ಕೆರೆನೋಟ – ನೋಟ ೬೭: ಆಗ ಹೀಗಿದ್ದವು… ಜೀವಂತ ಕೆರೆಗಳು! – ೫
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ಅರಣ್ಯ ಇಲಾಖೆಯ ಕೆರೆಗಳು
೨೧. ಬೆನ್ನಿಗಾನಹಳ್ಳಿ ಕೆರೆ
ಬೆನ್ನಿಗಾನಹಳ್ಳಿ ಕೆರೆ ಹಳೆ ಮದ್ರಾಸ್ ರಸ್ತೆಯಲ್ಲಿರುವ ಸೇಲಂ ರೈಲು ಮಾರ್ಗಕ್ಕೆ ಹೊಂದಿಕೊಂಡಂತಿದ್ದು ೨೦.೬೪ ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ೩೦೬ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಬೆನ್ನಿಗಾನಹಳ್ಳಿ ಗ್ರಾಮದ ಪೂರ್ವ ಭಾಗದಲ್ಲಿದೆ. ಇದರ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲವು ಕಾರ್ಖಾನೆಗಳು ತಲೆಎತ್ತಿವೆ. ಸಿಡಿಪಿಯಲ್ಲಿ ಈ ಕೆರೆ ವ್ಯಾಪ್ತಿಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಎಂದು ಶಿಫಾರಸ್ಸು ಮಾಡಿರುವ ಸಮಿತಿ, ಈ ಕೆರೆಯನ್ನು ಸೂಕ್ತರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದೆ. ಅರಣ್ಯ ಇಲಾಖೆ ಮತ್ತು ಕೆಎಸ್.ಟಿ.ಡಿ.ಸಿ. ಜಂಟಿ ಮಾಲೀಕತ್ವದಲ್ಲಿ ಈ ಕೆರೆ ಇದೆ.
೨೨. ಕಗ್ಗದಾಸಪುರ ಕೆರೆ
ಕಗ್ಗದಾಸಪುರ ಗ್ರಾಮದ ಪೂರ್ವಭಾಗದಲ್ಲಿರುವ ಕಗ್ಗದಾಸಪುರ ಕೆರೆ, ೧೭.೭೪ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ೩೦೭ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಸೇಲಂ ರೈಲು ಮಾರ್ಗಕ್ಕೆ ಸಮೀಪವಿದೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ಗುರುತಿಸಲಾಗಿದೆ. ಈ ಕೆರೆಯ ತೀರದಲ್ಲಿ ಸಸಿಗಳನ್ನು ನೆಡಬೇಕು. ಈ ಪ್ರದೇಶದಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಇದರ ಮಾಲೀಕತ್ವ ಹೊಂದಿದೆ
೨೩. ಬಿ. ನಾರಾಯಣಪುರ ಕೆರೆ
ಬಿ. ನಾರಾಯಣಪುರ ಗ್ರಾಮದ ದಕ್ಷಿಣ ಭಾಗದಲ್ಲಿರುವ ಬಿ. ನಾರಾಯಣಪುರ ಕೆರೆ ೮.೦೬ ಹೆಕ್ಟೇರ್ ವಿಸ್ತೀರ್ಣದಲ್ಲಿದ್ದು, ೩೦೯ನೇ ಸಂಖ್ಯೆಯಲ್ಲಿ ಇದು ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತುತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ಗುರುತಿಸಲಾಗಿದೆ. ಈ ಕೆರೆಯ ತೀರದಲ್ಲಿ ಸಸಿಗಳನ್ನು ನೆಡಬೇಕು. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಇದರ ಮಾಲೀಕತ್ವ ಹೊಂದಿದೆ.
೨೪. ಮಹದೇವಪುರ ಪೂರ್ವಭಾಗದ ಕೆರೆ
ಮಹದೇವಪುರ ಗ್ರಾಮಕ್ಕೆ ಹೊಂದಿಕೊಂಡಂತಿರುವ ಈ ಸಣ್ಣ ಕೆರೆ ೩೧೦ನೇ ಸಂಖ್ಯೆಯಲ್ಲಿ ನೋಂದಣಿಯಾಗಿದ್ದರೂ, ಇದರ ವಿಸ್ತೀರ್ಣ ನಮೂದಾಗಿಲ್ಲ. ಈ ಹಸಿರು ವಲಯದಲ್ಲಿ ಭಾಗಶಃ ಕೈಗಾರಿಕೆಗಳು ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆ ಪ್ರದೇಶದಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ ಈ ಕೆರೆ.
೨೫. ದೊಡ್ಡನೆಕ್ಕುಂದಿ ಪಶ್ಚಿಮ ಭಾಗದ ಕೆರೆ
ದೊಡ್ಡನೆಕ್ಕುಂದಿ ಹಳ್ಳಿಗೆ ಹೊಂದಿಕೊಂಡಂತಿರುವ ದೊಡ್ಡನೆಕ್ಕುಂದಿ ಪಶ್ಚಿಮ ಭಾಗದ ಕೆರೆ ಸೇಲಂ ರೈಲು ಮಾರ್ಗದ ಸಮೀಪವಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶವನ್ನು ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದು, ವೃಕ್ಷವನವನ್ನೂ ಇಲ್ಲಿನ ಸುತ್ತಮುತ್ತ ಅಭಿವೃದ್ಧಿಯಾಗುವ ಸಮಯದಲ್ಲಿ ಬೆಳೆಸಬೇಕು ಎಂದು ಹೇಳಿದೆ. ಅರಣ್ಯ ಇಲಾಖೆ ಕೆರೆಯ ಮಾಲೀಕತ್ವ ಹೊಂದಿದೆ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸುರು ರಸ್ತೆ ಮಧ್ಯಭಾಗದಲ್ಲಿರುವ
ಕೆರೆಗಳ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಇಲ್ಲಿ ಅರಣ್ಯ ಇಲಾಖೆಯ ಸಂಪೂರ್ಣ ಅಧೀನದಲ್ಲಿದ್ದ ನಗರವನ್ನು ಸುತ್ತುವರಿದಿರುವ ಕೆರೆಗಳ ಅಂದಿನ ವಿವರ ಆರಂಭವಾಗಿದ್ದು, ಮುಂದಿನ ನೋಟದಲ್ಲಿ ಇನ್ನಷ್ಟು ವಿವರ ನೀಡಲಾಗುತ್ತದೆ.
……….ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್