ಕೆರೆ ರಕ್ಷಣೆಯೇ ಇವರ ಕಾಯಕ….!
ಕೆರೆಗಳು ಎಂದಾಕ್ಷಣ ನಿರ್ಲಕ್ಷ್ಯ, ಅಸಡ್ಡೆ ಭಾವನೆಯಿಂದ ನೋಡುವವರೆ ಹೆಚ್ಚಾಗಿದ್ದಾರೆ. ಇಂತಹವರ ಮಧ್ಯ ೫೪ ವರ್ಷದ ವ್ಯಕ್ತಿ ಈ ಗ್ರಾಮದ ಪಾಲಿಗೆ ಸ್ಫೂರ್ತಿ ಮತ್ತು ಶಕ್ತಿ. ಸಮುದಾಯವನ್ನು ಇವರು ಒಗ್ಗೂಡಿಸಿ ಜಾಗೃತಗೊಳಿಸಿದ ಪರಿಣಾಮ ಗ್ರಾಮದ ಸುತ್ತ ಮುತ್ತ ಹತ್ತಾರು ಕೆರೆಗಳು ಜೀವ ಪಡೆದುಕೊಂಡಿವೆ, ನೂರಾರು ಇಂಗು ಗುಂಡಿಗಳು, ಕೃಷಿಹೊಂಡ, ಗೋಕಟ್ಟೆಗಳು ನಿರ್ಮಾಣವಾಗಿವೆ.
ಅದೊಂದು ದಿನ ಯಾರು ನಿರೀಕ್ಷಿಸದ ಅವಘಡವೊಂದು ನಡೆದು ಹೋಯಿತು. ಕೆರೆ ಏರಿ ಒಡೆದು ಸಂಗ್ರಹಗೊಂಡಿದ್ದ ನೀರೆಲ್ಲಾ ಕೊಚ್ಚಿಕೊಂಡು ಹೋಯಿತು, ಇದರಿಂದ ಲಕ್ಷಾಂತರ ಮೀನು ಮರಿಗಳು, ಕೃಷಿ ಜಮೀನುಗಳು ನೀರಿಗೆ ಆಹುತಿಯಾಯಿತು. ಮೀನುಗಾರಿಕಾ ಕುಟುಂಬಗಳು, ಕೃಷಿಕರು, ಕೆರೆಯನ್ನೇ ನಂಬಿಕೊಂಡಿದ್ದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು.
ಗ್ರಾಮಸ್ಥರು ಕೆರೆ ಏರಿಯಲ್ಲಿ ಭದ್ರ ಪಡಿಸಿಕೊಡುವಂತೆ ಅಧಿಕಾರಿಗಳ ಮೊರೆ ಹೋದರು. ಆದರೆ ಇವರ ಮನವಿಗೆ ಕಿಮ್ಮತ್ತು ಸಿಗಲಿಲ್ಲ. ಸರ್ಕಾರ ಕೆರೆ ಏರಿಯನ್ನು ಭದ್ರ ಪಡಿಸಿಕೊಡುವುದಿಲ್ಲ ಎಂಬುದನ್ನು ಅರಿತ ಗ್ರಾಮಸ್ಥರು ಒಗ್ಗೂಡಿ ಗುದ್ದಲಿ, ಪಿಕಾಸಿ, ಹಿಡಿದು ಕೆಲಸಕ್ಕೆ ನಿಂತರು. ಶ್ರಮವಹಿಸಿ ಕೆರೆ ಏರಿಯನ್ನು ಭದ್ರಪಡಿಸಿದರು. ಕೆರೆಯಲ್ಲಿ ಮತ್ತೆ ನೀರು ಸಂಗ್ರಹಗೊಂಡಿತು. ಮೀನಿಗಾರಿಕೆ, ಕುಂಬಾರಿಕೆ, ಕೃಷಿ ಚಟುವಟಿಕೆಗಳು ಪುನಾರಂಭಗೊಂಡವು. ಇದು ನಡೆದದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ, ಹೊಸೂರು ಗ್ರಾಮ ಪಂಚಾಯಿತಿಯ ವಿಠಲನಗರ ಗ್ರಾಮದ ಹುಲಗಿನಕಟ್ಟೆ ಮಾಸ್ತಿ ಕೆರೆಯಲ್ಲಿ.
