ಕೆರೆಯ ಉಳಿವಿಗಾಗಿ ಸಂತನ ವನವಾಸ: ೧೪ ವರ್ಷದ ಹೋರಾಟಕ್ಕೆ ಇತಿಶ್ರೀ
ಐತಿಹಾಸಿಕ ಕೆರೆಯ ಉಳಿವಿಗಾಗಿ ಸಂತನೋರ್ವ ಕೈಗೊಂಡ ೧೪ ವರ್ಷಗಳ ಹೋರಾಟಕ್ಕೆ ಇತೀಶ್ರೀ ಹಾಡಲಾಗಿದೆ. ಶುಭ ಶುಕ್ರವಾರದಂದು ಕೆರೆಯಂಗಳದಲ್ಲಿ ಕೇಶ ಮುಂಡನ ಮಾಡುವ ಮೂಲಕ ಹೋರಾಟ ಕೈಬಿಡಲಾಯಿತು.
ಸಾಮಾಜಿಕ ಹೋರಾಟಗಾರ, ಪರಿಸರವಾದಿ ವಿಜಯಪುರದ ಪೀಟರ್ ಅಲೆಕ್ಸಾಂಡರ್ ಜಲತಜ್ಞರ ಸಲಹೆ ಸೂಚನೆ ಮೇರೆಗೆ ತಮ್ಮ ೧೪ ವರ್ಷದ ವನವಾಸಕ್ಕೆ ಬ್ರೇಕ್ ಹಾಕಿದ್ದಾರೆ. ಮಾರುದ್ದ ಬೆಳೆದ ಜಡೆ, ಗೇಣುದ್ದ ಗಡ್ಡ ಕತ್ತರಿಸಿ, ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳ ಹೆಸರಿನಲ್ಲಿ ಕಟ್ಟಿದ ಜೋಳಿಗೆ ಬಿಚ್ಚಿಡುವ ಮೂಲಕ ಹೋರಾಟವನ್ನು ಕೈಬಿಡಲಾಯಿತು. ಹಲವು ಹೋರಾಟಗಾರರು, ಮ್ಯಾಗ್ಸೆಸ್ಸೆ ಪುರಸ್ಕೃತ ರಾಜೇಂದ್ರ ಸಿಂಗ್ ಸಮ್ಮುಖವಹಿಸಿದ್ದರು.
ಈಡೇರದ ಬೇಡಿಕೆ:
ಐತಿಹಾಸಿಕ ರಾಮಲಿಂಗನ ಕೆರೆ ಹಾಗೂ ಅದರ ಮೇಲಿರುವ ನಾಲ್ಕೂ ತಾಯಿ ಕೆರೆಗಳನ್ನು ಉಳಿಸುವುದು, ಅತಿಕ್ರಮಣ ತೆರವುಗೊಳಿಸುವುದು, ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವುದು ಸೇರಿದಂತೆ ಒಟ್ಟಾರೆ ಕೆರೆಗಳ ಪುನರುಜ್ಜೀವನಕ್ಕಾಗಿ ಆಗ್ರಹಿಸಿ ೨೦೦೮ ರಲ್ಲಿ ಅಲೆಕ್ಸಾಂಡರ್ ಹೋರಾಟ ಆರಂಭಿಸಿದ್ದರು. ಎಲ್ಲಿವರೆಗೆ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿವರೆಗೆ ಜಡೆ ಹಾಗೂ ಗಡ್ಡ ತೆಗೆಯುವುದಿಲ್ಲ ಎಂದು ಪಣ ತೊಟ್ಟರು. ಅಲ್ಲದೇ, ಸರ್ಕಾರದ ಕೈಲಿ ಕೆರೆ ಅಭಿವೃದ್ಧಿ ಪಡಿಸಲಾಗದಿದ್ದರೆ ಹೇಳಿ ಭಿಕ್ಷೆ ಬೇಡಿ ಕೆರೆ ಅಭಿವೃದ್ಧಿ ಪಡಿಸುವೆ ಎಂದು ಬಂಥನಾಳ ಶ್ರೀಗಳಂತೆ ಅವರ ಹೆಸರಿನಲ್ಲಿ ಜೋಳಿಗೆ ಹಾಕಿದ್ದರು.
ಬಳಿಕ ಹೋರಾಟ ಚುರುಕುಗೊಳ್ಳುತ್ತಿದ್ದಂತೆ ಅತಿಕ್ರಮಣಕಾರರು ಹಾಗೂ ಭೂ ಮಾಫಿಯಾ ದೊರೆಗಳು ಜೀವಬೆದರಿಕೆ ಹಾಕಲಾರಂಭಿಸಿದರು. ಇದಕ್ಕೂ ಜಗ್ಗದ ಅಲೆಕ್ಸಾಂಡರ್ ‘ನನ್ನನ್ನು ನೀವೇನು ಮಾಡಲು ಸಾಧ್ಯ, ಸಾಯಿಸಿದರೆ ಪ್ರೇತಾತ್ಮವಾಗಿ ಕಾಡುವೆ, ನಾನು ಕ್ರೈಸ್ತನಿದ್ದೇನೆ…ಸತ್ತರೆ ಪೆಟ್ಟಿಗೆಯಲ್ಲಿಒಯ್ಯುವುದು ಬೇಡ…ಅದಕ್ಕಾಗಿ ಬಟ್ಟೆಯನ್ನು ನಾನೇ ಕಾದಿರಿಸುವೆ’ ಎಂದು ತಮ್ಮದೇ ಅಳತೆಯ ಬಿಳಿ ಬಟ್ಟೆಯನ್ನು ತಲೆಗೆ ಸುತ್ತಿದ್ದರು. ಸುದೀರ್ಘ ೧೪ ವರ್ಷವಾದರೂ ಈತನ ಬೇಡಿಕೆ ಈಡೇರಲೇ ಇಲ್ಲ. ಇದು ಆಡಳಿತ ಶಾಹಿಯ ನಿರ್ಲಜ್ಜಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದೇನೋ….!
ರಾಮಲಿಂಗನಕೆರೆಯ ಮಹತ್ವ
ಆದಿಲ್ ಶಾಹಿಗಳ ಕಾಲದಲ್ಲಿ ವಿಜಯಪುರ ಕೇವಲ ಆಡಳಿತಕ್ಕೆ ರಾಜಧಾನಿಯಾಗಿರಲಿಲ್ಲ. ಜಲ ರಾಜಧಾನಿ ಕೂಡ ಆಗಿತ್ತು. ಜಗದ್ಗುರು ಎನಿಸಿಕೊಂಡ ಎರಡನೇ ಇಬ್ರಾಹಿಂ ಆದಿಲ್ ಶಾಹಿ ಕಾಲದಲ್ಲಿ ರಾಮಲಿಂಗನ ಕೆರೆ ಕಟ್ಟಿಸಲಾಯಿತು. ಇದು ಕೆರೆ ಮಾತ್ರವಲ್ಲ ಅಂದಿನ ಅಣೆಕಟ್ಟೆಯಾಗಿತ್ತೆಂಬುದು ಇತಿಹಾಸಕಾರರ ಅಭಿಪ್ರಾಯ. ಇಂದಿಗೂ ಅಣೆಕಟ್ಟೆ ಎನಿಸಿಕೊಳ್ಳಲು ಬೇಕಾದ ಎಲ್ಲವೂ ಇಲ್ಲಿವೆ. ವಿದ್ಯುತ್ ಸೌಲಭ್ಯ ಒಂದನ್ನು ಬಿಟ್ಟು. ಈ ಕೆರೆಯ ಮೇಲ್ಭಾಗದಲ್ಲಿ ನಾಲ್ಕೂ ಕೆರೆಗಳಿವೆ. ಭೂತನಾಳ ಕೆರೆಗೂ ರಾಮಲಿಂಗನ ಕೆರೆ ತಾಯಿ ಕೆರೆ ಎಂದೇ ಕರೆಯುತ್ತಾರೆ. ಇಲ್ಲಿ ಮಹ್ಮದ್ ಕೆರೆ, ತೊರವಿ ಸರೋವರ, ಇಬ್ರಾಹಿಂ ಕೆರೆ, ದೊಡ್ಡ ಹಳ್ಳ ಹೀಗೆ ನಾಲ್ಕಾರು ಜಲಮೂಲಗಳು ರಾಮಲಿಂಗನ ಕೆರೆಗೆ ಸೇರುತ್ತಿದ್ದವು. ಸುಮಾರು ೧೦೦೦ ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದ ಈ ಕೆರೆಯಿಂದ ಇಡೀ ನಗರಕ್ಕೆ ನೀರು ಸರಬರಾಜಾಗುತ್ತಿತ್ತು. ಇಂಥ ಕೆರೆಯಿಂದ ಅತಿಕ್ರಮಣಕ್ಕೊಳಗಾಗಿದ್ದು, ತೆರವಿಗಾಗಿ ಆಗ್ರಹಿಸಿ ಪೀಟರ್ ಹೋರಾಟ ಆರಂಭಿಸಿದ್ದರು.
ಚಿತ್ರ-ಲೇಖನ: ರಾಮು ಬಿ.ಮಸಳಿ