ಹನಿಬಿಂದು
ಅಗೆದಗೆದು ಬಗೆದು
ಎದೆನೆಲವ ಸೀಳಿದರೂ
ಅಂತರಂಗವು ಖಾಲಿ
ಹನಿ ಕಂಬನಿಯೂ ಉಳಿದಿಲ್ಲ
ಅಗ್ನಿಯುಂಡೆಯಂತೆ ಸುಡುತಿದೆ
ಧಗಧಗಿಸಿ ಸಂಕುಲವ
ಆರಿಸುವುದಾದರೂ ಹೇಗೆ
ಹನಿ ಹನಿಯೂ ತುಟ್ಟಿ
ಹೆಜ್ಜೆಯಿಡುವುದಾದರೂ ಎಲ್ಲಿ
ಜಗವೆಲ್ಲ ಕಾದ ಹೆಂಚು
ಗಿಡ ಮರವೆಲ್ಲ ಗೋಡೆಯ ಮೇಲಿನ
ಇತಿಹಾಸ ಚಿತ್ರ
ಚಿನ್ನ ವಜ್ರಗಳು ಯಾರಿಗೆ ಬೇಕಾಗಿದೆ
ಚೋರ ಕಂಟಕ ವಿರುವುದು
ಭದ್ರಪಡಿಸಿದ
ಆಪತ್ ಜಲಕ್ಕೆ
ಇಲ್ಲಿ ಮಾರಲಾಗುತ್ತದೆ ಜೀವ ಜಲವ
ಬಿಂದುವಿನ ಲೆಕ್ಕದಲ್ಲಿ
ಬರಹ ಫಲಕದ ಮುಂದೆ
ಕೋಟಿ ರಿಕ್ತ ಹಸ್ತ
ಜಲವಿಲ್ಲದ ಭೂಮಿ
ಉಸಿರಿಲ್ಲದ ಜೀವದಂತೆ
ಅರಿತು ಎಚ್ಚೆತ್ತರೆ
ಉಳಿದೀತು ವಂಶವೃಕ್ಷ
ಗಾಯತ್ರೀ ರಾಘವೇಂದ್ರ, ಶಿರಸಿ