ದ್ರವತ್ಯಾಜ್ಯಗಳು – ಬಿಸಿ ನೀರು ಸಹ ಶತೃ
ಕಾರ್ಖಾನೆಗಳಿಂದ, ಬೈಜಿಕ ಸ್ಥಾವರಗಳು ಮತ್ತು ಉಷ್ಣ ಸ್ಥಾವರಗಳಿಂದ ಹೊರಬರುವ ಬಿಸಿತ್ಯಾಜ್ಯಗಳೇ ಮಲಿನಕಾರಕಗಳು. ಇವು ನೀರಿನ ಆಕರವನ್ನು ಸೇರಿ, ಅದರ ಉಷ್ಣತೆಯನ್ನು ಹೆಚ್ಚಿಸುತ್ತದೆ. ನೀರಿನ ಉಷ್ಣತೆ ಹೆಚ್ಚಾದಂತೆ ಆಮ್ಲಜನಕವು ನೀರಿನಲ್ಲಿ ಕರಗುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಜೀವಿಗಳ ಒಳಗೆ ನಡೆವ ಜೀವಿರಾಸಾಯನಿಕ ಕ್ರಿಯೆಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಅವುಗಳ ಜೀವನಚಕ್ರವೇ ಏರುಪೇರಾಗುತ್ತದೆ. ಜಲಜೀವಿಗಳ ಅವನತಿ ಪ್ರಾರಂಭವಾಗುತ್ತದೆ.
ಉಷ್ಣತೆಯು ನೇರ ಮಲಿನಕಾರಕವಲ್ಲ. ಆದರೆ ತಾನು ಸೇರುವ ಆಕರಗಳ ಮೂಲ ರಚನೆಗೆ ಧಕ್ಕೆ ಉಂಟುಮಾಡುತ್ತದೆ. ಉಷ್ಣತೆಯ ಮಟ್ಟ ಏರಿದರೆ ಅಥವಾ ಇಳಿದರೆ, ತಕ್ಷಣ ಪರಿಸರದಲ್ಲಿಯೂ ಏರುಪೇರಾಗುತ್ತದೆ. ಕೈಗಾರಿಕೆಗಳಿಂದ ಮತ್ತು ಬೈಜಿಕ ಶಕ್ತಿ ಕೇಂದ್ರಗಳಿಂದ ಬರುವ ತ್ಯಾಜ್ಯಗಳ ಉಷ್ಣದ ಮಟ್ಟ ಅತ್ಯಧಿಕ. ಅದು ವಾತಾವರಣದ ಅಥವಾ ನೀರಿನ ಉಷ್ಣತೆಗಿಂತ ೬ ಸೆಂಟಿಗ್ರೇಡ್ನಿಂದ ೧೦ಸೆಂಟಿಗ್ರೇಡ್ವರೆಗೆ ಹೆಚ್ಚಿರುತ್ತದೆ.
ಜೀವಿರಾಸಾಯನಿಕ ಕ್ರಿಯೆಯು ಉಷ್ಣತೆಯನ್ನು ಆಧರಿಸಿದೆ. ಜೀವಿಗಳ ಸಂತಾನೋತ್ಪತ್ತಿಯ ದರವನ್ನು, ಪಚನ ಕ್ರಿಯೆಯ ವೇಗವನ್ನು, ಉಸಿರಾಟವನ್ನು ನಿಯಂತ್ರಿಸುತ್ತದೆ. ಉಷ್ಣತೆಯು ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವನ್ನು, ಪಿಎಚ್ನ್ನೂ ಬದಲಾಯಿಸುತ್ತದೆ. ಮೀನುಗಳು ನಿಧಾನವಾಗಿ ನಡೆವ ಉಷ್ಣ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತವೆ. ಆದರೆ ಒಮ್ಮೆಲೇ ನಡೆವ ಬದಲಾವಣೆಗಳನ್ನು ತಾಳಿಕೊಳ್ಳಲಾರವು. ಅವುಗಳ ಉಪಾವಚಯ ಕ್ರಿಯೆಯ ದರವು ಹೆಚ್ಚುತ್ತದೆ. ಆಮ್ಲಜನಕದ ಅಗತ್ಯವೂ ಹೆಚ್ಚುತ್ತದೆ. ಉಸಿರಾಟದ ವ್ಯವಸ್ಥೆ ಮತ್ತು ನರಮಂಡಲವು ದುರ್ಬಲವಾಗಿ ಸಾಯುತ್ತವೆ. ಉಷ್ಣದ್ರವದಿಂದಾಗಿ ಮೀನುಗಳ ಆಹಾರ ನಾಶವಾಗುತ್ತದೆ. ಅದರಿಂದಲೂ ಮೀನುಗಳಿಗೆ ಆಹಾರ ಸಿಗದೆ ಸಾವನ್ನಪ್ಪುತ್ತವೆ.
