ಕೆರೆ ನೋಟ – ನೋಟ ೧೫: ಕೆರೆ ಅಭಿವೃದ್ಧಿಗೆ ೧೪ ವರ್ಷ!
ರಾಮನಿಗೆ ವನವಾಸ ೧೪ ವರ್ಷ. ಇದು ಜನಜನಿತ. ಇದನ್ನೇ ಮಾದರಿಯಾಗಿಸಿಕೊಂಡಿದೆ ಕೆರೆ ಅಭಿವೃದ್ಧಿ ಮಾದರಿ. ಆದರೆ ೧೪ ವರ್ಷ ಕಳೆದರೂ ಒಂದು ಕೆರೆ ನಿರ್ಮಿಸಲು ಸಾಧ್ಯವಾಗಿಲ್ಲ. ಯಾವುದೋ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗೆ ಸಾಧ್ಯವಾಗದ ಮಾತಲ್ಲ. ಸರ್ಕಾರವೆಂಬ ಸರ್ಕಾರಕ್ಕೇ ಒಂದು ಕೆರೆ ನಿರ್ಮಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ೮.೫೦ ಕೋಟಿ ವೆಚ್ಚವನ್ನೂ ಮಾಡಿಯಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಆಲೂರು-ಬೇಲೂರು ಸಮೀಪ ಸಣ್ಣ ನೀರಾವರಿ ಕೆರೆ ನಿರ್ಮಾಣ ಮಾಡಲು ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ವತಿಯಿಂದ ೨೦೦೦ರ ಜನವರಿ ಯೋಜನೆಯೊಂದನು ಕೈಗೆತ್ತಿಕೊಳ್ಳಲಾಯಿತು. ಕೆರೆ ನಿರ್ಮಿಸಿ ಸುಮಾರು ೯೩೪ ಹೆಕ್ಟೇರ್ ಭೂಮಿಯನ್ನು ನೀರಾವರಿಯಾಗಿ ಮಾಡುವ ಈ ಯೋಜನೆಗೆ ನಬಾರ್ಡ್ ನೆರವೂ ಇದೆ. ಈ ಯೋಜನೆಗೆ ಸರ್ಕಾರ ೧೯೯೯ ಜೂನ್ನಲ್ಲಿ ಅನುಮೋದನೆ ನೀಡಿತು. ೨೦೦೨ ಮಾರ್ಚ್ ಒಳಗೆ ಈ ಯೋಜನೆ ೩.೬೫ ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವಂತೆ ರಾಜ್ಯ ನಿರ್ಮಾಣ ನಿಗಮಕ್ಕೆ ವಹಿಸಲಾಯಿತು. ಹೆಚ್ಚುವರಿ ಹಾಗೂ ಮತ್ತಷ್ಟು ಕಾಮಗಾರಿ ಸೇರ್ಪಡೆಯಿಂದ ಪರಿಷ್ಕೃತ ಅಂದಾಜು ೮.೩೫ ಕೋಟಿಗೆ ಏರಿಕೆಯಾಗಿ ೨೦೦೨ರ ಜುಲೈನಲ್ಲಿ ಪೂರಕ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ಈವರೆಗೆ ೮.೫೦ ಕೋಟಿ ವೆಚ್ಚ ಮಾಡಲಾಗಿದ್ದರೂ ಉದ್ದೇಶ ಈಡೇರಿಲ್ಲ. ಪರಿಷ್ಕೃತ ವೆಚ್ಚ ಇದೀಗ ೧೪.೯೪ ಕೋಟಿಗೆ ತಲುಪಿದೆ. ಕೆರೆ ನಿರ್ಮಾಣ, ಜಲಾನಯನ ಪ್ರದೇಶ ನೀರಾವರಿಯಾಗುವ ಈ ಯೋಜನೆಯಲ್ಲಿ ಏರಿ ತಳಪಾಯದ ಹೆಚ್ಚಳ, ಅಧಿಕ ಸಾಗಣೆ ವೆಚ್ಚ, ಕಾಲುವೆಯ ತುಂದಿ ಪಂಕ್ತೀಕರಣ ಮುಂತಾದ ಅಸಮರ್ಪಕ ಸಮೀಕ್ಷೆ ಹಾಗೂ ತನಿಖೆಯೇ ಈ ವಿಳಂಬಕ್ಕೆ ಕಾರಣ. ಇಚ್ಛಾಶಕ್ತಿ ಕೊರತೆಯಿಂದ ಕೆರೆ ನಿರ್ಮಾಣ ಹಾಗೂ ನೀರಾವರಿ ಕಲ್ಪಿಸುವ ಯೋಜನೆ ಅನುಷ್ಠಾನವಾಗಿಲ್ಲ ಎಂದು ಸಿಎಜಿ ವರದಿಯಲ್ಲೇ ಅಂಕಿ-ಅಂಶಗಳ ಸಹಿತ ವಿಶ್ಲೇಷಿಸಲಾಗಿದೆ.
