ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ -‘ವಿಜಯಪುರ ಘೋಷಣೆ’
ರಾಷ್ಟ್ರೀಯ ಜಲ ಸಮಾವೇಶಕ್ಕೆ ತೆರೆ, ಜಲ ಸಂಸತ್ತಿನಲ್ಲಿ ನಾಲ್ಕು ಅಂಶಗಳ ಪ್ರಸ್ತಾವ,ನೀತಿ ಆಯೋಗದಲ್ಲಿ ಚರ್ಚಿಸಲು ಶಿಫಾರಸು, ದೇಶದ ೧೦೧ ನದಿಗಳ ರಕ್ಷಣೆಗೆ ನಿರ್ಣಯ
ಜಲ ಸಂರಕ್ಷಣೆ ಪಠ್ಯವಾಲಿ
ಬರದ ನಾಡೆಂಬ ಶಾಶ್ವತ ಹಣೆ ಪಟ್ಟಿ ಹೊತ್ತ ವಿಜಯಪುರ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಯಶಸ್ವಿಯಾಗಿ ತೆರೆ ಕಂಡಿದ್ದು, ದೇಶದ ೧೦೧ ನದಿಗಳ ಪುನಃಶ್ಚೇತನಕ್ಕೆ ಒಕ್ಕೋರಲ ನಿರ್ಣಯ ಕೈಗೊಳ್ಳಲಾಯಿತು.
ಬಿಎಲ್ಡಿಇ ಸಂಸ್ಥೆ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಸಮಾವೇಶದ ನಿರ್ಣಯಗಳನ್ನು ಮಂಡಿಸಿದರು. ಕಳೆದೆರಡು ದಿನಗಳಿಂದ ೨೧ ಜಲ ಸಂಸತ್ಗಳ ರಚನೆ ಮಾಡಿ ಆ ಮೂಲಕ ದೇಶದಲ್ಲಿರುವ ಪ್ರಮುಖ ನದಿಗಳ ಸಂರಕ್ಷಣೆ, ಅವುಗಳ ಉಳಿವಿಗೆ ಇರುವ ದಾರಿಗಳ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಜತೆಗೆ ನೀತಿ ಆಯೋಗದಲ್ಲಿ ಚರ್ಚೆಯಾಗುವಂತೆ ಶಿಫಾರಸ್ಸು ಮಾಡಲಾಯಿತು.
ಭಾರತದ ಜಲಗಾಂಽ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ, ನೀರು, ಆಹಾರ ಹಾಗೂ ಜೀವನೋಪಾಯ ಭದ್ರತೆ, ಬರ ಹಾಗೂ ಪ್ರವಾಹ ಮುಕ್ತ ಭಾರತ ನಿರ್ಮಾಣ ಮಾಡಬೇಕಿದೆ ಎನ್ನುದ ಸಂದೇಶವನ್ನು ‘ವಿಜಯಪುರ ಘೋಷಣೆ’ ಮೂಲಕ ಸಮಾವೇಶಕ್ಕೆ ನಾಂದಿ ಹಾಡಲಾಯಿತು.
ಪ್ರಮುಖ ನಿರ್ಣಯಗಳು:
ಜಲ ಸಂರಕ್ಷಣೆ ಪಠ್ಯವಾಗಲಿ
ಜಲ ಸಂರಕ್ಷಣೆ ಇಂದಿನ ದಿನಗಳಲ್ಲಿ ಅತ್ಯಮೂಲ್ಯವಾಗಿದ್ದು, ಪ್ರಾಥಮಿಕ ಶಿಕ್ಷಣದಿಂದಲೇ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಅಲ್ಲದೇ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಂಶೋಧನೆಗಳು ಕೈಗೊಳ್ಳುವಂತಾಗಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಲ ಸಾಕ್ಷರತಾ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎನ್ನುವುದು ಘೋಷಣೆಯ ಪ್ರಮುಖ ಉದ್ದೇಶವಾಗಿತ್ತು.
