ಕೆರೆ ನೋಟ – ನೋಟ ೩೦: ಜೀರ್ಣೋದ್ಧಾರದ ಹೆಸರಲ್ಲಿ ನರಳುತ್ತಿರುವ ಕೆರೆ ಕೊಳಕು!
ರಾಜ್ಯದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ನೂರಾರು ಕೋಟಿ ಇಲ್ಲ ಬಿಡಿ – ಈಗ ಸಾವಿರಾರು ಕೋಟಿಗಳು ವೆಚ್ಚವಾಗುತ್ತಿವೆ. ಈ ಜೀಣೋದ್ಧಾರ ಯಾರಿಗೆ ಎಂಬ ಪ್ರಶ್ನೆ ‘ಜೀರ್ಣೋದ್ಧಾರ ಕೆರೆ’ಗಳನ್ನು ನೋಡಿದಾಗಿ ಉದ್ಭವಿಸುತ್ತದೆ. ಏಕೆಂದರೆ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಕೆರೆಗಳಲ್ಲಿ ಮಾಲಿನ್ಯವೇ ಅತಿಯಾಗಿದೆ. ಇದನ್ನೇ ಸಿಎಜಿ ವರದಿ ಕೂಡ ಅಧ್ಯಯನಶೀಲವಾಗಿ ವಿವರಿಸಿದೆ.
ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಕೆರೆಗಳ ಮಾಲಿನ್ಯಕ್ಕೆ ಕಾರಣವಾದ ಅಂಶಗಳನ್ನು ವಿವರಿಸಲಾಗಿದೆ. ಮಾಲಿನ್ಯದ ಮೂಲಗಳನ್ನು ವರ್ಗೀಕರಿಸಿ ನೀಡಲಾಗಿದೆ. ಪರೀಕ್ಷೆ ಅಥವಾ ತನಿಖೆ ನಡೆಸಿದ ೫೬ ಕೆರೆಗಳ ಪೈಕಿ ೪೭ ಕೆರೆಗಳು ತೀವ್ರವಾಗಿ ಕಲುಷಿತಗೊಂಡಿದ್ದವು ಎಂದು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಗಿದೆ. ೩೦ ಕೆರೆಗಳಲ್ಲಿ ಕೊಳಚೆ ನೀರು ಮಾಲಿನ್ಯದ ಪ್ರಮುಖ ಕಾರಣವಾಗಿತ್ತು. ಕೊಳಚೆ ನೀರಿನ ಒಳಹರಿವಲ್ಲದೇ ಪೌರ ಘನ ತ್ಯಾಜ್ಯವನ್ನು ಮತ್ತು ನಿರ್ಮಾಣ ಅವಶೇಷಗಳು ಸುರಿದಿರುವುದು, ತೆರೆದ ಮಲವಿಸರ್ಜನೆ, ಕೈಗಾರಿಕಾ ತ್ಯಾಜ್ಯಗಳು, ಮುಂತಾದವುಗಳಿಂದಲೂ ಸಹ ಕೆರೆಗಳು ಮಲಿನಗೊಳ್ಳುತ್ತಿರುವುದನ್ನು ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಿಸಲಾಗಿದೆ.
ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ಗಮನಿಸಿದ ಮಾಲಿನ್ಯದ ವಿಧಗಳು ಈ ಕೆಳಗಿನ ಚಿತ್ರದಲ್ಲಿ ವಿವರಿಸಲಾಗಿದೆ.
ಕೆರೆಗಳು ಕೊಳಚೆ ನೀರಿನಿಂದ ಮುಕ್ತವಾಗಿರಲಿಲ್ಲ. ಏಕೆಂದರೆ ಪ್ರಮುಖವಾಗಿ ಹರಿಯುವ ಮಳೆ ನೀರನ್ನು ತರಬೇಕಾದ ಮಳೆ ನೀರಿನ ಚರಂಡಿಗಳು ಕೊಳಚೆ ನೀರನ್ನು ತರುತ್ತಿದ್ದವು. ಹಲವಾರು ಕಡೆಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಳೆನೀರಿನ ಚರಂಡಿಯೊಳಗೆ, ಒಳಚರಂಡಿ ಪೈಪುಗಳನ್ನು ಹಾಕಿರುವುದಕ್ಕೆ ಇದನ್ನು ಅಧ್ಯಾರೋಪಿಸಲಾಯಿತು. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸುಮಾರು ೪೦ ವರ್ಷಗಳ ಹಿಂದೆ ಹಾಕಿದ್ದ ಒಳಚರಂಡಿ ಪೈಪುಗಳು ಸವೆದುಹೋಗಿದ್ದವು, ಒತ್ತುವರಿ ಮಾಡಲಾಗಿತ್ತು ಮತ್ತು ಕಟ್ಟಿಕೊಂಡಿದ್ದವು.
