ಎಂದೂ ಬಗೆಹರಿಯದ ಬಿಂಗೀಪುರ ಸಮಸ್ಯೆ…….(ಬಿಂಗೀಪುರದ ಕತೆ..(ಕೆರೆ) ವ್ಯಥೆ..)
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಎಸ್. ಬಿಂಗೀಪುರದಲ್ಲಿ ಕಸ ಎಸೆಯದಂತೆ ಅಲ್ಲಿನ ಸ್ಥಳೀಯರು ನಡೆಸುತ್ತಿರುವ ಡಂಪಿಂಗ್ ಯಾರ್ಡ್ ನ ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದುದರಿಂದ ಬಿಬಿಎಂಪಿಗೆ ಈ ಸಮಸ್ಯೆ ಬಗೆಹರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದ್ರೆ ರಾಜಕಾರಣಿಗಳ ಬಣ್ಣದ ಮಾತಿನ ಭರವಸೆಗಳ ಮೂಲಕ ಸಧ್ಯಕ್ಕೆ ಜನ ಪ್ರತಿಭಟನೆಯನ್ನೇನೋ ನಿಲ್ಲಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಮತ್ತು ನಗರ ಉಸ್ತುವಾರಿ ಸಚಿವರು ಸಧ್ಯಕ್ಕೇನೋ ಸ್ಥಳೀಯರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ ಮತ್ತು 2 ತಿಂಗಳ ವರೆಗೆ ಕಾಲಾವಕಾಶವನ್ನೇನೋ ಪಡೆದಿದ್ದಾರೆ. ಆದ್ರೆ ಇಲ್ಲಿಗೆ ಬಿಂಗೀಪುರದ ಜನರ ಸಮಸ್ಯೆ ಮುಗಿಯಿತಾ ಎಂದರೆ ಅದಕ್ಕೆ ಸಿಗುವ ಉತ್ತರ ಸಮಸ್ಯೆ ಇಲ್ಲಿಂದ ಶುರುವಾಯಿತು ಎನ್ನುವುದು. ಎರಡು ತಿಂಗಳ ನಂತರ ಬಿಬಿಎಂಪಿ ಇಲ್ಲಿ ಕಸ ಸುರಿಯುವುದನ್ನ ನಿಲ್ಲಿಸಬಹುದು ಅನ್ನೋಣ. ಮತ್ತು ಮಾನ್ಯ ಉಸ್ತುವಾರಿ ಸಚಿವರು ಹೇಳಿದಂತೆ ಬಿಂಗೀಪುರ ಡಂಪಿಂಗ್ ಯಾರ್ಡ್ ನ್ನ ಒಂದು ಸುಂದರ ಉದ್ಯಾನವನವನ್ನಾಗಿ ನಿರ್ಮಿಸುತ್ತಾರೆ ಎಂದೊಕೊಳ್ಳೋಣ… ಹಾಗಾದರೆ ಬಿಂಗೀಪುರದ ಜನರ ಸಮಸ್ಯೆ ಇಲ್ಲಿಗೆ ಮುಗಿಯಿತೇ…? ಹಾಗೆಂದುಕೊಂಡಾಗ ಸಿಗುವ ಉತ್ತರ ಖಂಡಿತಾ ನೋ ನೋ ನೋ ಎನ್ನುವುದಾಗಿರುತ್ತದೆ…
ಇನ್ನು ಒಪ್ಪಿಕೊಳ್ಳೋಣ ಇದರಿಂದಾಗಿ ಡಂಪಿಂಗ್ ಯಾರ್ಡ್ ನಿಂದ ಹೊರಬರುವ ಗಬ್ಬು ವಾಸನೆ ಮತ್ತು ಯಮಸ್ವರೂಪಿ ನೊಣ ಸೊಳ್ಳೆಗಳಿಗೇನೋ ಮುಕ್ತಿ ಸಿಗಬಹುದು. ಆದರೆ ಈಗ ಸಮಸ್ಯೆ ಬಂದಿರುವುದು ಅದಲ್ಲ ಬದಲಾಗಿ ಬಿಬಿಎಂಪಿ ಈ ಕ್ವಾರಿಯ ಸುಮಾರು 22 ಎಕೆರೆ ಜಾಗದಲ್ಲಿ ನಗರದ ಎಲ್ಲ ಕಸವನ್ನ ಕಳೆದ ಮೂರು ವರ್ಷಗಳಿಂದ ಡಂಪ್ ಮಾಡಿ ಹಾಕಿದ್ದರಿಂದಾಗಿ ಅಲ್ಲಿನ ಜಲಸಂಪನ್ಮೂಲ ಈಗ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ…. ಮುಂದೆಂದೂ ಆ ಅಂತರ್ಜಲ ಸರಿಯಾಗದ ಮಟ್ಟಿಗೆ ಅದು ಮಿತಿಮೀರಿ ಹೋಗಿದೆ. ಅದೊಂದು ರೀತಿ ಅಲ್ಲಿನ ಭೂಮಿಗೆ ಅಂಟಿದ ಕ್ಯಾನ್ಸರ್.. ಮುಂದೆಂದೂ ಆ ಕಾಯಿಲೆಯಿಂದ ಗುಣಮುಖಲಾಗದ ಮಟ್ಟಿಗೆ ಆ ಕಾಯಿಲೆ ಅಲ್ಲಿನ ಭೂಮಿಗೆ ಒಕ್ಕರಿಸಿಕೊಂಡಿದೆ…..
