ಬತ್ತಿದ ಕೊಳವೆ ಬಾವಿಗಳಿಗೆ ಜೀವ ತುಂಬಿಸುವಲ್ಲಿ ಒಂದು ಪ್ರಯತ್ನ
ರಾಜ್ಯದಲ್ಲಿ ಚಿನ್ನ, ರೇಷ್ಮೆ, ಹಾಲು ಮತ್ತು ತರಕಾರಿಗಳಿಗೆ ಸಪ್ರಸಿದ್ಧವಾದ ಜಿಲ್ಲೆ ಕೋಲಾರ. ಹೆಚ್ಚು ಕೆರೆಗಳನ್ನು ಹೊಂದಿರುವ ನಾಡು ಹಾಗು ಕಲ್ಯಾಣಿಗಳ ಬೀಡು. ವಾರ್ಷಿಕ ಸರಾಸರಿ ಮಳೆಯ ಪ್ರಮಾಣ ಹಿಂದೆಯೂ ಕೂಡ ೭೩೦ ಮಿ.ಮೀ ನಷ್ಟಿತ್ತು, ಕೆರೆ-ಕುಂಟೆಗಳು ತುಂಬುತ್ತಿದ್ದವು. ಆದರೆ ಈ ದಿನಗಳಲ್ಲಿ ಕೆರೆಕಟ್ಟೆಗಳು ತುಂಬುತ್ತಿಲ್ಲ. ಪರಿಣಾಮವಾಗಿ ಈ ಜಿಲ್ಲೆಯಲ್ಲಿ ಅಂತರ್ಜಲ ೧೫೦೦ ರಿಂದ ೧೬೦೦ ಅಡಿ ಆಳಕ್ಕೆ ಕುಸಿದಿದೆ. ಈ ಜಿಲ್ಲೆಯಲ್ಲಿ ವರ್ಷವಿಡೀ ಹರಿಯುವ ಯಾವುದೇ ನೀರಿನ ಮೂಲಗಳಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಹುಟ್ಟಿ ಹರಿಯುತ್ತಿದ್ದ ಪಾಲರ್, ಪಾಪಗ್ನಿ, ಪೆನ್ನಾರ್, ದಕ್ಷಿಣ ಪೀನಾಕಿನಿ ಮತ್ತು ಉತ್ತರ ಪೀನಾಕಿನಿ ಈ ಪಂಚ ನದಿಗಳು ಬತ್ತಿವೆ. ಹಿಂದೆ ಈ ನದಿಗಳಿಂದ ತುಂಬಿ ಹರಿಯುತ್ತಿದ್ದ ನಾಲೆ-ಹಳ್ಳಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಕಾಲ ದೂರ ಉಳಿದಿಲ್ಲ ಎನ್ನುತಾರೆ ಬುದ್ಧಿ ಜೀವಿಗಳು.
ಜಿಲ್ಲೆಯಲ್ಲಿ ಶೇಖಡ ೭೦ರಷ್ಟು ಜನರ ಕಸುಬು ವ್ಯವಸಾಯವೇ ಆಗಿದ್ದು, ಕೃಷಿಗಾಗಿ ಅಂತರ್ಜಲವನ್ನು ನೇರವಾಗಿ ಅವಲಂಬಿಸಿರುವುದು ಹಲವಾರು ತೊಂದರೆಗಳಿಗೆ ಎಡೆ ಮಾಡಿಕೊಟ್ಟಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ, ಮೇವಿನ ಉತ್ಪಾದನೆಯಲ್ಲಿ ಕುಸಿತ, ಸಂಪೂರ್ಣವಾಗಿ ಬರಿದಾದ ಕೆರೆಗಳು, ಪಾತಳಕ್ಕೆ ಜಾರಿದ ಅಂತರ್ಜಲ, ಪರಿಸರದಲ್ಲಿ ವ್ಯತ್ಯಾಸ, ಸಾಮೂಹಿಕ ಭೂ ಪ್ರದೇಶಗಳ ಮೇಲೆ ಅತಿಕ್ರಮಣ – ಹೀಗೆ ಹಲವಾರು ತೊಂದರೆಗಳು. ಈ ತೊಂದರೆಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿತಗೊಳಿಸಬೇಕೆಂಬ ನಿಟ್ಟಿನಲ್ಲಿ, ಕೋಲಾರ ಜಿಲ್ಲಾಡಳಿತ ಮನಸ್ಸು ಮಾಡಿದೆ. “ಹಲವಾರು ಪರಿಸರ-ಪೂರಕ ಮಾರ್ಗೋಪಾಯಗಳನ್ನು ಅನುಸರಿಸಿ, ವಿವಿಧ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ, ಗ್ರಾಮಸ್ಥರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಸಫಲವಾಗಿದ್ದೇವೆ”, ಎನ್ನುತ್ತಾರೆ ಕೋಲಾರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ತ್ರಿಲೋಕ ಚಂದ್ರ.