ಸಾಮಾನ್ಯವಾಗಿ, ಉಷ್ಣತೆ ಕಡಿಮೆ ಇದ್ದಾಗ ಆಮ್ಲಜನಕ ಹೆಚ್ಚಿರುತ್ತದೆ. ಅಂದರೆ ೦ ಸೆಂಟಿಗ್ರೇಡ್ನಲ್ಲಿ ೧೪.೬ ಪಿಪಿಎಮ್ನಷ್ಟು ಆಮ್ಲಜನಕವಿರುತ್ತದೆ. ಅದೇ ೩೫ ಸೆಂಟಿಗ್ರೇಡ್ನಲ್ಲಿ ೭.೧ ಪಿಪಿಎಮ್ನಷ್ಟು ಆಮ್ಲಜನಕವಿರುತ್ತದೆ. ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಸೇವಿಸುತ್ತಾ ಜಲಜೀವಿಗಳು ಸಾರಾಗವಾಗಿ ಉಸಿರಾಟ ಕ್ರಿಯೆಯನ್ನು ನಡೆಸುತ್ತಿರುತ್ತವೆ. ಆಮ್ಲಜನಕ ಕಡಿಮೆಯಾದರೆ ಅವಾಯುಜೀವಕ ಸ್ಥಿತಿ ಏರ್ಪಡುತ್ತದೆ. ಉಷ್ಣತೆಯು ಹೆಚ್ಚಿದಂತೆ ಪಾಚಿಯ ಬೆಳವಣಿಗೆ ಹೆಚ್ಚುತ್ತದೆ. ಇದರಿಂದ ಯುಟ್ರೋಪಿಕರಣಕ್ಕೆ ಎಡೆಮಾಡಿಕೊಡುತ್ತದೆ. ೪೦ ಸೆಂಟಿಗ್ರೇಡ್ ದಾಟಿದಂತೆ ರೋಗಕಾರಕಗಳು ದ್ವಿಗುಣಗೊಳ್ಳುತ್ತವೆ. ಇವು ಜಲಜೀವಿಗಳಲ್ಲಿ ಸಾಂಕ್ರಾಮಿಕವಾಗಿ ರೋಗಗಳನ್ನು ಹರಡುತ್ತವೆ. ಅವುಗಳ ಸಮೂಹ ಸಾವಿಗೆ ಕಾರಣವಾಗುತ್ತದೆ. ೪೫ಸೆಂಟಿಗ್ರೇಡ್ ದಾಟಿದಂತೆ, ನೀರಾವಿಯ ಒತ್ತಡ ಹೆಚ್ಚಿ, ನೀರಿನ ಸ್ನಿಗ್ಧತೆ ಕಡಿಮೆಯಾಗುತ್ತದೆ. ಆಗ ತೇಲುಕಣಗಳು ತಳದಲ್ಲಿ ವೇಗವಾಗಿ ಸಂಗ್ರಹವಾಗುವುದರಿಂದ ಜಲಜೀವಿಗಳ ಆಹಾರಕ್ಕೆ ಕೊರತೆ ಉಂಟಾಗುತ್ತದೆ.
ವಿದ್ಯುತ್ಚ್ಛಕ್ತಿಗೆ ಹಕ್ಕೊತ್ತಾಯ ಹೆಚ್ಚಿದಷ್ಟೂ ಉಷ್ಣ ಮಾಲಿನ್ಯವು ಹೆಚ್ಚುತ್ತಾ ಹೋಗುತ್ತದೆ. ಕೈಗಾರೀಕೀಕರಣ ಅಧಿಕವಾದಷ್ಟೂ, ತ್ಯಾಜ್ಯದ್ರವಗಳು ನೀರನ್ನು ಸೇರುವ ಪ್ರಮಾಣ ಏರುತ್ತದೆ. ಕೃಷಿಯಲ್ಲಿ ಆಧುನೀಕರಣವಾದಷ್ಟೂ, ಅಂದರೆ ಯಾಂತ್ರೀಕರಣ ಮತ್ತು ರಾಸಾಯನಿಕಗಳ ಬಳಕೆ ಅಧಿಕವಾದಷ್ಟೂ, ನೀರ ಮೇಲಿನ ಒತ್ತಡ ಅಧಿಕವಾಗುತ್ತದೆ.