ಕಸವನ್ನ 100 ಅಡಿಗಳ ಆಳದಲ್ಲಿ ಮಣ್ಣಲ್ಲಿ ಹೂತಿಟ್ಟು ಮೇಲೆ ಅದನ್ನ ಒಂದು ಸುಂದರ ಉದ್ಯಾನವನವನ್ನಾಗಿ ಮಾಡಿ ಇಲ್ಲಿ ಜನ ನೆಮ್ಮದಿಯಿಂದ ಬದುಕುವಂತೆ ಅನುವು ಮಾಡಿಕೊಡುತ್ತೇವೆ ಎಂದರೆ ಇದು ಎಂತಹ ದುರ್ದೈವ ಅಲ್ಲವೇ…?… ಈಗಾಗಲೇ ಬಿಂಗೀಪುರ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಾದ ಬೆಟ್ಟದಾಸಪುರ ಮತ್ತಿತರೆ ಹಳ್ಳಿಗಳ ಅಂತರ್ಜಲ ಮುಂದೆಂದೂ ಸರಿಯಯಾಗದ ರೀತಿಯಲ್ಲಿ ಕೆಟ್ಟು ಹೋಗಿದೆ. ಅಂದರೆ ಅಲ್ಲಿಯ ಯಾವುದೇ ಬೋರ್ ವೆಲ್ ಗಳನ್ನ ಗಮನಿಸಿದರೂ, ಅವುಗಳಿಂದ ಸಗಣಿ ಕರಡಿದಾಗ ಬರುವ ರೀತಿಯ ನೀರು ಹೊರಬರುತ್ತದೆ. ಹೀಗಿರುವಾಗ ಇದನ್ನೊಂದು ಉದ್ಯಾನವನವನ್ನಾಗಿ ನಿರ್ಮಿಸಿದರೆ ಅವರ ಸಮಸ್ಯೆ ಬಗೆಹರಿಯುವುದೇ…? ಮುಂದೆ ಆ ಜನ ಅಲ್ಲಿಯ ಬೋರ್ ನೀರನ್ನ ಕುಡಿಯಲು ಹೋಗಲಿ ಸ್ನಾನ ಇಲ್ಲ ಬಟ್ಟೆ ತೊಳೆಯಲಿಕ್ಕಾದರೂ ಬಳಸಬಹುದೇ…? ಬಟ್ಟೆ ಇಲ್ಲ ಸ್ನಾನಕ್ಕೆ ಬಳಸಿದರೆ ಈ ಕೋಟ್ಯಾನುಕೋಟಿ ಘನ ತ್ಯಾಜ್ಯದ ನೀರೇ ಆ ಬೋರ್ ವೆಲ್ ನಿಂದ ಹೊರ ಬರುವುದರಿಂದ ಅವರು ತಮ್ಮ ಮೈಯನ್ನೇ ಸಾಂಕ್ರಾಮಿಕ ಇಲ್ಲವೇ ಚರ್ಮರೋಗಕ್ಕೆ ಒಡ್ಡಿಕೊಳ್ಳಲು ತಾವೇ ಅವಕಾಶ ಮಾಡಿಕೊಟ್ಟಂತೆ ಅಲ್ಲವೇ…. ಹೀಗಿರುವಾಗ ಬಿಬಿಎಂಪಿ ಅವರಿಗೆ ಕುಡಿಯಲು ಕಾವೇರಿ ನೀರನ್ನೇನೋ ಕೊಡಬಹುದು (ಕಾವೇರಿ ನೀರು ನೀಡಲು ಸರ್ಕಾರದಿಂದ ಹಣ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ) ಆದ್ರೆ ಅಲ್ಲಿನ ಜಲಮೂಲವೇ ಸಂಪೂರ್ಣವಾಗಿ ನಾಶವಾಗಿದೆಯಲ್ಲ! ಈ ಜಲ ಸಂಪತ್ತನ್ನ ಮುಂದೆಂದಾದರು ಬಿಬಿಎಂಪಿ ಯಿಂದ ಸರಿಪಡಿಸಲು ಸಾಧ್ಯವೇ….? ಹೀಗೆಂದುಕೊಂಡಾಗ ನಮಗೆ ಸಿಗುವ ಉತ್ತರ ಏಡ್ಸ್ ಕೂಡಾ ಗುಣಮುಖವಾಗುತ್ತದೆ ಎಂದಂತಾಗುತ್ತದೆ. ಈ ರೀತಿಯ ಏಡ್ಸ್ ಕಾಯಿಲೆ ಈಗ ಬಿಂಗೀಪುರ ಡಂಪಿಂಗ್ ಯಾರ್ಡ್ ನ ಸುತ್ತಮುತ್ತಲಿನ ಊರುಗಳನ್ನ ಆವರಿಸಿದೆ.
