ಕೆರೆನೋಟ – ನೋಟ ೪೪: ಸಾಲ ವಸೂಲಿಗೆ ಬೈರಸಂದ್ರ ಕೆರೆ ಹರಾಜಾಗಿತ್ತು!
ಬೆಂಗಳೂರು ಮಹಾನಗರ ಪಾಲಿಕೆಯಿಂದ ಅವಶೇಷಗಳನ್ನು ಹಾಕಿ ಮುಚ್ಚುವ ಕಾರ್ಯದಿಂದ ಹೈಕೋರ್ಟ್ ನಿಂದ ತಡೆ ಆದಮೇಲೆ, ಬೈರಸಂದ್ರ ಕೆರೆ ಉಳಿಯಿತು ಎಂದುಕೊಂಡಿದ್ದ ಸ್ಥಳೀಯ ನಿವಾಸಿಗಳಿಗೆ ಬೃಹತ್ ಆತಂಕ ಎದುರಾಯಿತು.
2005: ಒಬ್ಬ ಬಿಲ್ಡರ್ ಮತ್ತು ಡೆವಲಪರ್ ಸಾರ್ವಜನಿಕ ವಲಯದ ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಬೈರಸಂದ್ರ ಕೆರೆಯನ್ನು ಆಧಾರವಾಗಿ ನೀಡಲಾಗಿತ್ತು. ಸಾಲ ವಸೂಲಾಗದ್ದರಿಂದ ಈ ಕೆರೆಯನ್ನು ಹರಾಜು ಹಾಕಿ ವಸೂಲಿ ಮಾಡಿಕೊಳ್ಳಲು ‘ಸಾಲ ವಸೂಲಾತಿ ನ್ಯಾಯಾಧಿಕರಣ’ ಆದೇಶಿಸಿತು. ಕೆರೆ 760 ಲಕ್ಷಕ್ಕೆ ಹರಾಜು ಆಯಿತು. ಇದಕ್ಕೆ ವಿರುದ್ಧ ಸ್ಥಳೀಯ ನಿವಾಸಿಗಳು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವಲ್ಲಿ ಯಶಕಂಡರು.
2011: ಹೈಕೋರ್ಟ್ ‘ಸಾಲ ವಸೂಲಾತಿ ನ್ಯಾಯಾಧಿಕರಣ’ ಮಾಡಿದ್ದ ಹರಾಜು ಪ್ರಕ್ರಿಯೆ ರದ್ದುಗೊಳಿಸಿ, ಸರ್ವೆ ನಂ.56 ಕೆರೆ ಪ್ರದೇಶವಾಗಿದ್ದು, ಇದು ಸರ್ಕಾರದ ಆಸ್ತಿಯಾಗಿದೆ. ಇದನ್ನು ಬಿಬಿಎಂಪಿಯೇ ನಿರ್ವಹಣೆ ಮಾಡಬೇಕು ಎಂದು ಆದೇಶಿಸಿತು.
2012: ಹೈಕೋರ್ಟ್ ನಿಂದ ಕೆರೆ ಉಳಿಯಬೇಕೆಂಬ ಆದೇಶ ಬಂದ ಮೇಲೆ, ಸಂಸದ ಅನಂತಕುಮಾರ್ 2012ರ ಫೆಬ್ರವರಿಯಲ್ಲಿ ಕೆರೆಗೆ ಬೇಲಿ ಹಾಕುವ ಕೆಲಸಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ಆದರೆ ಕೆಲಸ ಪ್ರಾರಂಭವಾದ ಕೆಲವೇ ತಿಂಗಳಲ್ಲಿ ಅದು ನಿಂತುಹೋಯಿತು. ಈವರೆಗೂ ಬೇಲಿ ಹಾಕುವ ಕೆಲಸ ಆಗಿಲ್ಲ.
2013: ಬಿಬಿಎಂಪಿ ಮರೆತ ಕೆರೆಯನ್ನು ಖಾಸಗಿಯವರು ಮರೆಯಲಿಲ್ಲ. ಕೆರೆಗೆ ಹಾಕಿದ್ದ ಭಾಗಶಃ ಬೇಲಿಯನ್ನು 2013ರ ಮೇ ತಿಂಗಳಲ್ಲಿ ಒಡೆದುಹಾಕಿ, ಖಾಸಗಿ ವಾಹನಗಳನ್ನು ಕೆರೆ ಅಂಗಳದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಲಿಲ್ಲ.
ಮತ್ತಷ್ಟು ಸ್ಥಳೀಯರ ಹೋರಾಟದಿಂದ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಚಿಕ್ಕಪೇಟೆ ಶಾಸಕ ಆರ್.ವಿ. ದೇವರಾಜ್ ಮತ್ತು ಬಿಬಿಎಂಪಿ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬೈರಸಂದ್ರ ಕೆರೆಯ ಪುನಶ್ಚೇತನಕ್ಕೆ 2013ರ ನವೆಂಬರ್ ನಲ್ಲಿ ಚಾಲನೆ ನೀಡಿದರು. ಬಿಡಿಎ ವತಿಯಿಂದ ಪುನಶ್ಚೇತನ ಕಾಮಗಾರಿ ಈಗ ನಡೆಯುತ್ತಿದೆ.
