ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬರಗಾಲದಲ್ಲೂ ನೀರೊದಗಿಸುವ ನವಾಬರ ಕಾಲದ ಕೆರೆ

ಅರಣ್ಯನಾಶದ ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಂತೂ ಎರಡು ಮೂರು ವರ್ಷಕ್ಕೊಮ್ಮೆಯು ಬೇಕಾದಷ್ಟು ಪ್ರಮಾಣದಲ್ಲಿ ಮಳೆ ಬರುವುದಿಲ್ಲ. ನೀರಿಗಾಗಿ ಬೋರ್ ತೋಡಿದರೂ ಅಲ್ಲೂ ನೀರಿಲ್ಲ. ಧಾರವಾಡ ಜಿಲ್ಲೆಯಲ್ಲಂತೂ ನಾಲ್ಕು ವರ್ಷದ ಹಿಂದೆ ನೆರೆ ಬಂದ ನಂತರ ಭೂಮಿ ತಂಪಾದದ್ದು ಅಷ್ಟಕಷ್ಟೇ. ಪ್ರಸ್ತುತ ದಿನಗಳಲ್ಲಿ ಕುಡಿಯುವ ನೀರಿಗಾಗಿ ಇಲ್ಲಿನ ಜನ ಒದ್ದಾಡುತ್ತಿದ್ದಾರೆ. ಇರುವ ಕೆರೆಗಳು ಬತ್ತಿ ಬಣಗುಡುತ್ತಿವೆ. ಆದರೆ ಕುಂದಗೋಳ ತಾಲೂಕಿನಲ್ಲೊಂದು ಕೆರೆಯಿದೆ. ಈ ಕೆರೆ ಈವರೆಗೆ ಬರಿದಾಗಿಲ್ಲ. ಇಲ್ಲಿನ ಐದು ಸಾವಿರ ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ‘ಅಗಸಿಹೊಂಡ ಕೆರೆ’ ಈ ಭಾಗದ ಜನತೆಯ ಪಾಲಿನ ಅಮೃತಬಿಂದು.

ಹುಬ್ಬಳ್ಳಿಯ ಕುಂದಗೋಳ ತಾಲೂಕಿನಲ್ಲಿರುವ ಅಗಸಿಹೊಂಡ ಕೆರೆ ವಿಸ್ತೀರ್ಣ ಒಂದು ಎಕರೆ. ಇಂದಿಗೂ ಕೆರೆಯ ಪಕ್ಕದಲ್ಲಿರುವ ಪ್ರಾಚೀನ ಕಾಲದ ಪಂಪ್‌ಶೆಡ್, ಪಂಪ್, ನೀರಾವರಿಗಾಗಿ ಹಾಕಲಾದ ಕಬ್ಬಿಣದ ಪೈಪ್ ನವಾಬರ ಕಾಲದಲ್ಲಿ ಈ ಕೆರೆಯ ನಿರ್ಮಾಣವಾಗಿದೆ ಎಂಬ ಮಾತಿಗೆ ಸಾಕ್ಷಿ. ಜಮಖಂಡಿ ಸಂಸ್ಥಾನದ ನವಾಬರ ಆಡಳಿತದ ಕಾಲದಲ್ಲಿ ಈ ಪ್ರದೇಶದ ಜನತೆಗೆ ಕೆರೆಯಿಂದ ಪಂಪ್ ಮೂಲಕ ನೀರನ್ನು ಎತ್ತಿ ಪೈಪ್ ಮೂಲಕ ಪ್ರತಿ ಮನೆಗೆ ಸಾಗಿಸುತ್ತಿದ್ದರಂತೆ. ಕಳೆದ ಹಲವಾರು ವರ್ಷಗಳಿಂದ ಈ ಕೆರೆ ನೀರನ್ನು ಊರಿನ ಜನ ಕುಡಿಯಲು ಬಳಸುತ್ತಿದ್ದು ಇದರ ಉಸ್ತುವಾರಿಯನ್ನು ಕುಂದಗೋಳ ಪಟ್ಟಣ ಪಂಚಾಯತ್ ನಿರ್ವಹಿಸುತ್ತಿದೆ. ಪ್ರತ್ಯೇಕವಾಗಿ ಕೆರೆಗೆ ಪಂಪ್ ಅಳವಡಿಸಲು ಇಲ್ಲಿ ಅವಕಾಶಗಳಿಲ್ಲ.4

