ಕೆರೆನೋಟ – ನೋಟ ೬೩: ಆಗ ಹೀಗಿದ್ದವು… ಜೀವಂತ ಕೆರೆಗಳು! – ೧
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು ಎಂಬ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ವಿವರ ಪ್ರಾರಂಭವಾಗುತ್ತದೆ. ೮೧ ಕೆರೆಗಳ ಪಟ್ಟಿಯನ್ನು ಜೀವಂತ ಕೆರೆಗಳು ಎಂದು ಲಕ್ಷ್ಮಣರಾವ್ ವರದಿಯಲ್ಲಿ ಪಟ್ಟಿ ಮಾಡಿ ಅವುಗಳು ಹೇಗಿವೆ? ಏನು ಮಾಡಬೇಕು ಎಂಬುದರ ವಿವರಣೆ ನೀಡಿದ್ದಾರೆ. ಅದು ಹೀಗಿದೆ….
ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ನಡುವೆ ಬರುವ ಕೆರೆಗಳು:
೧. ಅಮೃತಹಳ್ಳಿ ಕೆರೆ
ಬಳ್ಳಾರಿ ರಸ್ತೆಯ ಪೂರ್ವ ಭಾಗದಲ್ಲಿರುವ ಅಮೃತಹಳ್ಳಿ ಕೆರೆ ೯.೩೫ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೮೧(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಅತ್ಯುತ್ತಮ ಅಚ್ಚುಕಟ್ಟು ಪ್ರದೇಶವನ್ನೂ ಒಳಗೊಂಡಿದೆ. ಸಿಡಿಪಿಯಲ್ಲಿ ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಅದನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೨. ನಾಗವಾರ ಕೆರೆ
ನಾಗವಾರ ಹಳ್ಳಿಯ ಸಮೀಪವಿರುವ ನಾಗವಾರ ಕೆರೆ ೪೩.೮೬ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೫೪ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಇದು ಹೆಬ್ಬಾಳ ಕೆರೆಯ ಕೆಳಭಾಗದ ಹರಿವಿನ ಪ್ರದೇಶದಲ್ಲಿದೆ. ಇದು ದೊಡ್ಡ ಕೆರೆಯಾಗಿದ್ದು, ಇಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಪ್ರವಾಸೋದ್ಯಮ ಇಲಾಖೆ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಪ್ರವಾಸಿಗಳಿಗೆ ಮಾಡುತ್ತಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಾಗಿದೆ. ಕೆರೆಯ ತೀರದ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಅಭಿವೃದ್ಧಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿದೆ.
೩. ಹೆಣ್ಣೂರು ಕೆರೆ
ಹೆಣ್ಣೂರು ಗ್ರಾಮದ ಪಶ್ಚಿಮ ಭಾಗದಲ್ಲಿರುವ ಹೆಣ್ಣೂರು ಕೆರೆ ೩೪೬ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೨೫.೮೦ ಹೆಕ್ಟೇರ್ ವ್ಯಾಪ್ತಿ ಹೊಂದಿದೆ. ಈ ಕೆರೆಯಲ್ಲಿರುವ ನೀರು ಕೈಗಾರಿಕೆ ತಾಜ್ಯದಿಂದ ಮಲಿನಗೊಂಡಿದೆ. ಸಿಡಿಪಿಯಲ್ಲಿ ಈ ಕೆರೆಯ ಸ್ವಲ್ಪ ಭಾಗವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಗುರುತಿಸಲಾಗಿದೆ. ಕೆರೆಯ ಮಾಲಿನ್ಯಕ್ಕೆ ಕೈಗಾರಿಕಾ ತ್ಯಾಜ್ಯಗಳೇ ಕಾರಣ. ಕೆರೆಗೆ ಹರಿಯುತ್ತಿರುವ ಕೈಗಾರಿಕೆ ತ್ಯಾಜ್ಯಗಳನ್ನು ತಡೆಯಬೇಕು. ಬೆಂಗಳೂರು ಜಲ ಮಂಡಳಿ ಕೂಡಲೇ ಒಳಚರಂಡಿ ನೀರು ಮತ್ತು ಕೈಗಾರಿಕೆ ತ್ಯಾಜ್ಯದ ನೀರು ಈ ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ತೀರದ ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಈ ಕೆರೆಯ ಮಾಲೀಕತ್ವ ಹೊಂದಿದೆ.
೪. ಕಾಚರಕನಹಳ್ಳಿ ಕೆರೆ
ಕಾಚರಕನಹಳ್ಳಿ ಗ್ರಾಮದ ಪಶ್ಚಿಮ ಭಾಗದಲ್ಲಿರುವ ಕಾಚರಕನಹಳ್ಳಿ ಕೆರೆ ೨೨.೫೭ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೪೩ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ನೀರೂ ಮಲಿನಗೊಂಡಿದ್ದು, ಇದನ್ನು ಬೆಂಗಳೂರು ಜಲ ಮಂಡಳಿ ತುರ್ತಾಗಿ ತಡೆಯಬೇಕಾಗಿದೆ. ಸಿಡಿಪಿಯಲ್ಲಿ ಈ ಕೆರೆಯ ಕೆಲವು ಪ್ರದೇಶವನ್ನು ವಸತಿ, ಕೈಗಾರಿಕೆ, ಉದ್ಯಾನವನ ಮತ್ತು ತೆರೆದ ಪ್ರದೇಶಗಳಿಗಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಅನಿಮಲ್ ಫುಡ್ ಕಂಪನಿ (ಬಿಎಎಫ್ ಸಿಒ) ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿರುವುದರಿಂದ ಸಮಿತಿ ಯಾವುದೇ ಶಿಫಾರಸು ಮಾಡಿಲ್ಲ.
೫. ಚಳ್ಳಕೆರೆ ಕೆರೆ
ಹೆಣ್ಣೂರು ಗ್ರಾಮದ ಪೂರ್ವ ಭಾಗದತ್ತ ಇರುವ ಚಳ್ಳಕೆರೆ ಗ್ರಾಮದ ಸಮೀಪ ಚಳ್ಳಕೆರೆ ಇದ್ದು, ೩೪೧ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೧೦.೩೨ ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಸಿಡಿಪಿಯಲ್ಲಿ ಈ ಕೆರೆಯ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ಪ್ರದೇಶ ಬಿಡಿಎ ಯೋಜನೆಯ ವ್ಯಾಪ್ತಿಯಲ್ಲಿದೆ. ಕೆರೆಯ ಮುಂದಿನ ತೀದಲ್ಲಿ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಬೇಕು ಮತ್ತು ಕೆರೆಯ ಸುತ್ತಮುತ್ತಲೂ ಸಸಿಗಳನ್ನು ನೆಡಬೇಕು. ವೃಕ್ಷವನವನ್ನೂ ಇಲ್ಲಿ ಸ್ಥಾಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
……ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್