ಇವರುಗಳೆಲ್ಲಾ ಸೇರಿ ಏರಿಯನ್ನು ಭದ್ರ ಪಡೆಸಿಕೊಳ್ಳದೆ ಸರ್ಕಾರವೇ ಮಾಡಲಿ ಎಂದು ಕುಳಿತಿದ್ದರೆ, ಸರ್ಕಾರ ಮಾಡುತ್ತಿರಲಿಲ್ಲ, ಚಟುವಟಿಕೆಗಳು ಪುನಾರಂಭಗೊಳ್ಳುತ್ತಿರಲಿಲ್ಲ. ಈ ಕೆರೆ ಏರಿ ಭದ್ರಗೊಂಡ ಕಥೆಯ ಹಿಂದೆ ಒಬ್ಬ ವ್ಯಕ್ತಿಯ ಶ್ರಮವಿದೆ. ಇವರಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವ ಶಕ್ತಿಯಿದೆ, ಗ್ರಾಮಸ್ಥರ ಪಾಲಿಗೆ ಇವರೆ ಸ್ಫೂರ್ತಿ. ಅವರೆ ೫೪ ವರ್ಷದ ವಿಠಲನಗರ ಗ್ರಾಮದ ವಾಸಿ ಪ್ರೇಮ್ಕುಮಾರ್ಗೌಡ್ರು. ಕೆರೆ ರಕ್ಷಣೆಯೇ ಇವರ ಕಾಯಕ…!
ಹುಲಗಿನಕಟ್ಟೆ ಮಾಸ್ತಿ ಕೆರೆ ಸೇರಿದಂತೆ, ಶಿಕಾರಿಪುರ ತಾಲ್ಲೂಕಿನ ಇಟ್ಟಿಗೆಹಟ್ಟಿ ಕೆರೆ, ಮಾರುವಳಿ ಕೆರೆ, ನಳ್ಳಿನಕೊಪ್ಪದ ಕುಂಬಾರ ಗುಂಡಿಕೆರೆ, ಸಂಕ್ಲಪುರ ಕೆರೆ, ಮುರುಗಣ್ಣನ ಕೆರೆ ಹೀಗೆ ಅವಸಾನದ ಅಂಚಿನಲ್ಲಿದ್ದ ಹತ್ತಾರು ಕೆರೆಗಳು ಪ್ರೇಮ್ಕುಮಾರ್ಗೌಡ್ರ ಶ್ರಮ ಮತ್ತು ಗ್ರಾಮಸ್ಥರ ಬೆಂಬಲದಿಂದ ಮರುಜೀವ ಪಡೆದುಕೊಂಡಿವೆ. ಜೊತೆಗೆ ರೈತರು ತಮ್ಮ ಜಮೀನುಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಾಣಮಾಡಿಕೊಳ್ಳುವಂತೆ ಇವರು ಅರಿವು ಮೂಡಿಸುತ್ತಿದ್ದಾರೆ.
ಕೆರೆಗಳು ನಮಗೆ ಬದುಕು ಕೊಡುತ್ತವೆ. ಅದಕ್ಕಾಗಿ ಅವುಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡಿಕೊಳ್ಳುವ ಜವಾಬ್ದಾರಿಯು ನಮ್ಮದೇ ಎಂಬುದು ಪ್ರೇಮ್ಕುಮಾರ್ಗೌಡ್ರ ಅಂಬೋಣ. ಇವರ ಒಗ್ಗಟ್ಟಿನ ಮಂತ್ರದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಒಬ್ಬರಿಂದ ಒಬ್ಬರು ಪ್ರೇರಿತರಾಗಿ ಸಮುದಾಯದ ಸಹಭಾಗಿತ್ವದಲ್ಲಿ ಕೆರೆ ಕೆಲಸಗಳಿಗೆ ಶ್ರಮದಾನ ಮಾಡಲು ಸ್ವಾರ್ಥಬಿಟ್ಟು ಮುಂದಾಗುತ್ತಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನ ತಮ್ಮೂರಿನ ಸುತ್ತಮುತ್ತ ಇರುವ ತೂಬು, ಕೋಡಿಗಳ ಸಣ್ಣಪುಟ್ಟ ದುರಸ್ತಿ, ಏರಿ ಮತ್ತು ಅಂಗಳಗಳಲ್ಲಿ ಗಿಡಗಂಟೆಗಳನ್ನು ತೆಗೆಯುವುದು ಪೋಷಕ ಕಾಲುವೆಗಳನ್ನು ಶುದ್ಧಮಾಡಿ ಕೆರೆ ಅಂಗಳಕ್ಕೆ ನೀರು ಸರಾಗವಾಗಿ ಹರಿದುಬರುವಂತೆ ಮಾಡಿಕೊಳ್ಳುವುದು, ಕೆರೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳುವ ಪರಿಪಾಠವು ಪ್ರೇಮ್ಕುಮಾರ್ ಗೌಡರ ಪ್ರೇರಣೆಯಿಂದ ಸುತ್ತಮುತ್ತಲ ಗ್ರಾಮಗಳು ಅನುಸರಿಸಿಕೊಂಡು ಬರುತ್ತಿವೆ. ಈ ಗ್ರಾಮಗಳಲ್ಲಿ ಕೆರೆಗಳ ಬಗ್ಗೆ ಇದ್ದ ನಿರ್ಲಕ್ಷ್ಯ ಮಾಯವಾಗುತ್ತಿದೆ.