ಕೆರೆ ನೀರು ಬಳಕೆ

ಕೆರೆಯಿಂದಾಗಿ ಈ ಊರಿಗೆ ಅಗಸಿಹೊಂಡ ಎಂಬ ಹೆಸರು ಬಂದಿದೆ. ಹಳ್ಳಿಯ ಮನೆಗಳಿಗೆ ವಾರಕ್ಕೊಂದು ಬಾರಿ ಹುಬ್ಬಳ್ಳಿಯಿಂದ ಪೈಪ್‌ಲೈನ್ ಮೂಲಕ ಮಲಪ್ರಭಾದ ನೀರು ಬರುತ್ತದೆ. ಇತರ ದಿನಗಳಲ್ಲಿ ಅಗಸಿಹೊಂಡ ಕೆರೆಯ ನೀರನ್ನು ಜನ ತೆಗೆದುಕೊಂಡು ಹೋಗಿ ಬಳಸುತ್ತಾರೆ. ಕೆರೆಗೆ ಪಂಪ್ ಅಳವಡಿಸಲು ಇಲ್ಲಿ ಅವಕಾಶಗಳಿಲ್ಲ.

ಕೆರೆಯ ಉಸ್ತುವಾರಿ

ಕೆರೆಯ ಸುತ್ತಲಿನ ಕಸಕಡ್ಡಿಗಳನ್ನು ತೆಗೆಯುವ ಕೆಲಸವನ್ನು ಕಾಲಕಾಲಕ್ಕೆ ಕುಂದಗೋಳ ಪಟ್ಟಣ ಪಂಚಾಯತ್ ಮಾಡುತ್ತಿದೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆರೆಯ ಸುತ್ತ ಕಾಂಪೌಂಡ್‌ನ್ನು ನಿರ್ಮಿಸಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಕೆರೆಯ ಹೂಳೆತ್ತುವ ಕೆಲಸವನ್ನು ಮಾಡಿದ್ದಾರೆ. ಕೆರೆಯನ್ನು ಶುಭ್ರವಾಗಿ ಇಟ್ಟುಕೊಳ್ಳುವುದಕ್ಕಾಗಿ ವಾಚ್‌ಮೆನ್ ಓರ್ವರನ್ನು ಇಟ್ಟುಕೊಂಡಿದ್ದಾರೆ. ಕೆರೆಗೆ ಹತ್ತಿ ಇಳಿಯಲು ಒಂದೆಡೆಯಿಂದ ಕಲ್ಲಿನಿಂದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಇದರ ಮೂಲಕ ನೀರು ತೆಗೆದುಕೊಂಡು ಹೋಗಬಹುದಾಗಿದೆ. ಬಟ್ಟೆ ಒಗೆಯಲು, ಪ್ರಾಣಿಗಳನ್ನು ತೊಳೆಯಲು ಇಲ್ಲಿ ಅವಕಾಶಗಳಿಲ್ಲ. ಒಂದು ಹನಿ ಕೊಳಚೆ ನೀರು ಇಲ್ಲಿಗೆ ಸೇರುವುದಿಲ್ಲ.

ಸ್ವಚ್ಛ ಕೆರೆ

ಕೆರೆ ಸಂಪೂರ್ಣವಾಗಿ ಹೂಳು ಮುಕ್ತವಾಗಿದ್ದು ಕೆರೆಯ ಸುತ್ತಮುತ್ತ ಯಾವುದೇ ರೀತಿಯ ಕಸಕಡ್ಡಿಗಳು ಕಾಣಸಿಗುತ್ತಿಲ್ಲ. ಇಲ್ಲಿನ ಮಂದಿ ಕೆರೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಕೆರೆಯನ್ನು ಶುಭ್ರವಾಗಿರಿಸುವಲ್ಲಿ ಅವರ ಶ್ರಮ ಬಹಳವಿದೆ.

