ಆಧುನಿಕ ಡಂಪರ್ ಗಳಾದ ಆನೇಕಲ್ ಕೆರೆಗಳು
ಹಿಂದೊಂದು ಕಾಲವಿತ್ತು ಕೆರೆ ಎಂದ್ರೆ ಅಲ್ಲಿ ತಾವರೆ, ಮೀನು ಹೂಳು ನೀರು ಎಲ್ಲಾ ತುಂಬಿ ಸಮೃದ್ಧವಾಗಿರುವ ತಾಣ ಅದಾಗಿರುತ್ತದೆ ಎನ್ನುವುದು ಎಲ್ಲರ ಸಹಜ ಭಾವನೆಯಾಗಿತ್ತು. ಆದ್ರೆ ಇಂದು ಆ ಕಾಲ ಬದಲಾಗಿದೆ. ಕೆರೆ ಎಂದ್ರೆ ಇಂದು ನಮ್ಮ ಕಣ್ಣ ಮುಂದೆ ಬರುವುವುದೇ ಕೆಮಿಕಲ್ ವಿಷಯುಕ್ತ ನೀರು ಮತ್ತು ನಗರದ ತ್ಯಾಜ್ಯ ಸುರಿಯಲು ಇರುವ ಗುಂಡಿ ಎಂಬ ಕಲ್ಪನೆ ನಮ್ಮ ಕಣ್ಣ ಮುಂದೆ ಬರುತ್ತಿದೆ. ಸಾಧಾರಣವಾಗಿ ಇಂದು ಮಾಯಾನಗರಿ ಬೆಂಗಳೂರಿನ ಕಸದ ಆವಾಸ ಸ್ಥಾನವಾಗಿರುವುದು ಹೊರವಲಯದ ಕೆರೆಗಳು ಮತ್ತು ಖಾಲಿ ಜಾಗಗಳೇ ಆಗಿವೆ. ಅದರಲ್ಲೂ ಮುಖ್ಯವಾಗಿ ಇಂದು ಆನೇಕಲ್ ತಾಲೂಕಿನ ಕೆರೆಗಳೇ ಬಿಬಿಎಂಪಿ ಲಾರಿಗಳಿಗೆ ಮೊದಲು ಸಿಗುವ ತಾಣಗಲಾಗಿವೆ ಈ ಕೆರೆಗಳು. ಕೆರೆ ಎದ್ರೆ ಅಲ್ಲಿ ನೀರು ಮೀನು ಎನ್ನುವ ಭಾವನೆ ಬರುವ ಬದಲು ಕೆರೆ ಎಂದರೆ ಕೆಮಿಕಲ್ ತ್ಯಾಜ್ಯದ ತವರುಮನೆ ಎನ್ನುವುದು ದಿನೇ ದಿನೇ ದಟ್ಟವಾಗಿ ಕಾಡುತ್ತಿದೆ. ಆನೇಕಲ್ ತಾಲೂಕು ಒಂದು ಕಾಲಕ್ಕೆ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಕೆರೆಗಳನ್ನ ಹೊಂದಿರುವ ತಾಲೂಕು. ಒಂದು ಗಣತಿಯ ಪ್ರಕಾರ ಆನೇಕಲ್ ತಾಲೂಕೊಂದರಲ್ಲೇ 232 ಕೆರೆಗಳಿವೆ ಇಂದಿಗೂ ಇವೆ ಎನ್ನುವ ದಾಖಲೆಗಳಿವೆ. ಆದ್ರೆ ಇಂದು ಆ ಎಲ್ಲಾ ಕೆರಗಳು ಸುಸ್ಥಿತಿಯಲ್ಲಿ ಇವೆಯೇ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನ ಬಹುವಾಗಿ ಕಾಡುತ್ತಿದೆ. ಆದ್ರೂ ಹಲ ಕೆಲವು ಕೆರೆಗಳಾದ್ರೂ ನಮ್ಮ ಮುಂದೆ ಕಾಣಸಿಗುತ್ತವೆ ಆದ್ರೆ ಆ ಎಲ್ಲಾ ಕೆರೆಗಲ ಸ್ಥಿತಿಗತಿಯನ್ನೇನಾದ್ರೂ ನಾವು ಗಮನಿಸುತ್ತಾ ಹೊರಟರೆ ನಿಜಕ್ಕೂ ಭಯ ಹುಟ್ಟುತ್ತದೆ. ಯಾಕೆಂದ್ರೆ ಕೆರೆ ಇರುವ ಜಾಗದ ಅಕ್ಕಪಕ್ಕದಲ್ಲಿ ಸಾಧರಣವಾಗಿ ಇದು ಪ್ರಶಾಂತ ಸ್ಥಳ ಅಂತಾ ಎಷ್ಟೋ ಕಡೆಗಲಲ್ಲಿ ವಾಯು ವಿಹಾರಕ್ಕೆ ವ್ಯವಸ್ಥೆ ಮಾಡಿರ್ತಾರೆ. ಇನ್ನೆಷ್ಟೋ ಕಡೆಗಳಲ್ಲಿ ಕೆರೆಯ ಪಕ್ಕದಲ್ಲೇ ಮನೆಗಳನ್ನ ಕಟ್ಟಿಕೊಂಡಿರ್ತಾರೆ ಯಾಕೆಂದ್ರೆ ಅವರ ಉದ್ದೇಶ ಕೆರೆ ಅಥವಾ ಶುದ್ದ ನೀರಿನ ಅಕ್ಕಪಕ್ಕದಲ್ಲಿ ಮನೆಗಳನ್ನ ನಿರ್ಮಿಸಿಕೊಳ್ಳುವುದು ಒಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತದೆ ಎನ್ನುವುದಾಗಿರುತ್ತದೆ ಅದ್ರೆ ಆನೇಕಲ್ ತಾಲೂಕಿನ ಕೆರೆಗಳ ಪಕ್ಕದಲ್ಲಿ ಮನೆ ನಿರ್ಮಿಸಿಕೊಂಡವರ ಸ್ಥಿತಿಗತಿ ಮಾತ್ರಾ ಅಕ್ಷರಸಹ ಹೈರಾಣಾಗಿಹೋಗಿದೆ. ಯಾಕಪ್ಪಾ ನಾವಿಲ್ಲಿ ಸೈಟ್ ತೆಗೆದುಕೊಂಡ್ವಿ, ನಮಗ್ಯಾಕೆ ಬೇಕಿತ್ತು. ಈ ಉಸಾಬರಿ ಅಂತಾ ಅಳವತ್ತುಕೊಳ್ಳುತ್ತಿದ್ದಾರೆ ಹೆಣ್ಣಾಗರ ಕೆೆರೆ ಸಮೀಪ ಮನೆ ನಿರ್ಮಿಸಿಕೊಂಡಿರುವ ಚಂದ್ರಾರೆಡ್ಡಿ. ಒನ್ಸ್ ಅಗೈನ್ ನಾವದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಅದಕ್ಕೆ ಕಾರಣ ಕೆರೆಗಳಿಗೆ ಹರಿಯುವ ತ್ಯಾಜ್ಯ ನೀರು ಮತ್ತು ಕಸದ ಡಂಪಿಗ್.
