ಹಾಡು ಬೆಂಗಳೂರು : ನೆಲ ಜಲ ಜನ ಜಾಗೃತಿ ಜಾಥಾ
“ಭೂಮ್ತಾಯಿ ಬಳಗ”ವು ಸಮಕಾಲೀನ ಸಾಮಾಜಿಕ ಸಂಗತಿಗಳ ಕುರಿತು ಜನ ಜಾಗೃತಿ ಗೀತೆಗಳನ್ನು ಹಾಡುತ್ತಿರುವ ಸಂಗೀತ ತಂಡ. ಮನರಂಜನೆ ಮತ್ತು ಜನಜಾಗೃತಿ ಎರಡನ್ನೂ ಸಾಧ್ಯವಾಗಿಸುವ ಹೊಸ ರಾಗ-ಲಯಗಳ ಹಾಡುಗಳನ್ನು ಜನಪದ ಸೊಗಡಿನೊಂದಿಗೆ ಸಂಯೋಜಿಸಿ ಹಾಡುತ್ತಿರುವ, ಯುವಜನರನ್ನು ಹೆಚ್ಚಿನ ರೀತಿಯಲ್ಲಿ ಆಕರ್ಷಿಸಿರುವ ತಂಡವಾಗಿದೆ ಭೂಮ್ತಾಯಿ ಬಳಗ. ೨೦೦೬ರಲ್ಲಿ ಅರ್ಕಾವತಿ ನದಿ ಪುನಶ್ಚೇತನ ಆಂದೋಲನದ ಭಾಗವಾಗಿ “ಗಂಗಮ್ಮನ ಒಕ್ಕಲು” ಎಂಬ ಕಲಾ ತಂಡ ಕಟ್ಟಿಕೊಂಡು ಜಲ ಸಾಕ್ಷರತೆಯ ಹಾಡು ನಾಟಕಗಳನ್ನು ಮಾಡುತ್ತಿದ್ದ ಈ ಯುವ ಕಲಾವಿದರ ತಂಡವು ೨೦೦೮ ರಿಂದ “ಭೂಮ್ತಾಯಿ ಬಳಗ” ಎಂಬ ಹೆಸರಿನಡಿ ಪರಿಸರ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ವೃತ್ತಿಪರ ಸಂಗೀತ ತಂಡವಾಗಿ ನಾಡಿನಾದ್ಯಂತ ಗುರುತಿಸಲ್ಪಟ್ಟಿದೆ. ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿರುವ ಬಳಗವು ವಿಶ್ವ ವಿದ್ಯಾಲಯಗಳಿಂದ ಹಿಡಿದು ಜನ ಸಂಘಟನೆಗಳವರೆಗೂ ಸಾಮಾಜಿಕ ಚಿಂತನೆಯ ಹಾಡುಗಳನ್ನು ಹಾಡುತ್ತಿದೆ.
೨೦೧೪ರಲ್ಲಿ ಬೆಂಗಳೂರು ನಗರದಾದ್ಯಂತ “ಹಾಡು ಬೆಂಗಳೂರು” ಸಂಗೀತ ಯಾತ್ರೆಯ ಮೂಲಕ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಹೊಸ ಜಾಗೃತಿ ಮೂಡಿಸಿದ್ದ ತಂಡ ಈ ವರ್ಷ ಮತ್ತೆ “ಹಾಡು ಬೆಂಗಳೂರು” ಎಂಬ ನೆಲ ಜಲ ಜನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಈ ಬಾರಿ ಜಂಬೆ ತಮಟೆಗಳೊಂದಿಗೆ ಇನ್ನಷ್ಟು ಸಂಗೀತ ಸಲಕರಣೆಗಳ ಸೇರ್ಪಡೆಯೊಂದಿಗೆ ಹೊಸ ಹಾಡು ಸಂಗೀತ ಸಂಯೋಜನೆಯೊಂದಿಗೆ ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಕಾರ್ಯಕ್ರಮ ನೀಡಲಿದೆ.