ಕೆರೆ ಒತ್ತುವರಿ ಹಾಗೂ ಇತರೆ ಸಮಸ್ಯೆಗಳಿಂದ ಕೆರೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂಬುದು ಅರಿವಿಗೆ ಬಂದರೆ ಸಾಕು ಸಮಸ್ಯೆ ಪರಿಹಾರಕ್ಕೆ ಹಾಗೂ ಹೋರಾಟಕ್ಕೆ ಸದಾಸಿದ್ಧ ಇವರು. ಓದಿದ್ದು ಪಿ.ಯು.ಸಿ ಅದರೂ, ಕೆರೆಗಳು ಮತ್ತು ನೀರಿನ ಬಗ್ಗೆ ಇವರಿಗೆ ಇರುವ ತಿಳುವಳಿಕೆ, ಜ್ಞಾನ, ಕಾಳಜಿ ಅಪಾರವಾದದ್ದು. ಕೆರೆಗಳ ಅಭಿವೃದ್ದಿಗಾಗಿ ಜಾರಿಗೆ ಬಂದ ಜಲಸಂವರ್ಧನೆ ಯೋಜನೆಯು ಬೇರೆ ಗ್ರಾಮಗಳಿಗೆ ವಿಸ್ತಾರಗೊಳ್ಳದಿದ್ದಾಗ, ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡಿಕೊಂಡು ಕೆರೆಗಳ ಉಳಿವಿಗೆ, ಯೋಜನೆ ಮುಂದುವರಿಕೆಗೆ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಯೋಜನೆಯ ಯಶಸ್ವಿಯನ್ನು ಸಾರುತ್ತಾ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಕೆರೆಗಳ ಉಳಿವಿಗಾಗಿ ತೆರೆಮರೆಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಮೂಲತಃ ಕೃಷಿಕರಾಗಿರುವ ಇವರು ಕೃಷಿಯನ್ನು ಮಾಡಿಕೊಂಡು ಅದರಲ್ಲಿ ಬರುವ ಹಣದಿಂದ ತಮ್ಮ ಒಡಾಟದ ಖರ್ಚನ್ನು ನಿಭಾಯಿಸಿಕೊಂಡು ಕೆರೆಗಳ ಉಳಿವಿಗೆ ತಮ್ಮ ಹೆಚ್ಚಿನ ಸಮಯವನ್ನು ಮುಡುಪಾಗಿಟ್ಟಿದ್ದಾರೆ. ತಮ್ಮೂರಿನ ಸುತ್ತಮುತ್ತ ಇರುವ ಕೆರೆಗಳಿಗೆ ಹೆಚ್ಚಿನ ಮಟ್ಟದಲ್ಲಿ ದುರಸ್ತಿ ಕಾರ್ಯವಿದ್ದರೆ ಸಂಬಂದ್ಧ ಪಟ್ಟ ಅಧಿಕಾರಿಗಳನ್ನು ಕಾಡಿಬೇಡಿ ಸ್ಥಳಕ್ಕೆ ಕರೆತಂದು ಆ ಕೆಲಸ ಮಾಡಿಸುವವರೆಗೂ ತಮ್ಮ ಹಠವನ್ನು ಇವರು ಬಿಡುವುದಿಲ್ಲ.
