ಕೆರೆನೋಟ – ನೋಟ ೪೮: ಸಂರಕ್ಷಣೆ ಪ್ರಾಧಿಕಾರ ಉಳಿಸುವುದೇ ಕೆರೆಗಳನ್ನು?
ಬೆಂಗಳೂರು ಸೇರಿದಂತೆ ರಾಜ್ಯದ ಕೆರೆಗಳನ್ನು ಉಳಿಸುವ ಸಾಕಷ್ಟು ಪ್ರಯತ್ನಗಳು ಆಗಾಗ್ಗೆ ಅಂದರೆ ಜನರು ಎಚ್ಚೆತ್ತುಕೊಂಡಾಗ ಆಗುತ್ತಿರುತ್ತವೆ. ನಂತರ, ಅವು ಮೂಲೆ ಸೇರುತ್ತವೆ. ಈಗ ಅಂತಹದ್ದೇ ಪ್ರಯತ್ನವಾಗಿ, ಕಾನೂನಾತ್ಮಕ ಅಧಿಕಾರ ಎಂಬ ಹಲ್ಲನ್ನೂ ನೀಡಿ, ಕೆರೆ ಸಂರಕ್ಷಣೆ ಪ್ರಾಧಿಕಾರವನ್ನೂ ರಚಿಸಲಾಗಿದೆ. ಆದರೆ, ಈವರೆಗೆ ಎಷ್ಟು ಕೆರೆಗಳು ಒತ್ತುವರಿ ಅಥವಾ ಅಭಿವೃದ್ಧಿಯ ಪಥವನ್ನು ಕಂಡಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಕೆರೆಯನ್ನು ಎಷ್ಟು ಉಳಿಸಬೇಕು, ಹೇಗೆ ಉಳಿಸಬೇಕು, ಎಲ್ಲಿ ಯಾವ ಹೈಟೆಕ್ ಸೌಲಭ್ಯ ನೀಡಬೇಕು, ಯಾರಿಗೆ ನೀಡಬೇಕು ಎಂಬ ಆಲೋಚನೆ, ಕಡತ ಪ್ರಕ್ರಿಯೆಯಲ್ಲೇ ಎಲ್ಲವೂ ನಿರತವಾಗಿವೆ.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ರಾಜ್ಯದಲ್ಲಿ ರಚನೆಯಾಗಿ ಅದಕ್ಕೆ ಕಾನೂನು ಅಧಿಕಾರವನ್ನೂ ನೀಡುವ ಮೂಲಕ, ಹಿಂದಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರ ನೇಪಥ್ಯಕ್ಕೆ ಸರಿದಿದೆ. ಏಕೆಂದರೆ, ಈಗಲೂ ಇದನ್ನು ವಿಸರ್ಜಿಸಲಾಗಿಲ್ಲ. ಹೊಸ ಪ್ರಾಧಿಕಾರಕ್ಕೆ ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸುವ ಅವಕಾಶವನ್ನೂ ಒದಗಿಸಲಾಗಿದೆ. ಆದರೆ, ಎಷ್ಟು ಕೆರೆಗಳನ್ನು ಉಳಿಸುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
“೧೯೭೦ರಲ್ಲಿದ್ದ ೨೦೭ ಕೆರೆಗಳು ೨೦೧೦ರ ವೇಳೆಗೆ ಕೆರೆಗಳ ಆ ಸಂಖ್ಯೆ ೯೩ಕ್ಕೆ ಇಳಿದಿದೆ. ಇದು ಬೃಹತ್ ಬೆಂಗಳೂರಿನ ಲೆಕ್ಕಾಚಾರ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಎಕೊಲಾಜಿಕಲ್ ಸೈನ್ಸ್ನ ಟಿ.ವಿ. ರಾಮಚಂದ್ರ ಅವರು ವಿಷಾದ ವ್ಯಕ್ತಪಡಿಸುತ್ತಾರೆ. ಮಡಿವಾಳ, ಬೆಳ್ಳಂದೂರು, ಹೊರಮಾವು, ಅರಕೆರೆ, ಹಲಸೂರು, ಹೆಬ್ಬಾಳ ಕೆರೆಗಳಲ್ಲಿ ಜೊಂಡುಗಳೇ ತುಂಬಿದ್ದು, ಅದರ ಕೆಳಗೆ ಒಳಚರಂಡಿ ತ್ಯಾಜ್ಯವಿದೆ. ನಗರದಲ್ಲಿರುವ ಶೇ.೫೦ರಷ್ಟು ಕೆರೆಗಳು ಒತ್ತುವರಿಯಾಗಿವೆ ಎಂಬುದು ೨೦೦೭ರಲ್ಲಿ ತಾವು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂತು. ಶೇ.೭೨ರಷ್ಟು ಕೆರೆಗಳು ನಾಶವಾಗಿವೆ. ನಗರೀಕರಣದ ಸಂದರ್ಭದಲ್ಲಿ ಪರಿಸರ ಹಾಗೂ ಜಲಮೂಲಗಳಿಗೆ ಯಾರೂ ಪ್ರಾಮುಖ್ಯವನ್ನೇ ನೀಡಿಲ್ಲ. ಇದೇ ಪ್ರಮಾಣದಲ್ಲಿ ಬೆಂಗಳೂರು ತನ್ನ ಜಲಮೂಲವನ್ನು ಕಳೆದುಕೊಳ್ಳುತ್ತಾ ಹೋದರೆ, ೨೦೨೦ರ ವೇಳೆಗೆ ಕೆರೆಗಳು, ಉದ್ಯಾನಗಳು, ತೆರೆದ ಪ್ರದೇಶಗಳು ಕಾಣಸಿಗುವುದು ಅನುಮಾನ ಎಂದು ರಾಮಚಂದ್ರ ಅವರು ಹೇಳುತ್ತಾರೆ.