ಮನೆಗಳಿಂದ ಹೊರಬಂದ ದ್ರವಗಳೂ ಸಹಾ ತ್ಯಾಜ್ಯಗಳೇ ಆಗಿವೆ. ಸ್ಲರಿ ಹಾಗೂ ಆವಿಯ ರೂಪದಲ್ಲಿರುವ ತ್ಯಾಜ್ಯ ಅನಿಲಗಳನ್ನೂ ಸಹಾ ದ್ರವತ್ಯಾಜ್ಯಗಳೆನ್ನುತ್ತಾರೆ. ಇವು ಜೈವಿಕ ಪದಾರ್ಥಗಳು ಅಥವಾ ಅಜೈವಿಕ ಪದಾರ್ಥಗಳಾಗಿರಬಹುದು. ಆಮ್ಲೀಯ ಅಥವಾ ಕ್ಷಾರೀಯವಾಗಿರಬಹುದು.
ದ್ರವ ತ್ಯಾಜ್ಯದ ಮಲಿನತೆಯನ್ನು; ಅದರಲ್ಲಿರುವ ಘಟಕಗಳು; ವಿಷಯುಕ್ತತೆ; ಅವೆಲ್ಲದರ ಪ್ರಮಾಣ; ಇದನ್ನೆಲ್ಲಾ ಸ್ವೀಕರಿಸುವ ಜಲ ಆಕರಗಳ ಸಾಮರ್ಥ್ಯಗಳನ್ನು ಅವಲಂಬಿಸಿ ನಿರ್ಧರಿಸುತ್ತಾರೆ. ಇಂತಹ ಮಲಿನತೆಗೆ ಶುಲ್ಕವನ್ನು ವಿಧಿಸುತ್ತಾರೆ. ಶುಲ್ಕವು ಸರ್ವಕಾಲಕ್ಕೂ ಆಗಿರಬಹುದು, ಜಲ ಆಕರಗಳು ಅವನತಿಯಾಗುತ್ತಿರುವ ರೀತಿಯನ್ನು ಅವಲಂಬಿಸಿ ಸಹಾ ವಿಧಿಸಲಾಗುತ್ತದೆ. ತ್ಯಾಜ್ಯಗಳಲ್ಲಿರುವ ಮಲಿನಕಾರಿಗಳ ಮಿತಿಯನ್ನು ಅಳೆಯುತ್ತಾರೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕೃತವಾಗಿ ನೀರಿಗೆ ಬಿಡಬಹುದಾದ ಪ್ರಮಾಣವನ್ನು ನಿಗದಿಪಡಿಸುತ್ತಾರೆ. ನೀರಾವರಿಗೆ ಬಳಸುವ ಮತ್ತು ಗೃಹ ಬಳಕೆಯ ನೀರಿನ ಪ್ರಮಾಣಕಗಳು ಬೇರೆಬೇರೆಯಾಗಿರುತ್ತವೆ. ಮುಖ್ಯವಾಗಿ ನೀರಿನ ಆಕರಗಳ ಗಾತ್ರ, ಹರಿವು, ಸ್ವಯಂ-ಶುದ್ಧೀಕರಣದ ಸಾಮರ್ಥ್ಯ, ಅದರಲ್ಲಿರುವ ಜೀವವೈವಿಧ್ಯಗಳನ್ನು ಅವಲಂಬಿಸಿ ಪ್ರಮಾಣಕಗಳ ಗರಿಷ್ಠ ಮಿತಿಯನ್ನು ನಿಗದಿ ಮಾಡುತ್ತಾರೆ. ಹೀಗೆ ಸಾಗರಗಳಲ್ಲಿ, ಸಮುದ್ರಗಳಲ್ಲಿ ಮತ್ತು ನದಿಗಳಲ್ಲಿ ಹರಿಸುವ ಮಲಿನಕಾರಿಗಳ ಗರಿಷ್ಠ ಮಿತಿ ಬೇರೆಬೇರೆಯಾಗಿರುತ್ತದೆ.
ಜಲಮಾಲಿನ್ಯದ ನಿಯಂತ್ರಣ ಹೇಗೆ?
