ನೆರವಿಗಾಗಿ, ತೇಲುತ್ತಿರುವ ರಾಷ್ಟ್ರೀಯ ಉದ್ಯಾನವನದ ಕೂಗು
ಲೋಕ್ಟಕ್ ಕೆರೆಯು ಕೇವಲ ನೀರಿನ ಆಗರ ಮಾತ್ರವಲ್ಲ; ಅದನ್ನು ಅಣೆಕಟ್ಟಾಗಿ ಪರಿಗಣಿಸುವುದು ಈ ನೈಸರ್ಗಿಕ ಸೋಜಿಗಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಅದು ಏಕೆಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
http://www.indiawaterportal.org/articles/floating-national-park-calls-help
ಪರ್ವತ-ಸಾಗರಗಳು, ಮರುಭೂಮಿ-ಅರಣ್ಯಗಳು ಸೇರುವ ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ, ಪ್ರವಾಸಿ ಕ್ಯಾಟಲಾಗ್/ಸಾಹಿತ್ಯದಿಂದ ಅನೇಕ ಬಾರಿ ಹೊರಗುಳಿಯುವ ಸೌಂದರ್ಯವೇ ಮೈವೆತ್ತಂತೆ ಇರುವ ಕೆರೆಯೆಂದರೆ, ಮಣಿಪುರದ ಅತ್ಯದ್ಭುತವಾದ ಲೋತ್ಟಕ್ ಕೆರೆ.
ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ೪೬೯ ಚ.ಕಿ.ಮೀ. ಪ್ರದೇಶದಲ್ಲಿ ಹರಡಿರುವ ಲೋಕ್ಟಕ್ ತರಿಭೂಮಿ ಸಂಕೀರ್ಣವು ರಾಜ್ಯದ ಜೀವನಾಡಿಯಾಗಿದೆ. ಭಾರತದ ಅತ್ಯಂತ ದೊಡ್ಡ ಸಿಹಿನೀರಿನ ಕೆರೆಯಾದ ಕಾರಣ, ಈ ತರಿಭೂಮಿಯು ಜೀವರಾಶಿಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿ ದೊರೆಯುವ ಸಂಪನ್ಮೂಲಗಳ ಮೇಲೆ ಮಣಿಪುರದ ೧,೦೦,೦೦೦ಕ್ಕೂ ಹೆಚ್ಚು ಜನರ ಜೀವನೋಪಾಯಗಳು ಅವಲಂಬಿತವಾಗಿದೆ.
ಆಶ್ಚರ್ಯಕರೆವೆಂದರೆ, ನೀರಿನಲ್ಲಿ ಬೆಳೆಯುವ ಸುಮಾರು ೨೩೩ಕ್ಕೂ ಹೆಚ್ಚು ಗಿಡಗಳು, ನೂರಕ್ಕೂ ಹೆಚ್ಚು ವಲಸಿಗ ಹಕ್ಕಿಗಳು ಹಾಗೂ ಅವಸಾನದ ಅಂಚಿನಲ್ಲಿರುವ ಮಣಿಪುರಿ ಬ್ರೊ-ಆಂಟ್ಲರ್ಡ್ ಜಿಂಕೆ ಅಥವಾ ಸಂಗೈ ಜಿಂಕೆಯಂತಹ ಪ್ರಾಣಿಯ ಜಾತಿಗಳಿಗೆ ಇದು ಆವಾಸಸ್ಥಾನವಾಗಿದೆ. ವೈವಿಧ್ಯಪೂರ್ಣ ಜೈವಿಕ ಪರಿಸರವನ್ನು ಪೋಷಿಸುವ ಇದರ ಸಾಮರ್ಥ್ಯವು, ಲೋಕ್ಟಕ್ ಸಂಕೀರ್ಣಕ್ಕೆ ಆರ್ಥಿಕ ಮಹತ್ವವನ್ನೂ ನೀಡುತ್ತದೆ. ಇದರ ಮತ್ತೊಂದು ವಿಶಿಷ್ಟತೆಗಾಗಿ ಕೆರೆಯು ನಕ್ಷೆಯಲ್ಲಿ ಸ್ಥಾನವನ್ನು ಪಡೆದಿದೆ: ಅದು ಫ಼ುಮ್ಡಿ. ಫ಼ುಮ್ಡಿ ಎಂಬ ಅಪರೂಪದ ತೇಲುವ ಸಸ್ಯಸಂಪತ್ತನ್ನು ಹೊಂದಿರುವ ಈ ಕೆರೆಯು ವಿಶ್ವದಲ್ಲಿ ಏಕೈಕ ತೇಲುವ ಕೆರೆಯೆಂದು ಕರೆಯಲ್ಪಡುತ್ತದೆ.
