ಮುಚ್ಚಲು ಹೊರಟ ಕೊಳವೆಬಾವಿಯೇ ಈಗ ಇಂಗುಗುಂಡಿ!
ನೀರು ಬಹಳ ಕಡಿಮೆ ಇದೆ ಎಂಬ ಕಾರಣದಿಂದ ಮುಚ್ಚಲು ಹೊರಟ ಕೊಳವೆಬಾವಿಯನ್ನೇ ಇಲ್ಲಿ ಇಂಗುಗುಂಡಿಯಾಗಿ ಪರಿವರ್ತಿಸಲಾಗಿದೆ. ಈ ಮುಂದಿನ ಮಳೆಗಾಲದಿಂದ ಭೂಮಿಯಾಳಕ್ಕೆ ನೀರು ಇಳಿಯಲಿದೆ.
ಉಡುಪಿ ಸಂತೆಕಟ್ಟೆಯಲ್ಲಿರುವ ಮೌಂಟ್ ರೋಜರಿ ಚರ್ಚ್ ಆವರಣದಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ. ಯುವಕರ ಉತ್ಸಾಹಕ್ಕೆ ಚರ್ಚ್ ಕೂಡಾ ಪ್ರೋತ್ಸಾಹ ನೀಡಿರುವುದರಿಂದ ಇಂಗುಗುಂಡಿ ತಯಾರಾಗಿದೆ.
ಚರ್ಚ್ ಆವರಣದಲ್ಲಿರುವ ಧರ್ಮಗುರುಗಳ ಮನೆಯ ಹಿಂಬದಿ ಒಂದು ವರ್ಷದ ಹಿಂದೆ ಕೊಳವೆಬಾವಿ ತೋಡಲಾಗಿತ್ತು. ೫೫೦ ಅಡಿಗಳಷ್ಟು ಆಳಕ್ಕೆ ಹೋದ ಬಳಿಕ ನೀರು ಸಿಕ್ಕಿತ್ತು. ಆದರೆ ನೀರು ಎರಡು ಮನೆಗೆ ಸಾಕಾಗುವಷ್ಟೂ ಇರದ ಕಾರಣ, ಅದನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಚರ್ಚ್ನ ಸಾಮಾಜಿಕ ಅಭಿವೃದ್ಧಿ ಆಯೋಗದ ಸಂಚಾಲಕ ಜೋಸೆಫ್ ಜಿ.ಎಂ.ರೆಬೆಲ್ಲೋ ಇದನ್ನು ಮುಚ್ಚದಿರಲು ಗುರುಗಳಾದ ಫಿಲಿಪ್ ನೇರಿ ಅರನ್ಹಾರಲ್ಲಿ ಕೇಳಿಕೊಂಡಾಗ ಅವರು ಸಮ್ಮತಿಸಿದ್ದರು. ಜೋಸೆಫ್ ಅವರು ಇದನ್ನು ಇಂಗುಗುಂಡಿಯಾಗಿ ಪರಿವರ್ತಿಸಲು ತೀರ್ಮಾನಿಸಿ, ಆಯೋಗದ ಇತರ ಸದಸ್ಯರ ಬೆಂಬಲವನ್ನು ಪಡೆದುಕೊಂಡರು.
ಕೊಳವೆಬಾವಿಯ ಸುತ್ತ ೧೦ ಅಡಿ ಅಗಲ, ೧೦ ಅಡಿ ಉದ್ದ, ಹತ್ತು ಅಡಿ ಆಳದ ಒಂದು ಗುಂಡಿ ಮಾಡಿದ್ದಾರೆ. ಕೊಳವೆ ಬಾವಿಗೆ ಹಾಕಿರುವ ಕೇಸಿಂಗ್ ಪೈಪ್ಗೆ ಅಲ್ಲಲ್ಲಿ ೫ ಮಿಲಿ ಮೀಟರ ವ್ಯಾಸದಲ್ಲಿ ರಂಧ್ರ ಕೊರೆದಿದ್ದಾರೆ. ಬಳಿಕ ಕೇಸಿಂಗ್ ಪೈಪ್ನ ರಂಧ್ರಗಳ ಸುತ್ತಲೂ ಅಕ್ವಾ ಮೆಷ್ ಅಥವಾ ನೈಲಾನ್ ಮೆಷ್ ಅಥವಾ ಮರಳು ಫಿಲ್ಟರ್ ಅಳವಡಿಸಿದ್ದಾರೆ. ಅಳವಡಿಸುವಾಗ ಅಲ್ಯುಮಿನಿಯಂ ತಂತಿ ಸುತ್ತಿದ್ದಾರೆ.
