ಕೆರೆ ನೋಟ – ನೋಟ ೩೮: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ-೨
ಕೆರೆಗಳಿಗೆ ಯಾರ ಅಭಿರಕ್ಷಣೆ ಸಿಕ್ಕರೂ, ಅವು ತಮ್ಮತನ ಉಳಿಸಿಕೊಳ್ಳಲು ಯಾರೂ ನೆರವಾಗುವುದಿಲ್ಲ ಎಂಬುದು ದಾಖಲೆ ಸಹಿತ ಸಾಬೀತಾಗುತ್ತದೆ. ಅದಕ್ಕೇ ಬೆಂಗಳೂರಿನಲ್ಲಿ ಕೋಟ್ಯಂತರ ವೆಚ್ಚ ಮಾಡಿ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದರೂ, ಅಲ್ಲಿಗೇ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಒಳಚರಂಡಿ ನೀರು ಅಲ್ಲಿಗೆ ಸರಾಗವಾಗಿ ಹರಿಯುತ್ತದೆ.
ಇಂತಹ ವಾಸ್ತವ ಸ್ಥಿತಿಯನ್ನು ಚಿಕ್ಕಬೆಳ್ಳಂದೂರು ಕೆರೆ ಹಾಗೂ ವೆಂಗಯ್ಯನಕೆರೆಗಳ ಮಾಹಿತಿಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವμದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿμ ಫಲಿತಾಂಶಗಳಲ್ಲಿ ನೀಡಲಾಗಿದೆ.
ಚಿಕ್ಕಬೆಳ್ಳಂದೂರು ಕೆರೆ:
ಈ ಕೆರೆಯು ಬೆಂಗಳೂರು (ಪೂರ್ವ) ತಾಲ್ಲೂಕಿನಲ್ಲಿದೆ ಮತ್ತು ಪ್ರಸ್ತುತ ಬಿಡಿಎಯ ಅಭಿರಕ್ಷಣೆಯಲ್ಲಿದೆ.
- ೨೦೦೬ರ ಕಂದಾಯ ಇಲಾಖೆಯ ಸಮೀಕ್ಷೆಯಂತೆ, ಕೆರೆ ಪ್ರದೇಶದ ೧೦ ಎಕರೆಗಳನ್ನು ಒತ್ತುವರಿ ಮಾಡಲಾಗಿತ್ತು. ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ, ಕೊಳೆಗೇರಿ ನಿವಾಸಿಗಳಿಂದ ಕೆರೆ ಪ್ರದೇಶವು ಒತ್ತುವರಿಯಾಗಿರುವುದನ್ನು ಗಮನಿಸಲಾಯಿತು.
- ಮುಲ್ಲೂರು ಗ್ರಾಮದ ಪಕ್ಕದಲ್ಲಿರುವ ಸರ್ವೆನಂಬರ್ ೬೩ ಕೆರೆಯ ಭಾಗವಾಗಿತ್ತೆಂದು ಗ್ರಾಮದ ನಕ್ಷೆ ಹಾಗೂ ಇತರೆ ದಾಖಲೆಗಳು ತಿಳಿಯಪಡಿಸಿದವು. ಆದರೆ, ಇದನ್ನು ಈಗ ಖಾಸಗಿ ಭೂಮಿಯೆಂದು ಇತ್ತೀಚಿನ ಕಂದಾಯ ಇಲಾಖೆಯ ಸಮೀಕ್ಷಾ ನಕ್ಷೆಯಲ್ಲಿ (೨೦೧೦) ತೋರಿಸಲಾಗಿತ್ತು.
- ಕೆರೆ ಅಂಗಳ ಪ್ರದೇಶದಲ್ಲಿ ಬಿಬಿಎಂಪಿಯು ಮರಗಳನ್ನು ನೆಟ್ಟಿತ್ತು ಮತ್ತು ಕೆರೆಯನ್ನು ಒಂದು ಸ್ವಚ್ಛ ನೀರಿನ ಮೂಲವನ್ನಾಗಿಸಲು ಯಾವುದೇ ಜೀರ್ಣೋದ್ಧಾರದ ಕಾಮಗಾರಿಗಳನ್ನು ಬಿಬಿಎಂಪಿ ಅಥವಾ ಬಿಡಿಎ ಕೈಗೆತ್ತಿಕೊಂಡಿರಲಿಲ್ಲ.
