ವಾಟರ್ ಲಾಸ್ (ನೀರಿನ ನಷ್ಟ) – ೨೦೧೬ ಅಂತರರಾಷ್ಟ್ರೀಯ ವಿಚಾರ ಸಂಕಿರಣ
ರಾಜ್ಯದ ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೀರಿನ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಆಯೋಜಿಸಿದ್ದ ವಾಟರ್ ಲಾಸ್-೨೦೧೬ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಲಾಯಿತು. ಫ಼ೆಬ್ರವರಿ ೩ರವರೆಗೆ ನಡೆಯಲಿರುವ ಈ ಸಂಕಿರಣದಲ್ಲಿ, ದೇಶ ವಿದೇಶದ ೧೦೦ಕ್ಕೂ ಅಧಿಕ ನೀರಿನ ತಜ್ಞರು, ನೀರಿನ ಸೋರಿಕೆ ತಡೆಗಟ್ಟುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್, ಮಹಾರಾಷ್ಟ್ರದ ಜಲತಜ್ಞ ಡಾ.ಚಿದಾಲೆ, ಭಾರತದ ಜಲ ಸಂಘದ ಅಧ್ಯಕ್ಷ ಡಾ. ಲಾಂಗೆ, ಅಂತರರಾಷ್ಟ್ರೀಯ ಜಲಸಂಘದ ಅಧ್ಯಕ್ಷ ಹೂಬರ್ಗ್, ಬೆಂಗಳೂರು ವಿಭಾಗದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಜಲಮಂಡಳಿ ಮುಖ್ಯ ಎಂಜಿನಿಯರ್ ಕೃಷ್ಣಪ್ಪ, ಅಂತರರಾಷ್ಟ್ರೀಯ ನೀರು ಒಕ್ಕೂಟದ ವ್ಯವಸ್ಥಾಪಕ ನಿರ್ದೇಷಕ ಗೆರ್ಬೆರ್ ಕ್ಯಾಂಪ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ನಿರ್ದೇಶಕ ಹಾಜರಿದ್ದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ರವರು, “ಐಟಿ-ಬಿಟಿ ಹಬ್ ಆಗಿರುವ ನಗರವು ಅತಿ ವೇಗವಾಗಿ ಬೆಳೆಯುತ್ತಿರುವ ಕಾರಣ, ಪ್ರತಿಯೊಬ್ಬರಿಗೂ ಕುಡಿಯುವ ನೀರು ಸರಬರಾಜು ಮಾಡುವುದು ಬೆಂಗಳೂರು ಜಲ ಮಂಡಳಿಗೆ ಸವಾಲಿನ ಕೆಲಸವಾಗಿದೆ,” ಎಂದರು. “ನಗರದಲ್ಲಿ ನೀರಿನ ಸೋರಿಕೆ ಪ್ರಮಾಣ ಶೇ.೪೮ರಷ್ಟು ಇತ್ತು. ಕಳೆದ ಮೂರು ತಿಂಗಳಿನಿಂದ ವಿವಿಧ ಯೋಜನೆಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದರಿಂದ, ಶೇ.೩೫ಕ್ಕೆ ಇಳಿಕೆಯಾಗಿದೆ. ನಗರಕ್ಕೆ ೧೦೦ ಕಿಮೀ ದೂರದಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಜಲಮಂಡಲಿಯು ನೀರು ಪೂರೈಕೆಯ ಜೊತೆಗೆ, ನೀರಿನ ಸೋರಿಕೆ ಕಡಿಮೆ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ವಾಟರ್ ವರ್ಕ್ ಅಸೋಷಿಯೇಶನ್ ಅಧ್ಯಕ್ಷ ಎಚ್.ಸಿ. ಲಾಂಗೆ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಲ ಮಂಡಳಿಗೆ ಕಾರ್ಯನಿರ್ವಹಿಸಲು ಅಗತ್ಯ ಹಣಕಾಸು ಸಹಾಯ ಮಾಡುತ್ತಿಲ್ಲ. ನೀರಿನ ಮೌಲ್ಯವನ್ನು ಅರಿತು ಸರ್ಕಾರಗಳು ಬಜೆಟ್ನಲ್ಲಿ ಹೆಚ್ಚು ಅನುದಾನ ನೀಡಬೇಕು,” ಎಂದು ಒತ್ತಾಯಿಸಿದರು.
