ಭಾರೀ ಅಣೆಕಟ್ಟುಗಳ ಸಮಸ್ಯೆ : ಅಂತರ್ಜಲ ನೀರಾವರಿಯ ಹೆಚ್ಚುಗಾರಿಕೆ
ನದಿ ಜೋಡಣೆ. ಪರ ವಿರೋಧ ವಿಚಾರ ಚರ್ಚೆ ತಾರಕ್ಕೇರಿತ್ತು ಒಮ್ಮೆ. ಈಗ ಮತ್ತೆ ಸ್ತಬ್ಧ. ಹೀಗೇಕೆ? ಸಹಜವಾದದ್ದು ಉತ್ತಮ. ತಾಳಿಕೆ ಮತ್ತು ಬಾಳಿಕೆ ಬರುವಂಥದ್ದು. ಸುಸ್ಥಿರವಲ್ಲ. ಕಾರಣ ಮಳೆ ಜೂಜಾಟಕ್ಕೆ ಸಮ. ನಮ್ಮ ಮೋಡ ಬಿತ್ತನೆಗೂ ನಿಲುಕದ ನಕ್ಷತ್ರ! ನಮ್ಮಲ್ಲಿ ಕೆಲವರಿಗೆ ಮಾತ್ರ ಸ್ವಾಭಾವಿಕ ಮತ್ತು ಕೃತಕ ಎಂಬುದರ ನಡುವಿನ ವ್ಯತ್ಯಾಸ ತಿಳಿದಿದೆ!
ಆದರೂ, ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಆಧುನಿಕ ಮಾನದಂಡಗಳಿಗೆ ಪರಿಸರ ಸ್ನೇಹಿ ವಿಧಾನ ಕೊನೆಯ ಆದ್ಯತೆ. ಹೀಗಿರುವಾಗ, ಪಟ್ಟಣಗಳ ಕುಡಿಯುವ ನೀರಿನ ನಿರಂತರ ಪೂರೈಕೆ ಸಮಸ್ಯೆ ಒಂದೆಡೆ. ಶೌಚ, ಸ್ನಾನ ಸೇರಿ ದಿನ ಬಳಕೆಗೂ ಕುಡಿಯುವ ನೀರೇ ಪಟ್ಟಣದಲ್ಲಿ ಬಳಕೆಗೆ ಲಭ್ಯ. ಕೃಷಿಗೆ ಸಕಾಲಿಕವಾಗಿ ಸಮರ್ಪಕ ಪ್ರಮಾಣದಲ್ಲಿ ನೀರು ಪೂರೈಕೆ ಸರ್ಕಾರಗಳ ಅನಿವಾರ್ಯತೆ.
ಹಾಗಾಗಿ, ರಾಜ್ಯದಲ್ಲೂ ನದಿ ಜೋಡಣೆ ಮೂಲಕ ಒಂದೇ ಕಲ್ಲಿನಿಂದ ಎರಡು ಸಮಸ್ಯೆಗಳಿಗೆ ಪರಿಹಾರ ದಕ್ಕಿಸಿಕೊಳ್ಳುವ ಯೋಚನೆ ಮೊಳಕೆಯೊಡೆದಿತ್ತು.
ರಾಜ್ಯದ ಪಶ್ಚಿಮಕ್ಕೆ ಹರಿದು ಹಿಂದೂ ಮಹಾಸಾಗರ (ಅರಬ್ಬೀ ಸಮುದ್ರ) ಸೇರುವ ನದಿಗಳಾದ ನೇತ್ರಾವತಿ, ಶರಾವತಿ, ಕಾಳಿ, ಬೇಡ್ತಿ, ಅಘನಾಶಿನಿ, ವರಾಹಿ, ಮಹದಾಯಿ, ಬಾರಾಪೊಳೆ ಸೇರಿದಂತೆ ಇತರೆ ಚಿಕ್ಕ ನದಿಗಳನ್ನು ಪೂರ್ವಾಭಿಮುಖವಾಗಿ ಹರಿಯುವ ಕೃಷ್ಣಾ, ಗೋದಾವರಿ, ಕಾವೇರಿ, ಉತ್ತರ ಮತ್ತು ದಕ್ಷಿಣ ಪಿನಾಕಿನಿ ಹಾಗೂ ಪಾಲಾರ್ ಅನುಕೂಲವಾಗುವ ಸ್ಥಳದಲ್ಲಿಹೊಂದಿಕೆಯಾಗುವ ಜನದಿ ಜೋಡಿಸುವ ಮಹತ್ವಾಕಾಂಕ್ಷೆ ಯೋಜನೆ ಅದು.
