ಬೇಸಿಗೆ ಅರಮನೆ
ಆಧುನಿಕ ತಂತ್ರಜ್ಞಾನಗಳಿಗೆ ಜೋತು ಬಿದ್ದು, ಪರಾವಲಂಬಿ ಬುದಕಿಗೆ ಒಗ್ಗಿಕೊಂಡಿರುವ ಮಾನವ ಸಂಕುಲ ಪ್ರಕೃತಿ ವಿರೋಧಿ ಕಾರ್ಯಗಳಲ್ಲೇ ಹೆಚ್ಚಿನ ಖುಷಿ ತನ್ನದಾಗಿಸಿಕೊಳ್ಳುತ್ತಿದ್ದಾನೆ. ಐಷಾರಾಮಿ ವಸ್ತುಗಳಾದ ಏರ್ಕೂಲರ್, ಶವರ್, ಟಬ್ ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ನಾವು ವಿದೇಶಿಗರಿಂದ ಎರವಲು ಪಡೆದುಕೊಳ್ಳುತ್ತಿದ್ದೇವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿಯೇ, ಭಾರತದಲ್ಲಿ ವಿನೂತನ ತಂತ್ರಜ್ಞಾನಗಳು ಇದ್ದವು ಮತ್ತು ಅವುಗಳು ಪ್ರಕೃತಿಗೆ ಪೂರಕವಾಗಿದ್ದವು ಎಂಬುದಕ್ಕೆ ಅನೇಕ ಸಾಕ್ಷ್ಯಗಳು ತಡವಾಗಿ ಬೆಳಕಿಗೆ ಬರುತ್ತಿವೆ.
ಇದಕ್ಕೆ ಪೂರಕವೆಂಬಂತೆ, ನಿಸರ್ಗದತ್ತವಾಗಿ ಏರ್ಕೂಲರ್, ಟಬ್ ಹಾಗೂ ಶವರ್ ಬಳಕೆ ಮಾಡಿದ ಶ್ರೇಯಸ್ಸು ವಿಜಯಪುರದ ಶಾಹಿ ಸುಲ್ತಾನರಿಗೆ ಸಲ್ಲುತ್ತದೆ. ವಿಜಯಪುರ ನಗರದಿಂದ ಕೇವಲ ೨೦ ಕಿ.ಮೀ. ಅಂತರದಲ್ಲಿರುವ ಶಾಹಿ ಸುಲ್ತಾನರ ಕಾಲದ ಬೇಸಿಗೆ ಅರಮನೆ ಇದಕ್ಕೆ ತಾಜಾ ಉದಾಹರಣೆ. ಎರಡನೇ ಇಬ್ರಾಹಿಂ ಆದಿಲ್ ಶಹಾ ೧೬ನೇ ಶತಮಾನದಲ್ಲಿಯೇ ತನ್ನ ಪ್ರೇಯಸಿಗಳೊಡನೆ ಸರಸ ಸಲ್ಲಾಪಕ್ಕಾಗಿ, ಜಲ ಕ್ರೀಡೆಗಳಿಗಾಗಿ, ನೈಸರ್ಗಿಕವಾಗಿ ಬೇಸಿಗೆ ಅರಮನೆ ನಿರ್ಮಿಸಿದ್ದಾನೆ. ಕುಮಟಗಿ ಗ್ರಾಮದ ದೊಡ್ಡ ಕೆರೆ ಪಕ್ಕದಲ್ಲಿ ಎರಡು ಅರಮನೆಗಳನ್ನು ಕಟ್ಟಿಸಲಾಗಿದೆ. ಕೆರೆಯ ಮಧ್ಯದಲ್ಲೇ ಒಂದು ಅರಮನೆ ನಿರ್ಮಿಸಲಾಗಿದ್ದು, ದೋಣಿ ಮೂಲಕ ಸಾಗಿ, ಇಬ್ರಾಹಿಂ ಆದಿಲ್ ಶಹಾ ಪ್ರೇಯಸಿಯರೊಡನೆ ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ, ಸುಲ್ತಾನನ ಯಾವ ಮೋಜು ಮಸ್ತಿಗಳೂ ಅಲ್ಲಿನ ಜಲಸಂಪನ್ಮೂಲ, ಸಸ್ಯಸಂಕುಲ ಹಾಗೂ ಜೀವರಾಶಿಗಳಿಗೆ ಮಾರಕವಾಗಿರದಿರುವುದು ವಿಶೇಷ. ಕುಮಟಗಿಯಲ್ಲಿ ಎರಡು ಅರಮನೆಗಳನ್ನು ಕಟ್ಟಿಸಿ, ಅದರ ಸುತ್ತ ಅನೇಕ ಸಸಿಗಳನ್ನು ನೆಟ್ಟು, ರಾಜ ಇಬ್ರಾಹಿಂ ಆದಿಲ್ ಶಹಾ ಅದನ್ನು ರೆಸಾರ್ಟ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾನೆ. ಸುತ್ತಲೂ ಕೆರೆ, ಬಗೆಬಗೆಯ ಸಸಿಗಳು, ಇಳಿಜಾರಿನಲ್ಲಿ ಹರಿದು ಬರುವ ನೀರು – ಪ್ರಕೃತಿ ಸೌಂದರ್ಯಕ್ಕೆ ಬೇಸಿಗೆ ಅರಮನೆ ಹೇಳಿ ಮಾಡಿಸಿದ ಜಾಗೆಯಾಗಿತ್ತು. ಮಾತ್ರವಲ್ಲ, ಮಳೆ ನೀರು ಕೊಯ್ಲು ಪದ್ಧತಿ ಕೂಡ ಇಲ್ಲಿತ್ತು ಎಂಬುದಕ್ಕೆ ಈಗಲೂ ಕುರುಹುಗಳಿವೆ.
ಅರಮನೆಯಲ್ಲಿ ಟಬ್ ಹಾಗೂ ಶವರ್ಗಳನ್ನು ಅಳವಡಿಸಲಾಗಿದೆ. ಹೂವಿನಾಕಾರದಲ್ಲಿ ನಿರ್ಮಾಣವಾದ ಟಬ್ ಮೇಲ್ಭಾಗ ಕಲ್ಲಿನಲ್ಲಿ ಸಣ್ಣ ರಂಧ್ರಗಳನ್ನು ಮಾಡಿ, ಶವರ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಗೋಡೆ ಒಳಭಾಗದಲ್ಲಿ ಸಣ್ಣ ಮಣ್ಣಿನ ಪೈಪ್ಗಳನ್ನು ಅಳವಡಿಸಿ, ಅಲ್ಲಿಂದ ಶವರ್ಗೆ ನೀರು ಸರಬರಾಜಾಗುವಂತೆ ವಿನ್ಯಾಸ ಮಾಡಲಾಗಿದೆ. ಅರಮನೆ ಸುತ್ತಲೂ ಎರಡು ಕೊಳಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಸಂಗ್ರಹಗೊಳ್ಳುವ ನೀರು ತಂಪಾದ ಗಾಳಿ ಸೂಸಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಟಬ್ನಲ್ಲಿ ಸಂಗ್ರಹವಾದ ನೀರು ಮತ್ತೆ ಕೊಳದಲ್ಲಿ ಸಂಗ್ರಹವಾಗುವಂತೆ ಮಣ್ಣಿನ ಕೊಳವೆಗಳನ್ನು ಅಳವಡಿಸಿರುವುದು ಅಂದಿನ ತಂತ್ರಜ್ಞರ ನೈಪುಣ್ಯತೆಗೆ ಹಿಡಿದ ಕೈಗನ್ನಡಿ.
