ಆ ಕೆರೆ ಸಂರಕ್ಷಕ ಈ ಆರಕ್ಷಕ
ಅದೊಂದು ಪಾಳು ಬಿದ್ದಿದ್ದ ಕೆರೆ. ಎಷ್ಟರಮಟ್ಟಿಗೆ ಅಂದ್ರೆ ಅಲ್ಲಿ ಕೆರೆ ಇತ್ತಾ ಅಂತಾ ಊಹಿಸುವುದೂ ಕೂಡ ಕಷ್ಟವಾಗಿತ್ತು. ಆದ್ರೀಗ ಶಿಸ್ತಿನ ಇಲಾಖೆ ಎಂದೇ ಹೆಸರಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕೈಗೊಂಡಿದ್ದ ನಿರ್ಧಾರದಿಂದ ಆ ಕೆರೆಗೆ ಮರುಜೀವ ಪಡೆದಿದೆ. ಅದೊಬ್ಬ ಪೊಲೀಸ್ ಅಧಿಕಾರಿಯ ಸತತ ಶ್ರಮದಿಂದ ಎನ್ನುವುದು ನಿಜಕ್ಕೂ ಹೆಮ್ಮೆ.ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿ ಇಂಡಸ್ಟ್ರಿಯಲ್ ಏರಿಯಾದ ಸಮೀಪದಲ್ಲಿರುವ ಹರಪನಹಳ್ಳಿ ಕೆರೆ ಕೇವಲ 10 ವರ್ಷಗಳ ಹಿಂದೆ ಸ್ವಚ್ಚಂದವಾಗಿದ್ದು ಗ್ರಾಮಸ್ಥರು ನೀರು ಕುಡಿಯುವ ಕೆರೆಯಾಗಿತ್ತು. ಆದ್ರೆ ಇಂಡಸ್ಟ್ರಿಗಳು ಕಳೆದ 10 ವರ್ಷಗಳಲ್ಲಿ ಎತೇಚ್ಚವಾಗಿ ಹೆಚ್ಚಾದ ಪರಿಣಾಮವಾಗಿ ಆ ಕೆರೆ ಸಂಪೂರ್ಣ ಅವನತಿ ತಲುಪಿತ್ತು. ಅವನತಿ ಹೊಂದಿದ ಕೆರೆಗೆ ಮರುಹುಟ್ಟು ಬಂದಿದ್ದು ಪೊಲೀಸ್ ಇಲಾಖೆಯ ಶ್ರಮದಿಂದ. ಸತತ ಸೂರ್ಯೋಧಯದಿಂದ ಸೂರ್ಯಾಸ್ತದ ವರೆಗೆ ನಡೆದ 46 ಗಂಟೆಗಳ ಕಾರ್ಯಾಚರಣೆ ಬಳಿಕ ಕೆರೆ ತನ್ನ ಮೂಲ ಸ್ವರೂಪ ಪಡೆದಿದೆ.