ಹೊಂಡದಲ್ಲಿ ಕೇಸಿಂಗ್ ಪೈಪ್ನ ಸುತ್ತ ೧ ಮೀಟರ್ ವ್ಯಾಸದ ಸಿಮೆಂಟ್ ರಿಂಗ್ಗಳನ್ನು ಅಳವಡಿಸಿದ್ದಾರೆ. ರಿಂಗ್ನ ಹೊರಭಾಗದಲ್ಲಿ ೪ ಅಡಿ ವರೆಗೆ ಬೋಲ್ಡ್ರಸ್ ದಪ್ಪ ಕಲ್ಲುಗಳನ್ನು ಹಾಕಿದ್ದಾರೆ. ಅದರ ಮೇಲೆ ಮಿನಿ ಜಲ್ಲಿಯನ್ನು (೪೦ ಎಂಎಂ) ೨ ಅಡಿ ಹಾಕಿ ಅದರ ಮೇಲೆ ಒಂದಡಿ ಇದ್ದಿಲು ಮತ್ತೆ ಒಂದಡಿ ಅತಿ ಸಣ್ಣ ಜಲ್ಲಿ (೨೦ ಎಂಎಂ) ಹಾಕಿದ್ದಾರೆ. ಇದಾದ ಮೇಲೆ ಗೆದ್ದಲು ನಿರೋಧಕ ಹೈಡೆನ್ಸಿಟಿ ಪೊಲಿಥಿನ್ ಮ್ಯಾಟ್ ಹಾಸಿದ್ದಾರೆ. ಇದರ ಮೇಲ್ಭಾಗದಲ್ಲಿ ೨ ಅಡಿ ದಪ್ಪದಲ್ಲಿ ಮರಳು ಹಾಸಿದ್ದಾರೆ.
ರಿಂಗ್ನ ಮೇಲ್ಭಾಗಕ್ಕೆ ಮುಚ್ಚಳ ಮಾಡಿದ್ದಾರೆ. ಇಂಗು ಗುಂಡಿಯ ಸುತ್ತ ಕಲ್ಲಿನ ತಡೆಗೋಡೆ ಕಟ್ಟಿ ಮಳೆ ನೀರು ಸುಲಭ ಮತ್ತು ಸರಾಗವಾಗಿ ಬರುವಂತೆ, ಕಸಕಡ್ಡಿ ಬಾರದಂತೆ ವ್ಯವಸ್ಥೆ ಮಾಡಿದ್ದಾರೆ. ಮಳೆಗಾಲ ಆರಂಭಗೊಳ್ಳುವ ಹೊತ್ತಿಗೆ ಇದಕ್ಕೆ ಕಸಕಡಡ್ಡಿ ಸೇರದಂತೆ ಬಲೆ ಅಳವಡಿಸಲಿದ್ದಾರೆ.
ನೀರು ಎಲ್ಲಿಂದ?
ಧರ್ಮಗುರುಗಳ ಮನೆಯ ಮೇಲೆ ಸುರಿದ ಮಳೆಯ ನೀರು ನೆಲಕ್ಕೆ ಬೀಳದಂತೆ ಸುತ್ತಲು ಪೈಪ್ ಅಳವಡಿಸಲಾಗಿದೆ. ಅದರ ನೀರು ನೇರವಾಗಿ ಈ ಇಂಗುಗುಂಡಿಗೆ ಬೀಳಲಿದೆ. ಈ ಮಳೆಗಾಲದಲ್ಲಿ ಈ ಇಂಗುಗುಂಡಿಯಲ್ಲಿ ಶೇಖರಣಾ ಶಕ್ತಿ ಎಷ್ಟಿದೆ ಎಂದು ನೋಡಿದ ಬಳಿಕ ಪಕ್ಕದ ಚರ್ಚ್ನ ಮೇಲೆ ಬೀಳುವ ನೀರನ್ನು ಕೂಡಾ ಇಲ್ಲಿಗೆ ಸಂಪರ್ಕ ನೀಡಿ ಇಂಗುವಂತೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಈ ಇಂಗುಗುಂಡಿಯಿಂದ ನೀರು ಭೂಮಿಯ ಆಳಕ್ಕೆ ಹೋಗುವುದರಿಂದ ಅಂತರ್ಜಲ ಹೆಚ್ಚಲಿದೆ. ಇದರ ಪರಿಣಾಮ ಇಲ್ಲಿಂದ ಹೋದ ನೀರಿನ ಸೆಳೆ ಯಾವ ಕಡೆ ಹೋಗಿದೆಯೋ ಅಲ್ಲಿ ನೀರಿನ ಮಟ್ಟ ಏರಳಿದೆ.