ನವಾಬರ ಕಾಲದ ರಾಜಕಾಲುವೆ

ಅಗಸಿಹೊಂಡ ಕೆರೆಯ ವಿಸ್ತೀರ್ಣ ಒಂದು ಎಕರೆಯಾದರೆ ಅದಕ್ಕೆ ನೀರನ್ನು ಒದಗಿಸುವ ‘ಕೆರೆ ಅಂಗಳ’ದ ವಿಸ್ತೀರ್ಣ ಎಂಟು ಎಕರೆ. ಒಟ್ಟಾಗಿ ಒಂಭತ್ತು ಎಕರೆಯ ಕೆರೆ ಎಂದು ಇದನ್ನು ಕರೆಯುತ್ತಾರೆ. ಈ ಊರಿನಲ್ಲ್ಲಿ ಬಿದ್ದ ನೀರು ಸುಮಾರು ಏಳು ಕಿ.ಲೋ ಮೀಟರ್ ದೂರದಿಂದ ರಾಜಕಾಲುವೆಯ ಮೂಲಕ ಕೆರೆ ಅಂಗಳಕ್ಕೆ ಬರುತ್ತದೆ. ಅಲ್ಲಿಂದ ನೀರು ಫಿಲ್ಟರ್ ಆಗಿ ಶುದ್ಧ ನೀರು ಅಗಸಿಹೊಂಡ ಕೆರೆಗೆ ನವಾಬರ ಕಾಲದ ಕಬ್ಬಿಣದ ಪೈಪ್ ಮೂಲಕ ಬರುತ್ತದೆ. ಅಗಸಿಹೊಂಡ ಕೆರೆ ತುಂಬಿದಲ್ಲಿ  ಶೇಖರಣೆಗೊಂಡ ನೀರು ಕೆರೆ ಅಂಗಲಕ್ಕೆ ಹೋಗದಂತೆ ಪೈಪನ್ನು ಜೋಡಿಸಲಾಗಿದೆ. ಬೇಕಾದಾಗ ಅಗಸಿಹೊಂಡ ಕೆರೆಗೆ ನೀರು ಬೀಳುವಂತೆ ಕೆರೆ ಅಂಗಳಕ್ಕೆ ಗೇಟ್‌ವಾಲ್‌ವೊಂದನ್ನು ನವಾಬರ ಕಾಲದಲ್ಲೇ ಇರಿಸಲಾಗಿದೆ. ಇನ್ನು ಕೆರೆ ಅಂಗಳ ತುಂಬಿದಾಗ ಗೇಟ್‌ವಾಲ್ ತನ್ನಷ್ಟಕ್ಕೆ ಮುಚ್ಚಿಕೊಳ್ಳುವ, ಕೆರೆ ಅಂಗಳದಲ್ಲಿ ನೀರು ಹೆಚ್ಚಾದಾಗ ತೆರೆದುಕೊಳ್ಳುವ ವ್ಯವಸ್ಥೆ ಇಲ್ಲಿದೆ.