ರಾಜ್ಯದ ನದಿಗಳಲ್ಲಿ ೩,೯೨೦ ಟಿಎಂಸಿ ಅಡಿ ಮೇಲ್ಮೈ ನೀರು ಹರಿದು ಹೋಗುವುದಾದರೂ ಅಷ್ಟನ್ನೂ ಉಪಯೋಗಿಸಿಕೊಳ್ಳುವುದು ಸಾಧ್ಯವಿಲ್ಲ. ಸಮುದ್ರ ಸೇರುವ ಮುನ್ನ ಗರಿಷ್ಠತಮ ಮಿತಿಯಲ್ಲಿ ಲಭ್ಯವಾಗುವ ನೀರನ್ನು ಬಳಸುವ ಸವಾಲು ರಾಜ್ಯದ ನೀರಾವರಿ ತಜ್ಞರ ಮುಂದಿದೆ.
ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳ ಹೇರಳ ಪ್ರಮಾಣದ ನೀರನ್ನು ಬಳಸಿಕೊಳ್ಳಲು ಯಾವ ಯೋಜನೆಗಳೂ ಸದ್ಯ ಇಲ್ಲ. ಅಪಾರ ಪ್ರಮಾಣದ ನೀರು ನೇರವಾಗಿ ಸಾಗರ ಸೇರುತ್ತದೆ. ಹಾಗಂತ, ಅಲ್ಲಿನ ಪರಿಸರ ಸೂಕ್ಷ್ಮ ವಾತಾವರಣ, ಕೊಂಡಿಗಳನ್ನು ಉಪೇಕ್ಷಿಸುವಂತಿಲ್ಲ. ಜೀವಿ ವೈವಿಧ್ಯವನ್ನೂ ಸೂಕ್ಷ್ಮವಾಗಿ ಅಭ್ಯಸಿಸುವ, ವಿವಿಧ ಕ್ಷೇತ್ರಗಳ ಪರಿಣಿತ ತಜ್ಞರ ತಲಸ್ಪರ್ಷಿ ಅಧ್ಯಯನಗಳ ಚರ್ಚೆ ನಡೆಯಬೇಕಿದೆ.
ಲಭ್ಯ ಉತ್ತಮ ತಂತ್ರಜ್ಞಾನ ಬಳಸಿ ಹೀಗೆ ಹರಿದು ಹೋಗುವ ನದಿಯ ಹೆಚ್ಚುವರಿ ನೀರನ್ನು ರಾಜ್ಯದ ಪೂರ್ವ ಭಾಗಕ್ಕೆ ತಿರುಗಿಸಿ ಒಣಗಿ ನಿಲ್ಲುವ ವಿಶಾಲ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಕಡೆಗೆ ಅಲ್ಲಲ್ಲಿ ಚರ್ಚೆ ಈಗ ಆರಂಭವಾಗಿದೆ. ಜನಾಭಿಪ್ರಾಯ ಪಡೆದು, ಹೊಸ ಯೋಜನೆಗಳ ನೀಲನಕ್ಷೆ ಕೆಲವರು ಸಿದ್ಧ ಪಡಿಸಿದ್ದಾರೆ ಕೂಡ.
ನಮ್ಮ ರಾಜ್ಯದ ಮಲೆನಾಡಿನ ಪರ್ವತ-ಘಟ್ಟ ಪ್ರದೇಶದಲ್ಲಿ ಸುಮಾರು ೧೦೦೦ ಮೀಟರ್ಗಳಿಗಿಂತಲೂ ಎತ್ತರದ ಪ್ರದೇಶದಿಂದ ಉಗಮವಾಗಿ, ಪಶ್ಚಿಮದ ಕಡೆ ಹರಿದು ಹೋಗುವ ನದಿಗಳ ನೀರನ್ನು ಸುರಂಗಗಳ ಮೂಲಕ ಪೂರ್ವಕ್ಕೆ ತಿರುಗಿಸಿ, ಕಾವೇರಿ, ತುಂಗಭದ್ರಾ, ಮಲಪ್ರಭಾ ಮತ್ತು ಹೇಮಾವತಿ ಸಂಪತ್ತನ್ನೂ ಹೆಚ್ಚಿಸಬಹುದು ಎಂಬ ಮೇಲ್ನೋಟದ ಆಶಯ.