ಮರಳು ದಂಧೆ ವಿರುದ್ಧ ಸಮರ
ದೇಶದಲ್ಲಿರುವ ನದಿಪಾತ್ರದಲ್ಲಿ ಅತಿಕ್ರಮಣ, ಮರಳು ದಂಧೆ ಹೆಚ್ಚಾಗುತ್ತಿದ್ದು, ದಂಧೆಕೋರರ ಮಟ್ಟಹಾಕಲು ಅವರ ವಿರುದ್ಧ ಸಮರ ಸಾರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು. ಅಲ್ಲದೇ ನದಿ ಪಾತ್ರದಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸಿ, ಅಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ, ಇನ್ನಿತರೆ ಭೂ ಮಾಫಿಯಾಕ್ಕೆ ತೆರೆ ಎಳೆಯಬೇಕು. ನದಿಗಳೆಲ್ಲ ಮಲೀನಗೊಳ್ಳುತ್ತಿದ್ದು, ಅವುಗಳಿಗೆ ಮಲೀನ ನೀರು ಬಿಟ್ಟರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ನದಿಗಳ ಪಾವಿತ್ರ್ಯತೆ ಕಾಪಾಡಬೇಕು ಎಂಬ ತಜ್ಞರ ನಿಲುವಿಗೆ ಸಭೆ ಒಪ್ಪಿಕೊಂಡಿತು.
ನದಿ ವಿವಾದಗಳಿಗೆ ಸಲಹೆ
ಕಾವೇರಿ, ಮಹಾದಾಯಿ, ಕೃಷ್ಣಾ, ಗಂಗಾ ಸೇರಿದಂತೆ ಅನೇಕ ನದಿ ನೀರು ಹಂಚಿಕೆ ವಿವಾದಗಳು ಸುಪ್ರೀಂ ಅಂಗಳಕ್ಕೆ ಹೋಗಿದ್ದು, ಅದರಿಂದ ವಿಳಂಬವಾಗುತ್ತದೆ. ಅದರಿಂದ ಹಣದ ಹೊಳೆಯೇ ಹರಿಸಬೇಕಾಗುತ್ತದೆ. ಜನರ ಸಮ್ಮುಖದಲ್ಲಿ ಸಮಸ್ಯೆ ಇತ್ಯಾರ್ಥ ಪಡಿಸಿಕೊಂಡಾಗ ಮಾತ್ರ ನೀರು ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಸಿಗಲಿದೆ ಎಂಬ ಅಂತಿಮ ನಿರ್ಣಾಯ ಸಭೆಯಲ್ಲಿ ಕೇಳಿಬಂತು.
ಹನಿ ನೀರಾವರಿಗೆ ಹೆಚ್ಚಿನ ಒತ್ತು
ಭಾರತ ಕೃಷಿ ಆಧಾರಿತ ದೇಶ. ಶೇ.೮೦ ರಷ್ಟು ನೀರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಪೋಲಾಗುವ ನೀರನ್ನು ತಡೆಯುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅದಕ್ಕೆ ಪರಿಹಾರವಾಗಿ ಏಷ್ಯಾದಲ್ಲೇ ಮಾದರಿಯಾದ ರಾಮಥಾಳ ಸೂಕ್ಷ್ಮ ಹನಿ ನೀರಾವರಿಗೆ ಒತ್ತು ನೀಡಿದಂತೆ. ದೇಶದ ಎಲ್ಲ ಕಡೆಗಳಿಗೂ ಈ ಮಾದರಿ ಅನುಸರಿಸಬೇಕು ಎನ್ನುವ ಚಿಂತನೆಯನ್ನು ತಜ್ಞರು ಅಭಿವ್ಯಕ್ತಪಡಿಸಿದರು.
೧೩ ರಾಜ್ಯಗಳ ಜಲತಜ್ಞರು, ವಿದ್ವಾಂಸರು, ಚಿಂತಕರು, ರೈತರು ಅಂತಿಮ ಸಭೆಯಲ್ಲಿ ಪಾಲ್ಗೊಂಡಿದ್ದರು. ಘೋಷಣಾ ಪತ್ರವನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಓದುವ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.
ಕೈಬಿಟ್ಟ ಪರಮಶಿವಯ್ಯ ವರದಿ
ಭಾರಿ ಚರ್ಚಿತಗೊಂಡಿದ್ದ ಕಾವೇರಿ ಸಂರಕ್ಷಣೆ ಕುರಿತ ಜಲ ಸಂಸತ್ತಿನಲ್ಲಿ ತುಮಕೂರಿನ ಜಲ ಪ್ರತಿನಿಽ ಕುಂದರಹಳ್ಳಿ ರಮೇಶ್, ಡಾ. ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿದ್ದರು. ಅದರಿಂದ ಪಶ್ಚಿಮ ಘಟ್ಟಗಳಿಂದ ರಾಜ್ಯಕ್ಕೆ ೨ ಸಾವಿರ ಟಿಎಂಸಿ ನೀರು ಲಭ್ಯವಾಗಲಿದ್ದು, ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವ ವಿಚಾರವನ್ನು ಕೈಬಿಟ್ಟಿದ್ದಕ್ಕೆ ರಮೇಶ್ ಅವರು ಅಸಮಧಾನ ತೋಡಿಕೊಂಡರು.