ಬತ್ತಿದ ಬಾವಿಗೆ ಮಳೆ ನೀರು ಬಿತ್ತಿದರೆ !
ರಾಜರಾಜೇಶ್ವರಿ ನಗರದ ಬಿ.ಇ.ಎಂ.ಎಲ್ ಕಾಂಪ್ಲೆಕ್ಸ್ ಹತ್ತಿರದ ಒಂದು ನಿವೇಶನದಲ್ಲಿ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗುತ್ತಿತ್ತು. ಈ ಬಡಾವಣೆಯ ಆಸುಪಾಸು ಹತ್ತಾರು ಕೊಳವೆ ಬಾವಿ ಕೊರೆಸುವ ಹಂತದಲ್ಲಿಯೇ ನೀರು ಸಿಗದೆ ಹಣ ಕಳೆದು ಕೊಂಡವರೂ ಇಲ್ಲಿ ನೀರು ಸಿಗೋದಿಲ್ಲಪ್ಪ ಎಂಬುವ ಮಾತನ್ನು ಆಗಾಗ ಬಂದು ಹೇಳುತ್ತಿದ್ದರು. ಅಲ್ಲದೆ ಕೆಲವು ಕೊಳವೆ ಬಾವಿಯಲ್ಲಿ ನೀರು ಬಂದಿದೆ, ಅಂತವರೂ ಬಂದು ಎಷ್ಟುಆಳ ಕೊರೆಸುತ್ತಿದ್ದೀರಿ ಎಂದು ಆಗಾಗ ದುಗುಡದಲ್ಲಿ ಕೇಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಈ ಮಹಾನಗರದಲ್ಲಿ ಕೊಳವೆ ಬಾವಿ ಉಳ್ಳವರಿಗೆಲ್ಲ, ಅಕ್ಕಪಕ್ಕದವರು ಹೊಸದಾಗಿ ಕೊಳವೆ ಬಾವಿ ಕೊರೆಸುತ್ತಿದ್ದಾರೆಂದರೆ ನಮ್ಮ ಬಾವಿ ಬತ್ತೀತೆಂಬ ಬಯ ಕಾಡತೊಡಗುತ್ತದೆ. ಅದರಂತೆಯೇ ಇಲ್ಲಿಯೂ ಆಗಿತ್ತು.
ಐದು ನೂರು ಅಡಿ ಆಳಕ್ಕೆ ತಲುಪಿದರೂ ನೀರು ಸಿಗುವ ಯಾವುದೆ ಲಕ್ಷಣ ಕಂಡುಬರಲಿಲ್ಲ. ಆಳ ಇಳಿದಂತೆ ಆತಂಕವೂ ಹೆಚ್ಚತೊಡಗಿತ್ತು. ಏಳುನೂರು ಅಡಿ ಆಳ ಕೊರೆದರೂ ನೀರು ಸಿಗದಿದ್ದಕ್ಕೆ, ಇನ್ನೂ ಆಳ ಕೊರೆಯುವುದನ್ನು ನಿಲ್ಲಿಸಲು ಸೂಚಿಸಿದ ನಿವೇಶನದ ಮಾಲೀಕ ಜೇಮ್ಸ್, ಹತ್ತು ಅಡಿ ಅಂತರದಲ್ಲಿಯೇ ಇನ್ನೊಂದು ಕೊಳವೇ ಬಾವಿ ಕೊರೆಸಲು ನಿರ್ಧರಿಸಿದರು. ಆಸುಪಾಸಿನ ನಿವೇಶನದವರು ಅವರ ಆಲೋಚನೆಗೆ ತಕ್ಕಂತೆ ಮಾತನಾಡಲು ಆರಂಭಿಸಿದರು. ನಾಲ್ಕು ನೂರು ಅಡಿ ಭೂಮಿಯನ್ನು ಕೊರೆದರೂ ಇಲ್ಲಿಯೂ ನೀರು ಸಿಗದಿದ್ದುದ್ದ ಕಂಡು ಎಲ್ಲರೂ ಕಂಗಾಲಾದರು. ಇನ್ನೂ ಐವತ್ತು ಅಡಿ ಭೂಮಿ ಕೊರೆಯಲು ನಿರ್ಧರಿಸಿದ್ದರು. ಮೂವತ್ತು ಅಡಿ ಕೊರೆಯುವುದರೊಳಗೆ ನೀರು ಸಿಕ್ಕಿಯೇ ಬಿಟ್ಟಿತು. ಎಲ್ಲರ ಮುಖದಲ್ಲೂ ಯುದ್ಧವ ಗೆದ್ದಂತ ಸಂತೋಷ! ಯಾವುದಕ್ಕೂ ಇರಲೆಂದು, ಇನ್ನೂ ಇಪ್ಪತ್ತು ಅಡಿ ಆಳ ಕೊರೆಸಿದರು; ತಕ್ಕ ಮಟ್ಟಿಗೆ ಸಾಕಾಗುವಷ್ಟು ನೀರು ಸಿಕ್ಕಿದ್ದರಿಂದ ಜೇಮ್ಸ್ರವರ ಮನಸ್ಸಿಗೆ ಸಮಾಧಾನವಾಗಿತ್ತು.
