ರೆಕ್ಕೆಯ ಮಿತ್ರರಿಗಾಗಿ ಮಣ್ಣಿನ ಅರವಟ್ಟಿಗೆ!
ಈ ಬಾರಿಯ ಬಿಸಿಲಿನ ರಣ ಅವತಾರಕ್ಕೆ ಮನುಷ್ಯರು ಬಸವಳಿಯುವಂತಾಗಿದ್ದರೆ, ಸೂರಿಲ್ಲದ ಪ್ರಾಣಿ-ಪಕ್ಷಿಗಳ ಗತಿ ಈಗ ಹೇಗಿರಬೇಡ? ನಿಜಕ್ಕೂ ಶಿವರಾತ್ರಿ ನಂತರದ ಬಿಸಿಲು ನಮ್ಮ ಬಾಯಲ್ಲಿ ಶಿವ ಶಿವ ಎನಿಸುವಂತಿದೆ!
ನಮ್ಮ ಭಾಗದ ಜಲಮೂಲಗಳೆಲ್ಲ ಬತ್ತಿ, ಕೆರೆ, ಹಳ್ಳ, ತೊರೆಗಳ ತರಿಭೂಮಿ ಬಾಯ್ದೆರೆದು ನಿಂತಿದೆ. ಮಧ್ಯಾಹ್ನದ ವೇಳೆಗೆ ಪಕ್ಷಿಗಳು ಬಾಯ್ದೆರೆದು, ನಾಲಿಗೆ ಹೊರಚಾಚಿ, ತೇಕುತ್ತಿರುವ ದೃಶ್ಯ ಪಕ್ಷಿ ಪ್ರಿಯರ ಕರಳು ಹಿಂಡುವಂತಿದೆ.
ಮನೆಗಳ ತಾರಸಿ ಮೇಲೆ ಈಗ ಪ್ಲಾಸ್ಟಿಕ್ ನೀರಿನ ಟಾಕಿಗಳು ಜಾಗೆ ಪಡೆದ ಮೇಲೆ ಮುಚ್ಚಳ ಮತ್ತಷ್ಟು ಬಿಗಿಯಾಗಿದೆ! ಇನ್ನು ಆಗೊಮ್ಮೆ-ಈಗೊಮ್ಮೆ ಬಾಯ್ದೆರೆದ ಟಾಕಿಗಳಲ್ಲಿ ನೀರು ಅರ್ಧದಷ್ಟಿದ್ದರೆ, ಬಾಯಾರಿ, ಬಸವಳಿದ ಪಕ್ಷಿಗಳು ಹರಸಾಹಸಪಟ್ಟು ಕುಡಿಯಲು ಹೋಗಿ, ಒಳಗೆ ಬಿದ್ದು ಸತ್ತ ದೃಷ್ಟಾಂತಗಳೂ ಇವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ, ತಾಲೂಕಿನ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ನಲ್ಲಿ ಪಕ್ಷಿಗಳಿಗಾಗಿ ವಿಶೇಷ ಮುತುವರ್ಜಿವಹಿಸಿ ನೀರಿನ ಅರವಟ್ಟಿಗೆಗಳನ್ನು ಅಲ್ಲಲ್ಲಿ ನಿರ್ಮಿಸಲಾಗಿದೆ. ತುಂಬ ಸರಳ, ಕಡಿಮೆ ಖರ್ಚು ಹಾಗೂ ಪಕ್ಷಿ ಸ್ನೇಹಿ ಮಾದರಿಯಲ್ಲಿ, ಪರಿಸರಕ್ಕೆ ಅತ್ಯಂತ ಹತ್ತಿರವಾದ ಮಣ್ಣಿನ ಗಡಿಗೆಗಳ ಮುಚ್ಚಳಗಳನ್ನೇ ಇಲ್ಲಿ ಜಲಮೂಲವಾಗಿ ಪರಿವರ್ತಿಸಲಾಗಿದೆ. ಹಕ್ಕಿಗಳಿಗೆ ಇದು ಸ್ನಾನಗೃಹವೂ ಹೌದು. ನೀರನ್ನು ಎಲ್ಲರ ಸಮ್ಮುಖದಲ್ಲೇ ಅವು ಗುಟಕರಿಸಿದರೂ, ಸ್ನಾನ ತೀರ ಖಾಸಗಿ ವ್ಯವಹಾರ.. ಜನರಿದ್ದರೆ ಸ್ನಾನ ಮುಂದೂಡುತ್ತವೆ! ನಾಚಿಕೆ ಪಾಪ! ಪಕ್ಕದ ಮುಚ್ಚಳದಲ್ಲಿ ಅವುಗಳ ಆಹಾರಕ್ಕೂ ವ್ಯವಸ್ಥೆ ಮಾಡಲಾಗಿದೆ.
ಬೇಸಿಗೆ ಕಳೆದು, ಮಳೆಗಾಲ ಆರಂಭವಾಗುವ ವರೆಗೆ ೭ ಎಕರೆ ಉದ್ಯಾನದಲ್ಲಿ ಸುಮಾರು ಇಪ್ಪತ್ತು ಕಡೆಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಇಕೋ ವಿಲೇಜ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಪಂಚಯ್ಯ ಹಿರೇಮಠ ಹಾಗೂ ತಂಡ ಕೈಗೊಳ್ಳಲಿದೆ. ಈ ಪ್ರಯತ್ನ ಮನೆ-ಮನ ತಲುಪಿಸಲು ಅವರೊಂದು ವಿಶಿಷ್ಟ ಯೋಜನೆಯನ್ನೂ ರೂಪಿಸಿದ್ದಾರೆ!