- ಕೆರೆಗೆ ಯಾವುದೇ ಒಳಹರಿವು ಮಾರ್ಗಗಳಿರಲಿಲ್ಲವಾಗಿ, ಕೆರೆ ಅಂಗಳದ ಪೂರ್ಣ ಪ್ರದೇಶ ಒಣಗಿಹೋಗಿತ್ತು.
- ಕೆರೆಯು ಘನತ್ಯಾಜ್ಯ ಹಾಗೂ ನಿರ್ಮಾಣ ಅವಶೇಷಗಳಿಂದ ಮಲಿನಗೊಂಡಿತ್ತು ಹಾಗೂ ಮಾಲಿನ್ಯ ಮಟ್ಟವನ್ನು ಯಾವುದೇ ಸಂಸ್ಥೆಗಳು ಮೇಲ್ವಿಚಾರಣೆ ಮಾಡುತ್ತಿರಲಿಲ್ಲ.
- ಕೆರೆ ಅಂಗಳದ ಬಳಿಯೇ ಇರುವ ಗುಡಿಸಲುಗಳಿಂದ ಇಲ್ಲಿಗೆ ಮಾಲಿನ್ಯ ಹರಿಯುತ್ತದೆ. ಕೆರೆ ಅಂಗಳದಲ್ಲಿ ನಿರ್ಮಾಣ ಅವಶೇಷ ಮತ್ತು ಘನತ್ಯಾಜ್ಯ ಸುರಿಯಲಾಗಿದೆ. ಜತೆಗೆ ಮಳೆ ನೀರು ಇಲ್ಲಿಗೆ ಹರಿಯಲು ಸಾಧ್ಯ ಇಲ್ಲದಿರುವುದರಿಂದ ಕೆರೆ ಒಣಗಿನಿಂತಿದೆ.
ವೆಂಗಯ್ಯನಕೆರೆ
ವೆಂಗಯ್ಯನಕೆರೆಯು ಬೆಂಗಳೂರು (ಪೂರ್ವ) ತಾಲ್ಲೂಕಿನಲ್ಲಿ ೬೪.೮೯ ಎಕರೆಗಳಷ್ಟು ಪ್ರದೇಶದಲ್ಲಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರವು ೨೦೦೨-೦೩ರ ಅವಧಿಯಲ್ಲಿ ಎನ್ಎಲ್ಸಿಪಿ ಅನುದಾನಗಳನ್ನು ಬಳಸಿಕೊಂಡು ಕೆರೆಯನ್ನು ಅಭಿವೃದ್ಧಿಗೊಳಿಸಿತ್ತು ಮತ್ತು ಬೆಂಗಳೂರಿನ ಮೆ/ಪಾರ್.ಸಿ. ಅವರಿಗೆ ೨೦೦೫ರಿಂದ ೧೫ ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು.
- ಗುತ್ತಿಗೆದಾರರು ಗುತ್ತಿಗೆ ಒಪ್ಪಂದಗಳನ್ನು ಉಲ್ಲಂಘಿಸಿ ಮೋಟಾರ್ ದೋಣಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದರು ಮತ್ತು ಕೆರೆಯನ್ನು ಮಲಿನಗೊಳಿಸುತ್ತಿದ್ದರು. ಕೆರೆಯಲ್ಲಿ ಮೋಟಾರ್ ದೋಣಿಗಳನ್ನು ಬಳಸದಿರುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫).
