ಕೆರೆನೋಟ- ನೋಟ ೫೮: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ೩
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…
೧೧. ವಿಜಿನಪುರ ಕೆರೆ
ಈ ಕೆರೆ ೩೨೮ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ವಿಜಿನಪುರ ಕೆರೆ ಐಟಿಐ ಫ್ಯಾಕ್ಟರಿಯ ಕಾಂಪೌಂಡ್ ಗೆ ಹೊಂದಿಕೊಂಡಂತಿದೆ. ಏರಿ ಉತ್ತಮವಾಗಿದೆ. ಆದರೆ, ಅಚ್ಚುಕಟ್ಟು ಪ್ರದೇಶ ಮತ್ತು ಉತ್ತರ ಭಾಗದ ಒಳಹರಿವಿನ ಭಾಗದಲ್ಲಿ ವಸತಿಪ್ರದೇಶಗಳು ಅಭಿವೃದ್ಧಿಯಾಗಿವೆ. ಸಿ.ಡಿ.ಪಿ ಪ್ರಕಾರ ಕೆರೆ ಉದ್ಯಾನ ಮತ್ತು ತೆರೆದ ಪ್ರದೇಶವಾಗಿರಬೇಕು. ಸಮಿತಿ ಈ ಕೆರೆಯನ್ನು ಜಲಮೂಲವನ್ನಾಗಿ ಉಳಿಸಿಕೊಂಡು, ಒಳಹರಿವಿನ ಪ್ರದೇಶದಲ್ಲಿ ಗಿಡಗಳನ್ನು ನೆಡಬೇಕು ಎಂದು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೧೨. ಕೆ.ಆರ್.ಪುರಂ ಕೆರೆ
ಈ ಕೆರೆ 308 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ಕೆ.ಆರ್.ಪುರಂ ಕೆರೆ ಹೆಸರಿನಲ್ಲಿ 9.03 ಹೆಕ್ಟೇರ್ ಪ್ರದೇಶದಲ್ಲಿದೆ. ಶ್ಯಾಂಡಿ ಮೈದಾನದ ದಕ್ಷಿಣದಲ್ಲಿ ಈ ಕೆರೆ ಇದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಉದ್ಯಾನ ಮತ್ತು ವಸತಿ ಪ್ರದೇಶವಾಗಬೇಕು. ಸಮಿತಿ ಈ ಕೆರೆಯ ಏರಿಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಲು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೧೩. ಕೋನೇನ ಅಗ್ರಹಾರ ಕೆರೆ
ಈ ಕೆರೆ ೨೯೯ ಸಂಖ್ಯೆಯಾಗಿ ನೋಂದಣಿಯಾಗಿದ್ದು, ೬.೪೮ ಹೆಕ್ಟೇರ್ ಪ್ರದೇಶದಲ್ಲಿದೆ. ವಿಮಾನ ನಿಲ್ದಾಣ ರಸ್ತೆಯ ದಕ್ಷಿಣ ಭಾಗದಲ್ಲಿ ಕೋನೇನ ಅಗ್ರಹಾರ ಕೆರೆ ಇದೆ. ಈ ಕೆರೆಯಲ್ಲಿ ಸಾಕಷ್ಟು ಉಲ್ಲಂಘನೆಯಾಗಿದೆ. ಎಚ್.ಎ.ಎಲ್ ಎಸ್.ಪಿ. ಪುರದ ಅಭಿವೃದ್ಧಿಗಳು ಇಲ್ಲಿ ಆಗುತ್ತಿವೆ. ಸಿ.ಡಿ.ಪಿ ಪ್ರಕಾರ ಉದ್ಯಾನವನ ಮತ್ತು ವಸತಿ ಪ್ರದೇಶ. ಸಮಿತಿ ಈ ಕೆರೆಯ ಉಳಿದ ಭಾಗವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಲು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೧೪. ಕೋಡಿಹಳ್ಳಿ ಕೆರೆ
ಈ ಕೆರೆ ೨೯೭ನೇ ಸಂಖ್ಯೆಯಲ್ಲಿದ್ದು, ೮ ಹೆಕ್ಟೇರ್ ಪ್ರದೇಶದಲ್ಲಿದೆ. ಎಚ್.ಎ.ಎಲ್.ನ ಉತ್ತರಭಾಗದಲ್ಲಿರುವ ಕೋಡಿಹಳ್ಳಿ ಕೆರೆ, ಎಚ್.ಎ.ಎಲ್. ೨ನೇ ಘಟ್ಟಕ್ಕೆ ಹೊಂದಿಕೊಂಡಂತಿದೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಉದ್ಯಾನವನ ಮತ್ತು ವಸತಿ ಪ್ರದೇಶ ನಿರ್ಮಾಣವಾಗಬೇಕು. ಈ ಪ್ರದೇಶವನ್ನು ಅಂತರಿಕ್ಷ ಇಲಾಖೆಗೆ ವಹಿಸಿಕೊಡಲಾಗಿದೆ. ಹೀಗಾಗಿ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
೧೫. ಬಿನ್ನಮಂಗಲ ಕೆರೆ