ಬೆಂಗಳೂರಿನ ಕಸದ ರಾಶಿ ಕೆರೆಯಂಗಳಕ್ಕೆ ಡಂಪ್-
ನಿಮಗಿದು ಎಷ್ಟರ ಮಟ್ಟಿಗೆ ತಿಳಿದಿದೆಯೋ ಗೊತ್ತಿಲ್ಲ. ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಹೊರವಲಯದಲ್ಲಿ ಕಸದ ಮಾಫಿಯಾ ತಲೆದೂರುತ್ತಿದೆ. ಈ ಹಿಂದೆ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಇದ್ದ ಎರಡು ಪ್ರಮುಖ ಡಂಪಿಗ್ ಯಾರ್ಡ್ ಗಳಾದ ಬಿಂಗೀಪುರ ಮತ್ತು ಲಕ್ಷ್ಮೀಪುರ ಡಂಪಿಂಗ್ ಯಾರ್ಡ್ ಗಳು ಬಂದ್ ಆದ ಹಿನ್ನೆಲೆ ಎಲ್ಲೆಂದರಲ್ಲಿ ಕಸದ ಕರಾಮತ್ತು ರಾರಾಜಿಸುತ್ತಿದೆ. ಮುುಖ್ಯವಾಗಿ ಕೆರೆಯಂಗಳ ಮತ್ತು ಖಾಲಿ ಜಾಗಗಳೇ ಡಂಪಿಂಗ್ ಯಾರ್ಡ್ ಗಳಾಗಿ ಪರಿವರ್ತನೆಯಾಗುತ್ತಿವೆ. ಅದರಲ್ಲಿ ಮೆಡಿಕಲ್ ವೇಸ್ಟ್, ಆಸ್ಪತ್ರೆ ತ್ಯಾಜ್ಯ, ಕಸಾಯಿಖಾನೆಯ ತ್ಯಾಜ್ಯ ಎಲ್ಲವೂ ಕೆರೆ ಒಡಲು ಸೇರುತ್ತಿವೆ. ಇನ್ನು ಅದರಲ್ಲೂ ಮುಖ್ಯವಾಗಿ 2014ರ ನಂತರ ಈ ಕೆಗಳಿಗೆ ಈ ಕಸ ತಂದು ಸುರಿಯುವ ಚಾಳಿ ಹೆಚ್ಚಾಗಿದೆ. ರಾತ್ರೋ ರಾತ್ರಿ ಮಹಾನಗರದ ಕಸ ಹೊತ್ತು ತರುವ ಬಿಬಿಎಂಪಿ ಲಾರಿಗಳಿಗೆ ಕೆರೆಗಳೇ ಮುಖ್ಯ ಡಂಪಿಂಗ್ಯಾರ್ಡ್ ಗಳಾಗಿ ಪರಿವರ್ತನೆಯಾಗಿವೆ ಅಂತಾರೆ ಇಗ್ಗಲೂರಿನ ನಿವಾಸಿ ಸುರೇಶ್. ಇನ್ನು ಖಾಲಿ ಜಾಗದಲ್ಲಿ ಸುರಿದ ಕಸ ಸಹ ಅಲ್ಲಿ ನಿಲ್ಲುವುದಿಲ್ಲ ಅದೂ ಸಹ ಕೊನೆಗೆ ಸೇರುವುದು ಕೆರೆಯಂಗಳವನ್ನೇ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಈ ವರ್ಷವಂತೂ ವಿಪರೀತ ಮಳೆಯಾಗಿರುವುದರಿಂದ ಆ ಮಳೆ ನೀರಿನ ನೆರೆಯಲ್ಲಿ ಖಾಲಿ ಜಾಗದಲ್ಲಿ ಎಸೆದಿರುವ ಕಸವೂ ಸಹ ಅಕ್ಕಪಕ್ಕದ ಕೆರೆಗಳಲ್ಲಿ ಆಶ್ರಯ ಪಡೆದಿದೆ. ರಸ್ತೆ ಕೆಲ ಇಕ್ಕೆಲಗಳಲ್ಲಿ ನಿಂತಿದ್ದ ಕಸ ಕೂಡ ಕೊನೆಗೆ ಸೇರಿದ್ದು ಆ ಕೆರೆಗೇ ಆಗಿರುವುದರಿಂದ ಅಲ್ಲಿ ಮೀನುಗಳಾದ್ರೂ ಹೇಗೆ ಬದುಕ್ಯಾವು…?