ಕಾರ್ಯಾಚರಣೆ ಹೇಗೆ
ಸ್ವತ ಕೆರೆಗಿಳಿದು ಕಸ ತೆಗೆಯುತ್ತಿರುವ ಪೊಲೀಸರ ದಂಡು.. ಒಂದಿಷ್ಟು ಮಂದಿ ಒಗ್ಗೂಡಿಸುಕೊಟ್ಟ ಕಸವನ್ನ ಎಳೆದು ಕೆರೆ ದಂಡೆಗೆ ತರುತ್ತಿರೋ ಇತರೆ ಪೊಲೀಸ್ ಮತ್ತೊಂದು ಪೊಲೀಸ್ ತಂಡ… ಕಾಕಿ ಬಿಟ್ಟು ಟಿ ಶರ್ಟ್ ಗಳನ್ನ ತೊಟ್ಟು ಕೆರೆಗಳಿದು ಇತರೆ ಸಿಬ್ಬಂದಿಗೆ ಹುರುಪು ತುಂಬುತ್ತಿರುವ ಡಿವೈಎಸ್ಪಿ ಉಮೇಶ್. ಹೌದು ಸತತ 46 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಹರಪನಹಳ್ಳಿ ಕೆರೆಯನ್ನ ಸಂಪೂರ್ಣವಾಗಿ ಸ್ವಚ್ಚಗೊಳಿಸುವಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರು ಯಸಸ್ವಿಯಾಗಿದ್ದಾರೆ. ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರ ಬೆಳಿಗ್ಗೆ 6 ಗಂಟೆಗೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಎಸ್ ಕೆ. ಉಮೇಶ್ ನೇತೃತ್ವದಲ್ಲಿ ಖಾಕಿ ಪಡೆ ಕೆರೆಗಿಳಿದು ಕಾರ್ಯಾಚರಣೆ ಆರಂಭಿಸಿತ್ತು. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಸತತವಾಗಿ 100 ಮಂದಿ ಪೊಲೀಸ್ ಸಿಬ್ಬಂದಿ ಮತ್ತು 100ಕ್ಕೂ ಅಧಿಕ ಸಾರ್ವಜನಿಕರು ಮತ್ತು ರೌಡಿ ಶೀಟರ್ ಗಳನ್ನ ಬಳಸಿಕೊಂಡು ಡಿವೈಎಸ್ಪಿ ಉಮೇಶ್ ಸಿಬ್ಬಂದಿಯೊಂದಿಗೆ ಕೆರೆಗಿಳಿದು ಕಾರ್ಯಾಚರಣೆಯಲ್ಲಿ ತೊಡಗಿದ್ರು. ಪ್ರತಿ ಭಾರಿ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವುದು ಮತ್ತು ಜಾಥಾ ನಡೆಸುವುದು ಕಾಮನ್ ಆದ್ರೆ ಈ ಬಾರಿ ಏನಾದ್ರೂ ಡಿಫರೆಂಟ್ ಆಗಿ ಮಾಡಬೇಕು. ಅದು ನಾಲ್ಕು ಜನಕ್ಕೆ ಮಾಧರಿಯಾಗಿರಬೇಕು ಅಂತಾ ಪಣತೊಟ್ಟಿದ್ದ ಆನೇಕಲ್ ಡಿಎಸ್ಪಿ ಎಸ್ ಕೆ. ಉಮೇಶ್ ಎಲ್ಲಾ ಪೊಲೀಸರನ್ನ ಒಗ್ಗೂಡಿಸಿ ಸಂಪೂರ್ಣವಾಗಿ ಮಲಿನವಾಗಿರುವ ಕೆರೆಯನ್ನ ಪುನರುಜ್ಜೀವನ ಗೊಳಿಸಿಬಿಟ್ಟಿದ್ದಾರೆ.