ರಾಜಕಾಲುವೆ ಮಧ್ಯೆ ನವಾಬರ ಕಾಲದ ಕಬ್ಬಿಣದ ಗೇಟ್

ಏಳು ಕಿ.ಲೋ ಮೀಟರ್‌ನಿಂದ ಒಂದೇ ಸಮನೆ ನೀರು ಹರಿದು ಬಂದರೆ ಕೆರೆಯಲ್ಲಿ ಹೊಗೆ, ಮಣ್ಣು ತುಂಬಿಕೊಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ನವಾಬರು ಕಾಲುವೆಯ ಮಧ್ಯಭಾಗದಲ್ಲೊಂದು ಕಬ್ಬಿಣದ ಗೇಟನ್ನು ಅಳವಡಿಸಿದ್ದಾರೆ. ಅದು ಇಂದಿಗೂ ಹಾಗೆಯೇ ಇದ್ದು ಕಾಲುವೆಯಲ್ಲಿ ನೀರು ಜಾಸ್ತಿಯಾದಾಗ ಈ ಗೇಟನ್ನು ಹಾಕಲಾಗುತ್ತದೆ. ಗೇಟ್‌ಗೆ ಹಲಗೆ ಹಾಕಿ ಇಂದಿಗೂ ಉಪಯೋಗಿಸುತ್ತಿದ್ದಾರೆ. ಕಸಕಡ್ಡಿ, ಹೊಗೆ ಕೂಡಾ ಇಲ್ಲಿ ಶೇಖರಣೆಯಾಗುತ್ತದೆ. ನೀರಿನ ಶೇಖರಣೆಯನ್ನು ನೋಡಿಕೊಂಡು ಗೇಟ್‌ನ್ನು ಹಾಕಲಾಗುತ್ತದೆ. ನೀರಿನ ರಭಸವನ್ನು ತಡೆಯಲು ರಾಜಕಾಲುವೆಯನ್ನು ಅಗಲವಾಗಿ, ಕೆಲವೆಡೆ ಸಣ್ಣದಾಗಿ ಕೊರೆಯಲಾಗಿದೆ.16

ಕೆರೆಯ ಅಂಗಳದಲ್ಲಿ ಅರ್ಧಚಂದ್ರಾಕೃತಿ ಹೊಂಡ :

ಕಾಲುವೆ ಮೂಲಕ ಬಂದ ನೀರು ನೇರವಾಗಿ ಕೆರೆಗೆ ಬಂದು ಬಿದ್ದರೆ ಹೊಗೆ ಬರುವ ಸಾಧ್ಯತೆಗಳಿರುತ್ತವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಲುವೆಯಿಂದ ಕೆರೆ ಅಂಗಳಕ್ಕೆ ನೀರು ಬೀಳುವ ಹಂತದಲ್ಲಿ ಅರ್ಧಚಂದ್ರಾಕೃತಿ ಹೊಂಡವೊಂದನ್ನು ತೆಗೆಯಲಾಗಿದ್ದು ನೀರು ಇಲ್ಲಿಗೆ ಬಿದ್ದು ಸೋಸಿ ನಂತರ ಇಲ್ಲಿಂದ ಕೆರೆ ಅಂಗಳವನ್ನು ಸೇರುತ್ತದೆ. ಹಿಂದಿನ ಕಾಲದಲ್ಲಿ ಪ್ರತಿ ವರ್ಷ ಅರ್ಧಚಂದ್ರಾಕೃತಿ ಹೊಂಡದ ಮಣ್ಣನ್ನು ತೆಗೆಯುತ್ತಿದ್ದರು. ಪ್ರತಿವರ್ಷ ಮಳೆಗಾಲದಲ್ಲಿ ಶೇಖರಗೊಂಡ ನೀರಿನ ಪ್ರಮಾಣವನ್ನು ತಿಳಿಸುವ ನವಾಬರ ಕಾಲದಲ್ಲಿ ಬಳಸುತ್ತಿದ್ದ ಮಾಪನವೊಂದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

ಅಗಸಿಹೊಂಡ ಕೆರೆ ತುಂಬಿಸುವ ಕೆರೆ ಅಂಗಳ

ಎಂಟು ಎಕರೆ ವಿಸ್ತೀರ್ಣದಲ್ಲಿರುವ ಕೆರೆ ಅಂಗಳ ಅಗಸಿಹೊಂಡ ಕೆರೆಯ ಪ್ರಮುಖ ಜಲಮೂಲ. ಮಳೆಗಾಲದ ನೀರು ಇಲ್ಲಿ ಶೇಖರಣೆಯಾಗುವ ಮೂಲಕ ಅಗಸಿಹೊಂಡದಲ್ಲಿ ವರ್ಷದುದ್ದಕ್ಕೂ ನೀರು ಬತ್ತುವುದಿಲ್ಲ. ಯಾವುದೇ ರೀತಿಯ ಅಶುದ್ಧ ನೀರು ಇಲ್ಲಿಗೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸರಿಯಾದ ಮಳೆಯಾಗದ ಕಾರಣ, ಕೆರೆ ಅಂಗಳ ಮತ್ತು ರಾಜಕಾಲುವೆಗಳಲ್ಲಿ ಹೂಳು ತುಂಬಿದ್ದ ಕಾರಣ ಕಳೆದ ವರ್ಷಗಳಿಂದ ಕೆರೆ ಅಂಗಳ ತುಂಬಿರುವುದಿಲ್ಲ. ಆದರೂ ಅಗಸಿಹೊಂಡಕೆರೆ ಮಾತ್ರ ಈ ಊರಿನ ಮಂದಿಗೆ ನೀರನ್ನು ಒದಗಿಸುವುದನ್ನು ನಿಲ್ಲಿಸಲಿಲ್ಲ.

