ಕೆರೆ ನೋಟ – ನೋಟ ೪೨: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ – ೬
ಒಳಹರಿವಿನಿಂದ ಹರಿಯುತ್ತಿದ್ದ ಕೊಳಚೆ ನೀರು, ತೆರೆದ ಮಲವಿಸರ್ಜನೆಯು ಚಾಲ್ತಿ, ನಿರ್ವಹಣೆಯನ್ನು ಮಾಡದಿದ್ದರಿಂದ ಕೆರೆಯ ಪರಿಧಿ ಮತ್ತು ಏರಿಗಳು, ಪೊದೆಗಳಿಂದ ಮತ್ತು ಕಳೆಯಿಂದ ಕೂಡಿರುವುದು… ಇದು ಭೀಷ್ಮ ಕೆರೆ ಹಾಗೂ ಅಕ್ಕಮಹಾದೇವಿ ಕೆರೆಗಳ ದುಸ್ಥಿತಿ.
ಇಂತಹ ಪರಿಸ್ಥಿತಿ ಇರುವ ಬಗ್ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿಷ್ಟ ಫಲಿತಾಂಶಗಳಲ್ಲಿ ನೀಡಲಾಗಿದೆ.
ಭೀಷ್ಮ ಕೆರೆ
- ೧೦೩ ಎಕರೆ (೪೧.೭೦ ಹೆಕ್ಟೇರ್) ಪ್ರದೇಶದ ಭೀಷ್ಮ ಕೆರೆಯು ಗದಗ್-ಬೆಟಗೇರಿ ಪಟ್ಟಣದಲ್ಲಿನ ಏಕೈಕ ನೀರಿನ ಮೂಲವಾಗಿದೆ ಮತ್ತು ಕೆರೆಯು ಅರಣ್ಯ ಇಲಾಖೆಯ ಅಭಿರಕ್ಷಣೆಯಲ್ಲಿದೆ.
- ಜೀರ್ಣೋದ್ಧಾರ ಕಾಮಗಾರಿಗಾಗಿ ಮತ್ತು ಬಸವೇಶ್ವರರ ವಿಗ್ರಹವನ್ನು ನಿಲ್ಲಿಸಲು ನೀರನ್ನು ಕೆರೆಯಿಂದ ಹೊರಹಾಕಲಾಗಿತ್ತು. ವಿಗ್ರಹವನ್ನು ನಿಲ್ಲಿಸಿದ್ದ ಕೆರೆ ಪ್ರದೇಶವು, ಕೆಳಗಿನ ಛಾಯಾಚಿತ್ರದಲ್ಲಿ ತೋರಿಸಿದಂತೆ ಒಣಗಿಹೋಗಿತ್ತು.
- ಒಂದು ಒಳಹರಿವಿನಿಂದ ಹರಿಯುತ್ತಿದ್ದ ಕೊಳಚೆ ನೀರು, ಕೆಳಗಿನ ಛಾಯಾಚಿತ್ರದಲ್ಲಿ ತೋರಿಸಿದಂತೆ ಕೆರೆಯ ಒಂದು ಭಾಗದಲ್ಲಿ ಹರಿಯದೇ ನಿಂತುಕೊಂಡಿತ್ತು.
- ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲಿಲ್ಲ. ಒಂದು ಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗಿರುವುದು ವಿಗ್ರಹದ ಬಳಿಯ ಪ್ರದೇಶ ಒಣಗಿದೆ.
ಅಕ್ಕಮಹಾದೇವಿ ಕೆರೆ
ಅಕ್ಕಮಹಾದೇವಿ ಕೆರೆಯು ಹಾವೇರಿ ಪಟ್ಟಣದ ಪ್ರಮುಖ ನೀರಿನ ಮೂಲವಾಗಿದ್ದು ೧೩.೭೦ ಎಕರೆಗಳಷ್ಟಿದೆ. ಕೆರೆಯು ಹಾವೇರಿ ಪುರಸಭೆಯ ಅಭಿರಕ್ಷಣೆಯಲ್ಲಿದೆ. ೨೦೦೪-೧೨ರ ಅವಧಿಯಲ್ಲಿ ಎನ್ಎಲ್ಸಿಪಿ ಅಡಿಯಲ್ಲಿ ೨.೬೪ ಕೋಟಿಗಳನ್ನು ವೆಚ್ಚ ಮಾಡಿ ಕೆರೆಯನ್ನು ಜೀರ್ಣೋದ್ಧಾರಗೊಳಿಸಲಾಯಿತು.
- ನಿರ್ವಹಣೆಯನ್ನು ಮಾಡದಿದ್ದರಿಂದ ಕೆರೆಯ ಪರಿಧಿ ಮತ್ತು ಏರಿಗಳು, ಕೆಳಗಿನ ಛಾಯಾಚಿತ್ರದಲ್ಲಿ ತೋರಿಸಿರುವಂತೆ, ಪೊದೆಗಳಿಂದ ಮತ್ತು ಕಳೆಯಿಂದ ಕೂಡಿದ್ದವು.
- ತೆರೆದ ಮಲವಿಸರ್ಜನೆಯು ಚಾಲ್ತಿಯಲ್ಲಿತ್ತು ಮತ್ತು ಕೆರೆಯಲ್ಲಿ ಬಟ್ಟೆಗಳನ್ನು ಒಗೆದು ಕೆರೆಯನ್ನು ಮಲಿನ ಮಾಡುತ್ತಿದ್ದರು. ಇದನ್ನು ಕೆಳಗಿನ ಛಾಯಾಚಿತ್ರದಲ್ಲಿ ತೋರಿಸಲಾಗಿದೆ.
- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಕೆರೆಯ ನೀರನ್ನು ‘ಡಿ’ ಎಂದು ವರ್ಗೀಕರಿಸಿತ್ತು ಮತ್ತು ಇದು ಅಗತ್ಯವಿದ್ದ ಗುಣಮಟ್ಟ ‘ಬಿ’ ವರ್ಗಕ್ಕೆ ಅನುಗುಣವಾಗಿರಲಿಲ್ಲ.
ಕೆರೆಯ ಪರಿಧಿಯಲ್ಲಿ ಪೊದೆಗಳು/ಕಳೆ ಬೆಳೆದಿರುವುದು ಕೆರೆ ಪ್ರದೇಶದಲ್ಲಿ ಬಟ್ಟೆ ಒಗೆಯುತ್ತಿರುವುದು ಕಂಡು ಬಂದಿದೆ. ಕೆರೆಗಳ ಅಭಿವೃದ್ಧಿಯಷ್ಟೇ ಎಂದುಕೊಂಡಿರುವ ಅಧಿಕಾರಿಗಳು ನಿರ್ವಹಣೆ ಬಗ್ಗೆ ಗಮನವಹಿಸಲೇಬೇಕಿದೆ.
ಚಿತ್ರ-ಲೇಖನ: ಕೆರೆ ಮಂಜುನಾಥ್