ಸದ್ಯ ೫ ಲಕ್ಷ ಕೊಳವೆ ಬಾವಿ: ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟು! – ನೆಲದ ನೀರೇ ಕೃಷಿಗೆ ಮೂಲಾಧಾರ!
ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳು ಪ್ರತಿ ವರ್ಷ ಒದಗಿಸಬಹುದಾದ ಸರಾಸರಿ ಮೇಲ್ಮೈ ನೀರಿನ ಪ್ರಮಾಣ ೯೭,೩೫೨ ಮಿಲಿಯನ್ ಘನ ಮೀಟರ್ (ಎಂಸಿಎಂ)! ಇಷ್ಟು ಪ್ರಮಾಣದ ನೀರು ಹರಿದು ಸಾಗರವನ್ನು ಸೇರುತ್ತಿದ್ದರೂ, ನೀರಾವರಿ ಕೃಷಿಗಾಗಿ ಉಪಯೋಗಿಸಬಹುದಾದ ನೀರಿನ ಪ್ರಮಾಣ ಸುಮಾರು ೪೮ ಮಿಲಿಯನ್ ಘನ ಮೀಟರ್ ಮಾತ್ರ ಎಂದು ನೀರಾವರಿ ತಜ್ಞರು ದಾಖಲಿಸುತ್ತಾರೆ.
ಅನುಕೂಲ ಸ್ಥಳದಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಭಾರಿ ಅಣೆಕಟ್ಟುಗಳನ್ನು ಕಟ್ಟಿ, ವಿಶಾಲ ಸರೋವರಗಳನ್ನು ರಾಜ್ಯದ ಹಲವೆಡೆ ನಿರ್ಮಿಸಲಾಗಿದೆ. ಅವುಗಳಿಗೆ ಕಾಲುವೆ ನಿರ್ಮಿಸಿ, ಬಹಳ ದೂರದ ವರೆಗೆ ನೀರನ್ನು ಸಾಗಿಸಿ, ಒಣಗಿದ ಬಯಲು ಸೀಮೆ ನೆಲಕ್ಕೆ ಸಕಾಲಕ್ಕೆ ನೀರನ್ನು ಒದಗಿಸಲಾಗುತ್ತಿದೆ. ವಿಶಾಲ ಬಯಲು ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುವಂತೆ ಅನುಕೂಲ ಕಲ್ಪಿಸಲಾಗಿದೆ.
ಹೊಸಪೇಟೆ ಬಳಿ ಕಟ್ಟಲಾದ ತುಂಗಭದ್ರಾ ಜಲಾಶಯ ರಾಜ್ಯದ ಬಹುತೇಕ ಜಲಾಶಯಗಳಲ್ಲೇ ದೊಡ್ಡದು. ೩,೭೫೪ ಮಿಲಿಯನ್ ಘನ ಮೀಟರ್ಗಳಷ್ಟು ನೀರು ಈ ಜಲಾಶಯದಲ್ಲಿ ಸಂಗ್ರಹಗೊಳ್ಳುತ್ತದೆ. ಈ ನೀರಿನಿಂದ ೨,೯೮,೮೦೦ ಹೆಕ್ಟೇರ್ (೭,೪೭,೦೦೦ ಎಕರೆ) ಜಮೀನನ್ನು ನೀರಾವರಿ ಕೃಷಿಗೆ ಬಳಸಬಹುದಾಗಿದೆ ಎಂದು ನಿರಾವರಿ ಇಲಾಖೆ ತಜ್ಞರು ನಿರೂಪಿಸುತ್ತಾರೆ.
ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳು ಮತ್ತು ಅವುಗಳಿಂದ ದೊರೆಯುವ ನೀರಿನ ಪ್ರಮಾಣವನ್ನು ಸ್ಥೂಲವಾಗಿ ಹೀಗೆ ಚಿತ್ರಿಸಬಹುದು –
ಭೂಮಿಯ ಹೊರ ಮೈ ಮೇಲೆ ಹರಿದು ಹೋಗುವ ನೀರನ್ನು ತಡೆದು, ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ಅನೇಕ ಕೆರೆ, ಕುಂಟೆ ಮತ್ತು ಕಟ್ಟೆಗಳನ್ನು ಸಹ ನಿರ್ಮಿಸಿ ಸ್ಥಳೀಯ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಈ ನೀರಾವರಿ ವ್ಯವಸ್ಥೆ ‘ಕರ್ನಾಟಕ ಮಾದರಿ’ ಎಂದು ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ.
