ನೀರು ಸಿಗ್ತಿಲ್ಲ, ಹಾಗಂತ ಕೈಕಟ್ಟಿ ಕುಳ್ತಿಲ್ಲ
ಕೆರೆ, ಕಲ್ಯಾಣಿ, ಹಳ್ಳಗಳ ಅಭಿವೃದ್ಧಿಗೆ ಭೈರಾಗಾನಹಳ್ಳಿ ಗ್ರಾಮಸ್ಥರ ಪಣ, ಸಧ್ಯದ ಪರಿಸ್ಥಿತಿಯಲ್ಲಿ ದನಕರುಗಳಿಗೆ ನೀರಿಗೆ ಬರವಿಲ್ಲ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ದಿನೇದಿನೇ ಕುಸಿದು, ಜಲ ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಹನಿಹನಿ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಇದೀಗ ಬಿಸಿಲು ಶುರುವಾಗಿದೆ. ಮತ್ತೆ ನೀರಿನ ಸಮಸ್ಯೆ ಜನರನ್ನು ಕಾಡಲಿದೆ. ಇಷ್ಟೇ ಅಲ್ಲದೆ, ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚುತ್ತಿರುವ ಕಾರಣ, ಜನರಲ್ಲಿ ಮೂಳೆ ಸವೆತ ಮತ್ತು ದಂತಕ್ಷಯಗಳಂತ ತೊಂದರೆಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಈ. ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೈರಗಾನಹಳ್ಳಿ ಗ್ರಾಮಸ್ಥರ ಸಾಧನೆ, ಇಡೀ ಜಿಲ್ಲೆಗೆ ಒಂದು ಮಾದರಿಯೇ ಸರಿ.
ಭೈರಗಾನಹಳ್ಳಿ ಸುಗ್ರಾಮದಲ್ಲಿ ಸುಮಾರು ೮೬ ಕುಟುಂಬಗಳಿದ್ದು, ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಬೇಕೆಂಬ ಉದ್ದೇಶದಿಂದ, ಗ್ರಾಮದ ಎಲ್ಲಾ ಕುಟುಂಬಗಳು ಸೇರಿ “ಗ್ರಾಮ ಸಮಿತಿ”ಯನ್ನು ರಚಿಸಿಕೊಂಡಿದ್ದಾರೆ. ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಂದು ಕುಟುಂಬದ ಇಬ್ಬರು (ಪುರುಷರು – ಮಹಿಳೆಯರು) ಸದಸ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಸಮಿತಿಯು ಊರಿಗೆ ಸೇರಿದ ದೇವಸ್ಥಾನ, ಗುಂಡು ತೋಪು, ಗೋಮಾಳ, ಗೋಕುಂಟೆಗಳು, ಕಲ್ಯಾಣಿಗಳ ನಿರ್ಮಾಣ, ಗ್ರಾಮದ ನೈರ್ಮಲೀಕರಣ ಕುರಿತು ಯೋಜನೆ ತಯಾರಿಸಿ, ಅವುಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಅಷ್ಟೇ ಅಲ್ಲದೆ, ಗ್ರಾಮಕ್ಕೆ ಸೇರಿದ ಕೆರೆಯ ಸುಮಾರು ಮೂರು ಎಕರೆ ಒತ್ತುವರಿಯನ್ನು ಕೂಡ ಸಮಿತಿಯು ತೆರುವುಗೊಳಿಸುವಲ್ಲಿ ಸಫಲವಾಗಿದೆ.
ಗ್ರಾಮದ ಸರ್ವಂಗೀಣ ಅಭಿವೃದ್ಧಿಗಾಗಿ ಯೋಜನೆ ತಯಾರಿ…
ಗ್ರಾಮದಲ್ಲಿ ಮೂಲಭೂತವಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಕುರಿತು ಗ್ರಾಮ ಸಮಿತಿಯಲ್ಲಿ ಚರ್ಚೆ ನಡೆಸಿ, ಸಲಹೆ ಹಾಗೂ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಗ್ರಾಮ ಪಂಚಾಯಿತಿಯ ಮೂಲಕ ನಡೆಯುವ ಗ್ರಾಮಸಭೆಗಳಲ್ಲಿ ಮಂಡಿಸಿ, ಸರ್ವಾನುಮತದಿಂದ ಅನುಮೋದನೆ ಪಡೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತದೆ.
ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆ…
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಾಭಿವೃದ್ಧಿಗಾಗಿ ಗ್ರಾಮ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ೬ ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಂದು ಕುಟುಂಬದ ಸದಸ್ಯರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮದಲ್ಲಿ ಮೂಲಭೂತವಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಮಂಡಿಸಿ ಸರ್ವಾನುಮತದಿಂದ ಅನುಮೋದನೆ ಪಡೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಈಗಾಗಲೇ, ಕಳೆದ ೨೦೧೨ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು ೧೫ ಲಕ್ಷ ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಭೈರಗಾನಹಳ್ಳಿ ಗ್ರಾಮದಲ್ಲಿ ಒಟ್ಟು ಮನೆಗಳ ಪೈಕಿ ಶೇ. ೫೦ ಮನೆಗಳಿಗೆ ಶೌಚಾಲಯ, ೨೨ ಮಂದಿ ವಸತಿಹೀನರಿಗೆ ಮನೆ ನಿರ್ಮಾಣ ಹಾಗೂ ಪ್ರಾಚೀನ ಹಳ್ಳವನ್ನು ಅಭಿವೃದ್ಧಿಪಡಿಸಿ ಕಲ್ಯಾಣಿಗಳ ನಿರ್ಮಾಣ, ಗೋಮಾಳದಲ್ಲಿ ಸಸಿಗಳನ್ನು ನೆಡುವ ಮೂಲಕ ಗ್ರಾಮವನ್ನು ಹಸಿರುಮಯ ಮಾಡಲಾಗುತ್ತಿದೆ.
ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ಭೈರಗಾನಹಳ್ಳಿ ಗ್ರಾಮದಲ್ಲಿ ಅಂತರ್ಜಲ ವೃದ್ಧಿಗೆ ಕಲ್ಯಾಣಿ, ಗೋಕುಂಟೆ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಗೆ ಗೋಮಾಳದಲ್ಲಿ ಸಸಿಗಳನ್ನು ನೆಡುವ ಜೊತೆಗೆ ವಿವಿಧ ‘ಪರಿಸರ ಪ್ರಿಯ’ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ನೀರಿನ ಮೂಲಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದೆ.
ಮಳೆ ನೀರು ಮನೆಗೆ ನುಗ್ಗಲ್ಲ…
ಮಳೆಗಾಲದಲ್ಲಿ ಬೆಟ್ಟದಿಂದ ಹರಿಯುವ ನೀರು ಮನೆಗಳಿಗೆ ನುಗ್ಗುವುದನ್ನು ತಡೆಗಟ್ಟಲು ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಇದರಿಂದ ಗೋಕುಂಟೆಗೆ ನೀರು ಹರಿಸಿ, ನಂತರ ಕಾಲುವೆಗಳ ಮುಖಾಂತರ, ಕೆರೆಗೆ ನೀರು ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸಲು ಅದ್ಯತೆ ನೀಡಲಾಗಿದೆ.
ಏನಿದು ಹಳ್ಳದ ಮಹಿಮೆ?
ಗ್ರಾಮದಲ್ಲಿ ಪ್ರಾಚೀನ ಕಾಲದಿಂದ ನಿರ್ಮಿಸಿರುವ ಹಳ್ಳ ಜನರ ಪಾಲಿಗೆ ಸಂಜೀವಿನಿಯಾಗಿದೆ. ಹಳ್ಳದ ನೀರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ಗ್ರಾಮ ಪಂಚಾಯಿತಿ ಆಡಳಿತದ ನೆರಿವಿನೊಂದಿಗೆ ಸಮಿತಿಯು ಕಲ್ಯಾಣಿಯನ್ನು ನಿರ್ಮಿಸಿದೆ. ಈ ಮೂಲಕ ಹಳ್ಳದ ನೀರನ್ನು ಸಂರಕ್ಷಿಸಿ, ಜನರ ನೀರಿನ ದಾಹವನ್ನು ಇಂಗಿಸುತ್ತಿದೆ. ಇನ್ನೂ ವಿಶೇಷವೆಂದರೆ, ಇಲ್ಲಿರುವ ಪ್ರಾಚೀನ ನೀರು ಸೇವಿಸಿದರೆ ರೋಗವೇ ಬರೋದಿಲ್ವಂತೆ. ಗ್ರಾಮಸ್ಥರು ಸೇರಿದಂತೆ, ಜಿಲ್ಲೆಯ ವಿವಿಧ ತಾಲ್ಲೂಕಿನ ಜನರು ಈ ನೀರು ಸೇವಿಸಿ ಆರೋಗ್ಯ ಸುಧಾರಿಸಿಕೊಂಡಿದ್ದಾರೆ ಎನ್ನುತ್ತಾರೆ ಭೈರಾಗಾನಹಳ್ಳಿ ಗ್ರಾಮದ ಪಂಚಾಯತಿ ಸದಸ್ಯ, ದೇವರಾಜ.