ಇನ್ನು ಬಿಂಗೀಪುರ ಬೆಂಗಳೂರಿನ ಬಗಲಲ್ಲೇ ಇದೆ. ಹಾಗಾಗಿ ಅಲ್ಲಿ ರೈತರು ಇಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು… ಅಲ್ಲಿಯೂ ಕೂಡಾ ಸಾಕಷ್ಟು ಮಂದಿ ರೈತರಿದ್ದಾರೆ. ರಾಗಿ ಭತ್ತ ಮತ್ತಿತರೆ ಬೆಳೆಗಳನ್ನ ಅವರು ಅಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿ ಕಸ ಹಾಕುವ ಮುನ್ನ ಎಸ್ ಬಿಂಗೀಪುರದ ಕೆರೆಯಲ್ಲಿ ತುಂಬಾ ಉತ್ತಮವಾದ ನೀರು ಇರುತ್ತಿತ್ತು. ಜನ ಜಾನುವಾರುಗಳೆಲ್ಲ ಅದೇ ನೀರನ್ನೇ ಕುಡಿಯುತ್ತಿದ್ದರು. ಆದ್ರೆ ಈಗ ಬಿಂಗೀಪುರದಲ್ಲಿ ಕೆರೆ ಇರುವುದೇ ಜನರಿಗೆ ಒಂದು ರೀತಿಯಲ್ಲಿ ಶಾಪವಾಗಿ ಪರಿಣಮಿಸಿದೆ. ಬಿಂಗೀಪುರ ಡಂಪಿಂಗ್ ಯಾರ್ಡ್ ನ ಕೆಳಭಾಗದಲ್ಲೇ ಬಿಂಗೀಪುರದ ಕೆರೆ ಇದೆ. ಡಂಪಿಂಗ್ ಯಾರ್ಡ್ ನ ನೀರು ಈಗ ನೇರವಾಗಿ ಕೆರೆ ಸೇರುತ್ತಿದ್ದು ಆ ಕೆರೆಗೆ ಕೂಡಾ ಕ್ಯಾನ್ಸರ್ ಒಕ್ಕರಿಸಿಕೊಂಡಿದೆ. ಇನ್ನು ಆ ಕೆರೆ ನೀರನ್ನ ಕುಡಿಯುವ ಕುರಿಗಳು ಮತ್ತು ಜಾನುವಾರುಗಳಿಗೆ ಯಾವ ಕಾಯಿಲೆ ಬಂದಿರಬಹುದು ನೀವೇ ಊಹಿಸಿ… ಸಾಕಷ್ಟು ಜಾನುವಾರುಗಳು ಮತ್ತು ಕುರಿಗಳು ಇಲ್ಲಿನ ಕೆರೆ ನೀರು ಕುಡಿದು ಸತ್ತಿದ್ದು ಈಗ ಇತಿಹಾಸ ಬಿಡಿ…
ಕೆರೆಗೆ ಬಂದ ಕ್ಯಾನ್ಸರ್ ನಿಂದ ಇನ್ನೆಷ್ಟು ಸಾಕುಪ್ರಾಣಿಗಳು ಬಲಿಯಾಗಬೇಕೋ ಆ ದೇವರೇ ಬಲ್ಲ. ನಾವು ಗಮನಿಸಿದಂತೆ ಅಲ್ಲಿ ಪಕ್ಕದಲ್ಲೊಬ್ಬ ರೈತನ ರಾಗಿ ಬೆಳೆಗೆ ಕೆರೆಯಲ್ಲಿ ಸಂಗ್ರಹವಾದ ಘನತ್ಯಾಜ್ಯದ ನೀರು ಧುಮುಖಿ ರಾಗಿ ಬೆಳೆಯೇ ಸುಟ್ಟು ಕರಕಲಾಗಿದೆ. ಕೆರೆ ದಂಡೆಯ ಮೇಲಿದ್ದ ನೀಲಗಿರಿ ಮರಗಳೇ ರಾಸಾಯನಿಕದ ವಿಷದಿಂದ ಒಣಗಿ ಹೋಗಿರುವಾಗ, ರಾಗಿ ಬೆಳೆ ಸುಟ್ಟು ಹೋಗುವುದು ಯಾವ ದೊಡ್ಡ ಮಾತು ಬಿಡಿ…