“ಹಕ್ಕಿಗಳಿಗೆ ಪ್ಲಾಸ್ಟಿಕ್ ಮುಚ್ಚಳ, ಆಳವಾದ ತಗಡಿನ ಡಬ್ಬಿ ‘ಟ್ರ್ಯಾಪ್’ನಂತೆ ಭಾಸವಾಗುತ್ತವೆ. ಬಿಗಿಯಾಗಿ ಕಾಲೂರಿ ಹಿಡಿದುಕೊಳ್ಳಲು ಅನುವಾಗುವಷ್ಟು ದಪ್ಪದ ಅಂಚು, ಸ್ನಾನಕ್ಕೆ ಇಳಿದರೂ ಎದೆಯುದ್ದ ಬರುವಷ್ಟು ಮಾತ್ರ ನೀರು ಹಿಡಿದುಕೊಳ್ಳಬಲ್ಲ ಆಳವಿರುವ ಮಣ್ಣಿನ ಕುಡಿಕೆಯ ಮುಚ್ಚಳಗಳೇ ಒಳ್ಳೆಯದು. ಕುಂಟ್ಯಾಡದ, ಅನಗತ್ಯ ಸಪ್ಪಳ ಮಾಡದ, ತಕ್ಕ ಮಟ್ಟಿಗೆ ಹಕ್ಕಿಗಳ ಭಾರ ತಡೆಯು ಎರಡು ಅಂಗೈಗಳ ಗಾತ್ರದ ಮುಚ್ಚಳ ನಮ್ಮ ಪ್ರಯೋಗ ಸಫಲಗೊಳಿಸಿದೆ.”- ಪಂಚಯ್ಯ ವಿ. ಹಿರೇಮಠ, ಸಿಇಓ, ನೇಚರ್ ಫಸ್ಟ್ ಇಕೋ ವಿಲೇಜ್, ಹಳ್ಳಿಗೇರಿ.
ಇಕೋ ವಿಲೇಜ್ಗೆ ಕಳೆದ ಒಂದು ವಾರದಲ್ಲಿ ಭೇಟಿ ನೀಡಿದ ೧೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನಮ್ಮ ನೆರವಿನ ಆಸರೆ ಬೇಕಿರುವ ಬಗ್ಗೆ ಮನವರಿಕೆ ಮಾಡಿಸಿ, ಮಣ್ಣಿನ ಮುಚ್ಚಳಗಳನ್ನು ಉಚಿತವಾಗಿ ನೀಡಿ, ಅವರ ಮನೆ ಅಂಗಳ ಹಾಗೂ ತಾರಸಿಯ ಮೇಲೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಪರಿಸರ ಸ್ವಯಂ ಸೇವಕರು ಮನವಿ ಮಾಡಿಕೊಂಡಿದ್ದಾರೆ.
ತುಂಬ ಖುಷಿಯಿಂದ ತಾಯಂದಿರು ಮತ್ತು ಮಕ್ಕಳು ಮಣ್ಣಿನ ಮುಚ್ಚಳಗಳನ್ನು ಉಡುಗೊರೆಯಾಗಿ ಪಡೆದಿದ್ದು, ತಾವೂ ಸಹ ಖರೀದಿಸಿ ಮನೆಗಳ ನಾಲ್ಕೂ ಮೂಲೆಗಳಲ್ಲಿ ರೆಕ್ಕೆಯ ಮಿತ್ರರಿಗೆ ಆಸರೆ ಒದಗಿಸುವ ಭರವಸೆ ನೀಡಿದ್ದಾರೆ. ಪಕ್ಕದ ಮನೆಯವರಿಗೂ ಹೇಳುವ ವಾಗ್ದಾನ ಮಾಡಿದ್ದಾರೆ!
ಧಾರವಾಡದ ಸೂಪರ್ ಮಾರ್ಕೇಟ್ನಲ್ಲಿರುವ ಕುಂಬಾರ ಯಲ್ಲಪ್ಪಣ್ಣ ಅವರು ಸದ್ಯ ಈ ಬೇಡಿಕೆ ಪೂರೈಸುತ್ತಿದ್ದು, ಮತ್ತೆ ೧೦೦ ಹೆಚ್ಚುವರಿಯಾಗಿ ಮಣ್ಣಿನ ಗಡಿಗೆಯ ಮುಚ್ಚಳಗಳನ್ನು ಯೋಗ್ಯದರಲ್ಲಿ ನೀಡಿ ಹಕ್ಕಿಗಳ ದಾಹ ತಣಿಸಲು ಕೈಜೋಡಿಸಿದ್ದಾರೆ. ‘ಹೊಸ ದಗದರೆಪಾ.. ಇದು’ ಅಂದ್ರು ಖುಷಿಯಿಂದ!
ಮೂಕ ಹಕ್ಕಿಗಳ ಆಸರೆಗೆ ಸದ್ದಿಲ್ಲದೇ ನೂರಾರು ಕುಟುಂಬಗಳು ಈಗ ಸಜ್ಜಾಗಿವೆ ಎಂಬುದೇ ಈ ಬೇಸಿಗೆಯ ಸಮಾಧಾನ.
ಚಿತ್ರ-ಲೇಖನ: – ಹರ್ಷವರ್ಧನ ವಿ. ಶೀಲವಂತ