ಒಡ್ಡಿಲ್ಲದ ಹೊಲ ಗೊಡ್ಡೆಮ್ಮೆಯಂತೆ
ರೈತರು ಜಮೀನುಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿಕೊಳ್ಳದಿದ್ದರೆ, ಜಮೀನುಗಳು ಬರಡಾಗಿ ಹಾಲುಕೊಡದ ಗೊಡ್ಡೆಮ್ಮೆಯಂತಾಗಿಬಿಡುತ್ತವೆ ಎನ್ನುತ್ತಾರೆ ಪ್ರೇಮ್ಕುಮಾರ್ ಅವರು. ಪ್ರತಿಯೊಬ್ಬ ರೈತರ ಜಮೀನಿನಲ್ಲಿಯೂ ಮಳೆನೀರನ್ನು ಸಂಗ್ರಹಿಸಿಕೊಳ್ಳಲು ಒಡ್ಡುಗಳು ಇರಲೇಬೇಕು. ಮಳೆ ಹನಿಗಳು ಹಾಗೆ ಹರಿದು ಹೋಗಲು ಬಿಡದೆ, ನಮ್ಮನಮ್ಮ ಜಮೀನುಗಳಲ್ಲಿ ಇಂಗಿಸಿಕೊಳ್ಳಬೇಕು. ಹೀಗೆ ತಮ್ಮ ಜಮೀನಿನ ಮತ್ತು ಗ್ರಾಮದ ಸುತ್ತಮುತ್ತಲೂ ರೈತರುಗಳಿಗೆ ಅರಿವು ಮೂಡಿಸುತ್ತ, ಮಳೆನೀರನ್ನು ಇಂಗಿಸಿ ಮರುಪೂರಣ ಮಾಡಿಕೊಳ್ಳುವ ಬಗ್ಗೆ ತಿಳಿಸಿ ಹೇಳುತ್ತಿರುತ್ತಾರೆ. ಇದರಿಂದ ನೂರಾರು ರೈತರು ತಮ್ಮ ಜಮೀನಿನಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಮತ್ತೆ ಕೆಲವರು ಸರ್ಕಾರದ ಅನುದಾನದಲ್ಲಿ ಕೃಷಿಹೊಂಡ, ಗೋಕಟ್ಟೆಗಳು, ಇಂಗುಗುಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಅಂತರ್ಜಲ ಅಭಿವೃಧ್ದಿಗೊಂಡು ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ನೀರುಸಿಗುತ್ತಿದೆ. ಬೇಸಿಗೆಯಲ್ಲೂ ಈ ಭಾಗದ ರೈತರು ಈಗ ಕೃಷಿ ಆರಂಭಿಸಿದ್ದಾರೆ.
ಜಲ ಸಾಕ್ಷರತೆಯ ಮೇಷ್ಟ್ರು
ಗ್ರಾಮದಲ್ಲಿ ನೀರನ್ನು ಯಾರೊಬ್ಬರು ಅನಾವಶ್ಯಕವಾಗಿ ವ್ಯಯ ಮಾಡುವಂತಿಲ್ಲ ಪ್ರೇಮ್ಕುಮಾರ್ ಅವರ ಜಲ ಸಾಕ್ಷರತೆಯ ಪಾಠದಿಂದಾಗಿ ಗ್ರಾಮಸ್ಥರೆಲ್ಲ ನೀರನ್ನು ಹಿತಮಿತವಾಗಿ ಬಳಸುತ್ತಾರೆ. ಇದಕ್ಕಾಗಿ ಗ್ರಾಮದ ಕೆರೆಯಲ್ಲಿ ನೀರಗಂಟಿಯನ್ನು ನೇಮಕ ಮಾಡಿಕೊಂಡು ಕೆರೆಯ ಕೊನೆಯ ಅಚ್ಚುಕಟ್ಟು ಪ್ರದೇಶದ ರೈತನಿಗೂ ನೀರು ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಸಮವಾಗಿ ಹಂಚಿಕೆಯಾಗುತ್ತಿದೆ. ಹಾಗೆ ಎಲ್ಲ ರೈತರು ಒಂದೇ ಬೆಳೆಗಳನ್ನು ಇಲ್ಲಿ ಬೆಳೆದುಕೊಳ್ಳುತ್ತಾರೆ. ಕೆರೆಯ ನೀರಿನ ಮಟ್ಟವನ್ನು ನೋಡಿಕೊಂಡು ಬೆಳೆಗಳನ್ನು ಹಾಕುವುದು ಇಲ್ಲಿ ಈಗ ರೂಢಿಯಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗೆ ಪ್ರೇಮ್ಕುಮಾರ್ ಅವರ ಜಲಸಾಕ್ಷರತೆಯ ಪಾಠ ಈಗಲೂ ಮುಂದುವರೆದಿದೆ.
ಮರ ಕಡಿದರೆ ಇಲ್ಲಿ ಶಿಕ್ಷೆ
ಕೆರೆಗೆ ನೀರು ಬರಬೇಕು ಎಂದರೆ ನಾವುಗಳು ಮರಗಳನ್ನು ಸಂರಕ್ಷಿಸಬೇಕು. ಹೀಗಾಗಿ, ವಿಠಲನಗರ ಗ್ರಾಮದಲ್ಲಿ ೧೦೦ ಎಕರೆಯಲ್ಲಿ ಬೇವು, ಬೀಟೆ,ಶ್ರೀಗಂಧ, ತೇಗ, ಮತ್ತಿ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ೩೦ ವರ್ಷದಿಂದಲೂ ಗ್ರಾಮದಲ್ಲಿ ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಯಾರಾದರು ಮರಕಡಿದರೆ ಗ್ರಾಮದಲ್ಲೆ ಶಿಕ್ಷೆ ವಿಧಿಸುವ ಮೂಲಕ ಕಾಡಿನ ರಕ್ಷಣೆಗೆ ಮುಂದಾಗಿದ್ದಾರೆ.
ಚಿತ್ರ-ಲೇಖನ: ಸೋ.ಸೋ. ಮೋಹನ್ ಕುಮಾರ್