ಜಲಸಂಪತ್ತಿನ ರಕ್ಷಕ
ಜಲ ಸಂರಕ್ಷಣೆಯಲ್ಲಿ ಮೌನ ಕ್ರಾಂತಿ ಮಾಡುತ್ತಿರುವ ಅಂಗಡಿ ಮಾಸ್ತರ್
ಒಂಭತ್ತು ತಿಂಗಳು ಹೆತ್ತು, ಹೊತ್ತ ಮಕ್ಕಳು ಮುಂದೊಂದು ದಿನ ತಂದೆ-ತಾಯಿಯನ್ನು ನೋಡದಿರಬಹುದು. ಆದರೆ ಮಕ್ಕಳಂತೆ ಈ ನಿಸರ್ಗವನ್ನು ಪ್ರೀತಿಸಿದರೆ ಅದು ನಮ್ಮನ್ನು ಎಂದೂ ಕೈಬಿಡುವುದಿಲ್ಲ ಎಂಬ ಉದ್ದೇಶದೊಂದಿಗೆ, ತಮ್ಮ ಜಮೀನಿನಲ್ಲಿ ಕಾಡುಮರಗಳನ್ನು ಬೆಳೆಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಪ್ರಯತ್ನಿಸುತ್ತಿರುವ ನಿಸರ್ಗಪ್ರಿಯ ವ್ಯಕ್ತಿಯೋರ್ವರು ನಮ್ಮ ಮಧ್ಯೆ ಇದ್ದಾರೆ.
ಇನ್ನು ತಮ್ಮ ಜಮೀನಿನಲ್ಲಿ ಅವರು ಬೆಳೆಸಿದ ಗಿಡ-ಮರಗಳು ಅವರಿಗೆ ಆದಾಯ ಕೊಡುವಂತಹವಲ್ಲ. ಬದಲಾಗಿ, ಅಂತರ್ಜಲ ಹೆಚ್ಚಳಕ್ಕೆ ಉಪಯೋಗವಾಗುವಂತಹವು. ಹಾಗಾಗಿ ತಮಗೆ ಆದಾಯವಿಲ್ಲದಿದ್ದರೂ, ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ತಮ್ಮ ಜಮೀನಿನ ತುಂಬೆಲ್ಲ ಕಾಡುಮರಗಳನ್ನು ಬೆಳೆಸುವ ಮೂಲಕ, ಅಂತರ್ಜಲ ಹೆಚ್ಚಿಸಲು ಮೌನ ಕ್ರಾಂತಿ ಮಾಡುತ್ತಿರುವ ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ ನಿವೃತ್ತ ಉಪನ್ಯಾಸಕ ವಿ.ಎಫ್.ಅಂಗಡಿ ಅವರು.
ಸತ್ಯ, ಸಚ್ಚಾರಿತ್ರ್ಯದ ಮೂಲಕ ಖಾದಿ ಬಟ್ಟೆಯನ್ನು ಧರಿಸುವ ಇವರು, ಗಾಂಧಿ ತತ್ವದಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡವರು. ಮುಂಡರಗಿಯ ಪ್ರತಿಷ್ಠಿತ ಅನ್ನದಾನೀಶ್ವರ ವಿದ್ಯಾಸಂಸ್ಥೆಯ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.
ವಿ.ಎಫ್.ಅಂಗಡಿ ಅವರಿಗೆ ಪರಿಸರದ ಬಗ್ಗೆ ಎಲ್ಲಿಲ್ಲದ ಕಾಳಜಿ. ನಮ್ಮ ಪರಿಸರ ಉಳಿದರೆ ಮಾತ್ರ ಜಲ ಸಂಪತ್ತು ಉಳಿಯಲು ಸಾಧ್ಯ. ಹಾಗಾಗಿ ಗಿಡಮರಗಳನ್ನು ಬೆಳೆಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಬೇಕು ಎಂಬುದು ಅಂಗಡಿ ಮಾಸ್ತರ ಕಳಕಳಿಯಾಗಿದೆ.
