ಬರದ ನಡುವೆ ಕೂಡ ಅರಳಿತು ಕೃಷಿ ಹೊಂಡ
ಬರದ ನೆರಳಿನಲ್ಲೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಇರುವಾಗ ರೈತರು ಇರುವ ಮಿತ ನೀರಲ್ಲೇ ಹಿತವಾದ ಕೃಷಿ ಮಾಡಲು ಯೋಜನೆ ರೂಪಿಸಬೇಕಾಗುತ್ತದೆ. ಸುರಿದ ಅಲ್ಪ ಮಳೆಯನ್ನೇ ಉಳಿಸಿ ಬಳಸುವ ಕಲೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಇಂಗು ಗುಂಡಿ, ಕೃಷಿ ಹೊಂಡ, ಗೋಕಟ್ಟೆ ಮುಂತಾದ ಪದ್ಧತಿಗಳ ಮೂಲಕ ಅಲ್ಪ ಮಳೆಯ ನೀರನ್ನು ಭೂಮಿಯಲ್ಲಿ ಇಂಗಿಸಿದರೆ, ಅಂತರ್ಜಲ ವೃದ್ಧಿಸುತ್ತದೆ. ನೀರು ಉಳಿಸಿದ ರೈತರು ಕೊಳವೆಬಾವಿ ಹಾಕಿಸಿ, ಅದರ ಮೂಲಕ ನೀರು ಪಡೆದು ತೆಂಗು, ಅಡಕೆ, ದಾಳಿಂಬೆ, ಸಪೋಟ, ಪಪ್ಪಾಯ, ಬಾಳೆ, ಈರುಳ್ಳಿಯಂಥ ಬೆಳೆಗಳನ್ನು ಬೆಳೆಸಿದ ನಿದರ್ಶನಗಳು ರಾಜ್ಯದಲ್ಲಿರುವ ಬರ ಪೀಡಿತ ಪ್ರದೇಶದಲ್ಲಿ ಅಲ್ಲಲ್ಲಿ ಸಿಗುತ್ತವೆ. ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿ ಬೆಳೆ ಒಣಗುವ ಪರಿಸ್ಥಿತಿ ಬಂದಾಗ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡ ರೈತರೂ ಇಲ್ಲಿದ್ದಾರೆ. ಅದೂ ಸಾಧ್ಯವಾಗದೇ ಇದ್ದಾಗ, ತಮ್ಮ ಬೆಳೆಗಳನ್ನು ಒಣಗಲು ಬಿಟ್ಟು ಜಾನುವಾರುಗಳಿಗೆ ಮೇವಾಗಿಸಿದವರೂ ಕಾಣಸಿಗುತ್ತಾರೆ.
ಕೊಳವೆ ಬಾವಿಯಲ್ಲಿ ಸಿಗುವ ಅಲ್ಪ ನೀರು ಬೆಳೆಗಳಿಗೆ ತಲುಪುವ ಮುನ್ನವೇ ಕರೆಂಟ್ ಮಾಯವಾಗುತ್ತಿದ್ದರೆ, ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿಕೊಂಡು ಬೆಳೆಗೆ ಹಾಯಿಸುವುದು ಸೂಕ್ತ. ಇಲ್ಲವೇ ಡ್ರಿಪ್ ಮಾಡಿ ಪ್ರತಿ ಹನಿ ನೀರು ನೇರವಾಗಿ ಗಿಡಗಳಿಗೆ ಸೇರಲು ವ್ಯವಸ್ಥೆ ಮಾಡಬೇಕು.
ತರಕಾರಿ ಬೆಳೆಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ಬದುಗಳನ್ನು ನಿರ್ಮಿಸಿ, ಅದರ ಮೇಲೆ ಡ್ರಿಪ್ ಪೈಪ್ ಅಳವಡಿಸಿ, ಅದರ ಮೇಲ್ಭಾಗದಲ್ಲಿ ಪಾಲಿಥಿನ್ ಶೀಟ್ ಹಾಕಿ, ಅಲ್ಲಲ್ಲಿ ರಂಧ್ರ ಮಾಡಿದ ಸ್ಥಳಗಳಲ್ಲಿ ಸಸಿಗಳನ್ನು ನಾಟಿ ಮಾಡು ಮಲ್ಚಿಂಗ್ ವಿಧಾನ ಕೂಡ ಸೂಕ್ತ. ಇಲ್ಲಿ ಅತೀ ಕಡಿಮೆ ನೀರಿನಲ್ಲಿ ಬೆಳೆ ಬರುತ್ತದೆ. ಪಾಲಿಥಿನ್ ಶೀಟ್ ಅಲ್ಪ ನೀರನ್ನು ಆವಿಯಾಗದಂತೆ ತಡೆಯುತ್ತದೆ.