ಕೆರೆ ಸಂರಕ್ಷಣಗೆ ಪಣ, ಯಂತ್ರ ತಂತ್ರ ಬಳಕೆ
10 ಜೆಸಿಬಿ 15 ಲಾರಿ ಮತ್ತು ಟ್ರಾಕ್ಟರ್ ಗಳನ್ನ ಬಳಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸ್ ಸಿಬ್ಬಂದಿ ಸುಮಾರು 860 ಲೋಡ್ ಗೂ ಅಧಿಕ ಮಣ್ಣು, ಕಸ ಕಡ್ಡಿ, ಹುಲ್ಲು ಗಿಡ ಗಂಟಿಗಳನ್ನ ಕೆರೆಯಿಂದ ಹೊರತೆಗೆದಿದ್ದು ಮಲಿನಗೊಂಡಿದ್ದ ಕೆರೆಗೆ ಮರುಜೀವ ನೀಡಿದ್ದಾರೆ. ಇನ್ನು ಜಿಗಣಿ ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಸಾಕಷ್ಟು ಕೆರೆಗಳು ವಿನಾಶದ ಅಂಚಿನಲ್ಲಿವೆ. ಹಾಗಾಗಿ ಪೊಲೀಸ್ ಇಲಾಖೆ ತಾವೇ ಕೆರೆಯನ್ನ ಪುನರುಜ್ಜೀವನಗೊಳಿಸಿ ಸಾರ್ವಜನಿಕರಿಗೆ ಮಾಧರಿಯಾಗುವಂತೆ ಜಲಮೂಲವನ್ನ ಕಾಪಾಡುವುದು ನಮ್ಮ ಕರ್ತವ್ಯ ಹಾಗಾಗಿ ಈ ಕೆರೆಯನ್ನ ಆಯ್ಕೆ ಮಾಡಿಕೊಂಡು 3 ಎಕರೆಯಲ್ಲಿರುವ ಕೆರೆಗೆ ಪೊಲೀಸ್ ಕೆರೆ ಎಂದು ಹೆಸರಿಟ್ಟು ಅದರಲ್ಲಿ ಬೋಟಿಂಗ್ ಅಥವಾ ಮೀನು ಸಾಕಾಣೆ ಮಾಡುವ ಮೂಲಕ ಜಲಮೂಲವನ್ನ ಉಳಿಸಿಕೊಳ್ಳಬೇಕೆಂಬ ಹಂಬಲ ಎಸ್.ಕೆ ಉಮೇಶ್ ರದ್ದು.
ಸೀವೇಜ್ ವಾಟರ್ ಮತ್ತು ಬೇಲಿ ಹಾಕಿ ಮುಂದೆಯೂ ಕೆರೆ ಕಾಪಾಡಲು ಪಣ
ಇನ್ನು ಈ ಕೆರೆ ಸುಮಾರು ಎರಡೂಮುಕ್ಕಾಲು ಎಕರೆಯಲ್ಲಿದ್ದು ಎರಡು ಕಡೆಯಿಂದ ಇದಕ್ಕೆ ಸೀವೇಜ್ ವಾಟರ್ ಬರುತ್ತಿದೆ. ಅದನ್ನ ತಡೆಯಲು ಕೆರೆ ಸುತ್ತಾ ಕಾಲುವೆ ನಿರ್ಮಾಣ ಕಾಮಗಾರಿ ಕೂಡ ಚಾಲ್ತಿಯಲ್ಲಿದೆ. ಇನ್ನು ಯಾವುದೇ ಕಾರಣಕ್ಕೂ ಕೆರೆ ಮತ್ತೆಂದೂ ಮಲಿನವಾಗದಿರುವಂತೆ ನೋಡಿಕೊಳ್ಳಲು ಜಿಗಣಿ ಠಾಣಾ ವ್ಯಾಪ್ತಿಯ ಹಳೆ ರೌಡಿಶೀಟರ್ ಓರ್ವನಿಗೆ ಕೆರೆ ಸ್ವಚ್ಚತೆಯನ್ನಿಡುವುದರೊಂದಿಗೆ ಅಲ್ಲಿ ಮೀನು ಸಾಕಲು ಅವಕಾಶ ಮಾಡಿಕೊಟ್ಟು, ಆತನೇ ಕೆರೆ ಕಾವಲು ಮಾಡುವಂತೆ ಜವಾಬ್ದಾರಿ ನೀಡುವ ಯೋಚನೆ ಇದೆ ಅಂತಾರೆ ಡಿಎಸ್ಪಿ ಉಮೇಶ್.