ಬೀದಿ ನಾಟಕದ ಮೂಲಕ ಜಾಗೃತಿ
ವಿ.ಎಫ್.ಅಂಗಡಿ ಅವರು ಅಂತರ್ಜಲ ಹೆಚ್ಚಳ ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಸ್ವತ: ತಾವೇ ತಂಡ ಒಂದನ್ನು ಕಟ್ಟಿಕೊಂಡು, ತಾಲೂಕಿನ ಸುಮಾರು ೨೦ಕ್ಕೂ ಹೆಚ್ಚು ಹಳ್ಳಿ ಅಲೆಯುವ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಕೇವಲ ಹೇಳುವುದಾಗಬಾರದು, ಹೇಳಿದಂತೆ ನಡೆದುಕೊಳ್ಳಬೇಕು ಎನ್ನುವ ತತ್ವದಲ್ಲಿ ಅಪಾರ ನಂಬುಗೆಯನ್ನಿಟ್ಟುಕೊಂಡಿರುವ ಅಂಗಡಿ ಅವರು, ತಮಗಿರುವ ೧೦ಎಕರೆ ಜಮೀನಿನಲ್ಲಿ ಕಾಡು ಮರಗಳನ್ನು ಬೆಳೆಸಿದ್ದಾರೆ.
ಹೆಚ್ಚಾಗುತ್ತಿದೆ ಅಂತರ್ಜಲ
ವ್ಯಾವಹಾರಿಕ ದೃಷ್ಠಿಕೋನದಿಂದ ಇಂದು ಕಾಡು ಬೆಳೆಸುತ್ತಿರುವುದು ಸಾಮಾನ್ಯ. ಆದರೆ ಯಾವುದೇ ನಿರೀಕ್ಷೆಗಳಿಲ್ಲದೆ, ನಿಸರ್ಗದ ಉಳಿವಿಗಾಗಿ ಸಾವಿರಾರು ಕಾಡು ಸಸಿಗಳನ್ನು ಬೆಳೆಸುತ್ತಿರುವ ಇವರ ಶ್ರಮಕ್ಕೆ ಬೆಲೆ ಕಟ್ಟಲು ಅಸಾಧ್ಯ. ಪರಿಸರ ರಕ್ಷಣೆಯೇ ನಮ್ಮ ಉದ್ದೇಶವೆಂದು ಹೇಳಿಕೊಳ್ಳುವ ಕೆಲವು ಡೊಂಘಿ ಪರಿಸರ ಪ್ರೇಮಿಗಳಿಗೆ ಇವರನ್ನು ಹೋಲಿಸುವದಂತು ಮಹಾಪರಾಧವೇ ಸರಿ. ತಮಗಿರುವ ೧೦ ಎಕರೆ ಜಮೀನಿನಲ್ಲಿ ಕಾಡು ಸಸಿಗಳನ್ನು ಬೆಳೆಸಿ, ಉತ್ತಮ ನೈಸರ್ಗಿಕ ವಾತಾವರಣ ನಿರ್ಮಿಸಿದ್ದಾರೆ. ಇದರ ಪರಿಣಾಮವಾಗಿ, ಇಂದು ಅವರ ಜಮೀನಿನ ಸುತ್ತಮುತ್ತಲೂ ಅಂತರ್ಜಲ ಪ್ರಮಾಣವು ಕೂಡ ಹೆಚ್ಚಾಗಿದೆ. ಇದರೊಂದಿಗೆ ಅದೇ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ, ಅಂತರ್ಜಲ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಇದರಿಂದಾಗಿ, ಇಂದು ಇವರ ಜಮೀನಿನ ಸುತ್ತಮುತ್ತಲಿನ ರೈತರು ೬೦-೭೦ ಫ಼ುಟ್ಗೆ ನೀರು ಪಡೆಯುವಂತಾಗಿದೆ. ಈ ಮೊದಲು, ೨೦೦-೨೫೦ ಫ಼ುಟ್ವರೆಗೆ ಅಂತರ್ಜಲ ಪಾತಾಳಕ್ಕಿಳಿದಿತ್ತು. ಹಾಗಾಗಿ, ಮುಂಡರಗಿಯಂತಹ ಪಟ್ಟಣದಲ್ಲಿ ಅಂಗಡಿ ಮಾಸ್ತರ್ ಮಾಡುತ್ತಿರುವಂತಹ ಈ ಕಾರ್ಯ ಶ್ಲಾಘನೀಯವಾಗಿದ್ದು, ಸರಕಾರ ಪ್ರತಿ ವರ್ಷ ಲಕ್ಷಾಂತರ ಗಿಡಿ-ಮರಗಳನ್ನು ಬೆಳೆಸುತ್ತದೆ. ಆದರೆ ಅವುಗಳು ಬೆಳೆಯುವುದು ಕಷ್ಟಸಾಧ್ಯ. ಪ್ರಾಮಾಣಿಕ ಪ್ರಯತ್ನ, ನಿಜವಾದ ಕಾಳಜಿಯೊಂದಿಗೆ ಅರಣ್ಯ ಇಲಾಖೆ ಜಮೀನು ಸೇರಿದಂತೆ ಸರಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಕೃಷಿ ಹೊಂಡ, ಕಾಡು ಸಸಿಗಳನ್ನು ಬೆಳೆಸಿದ್ದೇ ಆದರೆ, ಅಂಗಡಿ ಮಾಸ್ತರ್ ಮಾಡುತ್ತಿರುವ ಈ ಪ್ರಯತ್ನಕ್ಕೆ ಫಲ ದೊರೆತಂತಾಗುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಅಭಿಪ್ರಾಯ ಪಡುತ್ತಿದ್ದಾರೆ.