ಬೆಂಗಳೂರಿನ ಪರಿಸರ ಸಂರಕ್ಷಣೆ ಕುರಿತ ಭಾಷಣಕ್ಕಾಗಿ ಬರೆದುಕೊಂಡ ಟಿಪ್ಟಣಿಯೊಂದು ಕಳೆದು ಹೋದ ಕೆರೆಗಳ ಕಥೆಯನ್ನು ಸಾರುವ “ಬೆಂದಕಾಳೂರು ಬೆಂಗಳೂರು” ಎಂಬ ಹಾಡಾಯಿತು ಎನ್ನುತ್ತಾರೆ ಭೂಮ್ತಾಯಿ ಬಳಗದ ಮಾಗದರ್ಶಕ, ಕವಿ ಮತ್ತು ಸಂಗೀತ ಸಂಯೋಜಕ ಜನಾರ್ದನ ಕೆಸರಗದ್ದೆ. ರಾಜಪ್ಪ ದಳವಾಯಿ ಅವರ “ನೀರೆಂಬುದು ಬಯಸಿದಾಗಲೆಲ್ಲಾ ಸಿಗುವ ಮಾಯಾ ವಸ್ತು ಅಲ್ಲ” ಎಂಬ ಹಾಡು ಮಳೆ ಕೊಯ್ಲಿನ ಮಹತ್ವವನ್ನು ಸಾರುತ್ತದೆ. ಗೊಲ್ಲ ಹಳ್ಳಿ ಶಿವಪ್ರಸಾದ್ ಅವರ “ಎಲ್ಲಿ ಹೋದವು ಕಣ್ಣಿಗೆ ಕಾಣದಾದವು” ಎಂಬ ಹಾಡು ನಮ್ಮ ಪರಿಸರ ಮತ್ತು ಜೀವ ವೈವಿದ್ಯ ನಾಶದ ಬಗೆಗಿನ ನೋವಿನ ಹಾಡಾದರೆ ಜನಾರ್ದನ ಕೆಸರಗದ್ದೆ ಅವರ “ ಮುಂದೊಂದು ಭರಣಿಗೆ ಉರಿವ ಈ ಧರೆಗೆ ಭೋರ್ಗರೆದು ಮಳೆಯು ಸುರಿಯವುದು” ಎಂಬ ಹಾಡು ನಿಸರ್ಗದ ಚೇತನದ ಮೇಲೆ ನಾವಿಡಬಹುದಾದ ಭರವಸೆಯ ಹಾಡಾಗಿದೆ. ಹಾಡು ಬೆಂಗಳೂರು ತಿರುಗಾಟದಲ್ಲಿ ನಗರದ ಪರಿಸರದ ಸಮಸ್ಯೆಗಳು ಮತ್ತು ಪರಿಹಾರ ದಾರಿಗಳ ಕುರಿತ ಚಿಂತನೆಗೆ ಹಚ್ಚುವ ಅನೇಕ ಹಾಡುಗಳಿರುತ್ತವೆ. ೨೦೧೭ ರ ಆಗಸ್ಟ್ ಎರಡನೇ ವಾರದಲ್ಲಿ ಆರಂಭವಾಗುವ ಸಂಗೀತ ಯಾತ್ರೆ ನವೆಂಬರ್ ೧೦ ರಂದು ಜಲದನಿ ಚಲನಚಿತ್ರೋತ್ಸವದೊಂದಿಗೆ ಮುಕ್ತಾಯಗೊಳ್ಳುತ್ತದೆ.
ಅರಿವಿನ ಹಾಡುಗಳನ್ನು ಹಾಡುವುದರಲ್ಲಿ ಹೊಸ ಹಜ್ಜೆಯನ್ನು ಮೂಡಿಸಿರುವ ನಿರ್ಮಲ ರವಿ, ಅರುಣ್ ಕುಮಾರ್, ಹೊಂಬೇಗೌಡ ಮತ್ತು ಆಪ್ರಿಕಾದ ಚರ್ಮವಾದ್ಯ ಜಂಬೆಯನ್ನು ನುಡಿಸುವ ಉದಯೋನ್ಮುಖ ವಾದಕ ಬಾಲು ಜಂಬೆ ಅವರುಗಳು ಸಂಗೀತ ತಂಡವನ್ನು ಮುನ್ನಡೆಸಲಿದ್ದಾರೆ.
ಮೂರು ತಿಂಗಳುಗಳಲ್ಲಿ ನೂರು ಕಾರ್ಯಕ್ರಮ ನೀಡುವ ಗುರಿ ಹೊಂದಿದು ಹೆಚ್ಚಿನ ಕಾರ್ಯಕ್ರಮಗಳು ನಗರದ ಕಾಲೇಜುಗಳಲ್ಲಿ ನಡೆಯಲಿದೆ. ಉಳಿದಂತೆ ಸಾರ್ವಜನಿಕ ಸ್ಥಳಗಳು, ಕೆರೆ ಉದ್ಯಾನಗಳಲ್ಲೂ ಸಂಗೀತ ಪ್ರಸ್ತುತಿ ನಡೆಯಲಿದೆ.
ಆಗಸ್ಟ್ ೭ ರಂದು ಮಲ್ಲೇಶ್ವರದ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಜಾಥಾ ಉದ್ಘಾಟನೆ ನಡೆಯಲಿದೆ. ಜ್ಞಾನ ಪೀಠ ಪುರಸ್ಖೃತ ಡಾ|| ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದು ಮತ್ತು ಶತಾಯುಷಿ ಸಹಜ ಪರಿಸರ ಪ್ರೇಮಿ ನಾಡೋಜ ಸಾಲು ಮರದ ತಿಮಕ್ಕ ಅವರು ಶುಭ ಹಾರೈಸಲಿದ್ದಾರೆ. ನಿವೃತ್ತ ಪೋಲೀಸ್ ಅಧಿಕಾರಿ ಶ್ರೀ. ಬಿ.ಕೆ.ಶಿವರಾಂ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ನಗರದ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು “ಹಾಡು ಬೆಂಗಳೂರು” ಕಾರ್ಯಕ್ರಮದ ಆತಿಥ್ಯ ವಹಿಸುವಂತೆ ಭೂಮ್ತಾಯಿ ಬಳಗ ಈ ಮೂಲಕ ಕೇಳಿಕೊಳ್ಳುತ್ತದೆ.