ಈ ಕೆರೆಯನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೇನು
ಆನೇಕಲ್ ಉಪವಿಭಾಗ ಡಿವೈಎಸ್ಪಿ ಯಾಗಿ ಕಳೆದ ಎರಡು ವರ್ಷದ ಹಿಂದೆ ಬಂದ ಉಮೇಶ್ ನಿತ್ಯ ಬನ್ನೇರುಘಟ್ಟ, ಜಿಗಣಿ ಆನೇಕಲ್ ಠಾಣೆಗಳಿಗೆ ಆ ಕೆರೆ ಏರಿಮೇಲಿರುವ ರಸ್ತೆ ಮುಖಾಂತರವೇ ತಿರುಗುತ್ತಿದ್ದರು. ಹಾಗಾಗಿ ನಿತ್ಯ ತಿರುಗಾಡುವಾಗ ಈ ಕೆರೆಯ ಪರಿಸ್ತಿತಿ ನೋಡಿ ಇದು ಕೆರೆಯೋ ಇಲ್ಲವೋ ಖಾಸಗೀ ಜಾಗವೋ ಎನ್ನುವ ಅನುಮಾನ ಅವರನ್ನ ಕಾಡಿತ್ತು ಏಕೆಂದರೆ ಕೆರೆ ನೆಲಮಟ್ಟದವರೆಗೆ ಗಿಡಗಂಟಿ ಹುಲ್ಲು ಬೆಳೆದು ತುಂಬಿ ಹೋಗಿತ್ತು. ಆಗ ಸ್ಥಳೀಯ ಗ್ರಾಮಪಂಚಾಯತ್ ಸದಸ್ಯರು ಮತ್ತು ಮುಖಂಡರುಗಳನ್ನ ವಿಚಾರಿಸಿ ಆ ಕೆರೆಬಗ್ಗೆ ಮಾಹಿತಿ ಪಡೆದು ಅದನ್ನ ಹೇಗಾದ್ರೂ ಮಾಡಿ ಕೆರೆ ಮಟ್ಟಕ್ಕೆ ತರಬೇಕೆನ್ನುವ ಡಿವೈಎಸ್ಪಿ ಹಂಬಲದಿಂದ ಈ ಕೆಲಸವಾಗಿದೆ ಅಂತಾರೆ ಜಿಗಣಿ ಠಾಣೆಯ ಇನ್ಪೆಕ್ಟರ್ ಸಿದ್ದೇಗೌಡ
ಸ್ಥಳೀಯ ಗ್ರಾಮಪಂಚಾಯತ್ ನಿಂದಲೂ ನೆರವು
ಸತತ 46 ಗಂಟೆ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಕಾರ್ಯವೂ ಕೂಡ ಮಹತ್ವ್ದದಾಗಿದೆ. ಸುಮಾರು 10 ಜೆಸಿಬಿ ಯಂತ್ರಗಳು, 15 ಲಾರಿ 200 ಮಂದಿ ಕೆಲಸ ನಿರ್ವಹಿಸಿದ್ದರಿಂದ ಯಂತ್ರಗಳನ್ನ ಸ್ಥಳೀಯ ಕಲ್ಲಬಾಳು ಗ್ರಾಮಪಂಚಾಯಿತಿ ಅಧ್ಯಕ್ಷ ಬಸವರಾಜ್ ಅವರು ವಹಿಸಿಕೊಂಡಿದ್ದು ಅವರೇ ಕೆರೆ ಸ್ವಚ್ಚಕಾರ್ಯಕ್ಕೆ ಬೇಕಾದ ಅಗತ್ಯ ಸಾಮಾಗ್ರಿ ಮತ್ತು ಯಂತ್ರಗಳನ್ನ ಕೂಡ ಒಗಿಸಿದ್ರು. ಇನ್ನು ಪೊಲೀಸರು ಮತ್ತು ಸ್ಥಳೀಯರಿಗೆ ಸ್ಥಳೀಯ ಹೋಟೆಲ್ ಮಾಲೀಕರು ಪೊಲೀಸರ ಕೆಲಸ ನೋಡಿ ತಾವಾಗಿಯೇ ಮುಂದೆ ಬಂಂದು ಅನ್ನ ನೀರು, ಎಲ್ಲವನ್ನೂ ನೀಡಿದ್ದಾರೆ ಅಂತಾರೆ ಕೆರೆಕ್ಲೀನ್ ಅಭಿಯಾನದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ.
