ನೀರಿಲ್ಲದ ಭೂಮಿಯಲ್ಲಿ ಅರಳಿತು ಚೆಂಡು ಹೂವು
ಚಿಕ್ಕೋಡಿಯಿಂದ ಕೇವಲ ೨ ಕಿಮೀ ಅಂತರದಲ್ಲಿರುವ ಉಮರಾಣಿ ರಸ್ತೆಯ ಮಡ್ಡಿ ಜಮೀನಿನಲ್ಲಿ ಯಾವುದೇ ರೈತ ಬೆಳೆ ಬೆಳೆಯಲು ಹಿಂಜರಿಯುವಂತಹ ಕಲ್ಲು ಮಿಶ್ರಿತ ಭೂಮಿ. ಹೇಳಲು ಹೋದರೆ ಅದೊಂದು ಪಕ್ಕ ಬರಡು ಜತೆಗೆ ಕಲ್ಲು ಭೂಮಿ ಎನ್ನುವ ಮಾತೇ ಸರಿಯಾಗಿ ಲಾಗೂ ಆಗುತ್ತದೆ. ಇಂತಹ ಭೂಮಿಯಲ್ಲಿ ಸಾವಯವ ಕೃಷಿ ಮೂಲಕ ಕೃಷಿ ಸಾಧನೆ ಮಾಡಿದವರು ಚಿಕ್ಕೋಡಿಯ ನಿವಾಸಿ ನಿವೃತ್ತ ಪ್ರೊ.ಎಸ್.ವೈ.ಹಂಜಿಯವರು. ಅವರ ಕುರಿತಾದ ಯಶೋಗಾಥೆ ಇಲ್ಲಿದೆ.
ಒಟ್ಟು ೫ ಎಕರೆ ಕಲ್ಲು ಮಿಶ್ರಿತ ಮಡ್ಡಿ ಭೂಮಿಯಲ್ಲಿ ೨ ಎಕರೆ ಚೆಂಡು ಹಾಗೂ ಬಾಳೆ ಎಂಬ ಮಿಶ್ರ ಬೆಳೆ ಬೆಳೆದು ಬರಡು ಭೂಮಿಯನ್ನು ಸಂಪೂರ್ಣ ಬದಲಾಯಿಸಿ ಬದುಕು ಹಸನಾಗಿಸಿಕೊಂಡಿದ್ದಾರೆ. ಸಾವಯವ ಕೃಷಿಯಿಂದ ರೈತರ ಕಣ್ಣುಗಳ ಚಿತ್ತ ತಮ್ಮ ಜಮನೀನತ್ತ ತಿರುಗಿ ಚೆಂಡು ಹೂವುಗಳತ್ತ ನೋಡುವಂತೆ ಮಾಡಿದ್ದಾರೆ.
ಕೃಷಿಯಲ್ಲಿ ಬದುಕು ಕಟ್ಟುವ ಆಸೆ:
ಇವರ ಕುಟುಂಬ ಹಿಂದಿನಿಂದಲೂ ಕೃಷಿಯಲ್ಲಿ ತೊಡಗಿರುವದರಿಂದ ಇವರಿಗೆ ಕೃಷಿ ಎಂದರೆ ಇಷ್ಟ. ನಿವೃತ್ತ ಪ್ರೊಫೆಸರ್ ಆಗಿರುವ ಇವರು ಬರುವ ಪಿಂಚಣಿ ಹಣದಿಂದ ರಾಜಾರೋಷವಾಗಿ ತಮ್ಮ ಜೀವನ ಸಾಗಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಮೊದಲ ಪ್ರಯೋಗವಾಗಿ ಈಗ ಚೆಂಡು ಹೂವು ಬೆಳೆಯನ್ನು ಬೆಳದು ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ. ೫ಎಕರೆ ಮಡ್ಡಿ ಜಮೀನನ್ನು ನಿವೃತ್ತಿ ನಂತರ ಬಂದ ಹಣದಲ್ಲಿ ಖರೀದಿಸಿ ೨ ಎಕರೆಯ ಜಮೀನನ್ನು ಜೆಸಿಬಿ ಯಂತ್ರಗಳಿಂದ ಭೂಮಿ ಸಮತಟ್ಟಾಗಿ ಮಾಡಿದ್ದಾರೆ.
ಅಲ್ಲದೇ ಈ ಜಮೀನಿನಲ್ಲಿ ಬೋರವೆಲ್ ಕೊರೆಯಿಸಿ ಅಲ್ಲೇ ಸನಿಹದಲ್ಲೇ ೪೦ ಅಡಿಯಲ್ಲಿ ಬಾವಿ ಕೊರೆಸಿದ್ದಾರೆ. ನಿತ್ಯ ಬೋರ್ನಿಂದ ಈ ಬಾವಿಯೊಳಗೆ ನೀರನ್ನು ಸಂಗ್ರಹಿಸಿ ತಮಗೆ ಬೇಕಾದಷ್ಟು ನೀರನ್ನು ಬಾ
ವಿಯಿಂದ ಈ ಜಮೀನುಗಳಿಗೆ ಪೂರೈಸಲಾಗುತ್ತಿದೆ. ಅಲ್ಲದೇ ಈ ಚೆಂಡು ಹೂವಿನ ಜಮೀನಿಗೆ ಹನಿ ನೀರಾವರಿ ಮಾಡಲಾಗಿದೆ. ಒಟ್ಟಾರೆ ಈ ಜಮೀನಿಗೆ ಉತ್ತಮವಾದ ಮಣ್ಣನ್ನು ಹಾಕಿ ಪಾಳು ಭೂಮಿಯಲ್ಲಿ ನಂದನವನ ಮಾಡಿದ್ದಾರೆ. ಆದರೆ ಸುತ್ತಮುತ್ತ ಕಲ್ಲು ಮುಳ್ಳು ತುಂಬಿರುವ ಮಡ್ಡಿ ಪ್ರದೇಶದಲ್ಲಿ ಚೆಂಡು ಹೂವಿನ ಜಮೀನು ಮಾತ್ರ ಇಡಿ ಮಡ್ಡಿ ಜಮೀನನ್ನು ಆಕರ್ಷಿಸುವಂತೆ ಮಾಡಿ ಬಂಗಾರ ಬೆಳೆ ಬೆಳೆದಿದ್ದಾರೆ.
