ಕೆರೆನೋಟ- ನೋಟ ೬೦: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ೫
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ 46 ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…
ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಇರುವ ಕೆರೆಗಳು:
ಕದಿರೇನಹಳ್ಳಿ ಕೆರೆ ಬನಶಂಕರಿ 2ನೇ ಸ್ಟೇಜ್ ಪ್ರದೇಶದಲ್ಲಿದ್ದು, ೩.೮೭ ಹೆಕ್ಟೇರ್ ಪ್ರದೇಶದಲ್ಲಿ ೭೧೩ ಸಂಖ್ಯೆಯಲ್ಲಿ ಈ ಕೆರೆ ನೋಂದಣಿಯಾಗಿದೆ. ಸರ್ಕಾರ ಈ ಕೆರೆಯ ಏರಿ ಪ್ರದೇಶವನ್ನು ಕೊ-ಆಪರೇಟಿವ್ ಟ್ರೈನಿಂಗ್ ಕಾಲೇಜಿಗೆ ಮಂಜೂರು ಮಾಡಿದೆ. ಸಿಡಿಪಿಯಲ್ಲಿ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಎಂದು ನಮೂದಾಗಿದೆ. ಈ ಕೆರೆಯನ್ನು ಈಗಾಗಲೇ ಮಂಜೂರು ಮಾಡಿರುವುದರಿಂದ ಸಮಿತಿ ಯಾವುದೇ ಸಲಹೆ ನೀಡಿಲ್ಲ.
೨೭. ಕತ್ರಿಗುಪ್ಪೆ ಕೆರೆ
ಕತ್ರಿಗುಪ್ಪೆ ಕೆರೆ ೨.೦೪ ಹೆಕ್ಟೇರ್ ಪ್ರದೇಶದಲ್ಲಿದ್ದು, ೭೦೫ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಬಿಡಿಎ ಬಡಾವಣೆಯ ಪ್ರದೇಶದಲ್ಲಿದ್ದು, ಈ ಕೆರೆಯ ಸುತ್ತಲೂ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಪ್ರದೇಶವನ್ನು ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
೨೮. ಯಡಿಯೂರು ಕೆರೆ
ಯಡಿಯೂರು ಕೆರೆ ೭೦೨ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೬.೪೫ ಹೆಕ್ಟೇರ್ ಪ್ರದೇಶದಲ್ಲಿದೆ. ಕನಕಪುರ ರಸ್ತೆಯ ಉತ್ತರ ದಿಕ್ಕಿನ ಯಡಿಯೂರು ಗ್ರಾಮದಲ್ಲಿ ಈ ಕೆರೆ ಇದೆ. ಇಲ್ಲಿ ಜಲಮೂಲದ ಪ್ರದೇಶದ ಮತ್ತು ಉದ್ಯಾನವನವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಈ ಕೆರೆಯ ಉದ್ಯಾನ ಪ್ರದೇಶವನು ಅದರ ಈಶಾನ್ಯ ಭಾಗಕ್ಕಿದೆ. ಹೀಗಾಗಿ ಉದ್ಯಾನ ಪ್ರದೇಶವನ್ನು ವಿಸ್ತರಿಸಲು ಅತಿ ಸೂಕ್ತವಾದ ಪ್ರದೇಶ. ಈ ಕೆರೆಯ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಸಿಡಿಪಿಯಲ್ಲಿ ಈ ಕೆರೆಯನ್ನು ಉಳಿಸಿಕೊಳ್ಳುವ ಜೊತೆಗೆ ಉದ್ಯಾನ ಮತ್ತು ತೆರೆದ ಪ್ರದೇಶವನ್ನು ಪ್ರಸ್ತಾಪಿಸಲಾಗಿದೆ. ಹೆಚ್ಚಿನ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡು ನೀರಿನ ಪ್ರದೇಶವನ್ನು ವಿಸ್ತಾರಗೊಳಿಸಬೇಕು ಮತ್ತು ಪಕ್ಷಿಗಳ ತಾಣವನ್ನಾಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
೨೯. ಲಾಲ್ ಬಾಗ್ ಕೆರೆ
ಲಾಲ್ ಬಾಗ್ ಕೆರೆ ಲಾಲ್ ಬಾಗ್ ನ ಒಳಾಂಗಣ ಪ್ರದೇಶದಲ್ಲಿದ್ದು, ೨೮೧ನೇ ಕೆರೆಯಾಗಿ ನೋಂದಣಿಯಾಗಿ ೧೨.೯೦ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ಕೆರೆಯನ್ನು ಕೆರೆಯಾಗಿಯೇ ಉಳಿಸಿಕೊಳ್ಳಲು ಸಿಡಿಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಮಿತಿ ಯಾವುದೇ ಶಿಫಾರಸು ನೀಡಿಲ್ಲ.
೩೦. ಕೆಂಪಾಂಬುಧಿ ಕೆರೆ
ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಕೆಂಪಾಂಬುಧಿ ಕೆರೆ ೧೪.೮೪ ಹೆಕ್ಟೇರ್ ಪ್ರದೇಶದಲ್ಲಿದ್ದು, 698 ಸಂಖ್ಯೆಯಲ್ಲಿ ನೋಂದಣಿ ಆಗಿದೆ. ಕೆರೆಯ ಸುತ್ತಮುತ್ತಲ ಗಲೀಜು ನೀರು ಈ ಕೆರೆಯನ್ನು ದಕ್ಷಿಣ ಮತ್ತು ಪೂರ್ವ ದಿಕ್ಕಿನಿಂದ ಸೇರಿಕೊಳ್ಳುತ್ತಿದೆ. ಕೆರೆಯ ದಕ್ಷಿಣ ಭಾಗದಲ್ಲಿ ಈಜುಕೊಳ ಮತ್ತು ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಪೂರ್ವ ದಿಕ್ಕಿನಲ್ಲೂ ಉದ್ಯಾನವನವಿದೆ. ಉತ್ತರ ಭಾಗದಲ್ಲಿ ನೀರು ಸಂಗ್ರಹವನ್ನು ನಿರ್ವಹಿಸಲಾಗುತ್ತಿದೆ. ಕೆರೆಯ ಏರಿ ಸುಸ್ಥಿತಿಯಲ್ಲಿದೆ. ಕೆರೆಯ ಏರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಉತ್ತರ ಭಾಗದಲ್ಲಿ ಕೆಲ ಪ್ರದೇಶ ಒತ್ತುವರಿಯಾಗಿದೆ. ಈ ಕೆರೆಯ ಭಾಗದಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶವನ್ನು ಸಿಡಿಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ನಿಲ್ಲಿಸಬೇಕು. ನೀರು ಹರಿದುಬರುವ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು. ಕೆರೆ ತೀರದ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡಬೇಕು. ಉತ್ತರ ದಿಕ್ಕಿನಲ್ಲಿ ಜಲ ಸಂಗ್ರಹ ಮಾಡಬೇಕು ಮತ್ತು ದಕ್ಷಿಣ ಭಾಗದಲ್ಲಿ ಮೈದಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
………….ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್