ಮಿತಿ ತಪ್ಪಿದ ನೀರಾವರಿ – ಸವುಳಾಯ್ತು ಫಲವತ್ತಾದ ಭೂಮಿ
ನೀರಿಲ್ಲದೆ ಕೃಷಿ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದ ವಿಚಾರ. ಊರಿನ ಪಕ್ಕದಲ್ಲೇ ಕೃಷ್ಣಾ ನದಿ ಹರಿಯುತ್ತಿದ್ದರೂ, ಕೃಷಿಗೆ ನೀರಿರಲಿಲ್ಲ. ಮಳೆ ನಂಬಿಕೊಂಡು ಕೃಷಿ ಮಾಡಿದರೆ ಬೆಳೆ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಫಲವತ್ತಾದ ಜಮೀನು ಇದ್ದರೂ, ಫಸಲು ಬರುತ್ತಿರಲಿಲ್ಲ. ಹೀಗಾಗಿ, ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತರು ನೀರಿನ ಸಮಸ್ಯೆ ಚರ್ಚಿಸಿದರು. ಇದರ ಫಲವಾಗಿಯೇ, ೧೯೭೬ರಲ್ಲಿ ಸಹಕಾರಿ ತತ್ವದಡಿ ಏತ ನೀರಾವರಿ ಯೋಜನೆ ರೂಪುಗೊಂಡಿತು.
ಕೃಷ್ಣಾ ನದಿಯಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಪಂಪ್ಸೆಟ್ – ಪೈಪ್ಲೈನ್ಗಳ ಮೂಲಕ ತಂದು ಹೊಲಕ್ಕೆ ಹಾಯಿಸಿದರು. ಸಹಕಾರಿ ತತ್ವದ ನೀರಾವರಿ ವ್ಯವಸ್ಥೆಯಡಿ, ರೈತರು ಬರೋಬ್ಬರಿ ೫ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಮಾಡಿಕೊಂಡರು. ನದಿಯಿಂದ ಹೊಲದವರೆಗೆ ನೀರು ಸಾಗಿಸಲು, ೬ ಸಾವಿರ ಅಡಿಗೂ ಹೆಚ್ಚು ದೂರ ಪೈಪ್ಲೈನ್ ಅಳವಡಿಸಿಕೊಂಡಿದ್ದಾರೆ. ೨೦ಕ್ಕೂ ಹೆಚ್ಚು ನೀರಾವರಿ ಸಂಘಗಳಿದ್ದು, ೨,೫೦೦ಕ್ಕೂ ಹೆಚ್ಚು ರೈತರು ಸದಸ್ಯರಿದ್ದಾರೆ. ಕಬ್ಬು, ದ್ರಾಕ್ಷಿ, ಬಾಳೆ ಸೇರಿದಂತೆ, ವಾಣಿಜ್ಯ ಬೆಳೆ ಬೆಯುತ್ತಾರೆ. ಸರಕಾರದ ನೆರವಿಲ್ಲದೆ, ರೈತರೇ ಒಗ್ಗಟ್ಟಾಗಿ ಮಾಡಿಕೊಂಡ ಈ ವ್ಯವಸ್ಥೆ, ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ, ಅರಿವಿಲ್ಲದೇ ರೈತರು ಇಂದು ಸಮಸ್ಯೆಗೆ ಸಿಲುಕಿದ್ದಾರೆ. ಅತೀ ನೀರಿನ ಬಳಕೆ ಮಣ್ಣನ್ನು ಸವುಳು ಮಾಡಿದೆ. ನೀರಾವರಿ ಯೋಜನೆ ಆರಂಬದಿಂದ ೨೦ ವಷಗ ವರೆಗೆ ಸಮಸ್ಯೆ ಇರಲಿಲ್ಲ. ೧೯೯೫ರಲ್ಲಿ ಕೆಲ ರೈತರ ಜಮೀನಿನಲ್ಲಿ ಸವುಳು ಸಮಸ್ಯೆ ಕಾಣಿಸಿಕೊಂಡಿತು. ೨೦೦೫ರ ಹೊತ್ತಿಗೆ, ಈ ಸಮಸ್ಯೆ ಇನ್ನುಷ್ಟು ಪ್ರದೇಶಕ್ಕೆ ವಿಸ್ತಾರಗೊಂಡಿತು. ಇಂದು ೧,೩೦೦ ಎಕರೆಗೂ ಅಧಿಕ ಭೂಮಿ ಸವುಳಾಗಿದೆ. ಅಲ್ಲಿ ಬೆಳೆ ಬರುತ್ತಿಲ್ಲ. ಕಬ್ಬು ಬೆಯುತ್ತಿಲ್ಲ. ಮಣ್ಣು ಕ್ಷಾರಯುಕ್ತವಾಗಿದ್ದು, ಬಿಳಿ ಬಣ್ಣಕ್ಕೆ ತಿರುಗಿದೆ.
ಕಾರಣವೇನು? ಅತೀ ನೀರಿನ ಬಳಕೆಯೇ ಸಮಸ್ಯೆಯ ಮೂಲ ಎಂಬುದು ಅಲ್ಲಿನ ರೈತರ ಅನುಭವದ ಮಾತು.