ಮೇಲ್ಮೈ ನೀರನ್ನು ತಡೆಹಿಡಿದು ನಿಲ್ಲಿಸಲು ಭಾರೀ ಪ್ರಮಾಣದ ಅಣೆಕಟ್ಟೆ, ಜಲಾಶಯಗಳ ನಿರ್ಮಾಣ ಅನಿವಾರ್ಯ. ಅಪಾರ ಪ್ರಮಾಣದಲ್ಲಿ ಕಾಮಗಾರಿ, ಹಣ ವ್ಯಯ ಸಾಮಾನ್ಯ. ಯೋಜನೆ ಪೂರ್ಣಗೊಂಡು ನೀರಡಿಸಿ ನಿಂತ ಹೊಲಗಳಿಗೆ ನೀರನ್ನು ಒದಗಿಸಬೇಕಾದರೆ, ಮಹತ್ವಾಕಾಂಕ್ಷೆಯ ೧೦ ರಿಂದ ೧೫ ವರ್ಷಗಳು ಕನಿಷ್ಠ ಬೇಕು. ಫಲವತ್ತಾದ, ಅನ್ನ ಬೆಳೆಯುವ ಲಕ್ಷಾಂತರ ಎಕರೆ ಪ್ರದೇಶ ಮುಳುಗಡೆಯಾಗುತ್ತದೆ. ಅಲ್ಲಿ ಬದುಕಿದ ಜನ ಮನೆಗಳನ್ನು ತೊರೆದು, ತಮ್ಮ ಜೀವನಕ್ಕೆ ಆಸರೆಯಾಗಿದ್ದ ಭೂಮಿಯ ನಂಟು ಹರಿದುಕೊಂಡು ಬಹುದೂರ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಜ್ವಲಂತ ಸಮಸ್ಯೆಗಳ ಕಾರಣದಿಂದ ಭಾರೀ ಜಲಾಶಯಗಳನ್ನು, ಅಣೆಕಟ್ಟುಗಳನ್ನು ನಿರ್ಮಿಸುವ ಗಮನ ಈಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ.
ಹಾಗೆಯೇ ಗಮನಿಸಿದರೆ, ಅಂತರ್ಜಲವೇ ನೀರಾವರಿ ಕೃಷಿಯ ಹೆಚ್ಚುಗಾರಿಕೆ ರಾಜ್ಯ ಮಟ್ಟದಲ್ಲಿ ನಿಮಗೆ ಗೋಚರಿಸುತ್ತದೆ. ಅಂತರ್ಜಲದ ಬಳಕೆಯಲ್ಲಿ ಭಾರಿ ಜಲಶಯಗಳು ಎದುರಿಸುತ್ತಿರುವ ಯಾವ ತೊಂದರೆಗಳೂ ಸದ್ಯ ನಮ್ಮ ಜ್ಞಾನಕ್ಷಿತಿಜಕ್ಕೆ ನಿಲುಕಿಲ್ಲ. ರೈತನೊಬ್ಬ ತನ್ನ ಜಮೀನಿಗೆ ಬೇಕಾಗುವ ನೀರನ್ನು ಸ್ವಂತ ಪರಿಶ್ರಮದಿಂದ ಬಾಯಿ ತೋಡಿ ಪಡೆದುಕೊಳ್ಳಬಹುದು! ನಾಲೆಗಳಲ್ಲಿ ನೀರು ಬರುವುದಕ್ಕಾಗಿ ಕಾಯುತ್ತ ಕೂಡಬೇಕಿಲ್ಲ. ಯಾವ ಹೊತ್ತಿಗೆ ಭೂಮಿಗೆ ನೀರು ಉಣಿಸಬೇಕೋ, ಆ ಹೊತ್ತಿಗೆ ಸರಿಯಾಗಿ ಪಂಪ್ ಚಾಲೂ ಮಾಡುವುದು. ನಿರ್ದಿಷ್ಟ ಅವಧಿಗೆ ನೀರು ಹರಿಸಿ, ಪಾತಿ, ಜಮೀನು ಹಳೆ ತೋಯಿಸುವುದು. ನೀರನ್ನು ಮಿತವಾಗಿ, ಎಚ್ಚರಿಕೆಯಿಂದ, ನಮ್ಮ ನಿಯಂತ್ರಣದಲ್ಲೇ ಬಳಸಿಕೊಳ್ಳಲು ಸಾಧ್ಯವಿದೆ. ಈ ಸ್ವಾತಂತ್ರ್ಯ ಮೇಲ್ಮೈ ನೀರಿನ ಬಳಕೆಯಲ್ಲಿ ರೈತನಿಗಿಲ್ಲ. ಮೇಲು ನೀರು ಬಳಕೆಯಲ್ಲಿ ಪೋಲೇ ಹೆಚ್ಚು ಎಂಬುದನ್ನು ಹಲವರ ಅನುಭವದಿಂದ ಇಲ್ಲಿ ನಿಖರವಾಗಿ ನಾನು ದಾಖಲಿಸುತ್ತಿದ್ದೇನೆ.