ಕೆರೆ ಅಂಗಳದ ಹೂಳೆತ್ತಿದ ಧರ್ಮಸ್ಥಳ 

ಕಳೆದ ಬೇಸಿಗೆಗಾಲದಲ್ಲಿ ಧಾರವಾಡ ತಾಲೂಕಿನ ೯೦ ಎಕರೆ ವಿಸ್ತೀರ್ಣದ ಮುಗದಕೆರೆ, ೧೯ ಎಕರೆಯ ಹೆಬ್ಬಳ್ಳಿ, ೬ ಎಕರೆಯ ತಿಮ್ಮಾಪುರ, ೩ ಎಕರೆಯ ಹಳ್ಳಿಗೇರಿ, ೨ ಎಕರೆಯ ಕೋಟಾಬಾಗಿ ಮತ್ತು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವನಕಟ್ಟೆಕೆರೆ, ಸರಸಾಂಬಾದ ಮಡ್ಡಿಕೆರೆ, ಆಫಜಲ್‌ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹೊಸಕೆರೆ ಹೀಗೆ ಒಟ್ಟು ಎಂಟು ಕೆರೆಗಳ ಹೂಳೆತ್ತುವ ಮೂಲಕ ಬೇಸಿಗೆಗಾಲದಲ್ಲೂ ನೀರನ್ನು ಪಡೆಯುವ ಪ್ರಯತ್ನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಲಾಗಿದೆ. ಕಳೆದ ಬೇಸಿಗೆಯಲ್ಲಿ ಕೆರೆಗಳ ಹೂಳೆತ್ತುವ ಕೆಲಸಕ್ಕಾಗಿ ಧರ್ಮಸ್ಥಳ ಬರೋಬ್ಬರಿ ೩೧ ಲಕ್ಷ ರೂ. ಗಳನ್ನು ವ್ಯಹಿಸಿದೆ.

“ನೀರಾವರಿಗಾಗಿ ಸಣ್ಣ ಸಣ್ಣ ಕೆರೆಗಳ ಮೂಲಕ ಜಲ ಅಭಿವೃದ್ಧಿ ಮಾಡುವುದು, ಕೃಷಿಗೆ ನೀರು ಪೂರೈಸುವುದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿಕೊಂಡು ಬಂದಿವೆ. ಸರಕಾರಗಳು ಕೋಡಪಾನದಷ್ಟು ಕೊಟ್ಟರೆ ನಾವು ಸಣ್ಣ ಚಮಚೆಯಲ್ಲಿ ನೀರು ಕೊಡುವ ಸಣ್ಣ ಕಿರು ಸೇವೆಯನ್ನು ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಜನರ ಸಹಭಾಗಿತ್ವದಲ್ಲಿ ಕೆರೆ ಪುನಶ್ಚೇತನ ಮಾಡಿದ್ದೇವೆ.”   – ಡಾ || ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ.

