ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮುಖ್ಯ ಪ್ರಾಣ

ಬನ್ನಿ ಮೋಡಗಳೆ ಬನ್ನಿ ನಮ್ಮೆಡೆಗೆ

ತೋರಿ ಸ್ವಲ್ಪ ಕರುಣ

ಮಳೆಯ ಹನಿಗಳ ತುಂಬಿ ಒಡಲೊಳಗೆ

ಉಳಿಸಿ ಜಗದ ಪ್ರಾಣ

 

ಖಾಲಿ ಹೃದಯದಲಿ ಓಡುವಿರೇಕೆ

ಧಗೆಯ ಬೇಗೆ ಇಲ್ಲಿ

ಒಲವು ಸ್ನೇಹವಾ ತೋರಿ ಭುವಿಯೆದೆಗೆ

ಸುರಿದು ಹೋಗಿ ನಿಲ್ಲಿ

 

ಸರಿವ ಸರಿತೆ ಸೋತು ಬರಿದಿನ್ನು

ಹನಿಹನಿಗೆ ಕಾಯ್ವ ತುಡಿತ

ಮುಗಿಲತ್ತ ಚಿತ್ತ ಮೇಘಗಳ ಸುತ್ತ

ಅರಿಯದೇ ಹೃದಯಬಡಿತ

 

ಹಸಿರ ಹೆಸರಿಲ್ಲ ನಿಮ್ಮ ಉಸಿರಿಲ್ಲ

ಅರಿತೆನು ಒಡಲ ನೋವ

ಧಗಧಗಿಸಿ ಸುಡುತಿಹುದು ಜಗವು

ನರಳಿದೆ ಜೀವ ಭಾವ

 

ಒಂದೊಂದು ಗಿಡವ ಒಬ್ಬೊಬ್ಬ ನೆಡಲು

ನಾಡೆಲ್ಲ ಹಸಿರ ಬನವು

ಮೇಧಿನಿಯ ಮಡಿಲು ತಂಪೊರೆವ ಒಡಲು

ಸುರಿಯುವುದು ಹರ್ಷ ಹೊನಲು

 

ಸಂದೇಶವಿದನು ಬರೆಯುವೆನು ಮೇಘಗಳ

ಎದೆಯಲ್ಲಿ ಸಾರಿ ಸಾರಿ

ನೀ ನಡೆವ ಮುಗಿಲ ಅಡಿಯಲ್ಲಿ ಬಿತ್ತರಿಸು

ಬಿಸಿಗಾಳಿಯಲ್ಲಿ ಸೇರಿ

 

ಜಲ ನಮ್ಮ ಪ್ರಾಣ ನೆಲ ನಮ್ಮ ಪ್ರಾಣ

ಉಸಿರುಸಿರು ಜಗದ ಪ್ರಾಣ

ನೀರಿಲ್ಲದೇ ಇಲ್ಲ ಬ್ರಹ್ಮಾಂಡವಿಲ್ಲ

ನೀರೆಮ್ಮ ಮುಖ್ಯ ಪ್ರಾಣ

ಗಾಯತ್ರೀ ರಾಘವೇಂದ್ರ ,ಶಿರಸಿ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*