2015: ಕೆರೆ ಪುನಶ್ಚೇತನ ಕಾಮಗಾರಿಯಲ್ಲೂ ಸ್ಥಳೀಯರು ಸಮಗ್ರವಾಗಿ ತೊಡಗಿಕೊಂಡರು. ಇಲ್ಲಿ ಏನು ಬೇಕು ಏನು ಬೇಡ ಎಂಬ ವಿವರವನ್ನು ಬಿಡಿಎಗೆ ನೀಡಿದರು. ಅದರಂತೆ, ಕೆರೆಗೆ ಸರ್ವೆ ನಂ56ಕ್ಕೆ ಪೂರ್ತಿ ಬೇಲಿ ಹಾಕಬೇಕು, ಕೆರೆಯ ನೀರಿನ ದಂಡೆಯ ಸುತ್ತ ಬೇಲಿ ಹಾಕಬೇಕು, ಮಹಿಳೆಯರ ಉದ್ಯಾನವನ ನಿರ್ಮಾಣವಾಗಬೇಕು, ದೀಪದ ವ್ಯವಸ್ಥೆ ಇರಬೇಕು, ಮರಗಳ ಉದ್ಯಾನವನ ನಿರ್ಮಿಸಬೇಕು. ಸುರಕ್ಷೆ ಮತ್ತು ನಿರ್ವಹಣೆ ವ್ಯವಸ್ಥೆ ಆಗಬೇಕು.
ಇದೆಲ್ಲ ಆಗಬೇಕು ಎಂಬ ಸ್ಥಳೀಯರ ಆಶಯದಲ್ಲಿ ಅವರ ಸ್ವಂತಿಕೆ ಏನೂ ಇಲ್ಲ. ಈ ಕೆಲಸಗಳನ್ನು ಪೂರ್ತಿಗೊಳಿಸಿದ್ದೇ ಆದರೆ, ಬೈರಸಂದ್ರ ಕೆರೆ ದಕ್ಷಿಣ ಬೆಂಗಳೂರಿನ ಒಂದು ಸುಂದರ ತಾಣವಾಗಲಿದೆ. ಒಂದು ವೇಳೆ ಶೀಘ್ರದಲ್ಲಿ ಕೆರೆಗೆ ಬೇಲಿ ಹಾಕದೆ, ಸುರಕ್ಷತೆ ಮತ್ತು ನಿರ್ವಹಣೆ ವ್ಯವಸ್ಥೆ ಮಾಡದಿದ್ದಲ್ಲಿ, ಕೆರೆಯಲ್ಲಿ ನೀರಿನ ಸೌಲಭ್ಯ ಇರುವುದರಿಂದ, ಕೆರೆಯಂಗಳ ಮುಕ್ತ ಶೌಚಾಲಯದ ತಾಣವಾಗಲಿದೆ. ಅದಲ್ಲದೆ, ಸಾರ್ವಜನಿಕರಿಗೆ ತ್ಯಾಜ್ಯ ಸುರಿಯಲು ಕಸದ ತೊಟ್ಟಿ ಆಗಲಿದೆ. ಕೆರೆ ಪುನಶ್ಚೇತನಕ್ಕೆ ಮುಂಚೆ ಇದ್ದ ಸ್ಥಿತಿಗೆ ಬಂದು ಕೆರೆಯನ್ನು ಪುನರುಜ್ಜೀವನಗೊಳಿಸುವುದು ತುಂಬಾ ಕಷ್ಟಕರ ಕೆಲಸವಾಗುತ್ತಿದೆ. ಆದರೆ, ಇದನ್ನು ಒತ್ತುವರಿ ಹಾಗೂ ಅಸ್ವಚ್ಛತೆಯಿಂದ ಕಾಪಾಡಿ ಎಂಬುದು ಸ್ಥಳೀಯರ ಕಳಕಳಿಯಾಗಿದೆ.
ಕೆರೆಯನ್ನು ಬಿಬಿಎಂಪಿ ಅಥವಾ ಸರ್ಕಾರದ್ದೇ ಎಂದು ಹೈಕೋರ್ಟ್ ಹೇಳಿ ನಾಲ್ಕು ವರ್ಷ ಕಳೆದರೂ, ಇನ್ನೂ ಕೆರೆ ಪುನಶ್ಚೇತನದ ಪೂರ್ಣ ಫಲಿತಾಂಶ ಕಂಡಿಲ್ಲ. ಕೆರೆ ಅಭಿವೃದ್ಧಿ ಅಥವಾ ಪುನಶ್ಚೇತನ ಕಾರ್ಯ ಕುಂಟುತ್ತಲೇ ಸಾಗಿದೆ.
ಬೈರಸಂದ್ರದ ಕೆರೆಯನ್ನು ಹರಾಜು ಹಾಗೂ ಅವಶೇಷಗಳಿಂದ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ನೇತೃತ್ವದಾರರದ ವೆಂಕಟಸುಬ್ಬರಾವ್ ಅವರು ತಮ್ಮ ವಕೀಲರನ್ನು ನೆನೆದುಕೊಂಡು ಒಂದು ಸಮಗ್ರ ವರದಿಯನ್ನು ಅವರ ಮಾತಿನಲ್ಲಿ ನೀಡಿದ್ದಾರೆ. ಅದನ್ನು ಮುಂದಿನ ನೋಟದಲ್ಲಿ ನೀಡಲಾಗುತ್ತದೆ.
ಚಿತ್ರ-ಲೇಖನ: ಕೆರೆ ಮಂಜುನಾಥ್