ಕೋಲಾರ ತಾಲ್ಲೂಕಿನಲ್ಲಿ ಒಟ್ಟು ೮೩೮ ಕೊಳವೆ ಬಾವಿಗಳನ್ನು ಕುಡಿಯುವ ನೀರಿನ ಸರಬರಾಜಿಗಾಗಿಯೇ ಸರ್ಕಾರದ ವತಿಯಿಂದ ಕೊರೆಯಲಾಗಿದೆ. ಇವುಗಳಲ್ಲಿ ಕಳೆದ ವರ್ಷ ಸುಮಾರು ೬೨೯ ಕೊಳವೆ ಬಾವಿಗಳು ನೀರು ನೀಡುತ್ತಿದ್ದರೆ, ೨೦೯ ಬೋರುಗಳು ನೀರು ನೀಡುವುದನ್ನು ನಿಲ್ಲಿಸಿವೆ. ಕೆಲವು ಕೊಳವೆ ಬಾವಿಗಳು ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಮಾತ್ರ ನೀರು ನೀಡುತ್ತಿವೆ. ಇವುಗಳಿಗೆ ಹೇಗಾದರು ಸರಿ, ನೀರು ಮರುಪೂರಣೆ ಮಾಡಿಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಬಹಳ ಗಂಬೀರವಾಗಿ ಚಿಂತಿಸ ತೋಡಗಿದೆ. ತಾಲ್ಲೂಕಿನಲ್ಲಿ ಸುಮಾರು ೬೪೦ ಕೊಳವೆ ಬಾವಿಗಳಿಗೆ ಈಗಾಗಲೇ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಉಳಿದ ಕೊಳವೆ ಬಾವಿಗಳಿಗೆ ಇಂಗು ಗುಂಡಿಗಳನ್ನು ನಿರ್ಮಿಸಲು ಸ್ಥಳ ಸೂಕ್ತವಿರುವುದಿಲ್ಲ ಎನ್ನುತ್ತಾರೆ ಕೋಲಾರ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಚಲುವರಾಜು ಇವರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ ಈ ಬೋರುಗಳಿಗೆ ಜಲ ಮರುಪೂರಣೆ ಮಾಡಲು ಡಿ.ಸಿ.ಯವರ ಮಾರ್ಗದರ್ಶನ ಮತ್ತು ಸಹಕಾರ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಿಕ್ಕಿದೆ.
ತಾಲ್ಲೂಕಿನಲ್ಲಿ ಸುಮಾರು ೬೪೦ ಕೊಳೆವೆ ಬಾವಿಗಳಿಗೆ ನೀರು ಇಂಗಿಸುವ ಘಟಕಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿದೆ. ಅದೇ ವರ್ಷ, ಅಕಾಲಿಕ ಮಳೆ ಉತ್ತಮವಾಗಿ ಆದ ಕಾರಣ, ಇಂಗು ಗುಂಡಿಗಳಿಗೆ ಹೆಚ್ಚು ನೀರು ಹರಿಯಿತು. ನೀರು ಹೆಚ್ಚಿನ ಪ್ರಮಾಣದಲ್ಲಿ ಇಂಗುವ ಮೂಲಕ ಅಂತರ್ಜಲ ಸೇರಿತು ಎನ್ನುತ್ತಾರೆ ಚಲುವರಾಜು ಅವರು. ಇಷ್ಟೆಲ್ಲ ಕೇಳಿದ ನಮಗೆ, ಕ್ಷೇತ್ರ ಭೇಟಿ ಮಾಡಲೇಬೇಕು ಎಂಬ ಉತ್ಸಾಹ ಮೂಡಿತು. ಜಲ ಮರುಪೂರಣೆ ಪ್ರಯೋಗದ ಫಲಿತಾಂಶ ಏನು ಎಂಬುದನ್ನು ತಿಳಿಯಲು ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದೆವು. ಪ್ರಥಮವಾಗಿ, ಹುತ್ತೂರಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ. ಜಿ. ಲಕ್ಷ್ಮೀರವರನ್ನು ವಿಚಾರಿಸಿದಾಗ, ಪಕ್ಕದ ಗ್ರಾಮ ಮೇಡಿತಂಬಿಹಳ್ಳಿಯಲ್ಲಿ ನಿರ್ಮಿಸಿಲಾದ ಘಟಕವನ್ನು ತೋರಿಸಿ, ಸಂಪೂರ್ಣವಾಗಿ ವಿವರಿಸಿದರು. ನೀರಿನೊಂದಿಗೆ ಹರಿದು ಬರುವ ಮಣ್ಣನ್ನು ಹೇಗೆ ತಡೆಯುವುದು, ನೀರು ಮಾತ್ರ ಇಂಗು ಗುಂಡಿಗೆ ಹರಿಯುವುದು ಹೇಗೆ, ಪ್ರತಿ ಇಂಗು ಗುಂಡಿಗೆ ಸುಮಾರು ಐವತ್ತು ಸಾವಿರ ಖರ್ಚಾಗುತ್ತದೆ ಎಂಬುದರ ಬಗ್ಗೆ ವಿವರಿಸಿದರು.