ಜೀರ್ಣೋದ್ಧಾರ ಕಾಮಗಾರಿಗಳ ಸ್ಥಿತಿಗತಿ: ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ಅನುಷ್ಠಾನ ಸಂಸ್ಥೆಗಳು ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತವೆ. ೨೦೦೯-೧೪ರ ಅವಧಿಯಲ್ಲಿ ಎನ್ಎಲ್ಸಿಪಿ ಅಡಿಯಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡಿರಲಿಲ್ಲ, ಆದರೆ ೨೦೦೯ಕ್ಕೂ ಹಿಂದೆ ಮಂಜೂರು ಮಾಡಿದ್ದ ೧೬ ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಎನ್ಡಬ್ಲ್ಯುಸಿಪಿ ಅಡಿಯಲ್ಲಿ ಎರಡು ಕಾಮಗಾರಿಗಳು ಮತ್ತು ರಾಜ್ಯ ವಲಯ ಕಾರ್ಯಕ್ರಮದಡಿಯಲ್ಲಿ ನಾಲ್ಕು ಕಾಮಗಾರಿಗಳನ್ನು ೨೦೦೯-೧೪ರ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು. ಬಿಬಿಎಂಪಿ ಮತ್ತು ಬಿಡಿಎಗಳ ಪ್ರಗತಿ ವರದಿಗಳ ಅನ್ವಯ ಕ್ರಮವಾಗಿ ಅವುಗಳ ಅಭಿರಕ್ಷಣೆಯಲ್ಲಿದ್ದ ೫೫ ಮತ್ತು ೧೨೩ ಕೆರೆಗಳ ಪೈಕಿ, ಕ್ರಮವಾಗಿ ೩೪ (೩೨ ಕೆರೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಎರಡು ಕೆರೆಗಳಲ್ಲಿ ಸವಿವರ ಯೋಜನಾ ವರದಿಗಳು ತಯಾರಿಕೆ ಹಂತದಲ್ಲಿವೆ.) ಮತ್ತು ೪೫ ಕೆರೆಗಳನ್ನು (೧೨ ಕೆರೆಗಳನ್ನು ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ. ೨೫ ಕೆರೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಎಂಟ ಕೆರೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.) ಜೀರ್ಣೋದ್ಧಾರಕ್ಕಾಗಿ ೨೦೦೯-೧೪ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ಕಾರ್ಯಗತಗೊಳಿಸಿದ ಕಾಮಗಾರಿಗಳ ಸ್ಥಿತಿಗತಿಯನ್ನು ಕೋಷ್ಠಕದಲ್ಲಿ ವಿವರಿಸಲಾಗಿದೆ. ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ (ಎಲ್ಡಿಎ), ನಗರ ಪಾಲಿಕೆಗಳು ಹೇಗೆ ಎಷ್ಟು ಕೆರೆಗಳಿಗೆ ಹಣ ವೆಚ್ಚ ಮಾಡಿವೆ ಎಂಬುದರ ಅಂಕಿ-ಅಂಶ ನೀಡಲಾಗಿದೆ.
ಅಷ್ಟೇ ಅಲ್ಲ, ಈ ಕೆರೆಗಳ ಸ್ಥಿತಿ ಹೇಗಿದೆ ಎಂಬುದರ ಮಾಹಿತಯನ್ನೂ ವಿವರವಾಗಿ ಮಾನದಂಡ ಆಧಾರದಲ್ಲಿ ನೀಡಲಾಗಿದೆ. ಜೀರ್ಣೋದ್ಧಾರ ಕಾಮಗಾರಿಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಲಾಗಿದೆ.
ಕೆರೆಗಳು ಅಭಿವೃದ್ಧಿ ಆಗಬೇಕು ಎಂಬುದೇ ಎಲ್ಲ ಒತ್ತಾಸೆ. ಆದರೆ ಅದು ಇನ್ನೊಬ್ಬರ ಜೇಬಷ್ಟೇ ಅಲ್ಲದೆ, ಇನ್ನೆಲ್ಲವನ್ನೂ ತುಂಬಿಕೊಳ್ಳುವ ಮೂಲವಾಗಬಾರದು. ಜೀರ್ಣೋದ್ಧಾರದ ಹೆಸರಿನಲ್ಲಿ ನಾಗರಿಕರ ಹಣದ ಲೂಟಿ ಆಗದೆ ಇದ್ದರಷ್ಟೇ ಪರಿಸರಕ್ಕೆ ಹಿತಕರ. ಈ ಬಗ್ಗೆ ಸ್ಥಳೀಯ ನಾಗರಿಕ ಸಂಘಟನೆಗಳನ್ನು (ಅಂದರೆ ಸ್ಥಳೀಯ ಸಾಮಾನ್ಯ ನಿವಾಸಿಗಳು) ಸೇರಿಸಿಕೊಂಡು ಕೆಲಸ ನಿರ್ವಹಿಸಿದರೆ ಅತಿಸೂಕ್ತ. ಸರಕಾರಿ ಸಂಸ್ಥೆಗಳು ಇತ್ತ ಗಮನಹರಿಸಬೇಕು.
ಚಿತ್ರ-ಲೇಖನ: ಕೆರೆ ಮಂಜುನಾಥ್