ಕೆರೆನೋಟ – ನೋಟ ೫೯: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ೪
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…
ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಇರುವ ಕೆರೆಗಳು
- ನೈನಪ್ಪಣ್ಣ ಶೆಟ್ಟಿಪಾಳ್ಯ ಕೆರೆ
ಬೆಂಗಳೂರಿನ ನೈನಪ್ಪನಶೆಟ್ಟಿ ಪಾಳ್ಯದ ವಾಯವ್ಯ ಭಾಗದಲ್ಲಿರುವ ನೈನಪ್ಪಣ್ಣ ಶೆಟ್ಟಿ ಕೆರೆ ೦.೮೪ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಹಾಗೂ ಅಂಗಳ ಬಹುತೇಕ ಒತ್ತುವರಿಯಾಗಿದ್ದು, ಅನಧಿಕೃತ ಬಡಾವಣೆಗಳು ಇಲ್ಲಿ ಬಂದಿವೆ. ಸಿಡಿಪಿಯಲ್ಲಿ ಈ ಪ್ರದೇಶವನ್ನು ಬಡಾವಣೆಯ ಭಾಗ ಎಂದು ನಮೂದಿಸಲಾಗಿದೆ. ಈ ಕೆರೆ ತೀರಾ ಚಿಕ್ಕದಾಗಿದ್ದು, ಬಿಡಿಎ ಇಲ್ಲಿ ಯೋಜನೆಯನ್ನು ಹೊಂದಿರುವುದರಿಂದ ಬಿಡಿಎ ಪ್ರಸ್ತಾಪಕ್ಕೆ ಸಮಿತಿ ಅನುಮೋದಿಸುತ್ತದೆ.
- ನೈನಪ್ಪಣ್ಣ ಶೆಟ್ಟಿಪಾಳ್ಯ ಕೆರೆ - ೨
ಬೆಂಗಳೂರಿನ ನೈನಪ್ಪನಶೆಟ್ಟಿಪಾಳ್ಯದ ನೈರುತ್ಯ ಭಾಗದಲ್ಲಿರುವ ನೈನಪ್ಪನ ಶೆಟ್ಟಿಪಾಳ್ಯ ಕೆರೆಯ ಇದರ ಏರಿ ಸುಸ್ಥಿತಿಯಲ್ಲಿದೆ. ಈ ಕೆರೆ ೨೭೧(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದದ್ದು, ೨.೦೫ ಹೆಕ್ಟೇರ್ ಪ್ರದೇಶದಲ್ಲಿಸೆ. ಕೆಲವು ಕೈಗಾರಿಕೆ ಅಭಿವೃದ್ಧಿಗಳು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಆಗುತ್ತಿವೆ. ಈ ಕೆರೆ ಚಿಕ್ಕದಾಗಿದ್ದು, ಸಿಡಿಪಿಯಲ್ಲಿ ವಸತಿ ಪ್ರದೇಶಗಳಿಗಾಗಿ ಪ್ರಮುಖ ರಸ್ತೆ ನಿರ್ಮಿಸುವ ಪ್ರಸ್ತಾಪವಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
- ತಾವರೆಕೆರೆ ಕೆರೆ
ತಾವರೆಕೆರೆಯಿಂದಲೇ ಈ ಪ್ರದೇಶಕ್ಕೆ ತಾವರೆಕೆರೆ ಎಂಬ ಹೆಸರಿದ್ದು, ಇದು ೨೭೭ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು ೭.೧೦ ಹೆಕ್ಟೇರ್ ಪ್ರದೇಶದಲ್ಲಿದೆ. ಕೆರೆಯ ಏರಿಯನ್ನು ಒತ್ತುವರಿ ಮಾಡಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ವಸತಿ ಅಭಿವೃದ್ಧಿಗಳಾಗಿವೆ. ಈ ಕೆರೆ ಕೆಂಪ್ಸನ್ ಇಂಡಸ್ಟ್ರೀಸ್ ನ ಹಿಂಭಾಗದ ಪೂರ್ವಭಾಗದಲ್ಲಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತ ತೆರೆದ ಪ್ರದೇಶ ಅಭಿವೃದ್ಧಿಪಡಿಸುವ ಯೋಜನೆ ಇದೆ. ಈ ಕೆರೆಯ ಏರಿ ಪ್ರದೇಶದಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡುತ್ತದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
- ಬೈರಸಂದ್ರ ಕೆರೆ