ರಾಜ್ಯ ನಿರ್ಮಾಣ ನಿಗಮ ೬.೪೨ ಕೋಟಿ ವೆಚ್ಚದಲ್ಲಿ ಏರಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ನಬಾರ್ಡ್ನ ಪೂರ್ಣ ನೆರವು ಉಪಯೋಗಿಸಿಕೊಂಡು ನಿರ್ವಹಿಸಿದೆ. ಈ ನಿಗಮದಿಂದ ಎಲ್ಲ ಕಾಮಗಾರಿಗಳನ್ನು ವಾಪಸ್ ಪಡೆಯಲು ಸರ್ಕಾರ ೨೦೦೨ರ ಡಿಸೆಂಬರ್ನಲ್ಲಿ ಆದೇಶಿಸಿದ್ದರಿಂದ ನಂತರ ಈ ಯೋಜನೆಯ ಬಾಕಿ ಉಳಿದ ಕಾಲುವೆ, ಅಡ್ಡ ಚರಂಡಿ ಕಾಮಗಾರಿಗಳು ನಡೆಯಲಿಲ್ಲ. ೮.೫೦ ಕೋಟಿ ವೆಚ್ಚಮಾಡಲಾಗಿದ್ದರೂ, ಸಿಮೆಂಟ್ ಕಾಂಕ್ರೀಟ್ನ ಕಾಲುವೆ ನಿರ್ಮಾಣ ಪ್ರಾರಂಭವೇ ಆಗಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ದೀರ್ಘಕಾಲವೇ ಬೇಕಿದೆ ಎಂಬುದು ಬೀದರ್ ವಿಭಾಗದ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ದಾಖಲೆಗಳಿಂದ ಅರಿವಾಗಿದೆ. ಇನ್ನು ಉಳಿದಿರುವ ೨.೧೩ ಕೋಟಿಗೆ ಟೆಂಡರ್ ಕರೆಯಲಾಗಿದ್ದರೂ, ನಬಾರ್ಡ್ ಹಣಕಾಸಿನ ನೆರವು ನೀಡಲು ೨೦೦೫ರ ಜುಲೈನಲ್ಲಿ ನಿರಾಕರಿಸಿದ್ದರಿಂದ ರದ್ದುಪಡಿಸಲಾಗಿದೆ. ಕಾಲುವೆಗಳ ನಿರ್ಮಾಣಕ್ಕೆ ೬೫ ಎಕರೆ ೩೦ ಗುಂಟೆ ಭೂಸ್ವಾಧೀನ ಮಾಡಿಕೊಳ್ಳಲು ೨೫ ಲಕ್ಷ ಕಂದಾಯ ಅಧಿಕಾರಿ ಕಚೇರಿಯಲ್ಲಿ ಠೇವಣಿ ಇಡಲಾಗಿದೆ. ಅದರೆ ಉಳಿದ ಕಾಮಗಾರಿಗೆ ಸರ್ಕಾರದಿಂದ ನೆರವು ದೊರೆಯಲಿಲ್ಲ. ಬದಲಿಗೆ, ಯೋಜನೆಯ ಪರಿಷ್ಕೃತ ವೆಚ್ಚವನು ೧೪.೯೪ ಕೋಟಿಗೆ ಹೆಚ್ಚಿಸಿ ಉಳಿದ ಕಾಮಗಾರಿಯನು ತ್ವರಿತ ನೀರಾವರಿ ಲಾಭದ ಯೋಜನೆ (ಎಐಬಿಪಿ) ಅಡಿ ೬.೪೫ ವೆಚ್ಚದಲ್ಲಿ ಪೂರ್ಣಗೊಳಿಸಲು ಸರ್ಕಾರ ೨೦೦೯ರ ಸೆಪ್ಟೆಂಬರ್ನಲ್ಲಿ ಅನುಮೋದನೆ ನೀಡಿದೆ. ಯೋಜನೆ ವೆಚ್ಚ ಪರಿಷ್ಕರಣೆಯಾಗಿ ಅಧಿಕಗೊಂಡರೂ ನೀರಾವರಿ ಭೂ ಪ್ರದೇಶ ೯೩೪ ಹೆಕ್ಟೇರ್ನಿಂದ ೪೩೦ ಹೆಕ್ಟೇರ್ಗೆ ಕಡಿಮೆಯಾಗಿದೆ. ಪ್ರತಿ ಹೆಕ್ಟೇರ್ ವೆಚ್ಚ ಮೂಲದಲ್ಲಿ ೭೫ ಸಾವಿರವಾಗಿದ್ದು, ೩.