟೇ ಅಲ್ಲ, ಅವುಗಳ ವಿಶೇಷತೆ, ವಿವಿಧ ಪ್ರಭೇಧದ ಪಕ್ಷಿಗಳಿಗಿರುವ ಭಿನ್ನತೆ, ಆಹಾರ ಕ್ರಮ, ಗೂಡು ಕಟ್ಟುವ ಕ್ರಿಯೆ, ಮುಂತಾದ ಎಲ್ಲವನ್ನೂ ವಿಸ್ತೃತವಾಗಿ ವಿವರಿಸಿದ ಗಿರೀಶ, ನಮಲ್ಲೂ ಪಕ್ಷಿಗಳ ಬಗ್ಗೆ ಪ್ರೇಮ ಹಾಗೂ ಕುತೂಹಲ ಹುಟ್ಟುವಂತೆ ಮಾಡಿದರು.
ಪಕ್ಷಿಗಳು ಬರುವ ಸಮಯ ಮತ್ತು ಪ್ರದೇಶದ ಬಗ್ಗೆ ಕೇಳಿದಾಗ ದೊರೆತ ಉತ್ತರವೆಂದರೆ; ಖಾನಾಪುರವು ಸಹ್ಯಾದ್ರಿಯ ಕಾಡುಪ್ರದೇಶದಲ್ಲಿ ಬರುವದರಿಂದ, ಇಲ್ಲಿಯ ನಾಲೆಗಳು ಹಾಗೂ ಚಿಕ್ಕಚಿಕ್ಕ ಹರಿವಿನ ನದಿ ಪ್ರದೇಶದಲ್ಲಿ ಆಹಾರವನ್ನು ಹುಡುಕುತ್ತಾ ಪಕ್ಷಿಗಳು ಬರುವವು ಎಂಬ ವಿಷಯ ತಿಳಿಯಿತು. ಇಲ್ಲಿ ಹರಿಯುವ ನದಿಗಳಲ್ಲಿ ಯಥೇಚ್ಛ ಆಹಾರ ಲಭ್ಯವಿರುವುದರಿಂದ, ಪಕ್ಷಿಗಳಿಗೆ ಹೇಳಿ ಮಾಡಿಸಿದಂತಿದೆ. ಪಾಂಡ್ರಿ ನದಿಯು ಜೋಯಿಡಾದ ರಾಮನಗರ ಹಾಗೂ ಖಾನಾಪುರದ ಲೊಂಡಾ ಸಮೀಪ ಹರಿಯುವುದರಿಂದ, ನದಿಯಲ್ಲಿನ ಬೋಳುಮರ ಹಾಗೂ ಕಲ್ಲುಗಳ ಮೇಲೆ ಪಕ್ಷಿಗಳ ಸ್ವಚ್ಛಂದ ವಿಹಾರ ನೋಡಲು ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಸಂತಸಪಟ್ಟೆವು.
ಇಲ್ಲಿಯ ಅನೇಕ ಕಾಡಿನ ಉತ್ಪನ್ನಗಳ ಜೊತೆಗೆ, ಇಲ್ಲಿಯ ಗದ್ದೆಗಳಲ್ಲಿ ಸಿಗುವ ಆಹಾರಧಾನ್ಯವನ್ನು ಅರಸಿ ಬರುವ ಪಕ್ಷಿಗಳು ಚಳಿಗಾಲದ ವೇಳೆ ಯಥೇಚ್ಛವಾಗಿ ಕಾಣಸಿಗುತ್ತವೆ. ಅಲ್ಲದೆ, ಇಲ್ಲಿನ ಗವಳಿವಾಡದ ಗ್ರಾಮದಲ್ಲಿ ಗವಾಳಿಗರೇ ಹೆಚ್ಚು, ಹೈನುಗಾರಿಕೆ ಇವರ ಮುಖ ಕಸುವು. ಯಥೇಚ್ಛ ಜಾನುವಾರುಗಳನ್ನು ಸಾಕುತ್ತಾರೆ. ಉಣ್ಣೆಗಳನ್ನು ತಿನ್ನಲು ಈ ಜಾನುವಾರುಗಳನ್ನು ಅರಸಿ ಪಕ್ಷಿಗಳು ಬರುತ್ತವೆ. ವಿಶಾಲವಾದ ಮೈದಾನದಲ್ಲಿ ಜಾನುವಾರುಗಳು ಮೇಯುತ್ತಿದ್ದರೆ, ಅವುಗಳ ಸುತ್ತಲೂ ಹಿಂಡು-ಹಿಂಡಾಗಿ ಪಕ್ಷಿಗಳು ಕಾಣಸಿಗುತ್ತವೆ. ಅಲ್ಲದೆ, ಇಲ್ಲಿಯ ವಾತಾವರಣ ಪಕ್ಷಿಗಳ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿದೆ. ಹಾಗಾಗಿ, ಇಲ್ಲಿ ವೈವಿಧ್ಯಮಯ, ಬಣ್ಣಬಣ್ಣದ ಹಕ್ಕಿಗಳ ಚಿತ್ತಾರವನ್ನು ನೋಡಬಹುದಾಗಿದೆ. ಇಲ್ಲಿಯ ನದಿ, ಹಳ್ಳ, ಕೆರೆಗಳ ನೀರು ಅರಸಿ ಬೋಳುಮರದಲ್ಲಿ ಕುಳಿತು ಏಕಾಂತದ ಸೊಬಗನ್ನು ಅನುಭವಿಸುತ್ತವೆ.
ಇನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕಾಡು ಪ್ರಾಣಿಗಳ ದರ್ಶನವೂ ಕೆಲವೊಮ್ಮೆ ಆಗಬಹುದು.
ಜಿಂಕೆ, ಕಾಡುಕೋಣ ರಸ್ತೆ ದಾಟುವವು. ಮತ್ತು ಇಲ್ಲಿ ರಮಣೀಯ ಪಕೃತಿ ನಡುವೆ ಇರುವ ಕೆಲವು ಊರುಗಳು ನಮ್ಮ ಗಮನ ಸೆಳೆಯುತ್ತವೆ.
ಈ ಪ್ರದೇಶವು ಕಾರವಾರ, ಬೆಳಗಾವಿ ಹಾಗೂ ಧಾರವಾಡಕ್ಕೆ ಹತ್ತಿರವಾಗುವದರಿಂದ, ಒಂದು ದಿನದ ಪ್ರವಾಸಕ್ಕೆ ಸೂಕ್ತವಾಗಿದೆ. ಇನ್ನು ರಾಮನಗರದಲ್ಲಿ ಉಪಹಾರದ ವ್ಯವಸ್ಥೆಗೆ ಹೋಟೆಲ್ಗಳೂ ಇವೆ.
ಇಲ್ಲಿನ ಪಕ್ಷಿಗಳ ಕಲರವ, ಪ್ರಕೃತಿಯ ರಮಣೀಯತೆ ಹೀಗೇ ಉಳಿಯಬೇಕೆಂದರೆ, ನೀರಿನ ಸೆಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಿದೆ.
ಚಿತ್ರ-ಲೇಖನ: ವಿನೋದ ರಾ ಪಾಟೀಲ