ಕಳೆದ ವರ್ಷದಲ್ಲಾದ ಪ್ರಯೋಜನವನ್ನರಿತ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಈ ಬಾರಿ ರಾಜ್ಯದಾದ್ಯಂತ  ೭೫ ಕೆರೆಗಳ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಈ ಕೆಲಸಕ್ಕೆ ಊರವರ ಸಹಕಾರವು ತುಂಬಾ ಚೆನ್ನಾಗಿ ಸಿಕ್ಕಿದೆ. ಸುಮಾರು ಇಪ್ಪತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಕೆರೆಗಳು ಹೂಳುಮುಕ್ತಗೊಂಡಿದ್ದು ಇದರಲ್ಲಿ ಹತ್ತು ಕೋಟಿ ರೂಪಾಯಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗಿದೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್ ಹೆಚ್. ಮಂಜುನಾಥ್, ರಾಜ್ಯದ ಯೋಜನೆಯ ಸಿಬ್ಬಂದಿಗಳ, ಊರವರ ಸಹಕಾರದೊಂದಿಗೆ ಕೆರೆಗಳ ಹೂಳೆತ್ತುವ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆ ಅಂಗಳದ ಹೂಳೆತ್ತುವ ಕೆಲಸವನ್ನು ಇತ್ತೀಚೆಗೆ ಮಾಡಿ ಮುಗಿಸಲಾಗಿದೆ. ಇತಿಹಾಸ ಪ್ರಸಿದ್ಧ ಈ ಕೆರೆಯ ಹೂಳೆತ್ತುವ ಕೆಲಸವನ್ನು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಎನ್. ಜಯಶಂಕರ ಶರ್ಮ, ನಿರ್ದೇಶಕರಾದ ದಿನೇಶ್ ಎಂ., ಯೋಜನಾಧಿಕಾರಿ ಉಲ್ಲಾಸ ಮೇಸ್ತ, ಇತರ ಯೋಜನೆಯ ಸಿಬ್ಬಂದಿಗಳ ಮುಂದಾಳತ್ವದಲ್ಲಿ ಮಾಚ್ ೧೭ ರಿಂದ ಎಪ್ರಿಲ್ ೨೨ ರವರೆಗೆ ನಾಲ್ಕು ಟಿಪ್ಪರ್, ಎರಡು ಹಿಟಾಚಿ, ನಲುವತ್ತು ಟ್ರಾಕ್ಟರ್, ಎರಡು ಜೆಸಿಬಿಯನ್ನು ಬಳಸಿ ಮಾಡಿ ಮುಗಿಸಲಾಗಿದೆ. ೫೭೦ ಟಿಪ್ಪರ್ ಲೋಡ್, ೩೫೦೯ ಟ್ರಾಕ್ಟರ್‌ನಲ್ಲಿ ತುಂಬುವಷ್ಟು ಹೂಳನ್ನು ಮೇಲಕ್ಕೆತ್ತಲಾಗಿದ್ದು ನೆಲಸಮವಾಗಿದ್ದ ಕೆರೆ ಅಂಗಳ ಇದೀಗ ಮತ್ತೆ ಮರುಜೀವ ಪಡೆದಿದೆ. ಹೂಳನ್ನು ರೈತರು ತೆಗೆದುಕೊಂಡು ಹೋಗುವ ಮೂಲಕ ಪರೋಕ್ಷವಾಗಿ ಹೂಳೆತ್ತುವ ಕೆಲಸಗಳಲ್ಲಿ ಸಾಥ್ ನೀಡಿದ್ದಾರೆ. ಎಂಟು ಎಕರೆ ವಿಸ್ತೀರ್ಣದಲ್ಲಿ ೩ ಅಡಿ ಆಳವಾಗಿ ಹೂಳೆತ್ತಲಾಗಿದ್ದು ಇದೀಗ ಕೆರೆ ಸುಮಾರು ನಲುವತ್ತು ಅಡಿ ಆಳವಿದೆ. ಎರಡು ಜೆಸಿಬಿ ಬಳಸಿ ಇಪ್ಪತ್ತು ದಿನಗಳ ಕಾಲ ರಾಜಕಾಲುವೆಯ ಮೂರು ಅಡಿ ಆಳ, ಹನ್ನೆರಡರಿಂದ ಹದಿನೈದು ಅಡಿ ಅಗಲವಾಗಿ ಹೂಳೆತ್ತುವ ಕೆಲಸವನ್ನು ಮಾಡಲಾಗಿದೆ.  ಹೂಳೆತ್ತುವ ಕೆಲಸಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ. ೯.೫ ಲಕ್ಷವನ್ನು ನೀಡಲಾಗಿದೆ.