ಇನ್ನು ಈಗ ಅಲ್ಲಿನ ರೈತರ ಸಮಸ್ಯೆ ಇರುವುದು ಅದಲ್ಲ – ಘನತ್ಯಾಜ್ಯದಿಂದ ಬಿಂಗೀಪುರ ಕೆರೆ ಸಂಪೂರ್ಣವಾಗಿ ತುಂಬಿಹೋಗಿದೆ. ಒಂದು ಮಳೆ ಬಂದರೆ ಸಾಕು, ಕೆರೆ ಕೋಡಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ನಾವು ವರದಿಗೆಂದು ತೆರಳಿದಾಗ ಅಲ್ಲಿನ ರೈತನೊಬ್ಬನನ್ನ ಮಾತನಾಡಿಸಿದೆವು. ಆತ ಹೇಳಿದ್ದು ಒಂದೇ ಮಾತು, “ಕೆರೆ ಘನ ತ್ಯಾಜ್ಯದ ನೀರಿನಿಂದ ತುಂಬಿ ಹೋಗಿದೆ ಕೆರೆಗಳ ಕೆಳಭಾಗದಲ್ಲಿ ನನ್ನ ಜಮೀನಿದೆ ಮೊದಲೇ ಈ ಸಮಸ್ಯೆಯಿಂದ ಸರಿಯಾದ ಬೆಳೆ ಬಂದಿಲ್ಲ ಇನ್ನು ಕೋಡಿ ಒಡೆದು ರಾಸಾಯನಿಕ ಯುಕ್ತ ನೀರು ಬೆಳೆ ಮೇಲೆ ಹರಿದರೆ ನನ್ನ ಗತಿಯೇನು ಸ್ವಾಮಿ,” ಎಂದು ಅಂಗಲಾಚಿದ.. ಯಾರು ಮಾಡಿದೆ ತಪ್ಪಿಗಾಗಿ ಇಲ್ಲಿನ ರೈತ ಮತ್ತು ಜನ ಜಾನುವಾರಿಗಳಿಗೆ ಈ ಶಿಕ್ಷೆ…?
ಬಿಂಗೀಪುರದ ಗೋಮಾಳ ಜಾಗದಲ್ಲಿ ಕ್ವಾರಿ ತೆಗೆದು ಆ ಜಾಗದಲ್ಲಿ ನಂತರ ಕಸ ಹಾಕಲು ಪ್ಲಾನ್ ಮಾಡಿ, ಇಡೀ ಊರಿನ ಜಲಮೂಲವನ್ನೇ ಹಾಳುಗೆಡವಿ, ಅಲ್ಲಿನ ಭೂಸಂಪತ್ತು ಮತ್ತು ಜಲ ಸಂಪತ್ತನ್ನೇ ನಾಶಗೊಳಿಸಿ, ಬಿಬಿಎಂಪಿಯಿಂದ ಮುಂದೆ ಇಲ್ಲಿ ನಿಮಗೆಲ್ಲ ಅನುಕೂಲವಾಗುವಂತೆ ಇದನ್ನೊಂದು ಉದ್ಯಾನವನವನ್ನಾಗಿ ನಿರ್ಮಿಸುತ್ತೇವೆ ಎಂದು ಸಾವಿನ ಮೇಲೆ ಸಮಾಧಿ ಕಟ್ಟುವವರಂತೆ ಮಾತನಾಡುವುದು ಎಷ್ಟು ಹಾಸ್ಯಾಸ್ಪದ ಅಲ್ಲವೇ…..!
ಚಿತ್ರ-ಲೇಖನ:- ಜಗದೀಶ್ ಹೊನಗೋಡು