ಅಂತರರಾಷ್ಟ್ರೀಯ ವಾಟರ್ ಅಸೋಸಿಯೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಗೆರ್ಬೆರ್ ಕ್ಯಾಂಪ್ ಮಾತನಾಡಿ, ನೀರು ನಿರ್ವಹಣೆ ಅತಿ ಮುಖ್ಯವಾಗಿದ್ದು, ನೈಅರ್ಗಿಕ ಸಂಪನ್ಮೂಲವಾಗಿರುವ ನೀರನು ಕೃತಕ ವಿಧಾನದಿಂದ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ನೀರಿನ ಬಳಕೆ ವೇಳೆ ಸೋರಿಕೆ ಮತ್ತಿತರ ಅಪವ್ಯಯವನ್ನು ತಪ್ಪಿಸಿ, ಸದ್ಬಳಕೆಗೆ ಆದ್ಯತೆ ನೀಡಬೇಕು. ಇಂತಹ ಕೆಲಸಗಳಿಗೆ ರಾಜಕೀಯ ಇಚ್ಛಾಶಕ್ತಿಯೂ ಇರಬೇಕು. ನೀರಿನ ಸದ್ಬಳಕೆಯ ಬಗ್ಗೆ ಮಹಿಳೆಯರಿಗೆ, ಮಕ್ಕಳಿಗೆ ಅರಿವು ಮೂಡಿಸಬೇಕು. ಸಂಸ್ಕರಿಸಿದ ನೀರನ್ನು ಪುನರ್ಬಳಕೆಗೆ ಬಳಸುವ ಮೂಲಕ ಉಳಿಸಬೇಕು. ಭಾರತ ಸೇರಿದಂತೆ ಅನೇಕೆ ದೇಶಗಳ ಭವಿಷ್ಯವು ನೀರನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ಆಧರಿಸಿದೆ ಎಂದು ಅಭಿಪ್ರಾಯಪಟ್ಟರು.
“ನಗರದಲ್ಲಿ ೮೦ ಸಾವಿರ ಕುಟುಂಬಗಳು ಅನಧಿಕೃತ ನೀರಿನ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ,” ಎಂದು ಜಲಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು. “ಅನಧಿಕೃತ ನೀರಿನ ಸಂಪರ್ಕಗಳ ಪತ್ತೆಗೆ ಜಲಮಂಡಳಿ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಕೊಳೆಗೇರಿಗಳಲ್ಲಿ ಅಧಿಕ ಪ್ರಮಾಣದ ಅನಧಿಕೃತ ಸಂಪರ್ಕಗಳಿವೆ. ಅನಧಿಕೃತ ಸಂಪರ್ಕ ಹೊಂದಿರುವವರ ವಿರುದ್ಧ ಜಲಮಂಡಳಿ ಕ್ರಮ ಕೈಗೊಳ್ಳಲಿದೆ,” ಎಂದರು. “ಗಾಂಧಿನಗರ, ಮೆಜೆಸ್ಟಿಕ್, ಚಿಕ್ಕಪೇಟೇ ಮತ್ತಿತರ ಕಡೆಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರು ಗೃಹ ಬಳಕೆಯ ನೀರಿನ ಸಂಪರ್ಕ ಪಡೆದಿದ್ದಾರೆ. ಇದರಿಂದ ಮಂಡಳಿಗೆ ಭಾರಿ ನಷ್ಟ ಉಂಟಾಗುತ್ತದೆ. ಇವುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು,” ಎಂದರು.
“ಆಗ್ನೇಯ, ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ೧೧೦ ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆಯ ಜತೆಗೆ, ಇದನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ರೂ.೭೫೦ ಕೋಟಿ ಯೋಜನೆಯ ಸಾಲಕ್ಕಾಗಿ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗೆ (ಜೈಕಾ) ಪ್ರತಾವ ಸಲ್ಲಿಸಲಾಗಿದೆ. ಜೈಕಾದಿಂದ ಪ್ರತಿಕ್ರಿಯೆ ಬಂದಿಲ್ಲ,” ಎಂದರು.
“ದೇಶದ ಬಹುತೇಕ ನಗರಗಳಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.೫೦ಕ್ಕಿಂತ ಜಾಸ್ತಿ ಇದೆ. ಇದರಿಂದ ಮಂಡಳಿಗಳು ಭಾರಿ ನಷ್ಟ ಅನುಭವಿಸುತ್ತಿವೆ. ನಗರ ನೀರು ವ್ಯವಸ್ಥೆಯ ಉತ್ತಮ ನಿರ್ವಹಣೆಯಿಂದ ನಷ್ಟ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ದೊಡ್ಡ ಮೊತ್ತದ ಹೂಡಿಕೆ ಅಗತ್ಯ ಇದೆ,” ಎಂದು ಅವರು ಪ್ರತಿಪಾದಿಸಿದರು.
“ಬೆಂಗಳೂರಿಗೆ ಪ್ರತಿದಿನ ೧೪೦ ಕೋಟಿ ಲೀಟರ್ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಈ ಪೈಕಿ ಶೇ.೪೬ರಷ್ಟು (೬೦ ಕೋಟಿ ಲೀಟರ್) ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ೬೦ ಕೋಟಿ ನೀರು ಪೂರೈಕೆ ಮಾಡುವ ಹೊಸ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ಅನುದಾನ ಬೇಕಾಗುತ್ತದೆ. ಅದರ ಬದಲು ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಹುದು,” ಎಂದರು.