ತದನಂತರ, ಅಕ್ಕ-ಪಕ್ಕದ ಗ್ರಾಮಗಳಾದ ನರ್ನಹಳ್ಳಿ, ಯನಾದಹಳ್ಳಿ, ಹೊಳಲಿ, ಹೊಳಲಿ ಹೊಸೂರು ಗ್ರಾಮಗಳಿಗೆ ಭೇಟಿ ಮಾಡಿ, ಗ್ರಾಮಸ್ಥರುಗಳಿಗೆ ಆದ ಅನುಕೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ವೀಠಪ್ಪನಹಳ್ಳಿಯ ಗ್ರಾಮಸ್ಥರಾದ ನಾರಯಣಸ್ವಾಮಿಯವರು ಈ ಘಟಕಗಳನ್ನು ನಿರ್ಮಿಸಿದ ನಂತರ, ಕೊಳವೆ ಬಾವಿಗಳಲ್ಲಿ ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಿಲ್ಲದಂತಾಗಿದೆ. ಇಂತಹ ನೀರಿಂಗಿಸುವ ಕೆಲಸಗಳು ಹೆಚ್ಚಿನ ಮಟ್ಟದಲ್ಲಿ ಆಗಬೇಕಾಗಿದೆ ಎನ್ನುತ್ತಾರೆ. ಪಕ್ಕದಲ್ಲಿಯೇ ಇದ್ದ ಗ್ರಾಮಸ್ಥರುಗಳು ಕೂಡ ಇದಕ್ಕೆ ಧ್ವನಿ ಕೂಡಿಸಿದರು. ಅಷ್ಟೇ ಅಲ್ಲದೆ, ಅಕ್ಕ-ಪಕ್ಕದ ರೈತರಿಗೆ ಸೇರಿದ ಬೋರ್ಗಳಲ್ಲೂ ಕೂಡ ನೀರಿನ ಮಟ್ಟ ಹೆಚ್ಚಿದೆ ಎಂಬುದನ್ನು ತಿಳಿಸಿದರು.
ನೀರು ಇಂಗಿಸುವ ಕೆಲಸಗಳಲ್ಲಿ ಇಂತಹ ಪ್ರಯತ್ನಗಳು ದಿನೇದಿನೇ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಾಗಿದೆ. ಕೇವಲ ಸರ್ಕಾರಿ ಕೊಳವೆ ಬಾವಿಗಳಿಗೆ ಅಷ್ಟೇ ಸೀಮಿತವಾಗದೆ, ವೈಯಕ್ತಿಕ ಕೊಳೆ ಬಾವಿಗಳಿಗೂ ಕೂಡ ಇಂತಹ ಘಟಕಗಳನ್ನು ನಿರ್ಮಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ. ನೀರು ಇಂಗಿಸುವ ಈ ಮಹತ್ಕಾರ್ಯ ಸಾಮೂಹಿಕವಾಗಿ ಆಗಿದ್ದಲ್ಲಿ, ಖಂಡಿತವಾಗಿಯೂ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವಲ್ಲಿ ಅನುಕೂಲವಾಗುತ್ತದೆ.
ಚಿತ್ರ-ಲೇಖನ: ಸುರೇಶ್ ದೊಡ್ಡಮಾವತ್ತೂರು