ಕಾಕಡ್ದಾರ ಗ್ರಾಮವು ಜಲ ಕಪ್ ಗೆದ್ದ ಬಗೆ
ಗ್ರಾಮದ ನೀರನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಕಾಕಡ್ದಾರ ಗ್ರಾಮವು ಸತ್ಯಮೇವ ಜಯತೆ ಜಲ ಕಪ್-೨೦೧೭ ಗೆದ್ದ ಯಶೋಗಾಥೆಯನ್ನು ಈ ವಿಡಿಯೋ ನಮಗೆ ಹೇಳುತ್ತದೆ.
http://www.indiawaterportal.org/articles/how-kakaddara-village-won-water-cup
ಪ್ರತಿ ವರ್ಷವೂ, ಮಹಾರಾಷ್ಟ್ರದ ಸಾವಿರಾರು ಗ್ರಾಮಗಳು ಬರದ ಪ್ರಕೋಪಕ್ಕೆ ಒಳಗಾಗುತ್ತವೆ. ತಜ್ಞರ ಪ್ರಕಾರ, ಕಾರ್ಯನೀತಿ ಚೌಕಟ್ಟಿನ ಕೊರತೆ, ತಾಂತ್ರಿಕ ಜ್ಞಾನ ಹಾಗೂ ಸಮುದಾಯ ಭಾಗವಹಿಸುವಿಕೆಯ ಕೊರತೆಯೂ ಸೇರಿದಂತೆ, ಸರ್ಕಾರಿ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಇರುವುದೇ ಪದೇಪದೇ ಎದುರಾಗುವ ಬರಕ್ಕೆ ಕಾರಣ ಎಂದು ಹೇಳುತ್ತಾರೆ.
೧೯೭೦ರವರೆಗೆ, ಕಾಕಡ್ದಾರ ನಿವಾಸಿಗಳು ಹುಲ್ಲಿನಲ್ಲಿ ಮಾಡಿದ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದರು. ೧೯೮೧ರಲ್ಲಿ, ಬೇಸಿಗೆಯಲ್ಲಿ, ಅವರ ಗ್ರಾಮದಲ್ಲಿ ಬೆಂಕಿಯ ಅವಘಡ ಆಗಿ, ಬಹುತೇಕ ಮನೆಗಳು ನಾಶವಾದವು. “ನಮಗೆ ಆಹಾರ ನೀರು ಇರಲಿಲ್ಲ. ನಮ್ಮ ಮೈ ಮುಚ್ಚಿಕೊಳ್ಳಲು ನಮ್ಮಲ್ಲಿ ಕೆಲವೇ ಕೆಲವು ಬಟ್ಟೆಗಳು ಉಳಿದಿದ್ದವು; ಹೇಗೋ ಜೀವನ ಮಾಡಲು ಶುರು ಮಾಡಿದೆವು. ನಾವು ಬೆಳೆದ ಮೂಲಂಗಿಯನ್ನು ಮಾರಲು, ಕಾಕಡ್ದಾರದಿಂದ ೧೦ ಕಿಲೋಮೀಟರ್ ದೂರದಲ್ಲಿರುವ ರೊಹಾನ ಗ್ರಾಮಕ್ಕೆ ಹೋಗುತ್ತಿದ್ದೆವು. ನಮ್ಮ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ನಾವು ಗಳಿಸಿದುದು ನಮಗೇ ಸಾಲುತ್ತಿರಲಿಲ್ಲ,” ಎನ್ನುತ್ತಾರೆ ಕಾಕಡ್ದಾರ ಗ್ರಾಮದ ನಿವಾಸಿಯಾದ ಅರುಣ್ ಲುನ್ಸ್ಕಿ.
ಕಾಕಡ್ದಾರ, ಮಹಾರಾಷ್ಟ್ರ ರಾಜ್ಯದ ವರ್ಧಾ ಜಿಲ್ಲೆಯ ಅರ್ವಿ ತಾಲ್ಲೂಕಿನ, ೩೭೦ ಜನಸಂಖ್ಯೆಯಿರುವ ಸಣ್ಣ ಗ್ರಾಮ. ಗ್ರಾಮಸ್ಥರ ಪ್ರಕಾರ, ಪ್ರತಿ ವರ್ಷವೂ ಸುಮಾರು ಡಿಸೆಂಬರ್ ತಿಂಗಳವರೆಗೂ ತಮ್ಮ ಬಾವಿಗಳಲ್ಲಿ ನೀರು ಲಭ್ಯವಿರುತ್ತಿತ್ತು, ಅದಾದ ನಂತರ ಬಾವಿಗಳು ಒಣಗಿಹೋಗುತ್ತಿದ್ದವು. ಕಾಕಡ್ದಾರ ಗುಡ್ಡಗಾಡು ಪ್ರದೇಶವಾದ್ದರಿಂದ, ಸಾಮಾನ್ಯವಾಗಿ ನೀರು ಬಸಿದು ಹೋಗುತ್ತದೆ. ಇದರಿಂದ ನೀರಿನ ಅಭಾವ ತಲೆದೋರುತ್ತದೆ.
“ನಮ್ಮ ಕೃಷಿ ಭೂಮಿಯಿಂದ ಉತ್ತಮ ಇಳುವರಿ ಸಿಗುತ್ತಿರಲಿಲ್ಲ. ತಮ್ಮ ಹೊಲಕ್ಕೆ ಆದ್ಯತೆ ನೀಡುವ ಬದಲು, ರೈತರು ಇತರರ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು,” ಎನ್ನುತ್ತಾರೆ ರೈತರಾದ ದೌಲತ್ರಾಮ್ ಘೋರ್ನಡೆ.
೨೦೧೬ರಲ್ಲಿ, ಮಹಾರಾಷ್ಟ್ರವನ್ನು ಬರ-ಮುಕ್ತ ಮಾಡಬೇಕೆಂದು ಕಾರ್ಯ ನಿರ್ವಹಿಸುತ್ತಿರುವ ‘ಪಾನಿ ಫ಼ೌಂಡೇಷನ್’ ಎಂಬ ಸಂಸ್ಥೆಯು, ನೀರಿನ ಸಂರಕ್ಷಣೆಗಾಗಿ ಗ್ರಾಮಗಳ ನಡುವೆ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಿತು. ಸತ್ಯಮೇವ ಜಯತೇ ಜಲ ಕಪ್ ಎಂಬ ಹೆಸರಿನ ಈ ಸ್ಪರ್ಧೆಯು, ಜಲ ಸಂರಕ್ಷಣಾ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಸುಧಾರಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.
ಅದರ ಮುಂದಿನ ವರ್ಷದಲ್ಲಿ, ೩೦ ತಾಲೂಕುಗಳ ೧,೩೦೦ ಗ್ರಾಮಗಳು ಈ ಜಲ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸತ್ಯಮೇವ ಜಯತೇ ಜಲ ಕಪ್ನ್ನು ಗೆದ್ದ ಕಾಕಡ್ದಾದ ಗ್ರಾಮದ ಯಶೋಗಾಥೆಯನ್ನು ಈ ವಿಡಿಯೋ ಹೇಳುತ್ತದೆ.
ಮೂಲ ಲೇಖನ: ಮಕರಂದ್ ಪುರೋಹಿತ್
ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ
ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/how-kakaddara-village-won-water-cup