ಇನ್ನು ಆನೇಕಲ್ ತಾಲೂಕಿನ ನಲ್ಲಿ ಹಲವಾರು ಕೆರೆಗಳು ಹೆಸರುವಾಸಿಯಾಗಿದ್ದರೂ ಕೆಲವಾರು ಕೆರೆಗಳ ಹೆಸರನ್ನ ಮಾತ್ರ ನಾನಿಲ್ಲಿ ಪ್ರಸ್ತಾಪ ಮಾಡುತ್ತನೆ ಹೆಣ್ಣಾಗರ ಕೆರೆ, ಚೋಳರಕಟ್ಟೆ ಕೆರೆ, ಮಾಯಸಂದ್ರ ಕೆರೆ, ಜಿಗಣಿ ಕೆರೆ, ಬೇಗೂರು ಕೆರೆ, ಬಿಂಗೀಪುರ ಕೆರೆ ಆನೇಕಲ್ ಕೆರೆ, ಹೀಗೆ ಕೆರೆಗಳ ದೊಡ್ಡ ಪಟ್ಟಿಯೇ ಮುಂದುವರೆಯುತ್ತದೆ. ಒಂದು ಕಾಲಕ್ಕೆ 584 ಎಕರೆ ವಿಸ್ತೀರ್ಣ ಹೊಂದಿರುವ ಹೆಣ್ಣಾಗರ ಕೆರೆ 18 ವರ್ಷಗಳ ನಂತರ ಈ ವರ್ಷ ತುಂಬಿ ಹರಿದಿದ್ದು ಅದಕ್ಕೆ ಭಾಗೀನ ಅರ್ಪಿಸುವ ಕಾರ್ಯಕ್ರಮ ಮತ್ತು ಕೆರೆಯಲ್ಲೇ ತೆಪ್ಪೋತ್ಸವ ನಡೆಸುವ ಕಾರ್ಯಕ್ರಮ ಕೂಡಾ ಜರುಗಿದೆ. ಆದ್ರೆ ತೆಪ್ಪೋತ್ಸವದಲ್ಲಿ ತೊಡಗಿದ್ದ ಜನ್ರಿಗೆ ಕೆೆರೆಯಿಂದ ಸುಗಂಧ ದ್ರವ್ಯದ ಪರಿಮಳ ಹೊರ ಸೂಸುತ್ತಿತ್ತು. ಯಾಕೆಂದ್ರೆ ಜಿಗಣಿ ಸುತ್ತಮುತ್ತ ಇರುವ ಖಾಸಗೀ ಕಂಪನಿಗಳು ಆ ಕೆರೆಗೆ ಸುಗಂದ ದ್ರವ್ಯವನ್ನ ಸಿಂಪಡಣೆ ಮಾಡಿದ್ವು….! ರಾತ್ರೋರಾತ್ರಿ ಕೆಮಿಕಲ್ ಯುಕ್ತ ತ್ಯಾಜ್ಯವನ್ನ 584 ಎಕರೆ ವಿಸ್ತೀರ್ಣದ ಹೆೆಣ್ಣಾಗರ ಕೆರೆಗೆ ತಂದು ಸುರಿದಿದ್ದರಿಂದ ಕೆರೆ ನೀರು ಹೀಗೆ ಕೆಟ್ಟ ವಾಸನೆ ಬೀರುತ್ತಿದೆ. ಒಂದು ಕಾಲಕ್ಕೆ ಮೀನು ಮಾರಾಟದಲ್ಲಿ ಪ್ರಸಿದ್ದಿಯಾಗಿರುವ ಕೆರೆಯಲ್ಲಿ ಈಗ ಮೀನುಗಳು ಬದುಕುತ್ತಿಲ್ಲ ಒಂದು ವೇಳೆ ಇದ್ದ ಹಲ ಕೆಲವು ಮೀನುಗನ್ನ ಸಹ ಕೇಳುವವರು ದಿಕ್ಕಿಲ್ಲದಾಗಿದೆ. ಕಂಪನಿಗಳ ಈ ಅಕ್ರಮದ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪದೇ ಪದೇ ದೂರು ನೀಡಿದ್ರೂ ಪ್ರಯೋಜನವಾಗುತ್ತಿಲ್ಲ ಏನು ಮಾಡೋಣ ಸ್ವಾಮಿ ನಮ್ಮೂರ ಕೆರೆಗೆ ಕಂಪನಿಗಳಿಂದ ಕಂಟಕ ಬಂದೊದಗಿದೆ ಗುಣಪಡಿಸಲಾಗದ ಮಹಾಮಾರಿ ಕಾಯಿಲೆಗಳಿಗೆ ತುತ್ತಾಗಿ ಸೊರಗುತ್ತಿದೆ ನಮ್ಮ ಹೆಣ್ಣಾಗರ ಕೆರೆ ಅಂತಾರೆ ಗ್ರಾಮ ಪಂಚಾಯತ್ ಅದ್ಯಕ್ಷ ಕೇಶವ ರೆಡ್ಡಿ.