ತಮ್ಮ ನಿಯಂತ್ರಣದಲ್ಲಿಲ್ಲದ ಹಲವು ವಿಷಯಗಳ ಬಗ್ಗೆ ಹಸಿರು ಟಾವೆಲ್ ಬೀಸುವ ಬದಲು, ಬಯಲು ಸೀಮೆ ರೈತರು ಇತ್ತೀಚಿನ ದಿನಗಳಲ್ಲಿ ಬರ ತಡೆಯುವ ಅಥವಾ ನಿರೋಧಕ ತಳಿ ಆಶ್ರಯಿಸಿ, ಕಡಿಮೆ ನೀರು ಬೇಡುವ ಬೆಳೆ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ತಮ್ಮ ಹೊಲ್ಲದಲ್ಲಿ ಲಭ್ಯ ಅಂತರ್ಜಲದತ್ತಲೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೆಚ್ಚು ಧಾನ್ಯ ಬೆಳೆಯುವಲ್ಲಿ ಅಂತರ್ಜಲ ಆಧಾರಿತ ನೀರಾವರಿ ಕೃಷಿ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿದೆ.
ನಮ್ಮ ರಾಜ್ಯದ ನೀರಾವರಿ ಯೋಜನೆಗಳ ಸ್ಥೂಲ ಚಿತ್ರಣ ಇಲ್ಲಿದೆ. (ಆಧಾರ: ರಾಜ್ಯ ನೀರಾವರಿ ಇಲಾಖೆ)
ಮಳೆಗಾಲದಲ್ಲಿ ಸೂಕ್ತ ಕೃಷಿ ಹೊಂಡ ತುಂಬಿಸಿಕೊಂಡು, ಕೊಳವೆ ಬಾವಿಗಳನ್ನು ಮರುಪೂರಣ ಮಾಡಿಕೊಂಡು ಬಳಸುವ ಜಾಣ್ಮೆ ಅನುಭವದಿಂದ ಮೈಗೂಡುತ್ತಿದೆ. ಯಾವ ಸದ್ದು, ಗದ್ದಲಗಳಿಲ್ಲದೇ ರೈತಾಪಿ ಬದುಕಿನಲ್ಲಿ ಬದಲಾವಣೆ ಸಾಧ್ಯವಾಗುತ್ತಿದೆ. ತುಂತುರು, ಹನಿ, ಮತ್ತು ಸೂಕ್ಷ್ಮ ಹನಿ ನೀರಾವರಿ ಪದ್ಧತಿಗಳ ದೆಸೆಯಿಂದ ಸಸಿಯ ಬುಡಕ್ಕೇ ನೀರು ಲಭ್ಯವಾಗುವ ತಂತ್ರಜ್ಞಾನ ನೀರು ಪೋಲಾಗದಂತೆ ತಡೆಯುತ್ತಿದೆ. ಯಾಂತ್ರಿಕ ಸಹಾಯದಿಂದ ಹನಿ ಮತ್ತು ತುಂತುರು ನೀರಾವರಿ ಕ್ರಮ ರೈತರಲ್ಲಿ ನೀರಿನ ಮಿತವ್ಯಯದ ಹಾಗೂ ಉತ್ತಮ ಇಳುವರಿ ಗಳಿಸುವ ಕಲೆಗಾರಿಕೆ ರೂಪಿಸುತ್ತಿದೆ.
ಸಾಂದರ್ಭಿಕ ಚಿತ್ರ: ಲೇಖನ ಹರ್ಷವರ್ಧನ ವಿ. ಶೀಲವಂತ, ಧಾರವಾಡ.