೧೦,೦೦೦ ಗಿಡಗಳಿವೆ
ಮುಂಡರಗಿ ಪಟ್ಟಣದ ಹೊರವಲಯದ ಕೊಪ್ಪಳ ದಾರಿಯಲ್ಲಿರುವ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಸುಮಾರು ೧೦,೦೦೦ಕ್ಕೂ ಹೆಚ್ಚು ಗಿಡಗಳಿವೆ. ಹೊಂಗೆ, ಬೇವು, ಸಂಪಿಗೆ, ಮಾವು, ಬಿಲ್ವ, ಗೋಡಂಬಿ, ನೆರಳೆ, ಹತ್ತಿ, ಅರಳಿ, ಬನ್ನಿ, ಪಂಚವಟಿ ಇವು ಮುಖ್ಯವಾಗಿ ಅಂಗಡಿಯವರ ಹೊಲವನ್ನು ಸಿಂಗರಿಸಿರುವ ಗಿಡಗಳು.
ತಮ್ಮ ಮಗಳ ಹುಟ್ಟು ಹಬ್ಬದ ಅಂಗವಾಗಿ ದೀಪ ಹಚ್ಚಿ ಆರಿಸುವ ಸಂಪ್ರದಾಯ ಆಚರಿಸಬಾರದು, ಶಾಶ್ವತವಾಗಿ ಜನರಿಗೆ ಉಪಯುಕ್ತವಾಗುವಂತಹ ಕೆಲಸ ಮಾಡಬೇಕು ಅಂದಾಗ, ಹುಟ್ಟು ಹಬ್ಬಕ್ಕೆ ನಿಜ ಅರ್ಥ ಬರುತ್ತದೆ ಎಂದು, ಅಂದಿನಿಂದಲೇ ನಗರದ ಪ್ರಮುಖ ಬೀದಿಗಳಲ್ಲಿ, ಪ್ರಮುಖ ರಸ್ತೆಯ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ತಮ್ಮ ಆಸಕ್ತ ವಿದ್ಯಾರ್ಥಿ ಸಮೂಹವನ್ನು ಕಟ್ಟಿಕೊಂಡು ಸಸಿಗಳನ್ನು ಬೆಳೆಸಲು ಪ್ರಾರಂಭಿಸಿದರು. ೧೯೮೧ರಲ್ಲಿ ಮುಂಡರಗಿ ನಾಡಿನಲ್ಲಿ ಇಂತಹದೊಂದು ಕಾಯಕಕ್ಕೆ ಅಡಿಪಾಯ ಹಾಕಿದ ಮೊದಲ ವ್ಯಕ್ತಿ ವಿ.ಎಫ್.ಅಂಗಡಿ ಅವರಾಗಿದ್ದಾರೆ.
ಕಳೆದ ೩೪ ವರ್ಷದಿಂದ, ಪರಿಸರಕ್ಕಾಗಿ ಇವರು ಪಟ್ಟ ಶ್ರಮ ಇಂದು ಸಾರ್ಥಕವಾಗುತ್ತಿದೆ. ಮುಂಡರಗಿಯಲ್ಲಿ ಬೆಳೆಸಿದ ಪ್ರತಿ ಗಿಡ-ಮರಗಳು ಇವರ ಶ್ರಮವನ್ನು ಸಾರಿ ಹೇಳುತ್ತಿದ್ದು, ಅಂತರ್ಜಲ ಹೆಚ್ಚಳ ಇವರ ಪ್ರಯತ್ನ ಫಲಿತಾಂಶವಾಗಿದೆ.