ಒಂದು ದಿನ ಮುಂಜಾನೆ ಜೇಮ್ಸ್ರವರಿಂದ ನನಗೆ ಕರೆ ಬಂದಿತ್ತು, ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ, ಇನ್ನೂರು ಲೀಟರ್ ನೀರನ್ನು ಮೇಲೆತ್ತುವುದರೊಳಗೆ ನೀರು ನಿಂತು ಹೋಗುತ್ತಿದೆ. ದಿನಕ್ಕೆ ನಾಲ್ಕಾರು ಬಾರಿ ಮೋಟರ್ ಚಾಲೂ ಮಾಡ ಬೇಕಾಗಿದೆ. ಈಗಾಗಲೇ ಎರಡು ಕೊಳವೆ ಬಾವಿ ಕೊರೆಸಿದ್ದೇನೆ. ನೀರು ಅಭಿವೃದ್ಧಿ ಹೊಂದಿಸಲು ನಿಮ್ಮಲ್ಲಿ ಯಾವುದಾದರೂ ಉಪಾಯವಿದೆಯೇ ತಿಳಿಸಿ ಎಂದಿದ್ದರು. ಮರುದಿನ ಮುಂಜಾನೆಯೇ ಅವರ ಮನೆಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅರಿತುಕೊಳ್ಳುತ್ತಿದ್ದಾಗ ನೀರು ಬಾರದ ಕೊಳವೆ ಬಾವಿಯನ್ನು ಮುಚ್ಚಿರುವುದು ಗಮನಕ್ಕೆ ಬಂತು. ಆಗ ನನಗೆ ತೋಚಿದ್ದು ನೀರು ಬಾರದ ಕೊಳವೆ ಬಾವಿಗೆ ಮಳೆ ನೀರು ಕೊಯ್ಲು ಮಾಡಿದರೆ ಹೇಗೆ ಎಂದು. ಅದನ್ನು ಮನೆಯ ಮಾಲೀಕರಿಗೂ ತಿಳಿಸಿದೆ. ಆದರೆ ಅದಕ್ಕೊಪ್ಪದ ಜೇಮ್ಸ್, ಇಳುವರಿ ಇರುವ ಕೊಳವೆ ಬಾವಿಗೇ ಮರುಪೂರಣ ಮಾಡಿ ಎಂದು ಹಟಹಿಡಿದರು. ನಾನೂ ಪಟ್ಟು ಬಿಡದೆ ಅದರ ಮಹತ್ವ ತಿಳಿಸಲು ಪ್ರಯತ್ನಿಸಿದೆ. ಅದರಿಂದ ಒಂದಷ್ಟು ಗೊಂದಲಕ್ಕೆ ಒಳಗಾದ ಜೇಮ್ಸ್, ಒಂದು ದಿನ ಕಾಲಾವಕಾಶ ಕೊಡಿ ತಿಳಿಸುತ್ತೇನೆ ಎಂದರು.