ಫ಼ುಮ್ಡಿ ಸಸ್ಯವರ್ಗದ ತೇಲುವ ಚಾಪೆಯಂತಿದ್ದು, ಈ ತರಿಭೂಮಿಯ ವಿಶಿಷ್ಟ ಗುಣಲಕ್ಷಣವಾಗಿದ್ದು, ಕೆರೆಯಲ್ಲಿರುವ ಪೋಷಕಾಂಶಗಳನ್ನು ಹಿಡಿದಿಡುವ ಮೂಲಕ, ನೀರಿನ ಗುಣಮಟ್ಟವನ್ನು ನಿರ್ವಹಿಸುವಲ್ಲಿ ಇದು ನೆರವಾಗುತ್ತದೆ. ಬಹುತೇಕ ಘನರೂಪದಲ್ಲಿರುವ ಈ ತೇಲುವ ಚಾಪೆಗಳು, ಸ್ಥಳೀಯರು ಅದರ ಮೇಲೆ ಮನೆಗಳನ್ನು ಕಟ್ಟಿಕೊಳ್ಳಲು, ಚಿಕ್ಕ ಅಂಗಡಿಗಳನ್ನು/ವ್ಯಾಪಾರವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಈ ರೀತಿಯ ಫ಼ುಮ್ಡಿಗಳು ಕೆರೆಯ ಮೇಲೆ ಇರುವುದರಿಂದಲೇ, ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನವಾದ ಕೈಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನಕ್ಕೆ ನಾವು ಭೇಟಿ ನೀಡಲು ಸಾಧ್ಯವಾಗುತ್ತದೆ.
ಇತರ ಯಾವುದೇ ಸುಸಂರಕ್ಷಿತ ನೀರಿನ ಆಗರದಂತೆ, ಋತುಮಾನಕ್ಕೆ ಅನುಗುಣವಾಗಿ ಬೀಳೇಳುವ ನೀರಿನ ಮಟ್ಟಗಳು ಅದಕ್ಕೆ ಅಸ್ತಿತ್ವಕ್ಕೆ ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಋತುಮಾನಕ್ಕೆ ಅನುಗುಣವಾಗಿ ಹರಿಯುವ ನೀರಿನ ಬಗೆಗಿನ ದುರ್ಬಲ ತಿಳುವಳಿಕೆ ಹಾಗೂ ಜಲವಿದ್ಯುತು ಉತ್ಪಾದನೆಯ ಮೇಲಿನ ಸಂಕುಚಿತ ಗಮನವು ನೈಸರ್ಗಿಕವಾಗಿ ಬೀಳೇಳುಗಳನ್ನು ಕಾಣುವ ಕೆರೆಯನ್ನು ಕೇವಲ ಅಣೆಕಟ್ಟಾಗಿ ಪರಿವರ್ತಿಸಿದೆ. ಜಲವಿದ್ಯುತ್ ಉತ್ಪಾದನೆಗಾಗಿ ತರಿಭೂಮಿಯನ್ನು ನಿಯಂತ್ರಣ ಮಾಡುವುದರಿಂದ, ಕೆರೆಯ ಪರಿಸರ ವ್ಯವಸ್ಥೆಯಲ್ಲಿ ಮಾರ್ಪಾಡುಗಳಾಗಿ, ದೀರ್ಘಾವಧಿಯಲ್ಲಿ ಇದು ತರಿಭೂಮಿಗೆ ಹಾನಿಯನ್ನು ಉಂಟುಮಾಡಿದೆ. ಅದರ ಶ್ರೀಮಂತ ಇತಿಹಾಸಕ್ಕೆ ಹೋಲಿಸಿದಲ್ಲಿ, ಅಣಕಟ್ಟಾಗಿ ಮಾರ್ಪಾಡಾಗುವ, ಅದರೊಳಗಿನ ಪರಿಸರವ್ಯವಸ್ಥೆಯು ಅತ್ಯಲ್ಪದಿಂದ ನಗಣ್ಯದ ಮಟ್ಟಕ್ಕೆ ಇಳಿಯುವ ಹೊಸ್ತಿಲಲ್ಲಿ ಇರುವಂತೆ ಲೋಕ್ಟಕ್ ತೋರುತ್ತದೆ.
ಇಂಡೋ-ಜರ್ಮನ್ ಜೀವವೈವಿಧ್ಯತಾ ಕಾರ್ಯಕ್ರಮವು (ಇಂಡೋ-ಜರ್ಮನ್ ಬೈಯೋಡೈವರ್ಸಿಟಿ ಪ್ರೋಗ್ರಾಂ) ‘ಲೆಟ್ಸ್ ಇನ್ವೆಸ್ಟ್ ಇನ್ ನೇಚರ್ (ಪರಿಸರದಲ್ಲಿ ಹೂಡಿಕೆ ಮಾಡೋಣ)’ ಎಂಬ ಹೆಸರಿನ ಇಂಡೋ-ಜರ್ಮನ್ ಜೀವವೈವಿಧ್ಯತಾ ಕಾರ್ಯಕ್ರಮವು ವಿನ್ಯಾಸಗೊಳಿಸಿದ ವಿಡಿಯೋ ಕಥೆಗಳ ವಿಶೇಷ ಸರಣಿಯಾಗಿದೆ. ವ್ಯಾಪಾರ-ಸಂಬಂಧಿತ ನಿರ್ಣಯಗಳು ಹಾಗೂ ಕಾರ್ಯನೀತಿ ನಿರೂಪಣೆಯಲ್ಲಿ ಜೀವವೈವಿಧ್ಯತೆಯ ವಾಸ್ತವ ಆರ್ಥಿಕ ಮೌಲ್ಯವನ್ನು ಅಂದಾಜು ಮಾಡುವ ಹಾಗೂ ಮುಖ್ಯವಾಹಿನಿಗೆ ತರುವಲ್ಲಿ ಮುಡಿಪಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕಿರು ವಿಡಿಯೋವನ್ನು ನೋಡಿ
https://www.youtube.com/watch?v=kh4W0qzTSH4
ಮೂಲ ಲೇಖನ: ಶುಭಾಂಗಿ ಸಿಂಗ್
ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ
ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/floating-national-park-calls-help