ಮನೆಗೆ ಕಾಯಿಲೆ ಹೊತ್ತು ತರುತ್ತಿವೆ ಬೋರ್ ವೆಲ್…!
ತಾಲೂಕಿನ ಬಹುತೇಕ ಬೋರ್ ವೆಲ್ ಗಳು ತಲೆ ಎತ್ತಿರುವುದು ಈ ಕೆರೆಯಂಗಳದಲ್ಲೇ. ಕೆೇವಲ 10-15 ವರ್ಷಗಳ ಹಿಂದೆ ಸಿಹಿನೀರು ತರುತ್ತಿದ್ದ ಬೋರ್ ವೆಲ್ ಗಳು ಇಂದು ಮನೆಬಾಗಿಲಿಗೆ ಕಾಯಿಲೆಗಳನ್ನ ಹೊತ್ತು ತರುತ್ತಿವೆ. ಬಹುತೇಕರು ಅದೇ ಬೋರ್ ವೆಲ್ ನೀರನ್ನ ಕುಡಿಯಲು ಮತ್ತು ಗೃಹೋಪಯೋಗಕ್ಕೆ ಬಳಸುತ್ತಿರುವುದರಿಂದ ಅವು ಕಾಯಿಲೆಗಳ ಸೋಪಾನವಾಗಿ ಪರಿಣಮಿಸಿವೆ. ಅದರಿಂದ ಕಿಲುಬುಯುಕ್ತ ಕೆಮಿಕಲ್ ನೀರು ಹೊರಬುತ್ತಿದ್ದು ಆ ನೀರು ಆರೋಗ್ಯಕ್ಕೆ ಮಾತ್ರವಲ್ಲದೇ ಕೃಷಿ ಉಪಯೋಗಕ್ಕೂ ಮಾರಕವಾಗಿ ಪರಿಣಮಿಸುತ್ತಿವೆ. ಈ ಎಲ್ಲಾ ಬೆಳವಣಿಗೆ ಹೀಗೆಯೇ ಮುಂದುವರೆದರೆ ಇನ್ನು ಕೆಲ ವರ್ಷಗಳಲ್ಲಿ ತಾಲೂಕಿನ ಯಾವುದೇ ಬೋರ್ ವೆಲ್ ಗಳ ನೀರೂ ಕೂಡಾ ಕುಡಿಯಲು ಯೋಗ್ಯವಾಗಿರುವುದಿಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ. ಇನ್ನ ಈ ಬಗ್ಗೆ ಅರಿತ ಭಾರತೀಯ ಕಿಸಾನ್ ಸಂಘದ ಸದಸ್ಯರು ಕಂಪನಿಗಳು ವೇಸ್ಟೇಜ್ ಅನ್ನ ನೇರವಾಗಿ ಕೆರೆಯಂಗಳಕ್ಕೆ ಬಿಡುತ್ತಿರುವುದರ ವಿರುದ್ಧವಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಿಸಾನ್ ಸಂಘದ ಸದಸ್ಯರನ್ನೂ ಒಲಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನ ರಚಿಸಿತು ಮತ್ತು ಅಂತಾ ಕಂಪನಿಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡುವಂತೆ ಮತ್ತು ಕೆರೆ ಅಭಿವೃದ್ದಿ ಬಗ್ಗೆ ಕ್ರಮ ಕೈಗೊಳ್ಳಲು ಸಂಘಕ್ಕೆ ಸೂಚಿಸಿದೆ. ಅದರರಂತೆ ಸಮಿಥಿ ಏನೋ ಸದಸ್ಯರ ನೇತೃತ್ವದಲ್ಲಿ ಸಭೆ ಸೇರಿ ಕೆಲ ಕಂಪನಿಗಳ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರನ್ನೂ ಸಹ ನೀಡಿದೆ. ಆದ್ರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮಿತಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ಇನ್ನು ಐದು ಹತ್ತು ವರ್ಷಗಳಲ್ಲಿ ನಮ್ಮೆಲ್ಲಾ ಅಬಿವೃದ್ದಿ ಕಾರ್ಯಗಳು ನೀರಲ್ಲಿ ಹೋಮವಾಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಸದಸ್ಯನ ಮಂಜುನಾಥ್ ಅವರ ಮಾತು. ಅಂದ್ರೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆ ಸದಸ್ಯರೇ ದೂರು ನೀಡಿದ್ರೂ ಕ್ರಮವಾಗುತ್ತಿಲ್ಲ ಎಂದಾದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎನ್ನುವುದು ನಿಸ್ಸಂಶಯ…
ಬರೀ ನೀರಲ್ಲದೇ ಎಲ್ಲಾ ರೀತಿಯ ಮಾಲಿನ್ಯದಲ್ಲೂ ಆನೇಕಲ್ ಮುಂದು…!