ದಕ್ಷಿಣ ಬಯಲು ಸೀಮೆಯಲ್ಲಿ ಕೆರೆ, ಕಟ್ಟೆ, ಕುಂಟೆಗಳ ಸಂಖ್ಯೆ ಈ ಹಿಂದೆ ಹೆಚ್ಚಿತ್ತು. ಕೆರೆ, ಕುಂಟೆಗಳಿರದ ಗ್ರಾಮವೇ ಇರಲಿಲ್ಲ! ಸುಮಾರು ೪ ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಹಬ್ಬಿದ ಜಮೀನಿಗಳಿಗೆ ನೀರನ್ನು ಕೃಷಿಗಾಗಿ ಒದಗಿಸುವಲ್ಲಿ ಕೆರೆ, ಕುಂಟೆ, ಕಟ್ಟೆಗಳ ಪಾತ್ರ ಮಹತ್ವದ್ದಾಗಿತ್ತು.
ಇತ್ತೀಚಿನ ದಿನಗಳಲ್ಲಿ ಹಿರೀಕರು ಕಟ್ಟಿಸಿದ ಕೆರೆ, ಕುಂಟೆ, ಕಟ್ಟೆ, ಹೊಂಡ, ಬಾವಿಗಳನ್ನು ನೋಡಿಕೊಳ್ಳುವ ನೀರಘಂಟಿಗಳಿಲ್ಲದೇ, ಅವುಗಳಲ್ಲಿ ತುಂಬುವ ಹೂಳನ್ನು ಆಗಿದ್ದಾಂಗ್ಗೆ ತೆಗೆಯದ ಪರಿಣಾಮ, ಏರಿ, ತೂಬುಗಳನ್ನು ದುರಸ್ತಿಗೊಳಿಸದ ಹಿನ್ನೆಲೆ ಕ್ರಿಕೆಟ್ಮೈದಾನಗಳಂತಾಗಿವೆ! ಹಾಳಿ ಬಿದ್ದ ನೀರಿನ ಭೂಮಿಯನ್ನು ಒತ್ತೂವರಿ ಮಾಡಿ ಅಕ್ರಮವಾಗಿ ನಿವೇಶನ, ಕೈಗಾರಿಕೆ, ಕಟ್ಟಡಗಳ ನಿರ್ಮಾಣಕ್ಕೆ, ಬಸ್ ನಿಲ್ದಾಣ, ಮಾರುಕಟ್ಟೆ ರೂಪಿಸಲು ಸರ್ಕಾರಗಳೇ ಬಳಸಿದ ಉದಾಹರಣೆ ಸಾಕಷ್ಟಿವೆ.
ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಕೃಷಿ, ನೀರಾವರಿ ಕೆರೆಗಳ ಆಸರೆ ಕಳೆದುಕೊಂಡ ಪರಿಣಾಮ, ಅಣೆಕಟ್ಟೆಗಳನ್ನು ಆಧರಿಸಿ ಬೇಸಾಯವಾಗಿದೆ. ನೀರಾವರಿ ಕೃಷಿ ಉತ್ತಮವಾಗಬೇಕು ಮೊದಲಿನಂತೆ ಎಂದಾದರೆ, ಮೊದಲು ಮಾಡಬೇಕಿರುವ ಕೆಲಸ ಕೆರೆ, ಸಂಕ, ಕಟ್ಟ, ಕುಂಟೆಗಳ ಪುನರುಜ್ಜೀವನ ಗೊಳಿಸುವ ಪ್ರಯತ್ನ.