೨ ಎಕರೆ ಜಮೀನಿನಲ್ಲಿ ಬೆಳೆದ ಚೆಂಡು ಹೂವನ್ನು ೪ ದಿವಸಕ್ಕೊಮ್ಮೆ ೪ ಕ್ವಿಂಟಲ್ ಹೂವು ಮುಂಬೈಗೆ ಮಾರಾಟವಾಗುತ್ತಿದೆ. ಇದು ಪ್ರತಿ ಕೆಜಿಗೆ ೩೦ ರೂ. ದಿಂದ ೧೦೦ರೂ ವರೆಗೆ ಮಾರಾಟವಾಗುತ್ತಿದೆ. ಹಬ್ಬ ದಿನಗಳಲ್ಲಂತೂ ಹೂವಿನ ದರ ಮಾತ್ರ ಏರಿಕೆಯಾಗಿ ಹೆಚ್ಚಿನ ಫಸಲು ನೀಡುವಂತಾಗಿದೆ. ೪ ದಿವಸಗಳಿಗೊಮ್ಮೆ ಕಟಾವು ಮಾಡುವ ಚೆಂಡು ಹೂವುಗಳನ್ನು ಪ್ಲಾಸ್ಟಿಕ್ ಬಾಕ್ಸ್ದಲ್ಲಿ ತುಂಬಲಾಗುತ್ತದೆ. ಪ್ರತಿ ಬಾಕ್ಸನಲ್ಲಿ ೧೫ ಕೆಜಿ ಹೂವುಗಳನ್ನು ಹಾಕಿ ಮುಂಬೈಗೆ ಮಾರಾಟ ಮಾಡಲಾಗುತ್ತದೆ.
ಒಂದೇ ಜಮೀನಿನಲ್ಲಿ ಉಪ ಬೆಳೆ:
ಪ್ರತಿ ೫-೬ರಲ್ಲಿ ಬಾಳೆ ಸಸಿ ಹಾಗೂ ೨ ಪುಟಗೊಂದರಂತೆ ೧ ಚೆಂಡು ಹೂವಿನ ಸಸಿ ನೆಡಲಾಗಿದೆ. ಆದರೆ ಎರಡು ಬೆಳೆಗಳಿಗೆ ಒಮ್ಮೆಲೆ ಕೆಲಸ ಮಾಡುವರಿಂದ ಹಣ ಹಾಗೂ ವೇಳೆ ಉಳಿಸಬಹುದಾಗಿದೆ. ಈ ರೀತಿ ಮಿಶ್ರ ಬೆಳೆಯಿಂದ ಚೆಂಡು ಹೂವಿನ ಬೆಳೆ ನಂತರ ಬಾಳೆ ಬೆಳೆಗೂ ಲಾಭ ಪಡೆಯಬಹುದಾಗಿದೆ ಎಂದು ಹಂಜಿ ಅವರು ಮಾಹಿತಿ ನೀಡಿದ್ದಾರೆ.
ಮಡ್ಡಿ ಜಮೀನಿನಲ್ಲಿ ಬೆಳೆ ಬೆಳೆಯುವುದು ಒಂದು ರೀತಿಯ ಕಠಿಣ ಪರಿಶ್ರಮ. ಒಂದೇ ಜಮೀನಿನಲ್ಲಿ ಚೆಂಡು ಮತ್ತು ಬಾಳೆ ಬೆಳೆ ಬೆಳೆಯುವದರಿಂದ ಲಾಭ ಗಳಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಪಾಳು ಬಿದ್ದಿರುವ ಜಮೀನಿನಲ್ಲಿ ವಿವಿಧ ಹಣ್ಣಿನ ತೋಟ ಮಾಡಲು ಸಾಕಷ್ಟು ಸಿದ್ಧತೆ ಮಾಡಿದ್ದೇನೆ. ಒಟ್ಟಾರೆ ಸಾವಯವ ಕೃಷಿಯಿಂದ ನಮ್ಮ ಮುಖದಲ್ಲಿ ಖುಷಿ ತಂದಿದೆ ಎನ್ನುವುದು ನಿವೃತ್ತ ಪ್ರೊಪೆಸರ್ಎಸ್.ವೈ.ಹಂಜಿ, ಚಿಕ್ಕೋಡಿ ಅವರ ಮಾತು.
ಚಿತ್ರ-ಲೇಖನ: ಸುನಿಲ್ ಪುತ್ತೂರು