ಆನೇಕಲ್ ಬರೀ ಕೆರೆ ಮಾಲಿನ್ಯದಲ್ಲಿ ಮಾತ್ರ ಮುಂದಿಲ್ಲ. ಇತ್ತೀಚಿನ ಒಂದು ಸರ್ವೆ ಪ್ರಕಾರ ವಾಯುಮಾಲಿನ್ಯ, ಶಬ್ದಮಾಲಿನ್ಯ ಎಲ್ಲದರಲ್ಲೂ ಆನೇಕಲ್ ಮುಂದಿದೆ ಎನ್ನುವುದು ಗಮನಾರ್ಹ. ರಾಷ್ಟ್ರೀಯ ಹೆದ್ದಾರಿ 7 ಆನೇಕಲ್ ತಾಲೂಕಿನಲ್ಲೇ ಹಾದು ಹೋಗುತ್ತಿರುವುದರಿಂದಾಗಿ ವಾಯುಮಾಲಿನ್ಯ ಶಬ್ದಮಾಲಿನ್ಯ ಎಲ್ಲದರಲ್ಲೂ ತನ್ನ ಕಬಾಳಬಾಹುಗಳನ್ನ ಮುಂದೆ ಚಾಚಿದೆ. ಅಲ್ಲದೇ ಇತರೆ ತಾಲೂಕಿಗೆ ಹೋಲಿಸಿದರೆ ವಾಹನಗಳ ಸಂಖ್ಯೆಯಲ್ಲೂ ಮುಂದಿದೆ. ಕೇವಲ ಕಸ ಮಾತ್ರವಲ್ಲದೇ ಜಿಗಣಿ ಕೈಗಾರಿಕಾ ವಲಯದಲ್ಲಿ ಗ್ರಾನೈಟ್ ಮಾಫಿಯಾ ಕೂಡಾ ಜೋರಾಗಿ ನಡೆಯುತ್ತಿರುವುದರಿಂದ ಆ ವೇಸ್ಟೇಜ್ ಸ್ಲರಿಯ ಅಮ್ಮನೂ ಈ ಕೆರೆಯಮ್ಮನೇ ಆಗಿದ್ದಾಳೆ. ಒಂದಂತೂ ಸತ್ಯ ಇದೇ ಬೆಳವಣಿಗೆ ಇನ್ನು 10 ವರ್ಷಗಳ ಕಾಲ ಮುಂದುವರೆದರೆ ಮೊದಲೇ ಕಳೆದ ವರ್ಷ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದ್ದ ಆನೇಕಲ್ ನಲ್ಲಿ ನೀರಿಲ್ಲದೇ ಜನ ಸಾಯುವ ಲಕ್ಷಣಗಳು ದಟ್ಟವಾಗುತ್ತಿವೆ.
ಚಿತ್ರ-ಲೇಖನ:- ಜಗದೀಶ್ ಹೊನಗೋಡು.