ಗ್ರಾಮ ಪಂಚಾಯತಿ ಬೆಂಬಲ ಶ್ಲಾಘನೀಯ ….
ಗ್ರಾಮ ಪಂಚಾಯತಿ ಅಧ್ಯಕ್ಷ, ದೇವರಾಜ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಭೈರಾರೆಡ್ಡಿ, ಶಬಾನಾ ಅಜ್ಮಿ, ಪಿಳ್ಳನಾರಾಯಣಪ್ಪ ಹಾಗೂ ಪಿಡಿಒ ತನ್ವೀರ್ ಅಹಮದ್ ಅವರ ವಿಶೇಷ ಶ್ರಮ ಮತ್ತು ಕಾಳಜಿ, ಈ ಗ್ರಾಮದಲ್ಲಿ ವಿವಿಧ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹೆಚ್ಚು ಶ್ಲಾಘನೀಯ. ಭೈರಗಾನಹಳ್ಳಿ ಗ್ರಾಮದ ಜೊತೆಗೆ, ಇನ್ನುಳಿದ ಎಲ್ಲಾ ಗ್ರಾಮಗಳಲ್ಲೂ ನೀರಿನ ಮೂಲಗಳನ್ನು ಸಂರಕ್ಷಿಸುವ ಕೆಲಸಗಳನ್ನು ಗ್ರಾಮ ಪಂಚಾಯತಿ ಕೈಗೆತ್ತಿಕೊಳ್ಳಲು ಮುಂದಾಗಿದೆ. ಕೆರೆ-ಕುಂಟೆಗಳಲ್ಲಿ ಹೂಳು ಎತ್ತುವುದು, ಸಂಪೂರ್ಣವಾಗಿ ಶೌಚಾಲಯಗಳ ನಿರ್ಮಾಣ, ಗೋಮಾಳ ರಕ್ಷಣೆಗಾಗಿ ಸಸಿಗಳನ್ನು ನೆಡುವ ಮೂಲಕ ಅರಣ್ಯೀಕರಣಕ್ಕೆ ಒತ್ತು ನೀಡಲು ಗ್ರಾಮ ಪಂಚಾಯತಿಗಳಿಗೆ ಅವಶ್ಯವಿರುವ ಸಹಕಾರ ನೀಡಲು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ ಇವರು ತಯಾರಿದ್ದಾರೆ ಎಂದು ಗ್ರಾಮಕ್ಕೆ ಭೇಟಿ ನೀಡದ ಸಂದರ್ಭದಲ್ಲಿ ತಿಳಿಸುತ್ತಾ, ಭೈರಗಾನಹಳ್ಳಿ ಗ್ರಾಮಸ್ಥರ ಸಾಧನೆಯು ಇತರೆ ಗ್ರಾಮಸ್ಥರರಿಗೆ ಮಾದರಿಯೇ ಸರಿ ಎಂದು ಹರ್ಷ ವ್ಯಕ್ತ ಪಡಿಸಿದರು.
ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಸಲುವಾಗಿ, ಎಫ್.ಇ.ಎಸ್ ಎಂಬ ಸರ್ಕಾರೇತರ ಸಂಸ್ಥೆ ಗ್ರಾಮಸ್ಥರಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿ ಜಿಲ್ಲಾಡಳಿತ ಗಮನ ಸೆಳೆಯುವಂತ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ ಸಂಸ್ಥೆಯ ಶ್ರೀ. ಪಿ. ವಿಜಯಕುಮಾರ್.
ಚಿತ್ರ-ಲೇಖನ: ಸುರೇಶ್ ದೊಡ್ಡಮಾವತ್ತೂರು