೧೪ ವರ್ಷದ ಪರಿಶ್ರಮ
ಕಳೆದ ೧೪ವರ್ಷದಿಂದ ವಿ.ಎಫ್.ಅಂಗಡಿ ಅವರು ನಿತ್ಯ ೨ಸಾರಿ ಬಂದು ಅಲ್ಲಿನ ಸಸಿಗಳ ರಕ್ಷಣೆ ಆರೈಕೆ ಮಾಡುವುದು ಅವರಿಗೆ ಇಷ್ಟವಾದ ಹವ್ಯಾಸವಾಗಿದೆ. ತಮ್ಮ ಜಮೀನಿನಲ್ಲಿ ಪ್ರಾರಂಭದಲ್ಲಿ ಸಸಿ ಬೆಳೆಸಿದಾಗ ನೀರಿನ ಸಮಸ್ಯೆ ಇತ್ತು. ಹಾಗಾಗಿ, ಪ್ರತಿ ಎರಡು ದಿನಕ್ಕೊಮ್ಮೆ ಟ್ಯಾಂಕರ್ ನೀರನ್ನು ಬಳಸಿಕೊಂಡು ಸಸಿಗಳ ರಕ್ಷಣೆ ಮಾಡಿದ್ದಾರೆ. ಸಧ್ಯ ಅವರ ಜಮೀನಿನಲ್ಲಿ ೧ ಕೃಷಿಹೊಂಡ, ೧ ಸಣ್ಣಕೆರೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಅಂತರ್ಜಲ ಪ್ರಮಾಣ ಹೆಚ್ಚಾಗಿದೆ. ಜೊತೆಗೆ, ಸಸಿಗಳಿಗೆ ಸಾಕಾಗುವಷ್ಟು ನೀರು ಕೃಷಿಹೊಂಡದಲ್ಲಿ ಸಂಗ್ರಹವಾಗುತ್ತಿದೆ. ಈಗಲೂ ೬೨ ವರ್ಷದ ಅಂಗಡಿ ಅವರು ತಮ್ಮ ಹೊಲದಲ್ಲಿ ತಾವೇ ಸ್ವತ: ಸಸಿಗಳಿಗೆ ನೀರು ಹಾಕುತ್ತಾರೆ. ತಮ್ಮ ಲಾಭಕ್ಕಾಗಿ ಗಿಡಮರಗಳನ್ನು ಬೆಳೆಸುವ ಇಂದಿನ ಕಾಲಘಟ್ಟದಲ್ಲಿ ಇವರು ಯವುದೇ ಫಲಾಪೇಕ್ಷೆ ಇಲ್ಲದೇ ಜನರ ಆರೋಗ್ಯದ ದೃಷ್ಠಿಯಿಂದ, ಜೀವಜಲವನ್ನು ಹೆಚ್ಚಿಸುವ ಮೂಲಕ, ಜೀವಜಲವನ್ನು ರಕ್ಷಿಸುವ ಪ್ರಯತ್ನದೊಂದಿಗೆ ವಾತಾವರಣದಲ್ಲಿನ ಕಲ್ಮಶವನ್ನು ಹೋಗಲಾಡಿಸಲು, ಇಂತಹ ಸಮಾಜ ಉಪಯೋಗಿ ಕಾರ್ಯದಲ್ಲಿ ತೊಡಗಿರುವ ಅಂಗಡಿ ಮಾಸ್ತರ್ ಪ್ರಯತ್ನಕ್ಕೊಂದು ಸಲಾಮ್ ಹೇಳಲೇಬೇಕು.
ಇಂತಹ ಸಾಧಕನ ಆಲೋಜನೆಗಳಿಗೆ ಸರಕಾರ ನೀರೆರೆದು, ಪೋಷಿಸುವ ಮೂಲಕ, ಅಂತರ್ಜಲದ ಬಗ್ಗೆ ನಿಜವಾದ ಕಳಕಳಿ ಇರುವ ವಿ.ಎಫ್.ಅಂಗಡಿ ಅವರ ಹಂಬಲವನ್ನು ಬೆಂಬಲಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಚಿತ್ರ-ಲೇಖನ: ಎನ್. ಅಹಮದ್