- ಕೆರೆಯ ಮುಖ್ಯ ಏರಿಯ ಮೇಲೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಕೆರೆಯ ಪೂರ್ವ ಭಾಗದಲ್ಲಿ ಕೆರೆ ಪ್ರದೇಶದ ಒಳಗೆ ರಸ್ತೆಯನ್ನು ನಿರ್ಮಿಸಲು ಹೆಚ್ಚು ಪ್ರದೇಶವನ್ನು ಮಣ್ಣಿನಿಂದ ಭರ್ತಿ ಮಾಡಲಾಗಿದೆ. ಗೌರವಾನ್ವಿತ ಉಚ್ಛ ನ್ಯಾಯಾಲಯವು ಕೆರೆ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕೆ ಬಳಸಲು ಅನುಮತಿ ನೀಡಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ ಏಕೆಂದರೆ ಕೆರೆಯ ಒಳಗೆ ಹಾದುಹೋಗಿರುವ ರಸ್ತೆಯನ್ನು ಕಂಬಗಳ ಮತ್ತು ಹಾಸುಗಲ್ಲುಗಳ ಮೇಲೆ ನಿರ್ಮಿಸಿರಲಿಲ್ಲ ಹಾಗೂ ಇದು ಗೌರವಾನ್ವಿತ ಉಚ್ಛ ನ್ಯಾಯಾಲಯದ ನಿರ್ದೇಶನಗಳ ಉಲ್ಲಂಘನೆಯಾಗಿತ್ತು.
- ಕೆರೆ ಅಂಗಳದಲ್ಲಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ ಪೈಪು ತುಂಬಿ ಹರಿಯುತ್ತಿತ್ತು. ಎಸ್ಟಿಪಿಯಿಂದ ಸಂಸ್ಕರಿಸಿದ ನೀರು ಮತ್ತು ಸಂಸ್ಕರಿಸದ ಕೊಳಚೆ ನೀರು ಬೆರೆತು ಕೆರೆಗೆ ಹರಿಯುತ್ತಿತ್ತು. ಕೆರೆಯ ನೀರಿನ ಗುಣಮಟ್ಟವನ್ನು ಯಾವುದೇ ಸಂಸ್ಥೆಗಳು ಮೇಲ್ವಿಚಾರಣೆ ಮಾಡುತ್ತಿರಲಿಲ್ಲ. ಕೊಳಚೆ ನೀರಿನ ಮಾರ್ಗಾಂತರಣಕ್ಕೆ ಬೇರೆ ಅವಕಾಶ ಮಾಡಿ, ಸಂಸ್ಕರಿಸಿದ ನೀರು ಕೆರೆಯನ್ನು ಸೇರಲು ಪ್ರತ್ಯೇಕ ಕೊಳವೆಮಾರ್ಗವನ್ನು ಹಾಕಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೂಚಿಸಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫).
- ಕಾಲುದಾರಿ ಮೇಲುಸೇತುವೆಯೊಂದು (ತಂಬುಚೆಟ್ಟಿಪಾಳ್ಯದ ರಸ್ತೆಯ ಹತ್ತಿರ) ಹಾನಿಗೊಳಗಾಗಿರುವುದನ್ನು ಗಮನಿಸಲಾಯಿತು ಮತ್ತು ಕೆರೆಯನ್ನು ಬಳಸುತ್ತಿರುವವರಿಗೆ ಅಪಾಯವನ್ನುಂಟು ಮಾಡುತ್ತಿತ್ತು. ಕಾಲುದಾರಿ ಮೇಲುಸೇತುವೆಯನ್ನು ದುರಸ್ತಿ ಮಾಡಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫).
ಈ ಕೆರೆಯ ವೈಶಿಷ್ಟ್ಯವೆಂದರೆ ಎಸ್ಟಿಪಿಯಿಂದ ಕೊಳಚೆ ನೀರನ್ನು ಕೆರೆಗೆ ತರಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರ ಅದನ್ನು ನಿರ್ವಹಣೆ ಮಾಡುವುದಿಲ್ಲ. ಇನ್ನು ಕೆಲವು ಖಾಸಗಿ ಸಂಸ್ಥೆಗಳಿಗೆ ಕೆರೆಗಳನ್ನು ಗುತ್ತಿಗೆ ನೀಡಿರುವುದರಿಂದ ಅಲ್ಲಿ ಸ್ವತ್ತೂ ನಾಶವಾಗುವುದರ ಜತೆಗೆ ಕೆರೆಯನ್ನೇ ಕಬಳಿಸಿ ಹಾಳು ಮಾಡಲಾಗುತ್ತಿದೆ. ಇದಕ್ಕೆಲ್ಲ ಲಗಾಮು ಅಗತ್ಯ.
ಚಿತ್ರ-ಲೇಖನ: ಕೆರೆ ಮಂಜುನಾಥ್