ಕೃಷಿಕನಿಗೆ ನೆರವಾದ ಕೃಷಿ ಹೊಂಡ
ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಕೃಷಿಕ ದೇವರಾಜರೆಡ್ಡಿ ಕೃಷಿ ಹೊಂಡ ನಿರ್ಮಿಸಿ ನಡೆಸುತ್ತಿರುವ ಕೃಷಿ ಚಟುವಟಿಕೆ ಎಂಥವರಲ್ಲೂ ಆಶ್ಚರ್ಯ ಮೂಡಿಸುವಂತಿದೆ. ತಮ್ಮ ಹತ್ತಾರು ಎಕರೆಯಲ್ಲಿ ಮೂಸಂಬಿ, ದಾಳಿಂಬೆ, ತೆಂಗು, ಈರುಳ್ಳಿ ಬೆಳೆ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿ, ಕೊನೆಗೆ ತೋಟಗಾರಿಕೆ ಇಲಾಖೆಯ ನೆರವಿನೊಂದಿಗೆ ಅವರು ಲಕ್ಷಾಂತರ ಲೀಟರ್ ನೀರು ಸಂಗ್ರಹಿಸಲು ಸಾಧ್ಯವಾಗುವ ಅದ್ಭುತ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಎರಡು ಗೋಕಟ್ಟೆಗಳನ್ನು ಮಾಡಿಕೊಂಡು ಅದ್ಭುತವಾದ ಬೆಳೆ ತೆಗೆಯುತ್ತಿದ್ದಾರೆ.
ಜಿಯೋ ರೈನ್ ಸಂಸ್ಥೆ ಮುಖ್ಯಸ್ಥ ಹಾಗೂ ಅಂತರ್ಜಲ ಮತ್ತು ಮಳೆ ನೀರು ಕೊಯ್ಲು ತಜ್ಞ ಎನ್.ಜೆ. ದೇವರಾಜರೆಡ್ಡಿ ಕೂಡ ಮಳೆ ನೀರು ಇಂಗಿಸಿ ಕೃಷಿ ಮಾಡುವ ಬಗ್ಗೆ ತಮ್ಮ ಚಿಂತನೆಗಳನ್ನು ಹರಿಸುತ್ತಾರೆ.
ಇಸ್ರೇಲ್ ದೇಶದ ಮರಳು ಭೂಮಿಗಿಂತ ನಮ್ಮದು ನೂರುಪಟ್ಟು ಯೋಗ್ಯ ಭೂಮಿ. ಇಲ್ಲಿ ವರ್ಷಕ್ಕೆ ಬರುವ ೪೦೦ರಿಂದ ೫೦೦ ಮೀ.ಮಿ. ಮಳೆ ನೀರು ಸಿಗುತ್ತದೆ. ಅದನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಬೆಳೆ ತೆಗೆಯಲು ವಾತಾವರಣ, ಮಣ್ಣು ಉತ್ತಮವಾಗಿದೆ. ಜಲಕ್ರಾಂತಿ ಮಾಡಿರುವ ರೈತ ಡಿ.ಟಿ.ನಾಗರಾಜಪ್ಪ ಅವರಂಥವರು ಇತರ ರೈತರಿಗೆ ಮಾದರಿ. ಸರಕಾರದ ನೆರವು ಇಲ್ಲದೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೃಹತ್ ಕೆರೆ ನಿರ್ಮಿಸಿದ ನಾಗರಾಜಪ್ಪಗೆ ಕೃಷಿ ಪಂಡಿತ ಪ್ರಶಸ್ತಿ ನೀಡಬೇಕು ಎನ್ನುತ್ತಾರೆ.
ಚಿತ್ರ-ಲೇಖನ: ಸುನಿಲ್ ಪುತ್ತೂರು