ಪಾರಂಪರಿಕ ಕೃಷಿ ಪದ್ಧತಿಯಲ್ಲಿ, ಅತಿಯಾಗಿ ಬೆಳೆಗೆ ನೀರುಣಿಸಿದ್ದು ಸಮಸ್ಯೆ ತಂದಿಟ್ಟಿದೆ. ವಾರ್ಷಿಕ ಬೆಳೆಯಾದ ಕಬ್ಬಿಗೆ, ಹೆಚ್ಚಿನ ಪ್ರಮಾಣದಲ್ಲಿ ರೈತರು ನೀರನ್ನು ಬಿಡುತ್ತಿದ್ದರು. ಹನಿ ನೀರಾವರಿ ಪದ್ಧತಿ ಅಂದು ರೈತರಿಗೆ ತಿಳಿದಿರಲಿಲ್ಲ. ಅಷ್ಟಕ್ಕೂ, ತಾವು ಹೆಚ್ಚು ನೀರು ನೀಡುತ್ತಿದ್ದೇವೆ ಎಂಬುದು ಕೂಡ ಅಂದು ರೈತರಿಗೆ ಗೊತ್ತಾಗಲಿಲ್ಲ. ಹೇಗಿದ್ದರೂ ನೀರಿದೆ. ನೀರು ಹೆಚ್ಚು ನೀಡಿದರೆ, ಬೆಳೆ ಉತ್ತಮವಾಗಿ ಬರುತ್ತದೆ ಎಂಬ ವಿಚಾರ. ಮಳೆಗಾಲ ಹೊರತುಪಡಿಸಿ, ಉಳಿದ ದಿನಗಳಲ್ಲಿ ನಿರಂತರವಾಗಿ ಕಬ್ಬು, ಬಾಳೆಗೆ ನೀರುಣಿಸುತ್ತಿದ್ದರು. ಕಪ್ಪು-ಮರಳು ಮಿಶ್ರಿತ ಮಣ್ಣಿಗೆ ಅಧಿಕ ಪ್ರಮಾಣದಲ್ಲಿ ನೀರು ನೀಡಿದ್ದರಿಂದ, ಮಣ್ಣಿನ ಗುಣಧರ್ಮವೇ ಬದಲಾಯಿತು. ಉಪ್ಪಿನ ಅಂಶ ಹೆಚ್ಚಾಗಿ, ಬಿಳಿ ಬಣ್ಣಕ್ಕೆ ತಿರುಗಿದೆ. ಇಂಥ ಮಣ್ಣಿನಲ್ಲಿ ಬೆಳೆ ಬೆಳೆಯುತ್ತಿಲ್ಲ.
ಹೊಲದ ಸುತ್ತ ಇದ್ದ ಬಸಿ ಕಾಲುವೆಗಳು ಕೂಡ ಮುಚ್ಚಿ ಹೋಗಿದ್ದವು. ಹೀಗಾಗಿ, ಹೆಚ್ಚುವರಿ ನೀರು ಹರಿದು ಹೋಗಲು ಅವಕಾಶವಿಲ್ಲದಂತಾಯಿತು. ಅಲ್ಲದೆ, ಕೃಷ್ಣಾ ನದಿಯಿಂದ ತಂದ ನೀರನ್ನು ಸಂಗ್ರಹಿಸಲು ರೈತರ ಹೊಲದ ಎತ್ತರ ಪ್ರದೇಶದಲ್ಲಿ ಬೃಹತ್ ಹೊಂಡ ನಿರ್ಮಿಸಿಕೊಳ್ಳಲಾಗಿದೆ. ಈ ಕೃತಕ ಹೊಂಡದಲ್ಲಿ ರೈತರು ನೀರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಪಾಳಿ ಪ್ರಕಾರ, ಹೊಲಕ್ಕೆ ನೀರುಣಿಸುತ್ತಾರೆ. ಈ ಹೊಂಡದಲ್ಲಿ ಸಂಗ್ರಹವಾದ ನೀರು ಇಂಗಿ, ಕೆಳ ಪ್ರದೇಶಕ್ಕೆ ಬಂದದ್ದು ಕೂಡ ಸವುಳು ಸಮಸ್ಯೆಗೆ ಕಾರಣ ಎನ್ನುತ್ತಾರೆ ರೈತರು. ಇದಲ್ಲದೆ, ಅಧಿಕ ರಾಸಾಯನಿಕ ಗೊಬ್ಬರ ಬಳಕೆ, ಹಿಪ್ಪರಗಿ ಬ್ಯಾರೇಜ್ನ ಹಿನ್ನೀರು ಕೂಡ ಭೂಮಿ ಸವುಳಾಗಲು ಕಾರಣ ಎಂಬ ಅನಿಸಿಕೆ ರೈತರದ್ದು.
ನೀರಿಲ್ಲದೇ ಜೀವನ – ಕೃಷಿ, ಯಾವುದೂ ಸಾಧ್ಯವಿಲ್ಲ. ಆದರೆ, ಕೃಷಿಯಲ್ಲಿ ಅತಿಯಾದ ನೀರಿನ ಬಳಕೆ ಒಳಿತಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.
ಚಿತ್ರ-ಲೇಖನ: – ವಿಶ್ವಾಮಿತ್ರ