ಮೇಲಾಗಿ, ಮೇಲ್ಮೈ ನೀರಿನ ಸಮರ್ಪಕ ಬಳಕೆಯಲ್ಲಿ ಕೊರತೆಯೊಂದು ನೀರಾವರಿ ತಜ್ಞರಿಗೆ ಗೋಚರಿಸಿದೆ. ಉಷ್ಣ ವಲಯದಲ್ಲಿ ಬರುವ ನಮ್ಮ ರಾಜ್ಯದಲ್ಲಿ ಬಿಸಿಲಿನ ಬೇಗೆ ಕಳೆದೊಂದು ದಶಕದಲ್ಲಿ ಹೆಚ್ಚೂ ಕಡಿಮೆ ೩ ಡಿಗ್ರಿಗಳಷ್ಟು ಹೆಚ್ಚಿದೆ. ಬಿಸಲಿನ ಝಳಕ್ಕೆ ಮೇಲ್ಮೈ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ ವಾತಾವರಣ ಸೇರುವಂತಾಗಿದೆ. ಇದೇ ಕಾರಣಕ್ಕೆ ಜಲಾಶಯಗಳ ಶೇ. ೫೦ರಷ್ಟು ನೀರು ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ.
ನದಿ ತಾನು ಜನ್ಮ ತಳೆಯುವ ಸ್ಥಳದಿಂದ ಅಣೆಕಟ್ಟೆಯ ವರೆಗೆ ನೀರನ್ನು ಹೊತ್ತು ತರುವ ಸಂದರ್ಭದಲ್ಲಿ ಹೂಳು, ಮೆಕ್ಕಲು ಮಣ್ಣು ತಂದು ಮುದ್ದತಿ ಠೇವಣಿಯಂತೆ ಜಲಾಶಯದಲ್ಲಿ ಡೆಪಾಸಿಟ್ ಮಾಡುತ್ತ ಹೋಗುತ್ತದೆ. ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯದ ಜಲಾಶಯಗಳಿಂದ ಹೂಳೆತ್ತಿಸದ ಪರಿಣಾಮ ಸದ್ಯದ ಲೆಕ್ಕಾಚಾರ, ಹೊಸ ಅಣೆಕಟ್ಟೆ ನಿರ್ಮಿಸುವ ವೆಚ್ಚಕ್ಕೆ ಸಮಾನ ಎಂದು ತಜ್ಞರು ಲೆಕ್ಕಿಸಿದ್ದಾರೆ ಕೂಡ! ಹಾಗಾಗಿ, ವರ್ಷದಿಂದ ವರ್ಷಕ್ಕೆ ಅಣೆಕಟ್ಟೆಗಳಲ್ಲಿ ಶೇಖರಗೊಳ್ಳುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಜೊತೆಗೆ ಹಿನ್ನೀರು ವಸತಿ ಪ್ರದೇಶಗಳಿಗೆ ನುಗ್ಗಿ ಪುನರ್ವಸತಿ ಅನಿವಾರ್ಯವಾಗಿಸುತ್ತಿದೆ.
ನಮ್ಮ ಹಿರೀಕರು ಕಟ್ಟಿಸಿದ ಎಷ್ಟೋ ಕೆರೆಗಳು ಹೂಳು, ಮಣ್ಣಿನಿಂದ ತುಂಬಿ ಇಂದಿಗೆ ಕೊಚ್ಚೆ ಗುಂಡಿಯಂತಾಗಿವೆ. ಧಾರವಾಡದ ಬಹುತೇಕ ಕೆರೆಗಳು ಈಗ ಈ ದುಃಸ್ಥಿತಿಯಲ್ಲಿವೆ. ಅಂತರ್ಜಲ ಮಾತ್ರ ನೆಲದೊಳಗೆ ಇಂಗಿ ಶೇಖರಗೊಳ್ಳುವುದರಿಂದ, ಬಿಸಿಲಿನ ಬೇಗೆಗೆ ಒಳಗಾಗದೇ ಸಂಪೂರ್ಣ ಬಳಕೆಗೆ ಲಭ್ಯವಾಗುತ್ತದೆ.