ಬನ್ನೇರುಘಟ್ಟ ರಸ್ತೆಯ ಪಶ್ಚಿಮ ಭಾಗ ಮತ್ತು ಜಯನಗರ ಟಿ ಬ್ಲಾಕ್ ನ ಉತ್ತರ ದಿಕ್ಕಿನಲ್ಲಿರುವ ಬೈರಸಂದ್ರ ಕೆರೆ ೧೦ ಹೆಕ್ಟೇರ್ ಪ್ರದೇಶದಲ್ಲಿದೆ. ೨೭೬ ಸಂಖ್ಯೆಯಲ್ಲಿ ನೋಂದಣಿಯಾಗಿರುವ ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿವೆ. ಬೆಂಗಳೂರು ನಗರ ಪಾಲಿಕೆ ವೈರ್ ಫೆನ್ಸಿಂಗ್ ಅನ್ನ ಮಾಡಿದೆ. ಈ ಕೆರೆಯ ಏರಿ ಸುಸ್ಥಿತಿಯಲ್ಲಿದೆ. ಸಿಡಿಪಿಯಲ್ಲಿ ಈ ಕೆರೆಯ ಭಾಗವನ್ನು ಭಾಗಶಃ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಎಂದು ನಮೂದಿಸಿದ್ದು, ಭಾಗಶಃ ವಸತಿ ಪ್ರದೇಶ ಎಂದೂ ನಮೂದಿಸಿದೆ. ಈ ಕೆರೆಯನ್ನು ಜಲಮೂಲವನ್ನಾಗಿ ನಿರ್ವಹಣೆ ಮಾಡಲು ಸಮಿತಿ ನಿರ್ಧರಿಸಿದ್ದು, ಸುತ್ತಲೂ ಅದನ್ನು ಅಭಿವೃದ್ಧಿಪಡಿಸಬೇಕು. ಅರಣ್ಯ ಇಲಾಖೆ ಈ ಕೆರೆಯ ಅಂಚಿನಲ್ಲಿ ವೃಕ್ಷವನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಕಾರ್ಯಗತವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
- ಸಾರಕ್ಕಿ ಕೆರೆ
ಈ ಸಾರಕ್ಕಿ ಕೆರೆ ತೀರಾ ಚಿಕ್ಕದಾಗಿದ್ದು, ೨೭೦ನೇ ಸಂಖ್ಯೆಯಲ್ಲಿ ನಮೂದಾಗಿದ್ದು ೦.೦೫ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಸಾರಕ್ಕಿ ಬಡಾವಣೆಯಲ್ಲಿದೆ. ಸಾರಕ್ಕಿ ಯೋಜನೆಯಡಿ ಈ ಪ್ರದೇಶವನನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಈ ಕೆರೆಗೆ ಸಮಿತಿಯಿಂದ ಯಾವುದೇ ಶಿಫಾರಸು ಇಲ್ಲ.
- ನಂದಿ ಶೆಟ್ಟಪ್ಪ ಕೆರೆ
ನಂದಿಶೆಟ್ಟಪ್ಪ ಕೆರೆ ಶಾವಿಗೆ ಮಲ್ಲೇಶ್ವರ ಬೆಟ್ಟದ ದಿಬ್ಬದಲ್ಲಿದೆ. ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ಸಮೀಪದಲ್ಲಿರುವ ಕೆರೆ ೭೧೪ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೧.೯೪ ಹೆಕ್ಟೇರ್ ಪ್ರದೇಶದಲ್ಲಿದೆ. ಸಿಡಿಪಿಯಲ್ಲಿ ಉದ್ಯಾನ ಮತ್ತು ತೆರೆದ ಪ್ರದೇಶವನ್ನಾಗಿಸುವ ಪ್ರಸ್ತಾಪ ಇದೆ. ಈ ಕೆರೆಯ ಏರಿ ಪ್ರದೇಶದಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಅರಣ್ಯ ಇಲಾಖೆಗೆ ಸಮಿತಿ ಶಿಫಾರಸು ಮಾಡಿದೆ.
- ಕರಿಸಂದ್ರ ಕೆರೆ
ಕರಿಸಂದ್ರದ ಸುತ್ತಲೂ ಬಿಡಿಎ ಬಡಾವಣೆಗಳು ಅಭಿವೃದ್ದಿಗೊಂಡಿವೆ. ಈ ಕೆರೆ 0.06 ಹೆಕ್ಟೇರ್ ಪ್ರದೇಶದಲ್ಲಿದ್ದು, ೭೦೪ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಭಾಗಶಃ ಸಾರ್ವಜನಿಕ, ಅರೆ ಸಾರ್ವಜನಿಕ, ಉದ್ಯಾನ ಮತ್ತು ತೆರೆದ ಪ್ರದೇಶವನ್ನು ಸಿಡಿಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕೆರೆಯ ಉಳಿದಿರುವ ಭಾಗವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
……..ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್