ಕೆರೆ ನೋಟ – ನೋಟ ೨೧: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನಿಯಂತ್ರಣ!
ಕೆರೆಗಳಿಗೆ ನೇರವಾಗಿ ಕೊಳಚೆ ನೀರನ್ನು ಬಿಟ್ಟು ಕೆರೆಗಳನ್ನು ಮಲಿನ ಮಾಡುತ್ತಿದ್ದ ಬಹುಮಹಡಿ ವಸತಿ ಕಟ್ಟಡಗಳು ಹೀನಕೃತ್ಯ ಕಣ್ಣಮುಂದೆ ಇದ್ದರೂ ಅವರ ಮೇಲೆ ಯಾವುದೇ ಕ್ರಮವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಮಾಡಿಲ್ಲ. ತನ್ನ ಕರ್ತವ್ಯವನ್ನು ಮರೆತು ಸಿಬ್ಬಂದಿ ಕೊರತೆ ಎಂಬ ಸಬೂಬು ನೀಡಿ ಮಹಾಲೆಕ್ಕಪರಿಶೋಧಕರಿಂದ ಟೀಕೆಗೆ ಒಳಗಾಗಿದೆ. ಕೆರೆಗಳ ನೀರಿನ ಗುಣಮಟ್ಟ ನಿರ್ಧರಿಸಿ, ಅದರ ಯೋಗ್ಯತೆಯನ್ನು ದಾಖಲಿಸಬೇಕು. ಕೆರೆ ಮಾಲಿನ್ಯಗೊಂಡಿದ್ದೇ ಆದರೆ, ಅದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಂಡು, ದಂಡ ವಿಧಿಸಬೇಕು. ತಮ್ಮ ವ್ಯಾಪ್ತಿಯ ಕೆರೆಗಳ ಮಾಲಿನ್ಯದ ಬಗ್ಗೆ ನಿಯಂತ್ರಣ ಹೊಂದಿರಬೇಕು. ಇದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯ. ಆದರೆ, ಈ ನಿಯಂತ್ರಣ ಹೊಂದಬೇಕಾದ ಮಂಡಳಿ ‘ಅನಿಯಂತ್ರಣ’ದ ವ್ಯವಸ್ಥೆಯಲ್ಲೇ ಮುಳುಗಿಹೋಗಿದ್ದು, ಕೆರೆಗಳ ಮಾಲಿನ್ಯದ ಬಗ್ಗೆ ಕ್ರಮವನ್ನೇ ತೆಗೆದುಕೊಂಡಿಲ್ಲ.
ಇಂತಹ ವಿಷಯವನ್ನು ಸಿಎಜಿ ವರದಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ನೀಡಲಾಗಿದೆ. ಅಷ್ಟೇ ಅಲ್ಲ, ಸಿಬ್ಬಂದಿ ಕೊರತೆ ಇದ್ದರೆ, ಬೇರೆ ಸಂಸ್ಥೆಗಳ ನೆರವು ಪಡೆದುಕೊಂಡು ಕರ್ತವ್ಯ ನಿರ್ವಹಿಸಬಹುದಾಗಿತ್ತು ಎಂದೂ ಅಭಿಪ್ರಾಯಪಟ್ಟಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಯಮಿತವಾಗಿ ಕೆರೆಗಳಲ್ಲಿನ ನೀರಿನ ಗುಣಮಟ್ಟವನ್ನು ನಿರ್ಧರಣೆ ಮಾಡಿ ಅನುಸರಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ವರದಿ ಮಾಡುವುದು ಅವಶ್ಯವಾಗಿತ್ತು. ಕೆರೆಗಳನ್ನು ಮಾಲಿನ್ಯ ಮಾಡುವವರ ಮೇಲೆ ಸಂಸ್ಥೆಯು ದಂಡ ವಿಧಿಸಬೇಕಿತ್ತು. ರಾಜ್ಯದಲ್ಲಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ೩೬,೫೬೮ ಕೆರೆಗಳ ಪೈಕಿ ಬೆಂಗಳೂರು ನಗರದ ೪೮ ಕೆರೆಗಳನ್ನು ಒಳಗೊಂಡಂತೆ, ಕೇವಲ ೧೨೦ ಕೆರೆಗಳ ಮಾಲಿನ್ಯದ ಮಟ್ಟವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮೇಲ್ವಿಚಾರಣೆ ಮಾಡಿತ್ತು ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ದಂಡ ವಿಧಿಸುವುದರ ಮತ್ತು ಮಾಲಿನ್ಯ ಉಂಟು ಮಾಡುವವರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಪಟ್ಟಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಅಪರಾಧ ಮೊಕದ್ದಮೆಯೊಂದನ್ನು ಹೂಡಿರುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ. ಆದರೆ, ಹೊರಮಾವು-ಅಗರ ಕೆರೆಗಳಂತಹ ಕೆರೆಗಳಿಗೆ ನೇರವಾಗಿ ಕೊಳಚೆ ನೀರನ್ನು ಬಿಟ್ಟು ಕೆರೆಗಳನ್ನು ಮಲಿನ ಮಾಡುತ್ತಿದ್ದ ಬಹುಮಹಡಿ ವಸತಿ ಕಟ್ಟಡಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಿಬ್ಬಂದಿ ಮತ್ತು ಹಣಕಾಸಿನ ಕೊರತೆಯಿಂದ ಎಲ್ಲ ಕೆರೆಗಳಲ್ಲಿಯೂ ನೀರಿನ ಗುಣಮಟ್ಟವನ್ನು ನಿರ್ಧರಿಸಲಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಆದರೆ, ಈ ಉತ್ತರವನ್ನು ಸಿಎಜಿ ಒಪ್ಪಲಾಗುವುದಿಲ್ಲ ಎಂದು ಹೇಳಿದೆ. ಏಕೆಂದರೆ ತನ್ನ ಕೆಲಸವನ್ನು ಸರಿಯಾಗಿ ಮಾಡುವುದು ಮತ್ತು ರಾಜ್ಯ ಸರ್ಕಾರದೊಂದಿಗೆ ಈ ವಿμಯವನ್ನು ಪ್ರಸ್ತಾಪಿಸಿ ಸಾಕμ ಸಿಬ್ಬಂದಿಯನ್ನು ಪಡೆದುಕೊಳ್ಳುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯವಾಗಿತ್ತು ಎಂದು ಹೇಳಿದೆ. ಅಲ್ಲದೆ, ಸಿಬ್ಬಂದಿಯ ಕೊರತೆಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಎಲ್ಲ ಕೆರೆಗಳ ಮಾಲಿನ್ಯ ಮಟ್ಟವನ್ನು ನಿರ್ಧರಿಸಲು ಸಾಧ್ಯವಾಗದಿದ್ದುದರಿಂದ, ಅದು ಮಾಲಿನ್ಯ ಮಟ್ಟವನ್ನು ಮತ್ತು ನೀರಿನ ಗುಣಮಟ್ಟವನ್ನು ನಿರ್ಧರಣೆ ಮಾಡುವ ಇತರೆ ಸಂಸ್ಥೆಗಳಿಂದ ಮಾಹಿತಿ ಪಡೆಯುವುದನ್ನು ಪರಿಗಣಿಸಬಹುದು ಎಂದು ಶಿಫ಼ಾgಸ್ಸನ್ನೂ ಮಾಡಿದೆ.
ಇನ್ನು, ನೀರಿನ ಎಲ್ಲ ಮೂಲಗಳನ್ನೂ ಒಳಗೊಂಡಂತೆ ಸರ್ಕಾರಿ ಭೂಮಿಗಳು ಕಂದಾಯ ಇಲಾಖೆಯ ಒಡೆತನದಲ್ಲಿರುತ್ತವೆ. ಅದು ಸಮೀಕ್ಷೆ, ಕೆರೆ ಪ್ರದೇಶದ ಗಡಿ ಗುರುತಿಸುವಿಕೆ ಮತ್ತು ಕೆರೆ ಅಂಗಳ ಪ್ರದೇಶದ ಒತ್ತುವರಿಗಳನ್ನು ತೆರವುಗೊಳಿಸುವ ಜವಾಬ್ದಾರಿ ಹೊಂದಿದೆ. ತನಗೆ ಈ ಅಧ್ಯಾದೇಶವಿದ್ದರೂ ಸಮೀಕ್ಷೆಗಳನ್ನು ನಡೆಸುವ ಮತ್ತು ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧದ ತನ್ನ ಕರ್ತವ್ಯಗಳನ್ನು ಪಾಲಿಸುವಲ್ಲಿ ಕಂದಾಯ ಇಲಾಖೆ ವಿಫಲವಾಗಿದೆ. ಕೆರೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಮರ್ಪಿತ ಸಮೀಕ್ಷೆದಾರರಿರುವ ಪ್ರತ್ಯೇಕ ಕೋಶವೊಂದನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯು ಉತ್ತರಿಸಿದೆ. ಸಮೀಕ್ಷೆಗಳಲ್ಲಿನ ಮತ್ತು ಕೆರೆ ಪ್ರದೇಶದ ಗಡಿ ಗುರುತಿಸುವಿಕೆಯಲ್ಲಿನ ಅಸಮರ್ಪಕತೆ ಹಾಗೂ ಕೆರೆ ಅಂಗಳಗಳ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿನ ವಿಫಲತೆಗಳನ್ನೂ ಸಿಎಜಿ ಅಧ್ಯಯನ ಮಾಡಿ ವರದಿ ಮಾಡಿದೆ. ಅಲ್ಲದೆ, ನಗರಾಭಿವೃದ್ಧಿ ಇಲಾಖೆಯು ತನ್ನ ಅಧಿಕಾರವ್ಯಾಪ್ತಿಯಡಿಯ ಅನುμನ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳು ಕೈಗೆತ್ತಿಕೊಳ್ಳುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಯು ಹೊಣೆಗಾರಿಕೆ ಹೊಂದಿರುತ್ತದೆ. ಆದರೆ, ಮೂಲತ: ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿದ್ದ ನಗರ ಪ್ರದೇಶದ ಕೆರೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಹೀಗೆ, ರಾಜ್ಯದ ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಕಾರ್ಯದಿಂದ ಸರ್ಕಾರಿ ಇಲಾಖೆಗಳು ಹಿಂದೇಟು ಹಾಕಿವೆ. ಸಿಎಜಿ ವರದಿಯಲ್ಲೇ ಇಂತಹ ಮಾಹಿತಿಗಳು ಬಹಿರಂಗವಾಗಿವೆ. ಆದರೆ, ಈ ಬಗ್ಗೆ ಇನ್ನೂ ಸೂಕ್ತ ಕ್ರಮಕೈಗೊಳ್ಳಬೇಕಾದ ದಿಟ್ಟ ನಿರ್ಧಾರ ಮಾತ್ರ ಆಗಿಲ್ಲ. ಇದೇ ದುಸ್ಥಿತಿ.
ಚಿತ್ರ-ಲೇಖನ: ಕೆರೆ ಮಂಜುನಾಥ್