ಕಳೆದ ಎರಡು ದಶಕಗಳ ಹಿಂದಿನವರೆಗೂ ತ್ಯಾಜ್ಯ ಜಲದಲ್ಲಿರುವ ಮಲಿನಕಾರಕಗಳನ್ನು ಶುದ್ಧೀಕರಿಸಲು ಸ್ವ-ಶುದ್ಧೀಕರಣ ಸಾಮರ್ಥ್ಯ ಸಾಕಾಗಿತ್ತು. ಈಗ ನೀರಿನಲ್ಲಿ ಪೋಷಕಾಂಶಗಳು ಹೆಚ್ಚುತ್ತಿವೆ. ಶುದ್ಧೀಕರಣ ಮಾಡುತ್ತಿದ್ದ ಬ್ಯಾಕ್ಟೀರಿಯಾಗಳು ಕಡಿಮೆಯಾಗಿವೆ. ಹೀಗಾಗಿ ಕೃತಕ ಶುದ್ಧೀಕರಣದ ಅವಶ್ಯಕತೆ ಉಂಟಾಗಿದೆ. ಕೃತಕ ಶುದ್ಧೀಕರಣದಲ್ಲಿ ಮೊದಲು ದೊಡ್ಡ ಕಸಗಳನ್ನು, ಆಮೇಲೆ ಸಣ್ಣ ಕಸಗಳನ್ನು ಬೇರ್ಪಡಿಸುತ್ತಾರೆ. ಅಲ್ಲಿಂದ ನೀರು ದೊಡ್ಡ ತೊಟ್ಟಿಗಳಿಗೆ ಬರುತ್ತದೆ. ಇಲ್ಲಿರುವ ಬ್ಯಾಕ್ಟೀರಿಯಾಗಳು ಕೊಳಚೆ ನೀರಿನಲ್ಲಿರುವ ತೇಲುಕಣಗಳನ್ನು ಮತ್ತು ಕರಗಿದ ಪದಾರ್ಥಗಳನ್ನು ತಮ್ಮ ಆಧಾರ ವಸ್ತುಗಳನ್ನಾಗಿ ಮಾಡಿಕೊಳ್ಳುತ್ತವೆ. ಆಧಾರ ವಸ್ತುಗಳೊಂದಿಗೆ ಸೂಕ್ಷ್ಮಜೀವಿಗಳೂ ಸೇರಿ ಗಂಟುಗಳಂತೆ ಕಾಣುತ್ತವೆ. ತೂಕ ಹೆಚ್ಚಿದ ಈ ಗಂಟುಗಳು ನೀರಿನ ತಳ ಸೇರುತ್ತವೆ. ಈ ಕ್ರಿಯೆ ಸುಲಭವಾಗಲು ಪಂಪ್ ಮೂಲಕ ನೀರಿಗೆ ಗಾಳಿಯನ್ನು ಸೇರಿಸುತ್ತಾರೆ. ಸೂಕ್ಷ್ಮ ಜೀವಿಗಳು ಹೆಚ್ಚಿದ್ದರೆ, ಈ ಕೆಲಸ ವೇಗವಾಗಿ ಆಗುತ್ತದೆ. ಅದಕ್ಕಾಗಿ ಸೂಕ್ಷ್ಮಜೀವಿಗಳನ್ನು ತೊಟ್ಟಿಗೆ ಮಿಶ್ರ ಮಾಡುತ್ತಾರೆ. ಈ ತೊಟ್ಟಿಗೆ ಹಾಯಿಸಿದ ಅವಾಯುಜೀವಕ ಬ್ಯಾಕ್ಟೀರಿಯಾಗಳ ಮೂಲಕ ಜೈವಿಕ ಪದಾರ್ಥಗಳನ್ನು ವಿಭಜಿಸುತ್ತಾರೆ.
ಈ ವಿಭಜನೆಯಿಂದ ಮೀಥೇನ್ ಅನಿಲವು ಬಿಡುಗಡೆಯಾಗುತ್ತದೆ. ಇದನ್ನು ಶಕ್ತಿಯ ಆಕರವಾಗಿ, ಅಂದರೆ ಅಡುಗೆಯ ಅನಿಲವಾಗಿ ಬಳಸಿಕೊಳ್ಳಬಹುದು. ಉಳಿದ ಕಣಕವನ್ನು ಮರಳಿನ ಮೇಲೆ ಹಾಯಿಸಿ ಒಣಗಿಸುತ್ತಾರೆ. ಶುದ್ಧೀಕರಣ ಸಾಮರ್ಥ್ಯವನ್ನು ಸುಧಾರಿಸಲು ರಾಸಾಯನಿಕ ಅವಕ್ಷೇಪನ (ಪ್ರಸಿಪಿಟೇಶನ್) ಕ್ರಿಯೆಯನ್ನು ಅನುಸರಿಸುತ್ತಾರೆ. ಇದರಿಂದ ಫಾಸ್ಪೇಟ್ ಹಾಗೂ ಸಲ್ಫೇಟ್ಗಳನ್ನು ತೊಡೆದುಹಾಕಲಾಗುತ್ತದೆ. ಇದೇ ರೀತಿ ಕ್ಲೋರಿನೀಕರಣ, ವಿಕಿರಣ ಸಂಸ್ಕರಣ, ಉಷ್ಣ ಸಂಸ್ಕರಣ ಮತ್ತು ಓಜೋನೀಕರಣಗಳಿಂದಲೂ ಸಹ ತ್ಯಾಜ್ಯಜಲದ ಶುದ್ಧತೆಯನ್ನು ಹೆಚ್ಚಿಸಬಹುದು.
ಚಿತ್ರ-ಲೇಖನ: ಪೂರ್ಣಪ್ರಜ್ಞ, ಬೇಳೂರು