ನೀರು ಬಾರದ ಕೊಳವೆ ಬಾವಿಯನ್ನು ಸುಮಾರು ಏಳು ನೂರು ಅಡಿ ಆಳ ಕೊರೆದಿರುವುದರಿಂದ, ಅದಕ್ಕೆ ಮಳೆ ಕೊಯ್ಲು ಮೂಲಕ ಮರುಪೂರಣ ಮಾಡುವುದರಿಂದ, ನಾನೂರೈವತ್ತು ಅಡಿ ಆಳ ಕೊರೆದಿರುವ ಕೊಳವೆ ಬಾವಿಯಲ್ಲಿ ನೀರಿನ ಇಳುವರಿ ಹೆಚ್ಚುವುದಂತೂ ಖಂಡಿತ. ಅಲ್ಲದೆ, ಅಂತರ್ಜಲದ ಟಾಂಕಿ ತುಂಬಿಸುವುದು ನನ್ನ ಕರ್ತವ್ಯವಾಗಿತ್ತು. ಅಂತೆಯೇ, ನೀರು ಬಾರದ ಬರಡು ಕೊಳವೆ ಬಾವಿಯಲ್ಲೂ, ನೀರಿನ ಇಳುವರಿ ಪಡೆಯಬಹುದೆಂಬ ದೃಢ ನಂಬಿಕೆ ನನ್ನದಾಗಿತ್ತು. ಈ ವಿಚಾರವನ್ನು ವಿವರಿಸಲು ಒಂದಿಷ್ಟು ಶ್ರಮವಹಿಸಲೂ ಬೇಕಾಯಿತು. ಮರುದಿನ ಕೆಲವು ಷರತ್ತಿನ ಮೇಲೆ, ನನ್ನ ಕೆಲಸಕ್ಕೆ ಒಪ್ಪಿಗೆ ಸಿಕ್ಕಿತ್ತು. ಮಣ್ಣಿನ ಆಳದೊಳಗೆ ಮುಚ್ಚಿ ಹಾಕಿದ್ದ ಆ ಕೊಳವೆ ಬಾವಿಯನ್ನು ಹುಡುಕುವುದೂ ಒಂದು ಸಾಹಸವಾಯಿತು. ಆದರೂ ಪಟ್ಟು ಬಿಡದೆ ಹುಡುಕಿ ಕೊಳವೆ ಬಾವಿಗೆ ಮಳೆ ನೀರಿನ ಮರುಪೂರಣವನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಿದ್ದೆ.
ಜೇಮ್ಸ್ ಮನೆ ಮೇಲೆ ಸುರಿದ ಒಂದು ವರ್ಷದ ಮಳೆಯ ಒಂದೊಂದು ಹನಿಯೂ ನೀರಿಲ್ಲದ ಕೊಳವೆ ಬಾವಿಯೊಳಗೆ ಸೇರಿದ್ದರಿಂದ ಇಳುವರಿ ನೀಡುತ್ತಿದ್ದ, ಎಂದರೆ ದಿನಕ್ಕೆ ನೂರಿನ್ನೂರು ಲೀಟರ್ ನೀರು ದೊರೆಯುತ್ತಿದ್ದ ಕೊಳವೆ ಬಾವಿ, ಮರುಪೂರಣ ಮಾಡಿದ ನಂತರ ನೀರಿನ ಮಟ್ಟ ಹಂತ ಹಂತವಾಗಿ ಹೆಚ್ಚಾಗ ತೊಡಗಿತು.