ತೆಪ್ಪದ ತೇರು

ಕೆರೆ ಅಂಗಳ ತುಂಬಿದಾಗ ತೆಪ್ಪದ ತೇರನ್ನು ಎಳೆಯುವ ಸಂಪ್ರದಾಯ ಇಲ್ಲಿದೆ. ತೆಪ್ಪದ ತೇರು ಅಂದರೆ ತೆಂಗಿನ ಚಿಪ್ಪು, ಬಾಳೆದಿಂಡಿನಿಂದ ತಯಾರಿಸಿದ ತೇರು. ಇದನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ತೆಪ್ಪದ ತೇರು ಎಳೆಯುವ ಭಾಗ್ಯ ಸಿಕ್ಕಿಲ್ಲ ಎಂಬುವುದು ಈಗಾಗಲೇ ಮೂರು ಬಾರಿ ತೆಪ್ಪದ ತೇರು ಎಳೆಯುವುದನ್ನು ಕಣ್ಣಾರೆ ಕಂಡಿರುವ ೫೭ ವರ್ಷ ಪ್ರಾಯದ ಶಂಕ್ರಪ್ಪ 0ಅವಾರಿಯವರ ಅನುಭವದ ಮಾತು.

ಅಗಸಿಹೊಂಡದಲ್ಲಿ ಈಗ ಸುಮಾರು ಹನ್ನೆರಡು ಆಳ ನೀರಿದ್ದು ಕೆರೆ ಅಂಗಳ ತುಂಬಿದರೆ ಅಗಸಿಹೊಂಡದಲ್ಲಿ ೬೦ ಅಡಿ ನೀರು ತುಂಬುತ್ತದೆ. ಕಳೆದ ಹತ್ತು ವರ್ಷಗಳಿಂದ ಅಗಸಿಹೊಂಡ ತುಂಬಿಲ್ಲ. ಒಂದು ವರ್ಷ ಈ ಕೆರೆ ತುಂಬಿದರೆ ಮುಂದಿನ ಹತ್ತು ವರ್ಷದವರೆಗೆ ಕುಡಿಯುವ ನೀರಿಗೆ ಈ ಊರಿನ ಜನತೆಗೆ ಕಷ್ಟವಾಗುವುದಿಲ್ಲ ಎಂಬುವುದು ಹಿರಿಯರೊಬ್ಬರ ಅನುಭವದ ಮಾತು. ಪ್ರತಿವರ್ಷ ಬೇಸಿಗೆಗಾಲದಲ್ಲಿ ಇಲ್ಲಿನ ನಾಲ್ಕು ಕಿ.ಲೋ. ಮೀಟರ್ ವ್ಯಾಪ್ತಿಯ ಇಪ್ಪತ್ತೂ ಸಾವಿರಕ್ಕೂ ಅಧಿಕ ಮಂದಿಗೆ ಈ ಕೆರೆ ಕುಡಿಯುವ ನೀರನ್ನು ಒದಗಿಸುತ್ತದೆ.

ರಾಜ್ಯದ ಸಾವಿರಾರು ಎಕರೆಯ ಕೆರೆಗಳು ನಾನಾ ಕಾರಣಗಳಿಂದಾಗಿ ಒತ್ತುವರಿಯಾಗುತ್ತಿರುವ ಈ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ ಯಾವುದೇ ದುಂದುವೆಚ್ಚವನ್ನು ಮಾಡದೆ, ಊರವರ ಸಂಪೂರ್ಣ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಹೂಳೆತ್ತುವ ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪ್ರಯತ್ನ ರಾಜ್ಯಕ್ಕೆ ಮಾದರಿಯಾಗಬಲ್ಲದು.

ಚಿತ್ರ-ಲೇಖನ: ಚಂದ್ರಹಾಸ ಚಾರ್ಮಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*