ಈ ರೀತಿ ಕಾರ್ಯಾಚರಣೆ ಇದೇ ಮೊದಲು ಅಂತಾರೆ ಪೊಲೀಸ್
ಇನ್ನು ಪೊಲೀಸ್ ಇಲಾಖೆ ಈ ಮೊದಲು ಚಿಕ್ಕಪುಟ್ಟ ಜಾಗೃತಿ ಕಾರ್ಯಕ್ರಮಗಳನ್ನ ಬಿಟ್ಟರೆ ಇಷ್ಟು ದೊಡ್ಡ ಮಟ್ಟದಲ್ಲಿ ಕೆರೆ ಕ್ಲೀನ್ ಮಾಡುವ ಮೂಲಕ ಹೆಸರಾಗಿದ್ದು ಇದೇ ಮೊದಲು. ಇದು ನಮ್ಮ ರಾಜ್ಯ ಪೊಲೀಸರು ಇತರೆಡೆ ಜಲಮೂಲ ರಕ್ಷಣೆ ಮಾಡಲು ಮಾಧರಿ ಮಾತ್ರವಲ್ಲದೇ ಸದಾ, ಕೇಸ್, ಬದೋಬಸ್ತ್ ಅಂತಾ ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಅದರ ನಡುವೆಯೇ ಈ ರೀತಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು ನಮ್ಮೆಲ್ಲರ ಹೆಮ್ಮೆ ಅನ್ನುವುದು ಬೆಂಗಳೂರು ಗ್ರಾಮಾಂತ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಮಾತು. ಇದೇ ರೀತಿ ಪ್ರತಿಯೊಂದು ಇಲಾಖೆಯೂ ಈ ರೀತಿ ಶ್ರಮವಹಿಸಿ ಸಾರ್ವಜನಿಕರಲ್ಲಿ ಹುರಿದುಂಬಿಸಿದ್ದೇ ಆದಲ್ಲಿ ಸಾಕಷ್ಟು ಕೆರೆ ಪುನರುಜ್ಜೀವನಗೊಳಿಸಬಹುದೆನ್ನುವುದು ಅವರ ಅಭಿಲಾಷೆ.
ಸಾರ್ವಜನಿಕರಿಂದಲೂ ಮೆಚ್ಚುಗೆ, ಸ್ಪಂದನೆ
ಪೊಲೀಸ್ ಇಲಾಖೆಯ ಈ ಕೆಲಸಕ್ಕೆ ಸಾರ್ವಜನಿಕರು ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಸ್ಲಾಘನೆ ವ್ಯಕ್ತಪಡಿಸಿದ್ದು. ಖಾಕಿ ಪಡೆಯ ಈ ಪರಿಸರ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಸುಮಾರು 200 ಮಂದಿ ಪೊಲೀಸರು ಕೆರೆಗಿಳಿದು ಈ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದನ್ನ ನೋಡಿದ ಸಾಕಷ್ಟು ಸಾರ್ವಜನಿಕರು ಪೊಲೀಸರೊಂದಿಗೆ ಸೇರಿ ತಮ್ಮ ಕೈಲಾದ ಸೇವೇ ಮಾಡಿದ್ದದಾರೆ. ಇನ್ನು ನಮ್ಮ ವ್ಯಾಪ್ತಿಯಲ್ಲಿ ಕೆರೆ ಕ್ಲೀನ್ ಕೆಲಸಕ್ಕೆ ಇಲಾಖೆಯಿಂದ ನಮ್ಮ ಸಹಕಾರ ಇದ್ದೇ ಇದೆ. ಡಿವೈಎಸ್ಪಿ ಉಮೇಶ್ ಅವರ ಇಚ್ಚಾಶಕ್ತಿಯಿಂದ ಈ ಕೆಲಸವಾಗಿದೆ. ಅವರಿಗೆ ಇಲಾಖೆ ವತಿಯಿಂದ ಧನ್ಯವಾದ ಅಂತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಡಿಷನಲ್ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ. ಮಲ್ಲಿಕಾರ್ಜುನ್.
ಚಿತ್ರ-ಲೇಖನ:ಜಗದೀಶ್ ಹೊನಗೋಡು.