ನೀರು ಬಳಕೆ ಪದ್ಧತಿ
ಬೇಸಿಗೆ ಅರಮನೆ ಮುಂಭಾಗದಲ್ಲಿ ದೊಡ್ಡ ಟ್ಯಾಂಕ್ ಕಟ್ಟಿಸಲಾಗಿದ್ದು, ಕುಮಟಗಿಯಿಂದ ಹರಿದು ಬರುವ ಮಳೆ ನೀರು ಇಳಿಜಾರು ಪ್ರದೇಶದಲ್ಲಿಸಂಗ್ರಹಗೊಳ್ಳುವಂತೆ ಕೆರೆ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆ ನೀರು ಸಂಗ್ರಹ ಪದ್ಧತಿ ೧೬ನೇ ಶತಮಾನದಲ್ಲಿತ್ತು ಎಂಬುದು ತಿಳಿದು ಬರುತ್ತದೆ. ಕೆರೆಯಿಂದ ಮೊದಲು ದೊಡ್ಡ ಅಲಗುಗಳ ಮೂಲಕ ನೀರನ್ನು ಟ್ಯಾಂಕ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಗೊಂಡ ನೀರನ್ನು ಹೆಚ್ಚು ಒತ್ತಡ ಬಳಸಿ ಬೇಸಿಗೆ ಅರಮನೆ ಒಳಭಾಗದಲ್ಲಿ ಅಳವಡಿಸಿದ ಮಣ್ಣಿನ ಕೊಳವೆಗಳಲ್ಲಿ ಹರಿಸಲಾಗುತ್ತಿತ್ತು. ಬಳಿಕ ಹೆಚ್ಚುವರಿ ನೀರು ಶವರ್ಗೆ ಸರಬರಾಜಾಗುತ್ತಿತ್ತು. ಈಗಲೂ ಈ ಮಾದರಿಗಳು ನೋಡಲು ಸಿಗುತ್ತವೆ.
ಅರಮನೆಯ ಒಳಭಾಗದಲ್ಲಿ ಅಳವಡಿಸಲಾದ ಸಣ್ಣ ಮಣ್ಣಿನ ಪೈಪುಗಳ ಮೂಲಕ ಹರಿದು ಬರುವ ನೀರು ಇಡೀ ಅರಮನೆಯನ್ನು ತಂಪಾಗಿರಿಸುತ್ತಿತ್ತು. ಸುತ್ತಲೂ ಎರಡು ಆಳ ಕಂದಕಗಳನ್ನು ತೋಡಲಾಗಿದ್ದು ಹೆಚ್ಚುವರಿ ನೀರು ಅದರಲ್ಲಿ ಹರಿದು ತಂಪಾದ ಗಾಳಿ ಈಗಿನ ಎಸಿ ಅನುಭವ ನೀಡುವಂತೆ ಮಾಡುತ್ತಿತ್ತು. ಅರಮನೆ ಸುತ್ತ ಅಲಂಕಾರಿಕ ಹಾಗೂ ಬೃಹತ್ ಮರಗಳನ್ನು ನೆಟ್ಟಿದ್ದರಿಂದ, ಬೇಸಿಗೆ ಸಂದರ್ಭ ಮರಗಿಡಗಳಿಂದ ಸೂಸಿ ಬರುವ ಗಾಳಿ ಎರಡು ಕೊಳಗಳ ದಾಟಿ ಬರುವ ಹೊತ್ತಿಗೆ ತಂಪಾಗಿ ರಾಜನ ದಣಿವಾರಿಸುತ್ತಿತ್ತು. ಅಲ್ಲದೇ, ಬಳಕೆಯಾದ ನೀರನ್ನು ಮತ್ತೆ ಕೊಳದಿಂದ ಪೈಪ್ಗಳ ಮೂಲಕ ಸಸಿಗಳಿಗೆ ಉಣಿಸುವ ಪದ್ಧತಿ ರಾಜ ಅಳವಡಿಸಿಕೊಂಡಿದ್ದ.
ಇಂಥ ಅಪರೂಪದ ನಿಸರ್ಗ ಪ್ರಿಯ ತಂತ್ರಜ್ಞಾನ ಇಂದಿನ ಯುವ ತಂತ್ರಜ್ಞರು ಮರೆತಿರುವುದು ವಿಪರ್ಯಾಸ.
ಚಿತ್ರ-ಲೇಖನ: ಬಿ. ರಾಮು. ಹಿರೇಮಸಳಿ