ಈ ಕೆರೆ ೨೯೫ನೇ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೯.೬೮ ಹೆಕ್ಟೇರ್ ಪ್ರದೇಶದಲ್ಲಿದೆ. ಎಚ್.ಎ.ಎಲ್ ೨ನೇ ಘಟ್ಟದ ಹೊರಸ್ತರ ಈ ಬಿನ್ನಮಂಗಲ ಕೆರೆಯನ್ನು ಸುತ್ತುವರಿದಿದೆ. ಈ ಕೆರೆ ಪ್ರದೇಶದಲ್ಲಿ ಬಿ.ಡಿ.ಎ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಿ.ಡಿ.ಪಿ ಪ್ರಕಾರ ಉದ್ಯಾನವನ ಮತ್ತು ತೆರೆದ ಪ್ರದೇಶವಾಗಿರಬೇಕು. ಸಮಿತಿ ಈ ಕೆರೆಯನ್ನು ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಲು ಸೂಚಿಸಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೧೬. ಚಲ್ಲಘಟ್ಟ ಕೆರೆ
ಈ ಕೆರೆ ೨೯೮ ಸಂಖ್ಯೆಯಾಗಿ ನೋಂದಣಿಯಾಗಿದ್ದು, ೪೯.೬೬ ಹೆಕ್ಟೇರ್ ಪ್ರದೇಶದಲ್ಲಿದೆ. ಚಲ್ಲಘಟ್ಟ ಕೆರೆ ಎಚ್.ಎ.ಎಲ್. ರಸ್ತೆಗೆ ದಕ್ಷಿಣ ಭಾಗ ಮತ್ತು ದೊಮ್ಮಲೂರು ಬಡಾವಣೆಯ ಪೂರ್ವಭಾಗದಲ್ಲಿದೆ; ಈ ಕೆರೆಯ ಏರಿ ಒತ್ತುವರಿಯಾಗಿದ್ದು, ಈ ಕೆರೆಯನ್ನು ಗಾಲ್ಫ್ ಕೋರ್ಸ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಸಿ.ಡಿ.ಪಿ. ಪ್ರಕಾರ ಉದ್ಯಾನವನ ಮತ್ತು ತೆರೆದ ಪ್ರದೇಶ. ಗಾಲ್ಫ್ ಕೋರ್ಸ್ ಆಗಿ ಪರಿವರ್ತನೆಯಾಗುತ್ತಿರುವುದರಿಂದ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
೧೭. ಶ್ರೀನಿವಾಗಿಲು ಕೆರೆ
ಈ ಕೆರೆ ಸಂಖ್ಯೆ ೨೮೮ ಆಗಿ ನೋಂದಣಿಯಾಗಿದ್ದು, ೨೧.೯೩ ಹೆಕ್ಟೇರ್ ಪ್ರದೇಶದಲ್ಲಿದೆ. ಕೋರಮಂಗಲ ವಿಸ್ತರಣೆ ಪ್ರದೇಶದ ಶ್ರೀನಿವಾಗಿಲು ಕೆರೆ ಆಗಿದೆ. ಕೆರೆಯನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದು, ಬಿ.ಡಿ.ಎ. ನಿವೇಶಗಳನ್ನು ಮಾಡಲು ಪ್ರಯತ್ನಿಸುತ್ತಿದೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಇರಬೇಕು. ಸಮಿತಿ ಈ ಕೆರೆಯಲ್ಲಿ ಬಿ.ಡಿಎ. ನಿವೇಶನಗಳನ್ನು ನಿರ್ಮಿಸುವುದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿ ವೃಕ್ಷವನ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
೧೮. ಮೇಸ್ತ್ರಿಪಾಳ್ಯ ಕೆರೆ - ಜಕ್ಕಸಂದ್ರ
ಈ ಕೆರೆ ೨೭೯ನೇ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೪.೫೩ ಹೆಕ್ಟೇರ್ ಪ್ರದೇಶ ಹೊಂದಿದೆ. ಕೋರಮಂಗಲ ಬಡಾವಣೆಯ ಸಮೀಪವಿದ್ದು, ಈ ಕೆರೆಯನ್ನು ಬಹುತೇಕ ಒತ್ತುವರಿ ಮಾಡಿಕೊಳ್ಳಲಾಗಿದೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಬಿ.ಡಿ.ಎ. ಬಹುತೇಕ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿದೆ. ಸಮಿತಿ ಇಲ್ಲಿ ಉಳಿದಿರುವ ಪ್ರದೇಶವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
……..ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್