ಮರು ವರ್ಷ, ಜೇಮ್ಸ್ ಮನೆಯ ನೌಕರ ರಾಜಪಾಳು ಕೊಳವೆ ಬಾವಿಯಲ್ಲಿ ನೀರು ಬಂದಿರಬಹುದೆ ಎಂಬುವ ಕುತೂಹಲದಿಂದ, ನನ್ನ ಮತ್ತು ಜೇಮ್ಸ್ ಮಾತುಕತೆ ಸಂದರ್ಭದಲ್ಲಿ ರಾಜನು ಮಾತನ್ನು ಕೇಳಿಸಿ ಕೊಂಡಿದ್ದರಿಂದ ಅವನಲ್ಲಿ ಕುತೂಹಲ ಹೆಚ್ಚಾಗಿತ್ತು. ಹಾಗಾಗಿ, ಕೊಳವೆ ಬಾವಿಯೊಳಕ್ಕೆ ಉದ್ದನೆಯ ದಾರವನ್ನು ಚಿಕ್ಕ ಡಬ್ಬಿಗೆ ಕಟ್ಟಿ ಅದರೊಳಕ್ಕೆ ಭಾರವಿರುವ ಚಿಕ್ಕ ಕಲ್ಲನ್ನು ಇಟ್ಟು, ಡಬ್ಬವನ್ನು ಕೊಳವೆ ಬಾವಿಯೊಳಗೆ ಬಿಟ್ಟಿದ್ದ ದಾರ ಬಿಟ್ಟಷ್ಟು ಒಳ ಹೋಗುತ್ತಿತ್ತು. ಅವನ ಬಳಿ ಇದ್ದ ದಾರ ಕಾಲಿಯಾದುದರಿಂದ, ಇನ್ನಷ್ಟು ದಾರತರಲೆಂದು ಅಂಗಡಿಗೆ ಹೋಗುವ ಮೊದಲು, ಬಾವಿಗೆ ಇಳಿ ಬಿಟ್ಟಿದ್ದ ದಾರವನ್ನು ಪಕ್ಕದ ಕಂಬಕ್ಕೆ ಕಟ್ಟಿ ಹೋದ ಕೆಲ ನಿಮಿಷಗಳ ನಂತರ, ಹೊಸ ದಾರಗಳನ್ನು ತಂದು ಈ ದಾರವನ್ನು ನೋಡಿದರೆ, ಕೆಳಗೆ ಬಿಟ್ಟ ದಾರ ಸಡಿಲವಾಗಿತ್ತು. ಆಗಲೇ ಖುಷಿಗೊಂಡ ರಾಜ ದಾರವನ್ನು ಮೇಲಕ್ಕೆತ್ತಲು ನಿರ್ಧರಿಸಿದ; ಎತ್ತಿ ನೋಡಿದರೆ ಶುದ್ಧ ನೀರು! ಅವನ ಸಂತೋಷ ತಡೆಯಲಾರದೆ ಜೋರಾಗಿ ಕೂಗಿಕೊಂಡಿದ್ದ, ಆ ಕೂಗು ಕೇಳಿದ ಅಕ್ಕ ಪಕ್ಕದವರೆಲ್ಲಾ ಹೊರಬಂದು ನೋಡಿದ್ದರು. ಎಲ್ಲರಿಗೂ ವಿಸ್ಮಯ ಕಾದಿತ್ತು – ನೀರು ಬಾರದೇ ಬರಡಾಗಿದ್ದ, ಅದರಲ್ಲೂ ಮುಚ್ಚಿಹಾಕಿದ್ದ ಕೊಳವೆ ಬಾವಿಯಲ್ಲಿ ನೀರು ದೊರೆತಿತ್ತು. ಅದೂ ಇನ್ನೂರು ಅಡಿಯಲ್ಲಿ! ಬರಡಾದ ಬಾವಿಗೆ ಬಾಯಾರಿಕೆ ನೀಗಿತ್ತು. ಜೇಮ್ಸ್ ಖುಷಿಯಿಂದ ಕರೆ ಮಾಡಿದ್ದರು, ಮಳೆಕೊಯ್ಲಿಂದ ನೀರಿನ ಬರ ನೀಗಿದೆ. ಇದು ನಮ್ಮೊಬ್ಬರ ಮನೆಯ ಸಮಸ್ಯೆಗೆ ಪರಿಹಾರವಲ್ಲ ಭೂಮಿಯೊಳಗಿನ ಹಂಡೆ ತುಂಬಿಸುತ್ತಿದ್ದೇನೆ ಎಂಬುವ ಹೆಮ್ಮೆ ಜೇಮ್ಸ್ರವರಲ್ಲಿತ್ತು.
ಚಿತ್ರ ಲೇಖನ : ಅಚ್ಚನಹಳ್ಳಿ ಸುಚೇತನ