೪೭ ಲಕ್ಷಕ್ಕೆ ಏರಿಕೆಯಾಗಿದೆ. ಇಷ್ಟೆಲ್ಲ ವೆಚ್ಚವಾಗಿ, ಪರಿಷ್ಕೃತಗೊಂಡು ಉಳಿದ ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದ್ದರೂ ಕಾಮಗಾರಿ ಮುಗಿಯುವ ಲಕ್ಷಣವಿಲ್ಲ. ಕೆರೆಯಲ್ಲಿ ನೀರಿದ್ದರೂ ಅದನ್ನು ಕಾಲುವೆ ವ್ಯವಸ್ಥೆ ಇಲ್ಲದ್ದರಿಂದ ಜಲಾನಯನ ಪ್ರದೇಶವನು ನೀರಾವರಿಯಾಗಿಲು ಇನೂ ಸಾಧ್ಯವಾಗಿಲ್ಲ.
ಸರ್ಕಾರಕ್ಕೆ ಈ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ೨೦೧೧ರ ಫೆಬ್ರವರಿಯಲ್ಲೇ ಸಿಎಜಿ ಗಮನಕ್ಕೆ ತಂದಿದ್ದಾರೆ. ನು ೧೮ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ೨೦೧೧ರ ಜೂನ್ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ರೀತಿಯಲ್ಲಿ ಕಾಮಗಾರಿ ಪ್ರಗತಿಯಾಗಿಲ್ಲ. ಸರ್ಕಾರದಿಂದ ಉತ್ತರವೂ ಬಂದಿಲ್ಲ. ಕೈಗಾರಿಕೆಗಾಗಿ ಲಕ್ಷಾಂತರ ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ ೨೪ ಗಂಟೆಯಲ್ಲಿ ಅನುಮತಿ ನೀಡುವ ಸರ್ಕಾರ, ನೀರಾವರಿಗಾಗಿ ೬೫ ಎಕರೆ ಭೂಮಿ ಸ್ವಾಧೀನಕ್ಕೆ ಅನುಮತಿ ನೀಡದಿರುವುದು ದುರ್ದೈವ. ಕೆರೆ ನಿರ್ಮಾಣ ಹಾಗೂ ನೀರಾವರಿ ಪ್ರದೇಶ ಕಲ್ಪಿಸುವ ತುರ್ತು ಯೋಜನೆಗೂ ಸರ್ಕಾರ ಎಂತಹ ದಿವ್ಯ ನಿರ್ಲಕ್ಷ್ಯ ಹೊಂದಿರುತ್ತವೆ ಎಂಬುದಕ್ಕೆ ಈ ಯೋಜನೆ ಸಾಕ್ಷಿ. ಸಾವಿರಾರು ಕೆರೆಗಳಲ್ಲಿ ಹೂಳುತೆಗೆದು ಅದನ್ನು ಅಭಿವೃದ್ಧಿಗೊಳಿಸುವಲ್ಲಿಯೂ ವಿಳಂಬಧೋರಣೆಯನ್ನೇ ಅನುಸರಿಸುತ್ತಿರುವ ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಒಂದು ಕೆರೆ ನಿರ್ಮಿಸಿ, ನೀರಾವರಿ ಪ್ರದೇಶ ಕಲ್ಪಿಸುವ ಯೋಜನೆ ಪೂರ್ಣಗೊಳಿಸುತ್ತದೆಯೇ ಎಂಬ ಅನುಮಾನವೂ ಇದರಿಂದ ದಟ್ಟವಾಗುತ್ತದೆ. ಕೆರೆ ನಿರ್ಮಿಸುವುದು ಎಷ್ಟು ಕಷ್ಟ ಎಂಬುದನ್ನು ಅರಿತಿರುವ ಸರ್ಕಾರ, ಉಳಿದಿರುವ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಬೇಕಿದೆ.
ಲೇಖನ: ಕೆರೆ ಮಂಜುನಾಥ್
ಚಿತ್ರ: ಸಾಂದರ್ಭಿಕ ನಕ್ಷೆ