ಹೊಸ ಪ್ರಾಧಿಕಾರದಲ್ಲಿ ೧೬ ಸದಸ್ಯರ ಮಂಡಳಿ ಇದ್ದು, ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿರುತ್ತಾರೆ. ಕಾರ್ಯಕಾರಿ ಸಮಿತಿಯಲ್ಲಿ ಸರ್ಕಾರ ನಾಮನಿರ್ದೇಶನ ಮಾಡುವ ಮೂವರು ಪರಿಸರ ತಜ್ಞರು ಇರುತ್ತಾರೆ. ಈ ಪ್ರಾಧಿಕಾರದ ಕಾರ್ಯವ್ಯಾಪ್ತಿ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ಆದರೆ, ಬೆಂಗಳೂರಿಗೆ ಹೊಸ ಪ್ರಾಧಿಕಾರ, ಅಂದರೆ ಪ್ರತ್ಯೇಕ ಪ್ರಾಧಿಕಾರ ತರುವ ಯೋಜನೆ ಇದ್ದರೂ ಅದನ್ನು ಕಾರ್ಯಗತ ಮಾಡದೆ ವಿಳಂಬ ಧೋರಣೆಯಲ್ಲೇ ಇದ್ದಾರೆ. ಹೀಗಾಗಿ, ಬೆಂಗಳೂರು ಹೊರತುಪಡಿಸಿದಂತೆ, ಕೆರೆಗಳನ್ನು ಉಳಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಬೆಂಗಳೂರಿಗಾಗಿ ಹೊಸ ಪ್ರಾಧಿಕಾರ ಬರುವುದು ಇನ್ನಾವಾಗಲೋ ಜನಪ್ರತಿನಿಧಿಗಳೇ ಹೇಳಬೇಕು.
ಎ.ಟಿ. ರಾಮಸ್ವಾಮಿ ವರದಿ, ಬಾಲಸುಬ್ರಮಣಿಯನ್ ವರದಿಯನ್ನೇ ಧಿಕ್ಕರಿಸುವ ರಾಜಕಾರಣಿಗಳೇ ಈ ಪ್ರಾಧಿಕಾರದ ರಚನೆ ಮಾಡಬೇಕು. ಹೈಕೋರ್ಟ್ ಆದೇಶಗಳನ್ನೇ ಪಾಲಿಸದ ಅಧಿಕಾರಿಗಳೇ ಈ ಪ್ರಾಧಿಕಾರದಲ್ಲಿರುತ್ತಾರೆ. ಅಂದರೆ ಇವರಿಂದ ಕೆರೆಗಳ ಸಂರಕ್ಷಣೆ ಸಾಧ್ಯವೆ? ನಿಜ, ನಮ್ಮಲ್ಲಿ ಯಾವ ಕೆಲಸ ಆಗಬೇಕಾದರೂ ರಾಜಕಾರಣಿಗಳು ಹಾಗೂ ಅನುಷ್ಠಾನಗೊಳಿಸುವ ಅಧಿಕಾರಿಗಳೇ ಬೇಕು. ಅದೇ ವ್ಯವಸ್ಥೆ. ಆದರೆ, ಈ ಪ್ರಾಧಿಕಾರಗಳ ರಚನೆ ಕೇವಲ ಕಣ್ಣೊರೆಸುವ ತಂತ್ರಕ್ಕಷ್ಟೇ ಸೀಮಿತವಾಗಬಾರದು. ಏಕೆಂದರೆ, ಜನರ ಹೋರಾಟದ ಸಂದರ್ಭದಲ್ಲಿ ಇಂತಹ ಕಾನೂನು, ಪ್ರಾಧಿಕಾರ ಮಾಡುತ್ತೇವೆ ಎಂದು ಅವರನ್ನು ಸಾಗಿಹಾಕಲಾಗುತ್ತದೆ. ನಂತರದ ಒಂದಷ್ಟು ವರ್ಷ ಕಳೆದುಹೋಗುತ್ತದೆ. ಸರ್ಕಾರ ಬದಲಾಗುತ್ತದೆ. ಅವರು ಮಾಡಲಿಲ್ಲ ನಾವು ಮಾಡುತ್ತೇವೆ ಎನ್ನುತ್ತಾರೆ. ನಾವು ಮಾಡಿದ್ದನ್ನು ಅವರು ತೆಗೆಯುತ್ತಿದ್ದಾರೆ ಎನ್ನುತ್ತಾರೆ ಮತ್ತೊಬ್ಬರು. ಹೀಗೇ ಕಾಲ ಕಳೆಯುವ ಪ್ರಕ್ರಿಯೆಯೇ ದಶಕಗಳಿಂದ ನಡೆದು ಬಂದಿದೆ. ಇದು ಬದಲಾದರೆ ಮಾತ್ರ ಜಲಮೂಲಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹೀಗೇ ವರ್ಷಗಟ್ಟಲೆ ಬರೆಯಬೇಕು, ಜನರು ವರ್ಷವರ್ಷವೂ ಹೋರಾಟ ಮಾಡಬೇಕು. ಜಲಮೂಲಗಳು ಮಾತ್ರ ಅವನತಿಯ ಹಾದಿಯನ್ನು ಸವಿಸುತ್ತಲೇ ಇರುತ್ತವೆ. ಹೀಗಾಗಬಾರದು….
ಚಿತ್ರ-ಲೇಖನ: ಕೆರೆ ಮಂಜುನಾಥ್