ಜಲಾಶಯ, ಕೆರೆ, ಕಟ್ಟೆ, ಸಂಕ, ಕುಂಟೆಗಳು ಬತ್ತಿ ಹೋದರೂ ನೆಲದಲ್ಲಿ ಇಂಗಿದ ನೀರು ಮಾತ್ರ ಕುಗ್ಗಿ ಹೋಗದೇ ಆಪತ್ಕಾಲದಲ್ಲಿ ಚಿನ್ನದಂತೆ ಉಪಯೋಗಕ್ಕೆ ಬರುತ್ತದೆ. ಕೆರೆಯ ನೀರು ಬತ್ತಿ ಹೋದರೂ, ಅಚ್ಚುಕಟ್ಟುವ, ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿಯ ಬಾವಿಗಳಲ್ಲಿ ಸದಾ ನೀರು ಜಿನುಗುವಂತೆ ಮಾಡುತ್ತದೆ. ಹರಿಯುವ ನೀರಿಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಅಣೆಗಳನ್ನು ಕಟ್ಟುವುದರಿಂದ ಕಣಿವೆ ಪ್ರದೇಶಗಳೆಲ್ಲ ನೀರಿನ ಆಶ್ರಯ ಪಡೆದು ಹಸುರಿನಿಂದ ಕಂಗೊಳಿಸುತ್ತವೆ.
ಕೃಷ್ಣಾ ನದಿಯಲ್ಲಿ ೨೦೦೦ ಮಿಲಿಯನ್ ಘನ ಅಡಿಗಳಷ್ಟು (ಟಿಎಂಸಿ ಅಡಿ) ನೀರು ದೊರೆಯುವುದಾದರೂ, ನಮ್ಮ ರಾಜ್ಯದ ಸರಹದ್ದಿನಲ್ಲಿ ಉತ್ಪತ್ತಿಯಾಗುವ ನೀರಿನ ಪ್ರಮಾಣ ೨೫೦ ಸಾವಿರ ಮಿಲಿಯನ್ ಘನ ಅಡಿಗಳಷ್ಟು ಮಾತ್ರ. ಅದೇ ರೀತಿ ಕಾವೇರಿ ನದಿಯಲ್ಲಿ, ಕರ್ನಾಟಕದ ಎಲ್ಲೆಯೊಳಗೆ ಉತ್ಪತ್ತಿಯಾಗುವ ನೀರು ೪೭೦ ಸಾವಿರ ಮಿಲಿಯನ್ ಘನ ಅಡಿಗಳು ಮಾತ್ರ!
ಮುಖ್ಯ ನದಿಗಳಲ್ಲಿ ಹರಿದುಹೋಗುವ ನೀರಿನ ಪ್ರಮಾಣ ಹೀಗಿದೆ..
ಹೀಗೆ, ಪ್ರತಿ ವರ್ಷ ಮಳೆಯ ನೀರಿನ ಫಲವಾಗಿ ನೆಲದ ನೀರಿನ ಹೆಚ್ಚಳ (ವಾರ್ಷಿಕ ಮರುಪೂರಣ) ಸುಮಾರು ೩೭೪ ಸಾವಿರ ಮಿಲಿಯನ್ ಘನ ಅಡಿ (ಟಿಎಂಸಿ ಫೀಟ್) ಎಂದು ನೀರಾವರಿ ತಜ್ಞರು ದಾಖಲಿಸಿದ್ದಾರೆ. ಇಂದಿಗೆ ಎರಡು ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ತೆರೆದ ಬಾವಿಗಳಿದ್ದವು. ಕಳೆದ ಇಪ್ಪತ್ತು ವರ್ಷಗಳಲ್ಲಿ ಬದಲಾಗಿ ಕೊಳವೆ ಬಾವಿಗಳ ಸಂಖ್ಯೆ ದುಪ್ಪಟ್ಟಾಗಿದೆ!
೧೯೮೯ರಲ್ಲಿ ಪಂಪ್ ಅಳವಡಿಸಲಾದ ಬಾವಿಗಳ ಸಂಖ್ಯೆ ೬,೩೫,೭೪೪ ಈಗ ಇದು ಎರಡು ಪಟ್ಟು ಹೆಚ್ಚಿದೆ! ಅಂದಿಗೆ, ಸುಮಾರು ಹತ್ತು ಲಕ್ಷ ಹೆಕ್ಟೇರ್ (೨೫ ಲಕ್ಷ ಎಕರೆ ಕೃಷಿ ಭೂಮಿ) ನೆಲದ ನೀರನ್ನು ಅವಲಂಬಿಸಿತ್ತು. ಈಗ ಅದು ಒಂದೂವರೆ ಪಟ್ಟು ಜಾಸ್ತಿ!
ಸಾಂದರ್ಭಿಕ ಚಿತ್ರ:
ಲೇಖನ : ಹರ್ಷವರ್ಧನ ವಿ. ಶೀಲವಂತ