೫೫ ಲಕ್ಷ ರೂ. ವೆಚ್ಚದಲ್ಲಿ ವೈಜ್ಞಾನಿಕ ರೀತಿಯಲ್ಲಿ ನಾವು ಇಂಗು ಗುಂಡಿ ನಿರ್ಮಿಸಿದ್ದೇವೆ. ಮುಂದಿನ ತಿಂಗಳ ಪ್ರಥಮ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ರತಿ ಊರಲ್ಲಿ ೧೦ಕ್ಕೂ ಅಕ ವಿಫಲ ಕೊಳವೆಬಾವಿಗಳಿವೆ. ಹಾಗೆ ಪ್ರತಿ ಊರಲ್ಲಿ ತುಂಬಾ ಯುವಕ, ಯುವತಿ ಮಂಡಲಗಳೂ ಇವೆ. ಅವರು ಮನಸ್ಸು ಮಾಡಿದರೆ ಆ ಕೊಳವೆಬಾವಿಗಳನ್ನು ಮುಚ್ಚುವ ಬದಲು ಇಂಗುಗುಂಡಿಗಳನ್ನಾಗಿ ಪರಿವರ್ತಿಸಿದರೆ ನೀರಿನ ಸಮಸ್ಯೆಯನ್ನು ಬಹಳಷ್ಟು ತಗ್ಗಿಸಬಹುದು. ಬೇಸಿಗೆ ಬಂದಾಗ ನೀರಿಲ್ಲ ಎಂದು ಸರಕಾರವನ್ನೋ ಇನ್ಯಾರನ್ನೋ ಬೈಯ್ಯುವ ಬದಲು ಇಂಥ ಕೆಲಸ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಇದನ್ನು ಮನಸ್ಸಲ್ಲಿಟ್ಟುಕೊಂಡು ಗುರುಗಳಿಗೆ ಮನವರಿಕೆ ಮಾಡಿದೆ. ಅವರು ಒಪ್ಪಿದ್ದರಿಂದ ಹಲವರ ಸಹಕಾರದಲ್ಲಿ ಇಂಗುಗುಂಡಿ ನಿರ್ಮಿಸಲು ಸಾಧ್ಯವಾಗಿದೆ. ಆಲೆನ್ ಲೂಯಿಸ್ ಮೊದಲು ಇಂಗುಗುಂಡಿ ಮಾಹಿತಿ ನೀಡಿದ್ದರು. ಚಿತ್ರದುರ್ಗದ ಭೂಗರ್ಭ ಶಾಸ್ತ್ರಜ್ಞ ಮತ್ತು ಜಲತಜ್ಞ ಎನ್.ಜೆ. ದೇವರಾಜ ರೆಡ್ಡಿ ಅಲ್ಲಿ ೧೦೦೦ ಇಂಗುಗುಂಡಿ ಮಾಡಿರುವ ಮಾಹಿತಿ ತಿಳಿದು ಅಂತರ್ಜಾಲ ಮೂಲಕ ಅವರ ಸಂಪರ್ಕ ಪಡೆದು ಇಂಗುಗುಂಡಿ ತಯಾರಿಸುವುದನ್ನು ನಾನು ಕಲಿತಿದ್ದೆ. ಅದು ಇಲ್ಲಿ ಉಪಯೋಗವಾಗಿದೆ.
ಚಿತ್ರ-ಲೇಖನ: ಸುನಿಲ್ ಪುತ್ತೂರು