ಅಂದು ಉರಿ ಬಿಸಿಲಿಗೆ ಬಳಲಿ ಇಂದು ಮುಸುಲಾಧಾರ ಮಳೆಗೆ ಧರೆಗುರುಳಿದ ‘ಪುನಗು ಬೆಕ್ಕಿಲಿ’.
‘ಇರುಳಲ್ಲಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗಿತ್ತು’ ನಮ್ಮ ಪುನಗು ಬೆಕ್ಕಿನ ಕಥೆ!
ನಿಶಾಚರಿಯಾಗಿ ಅತ್ಯಂತ ಜಾಗರೂಕತೆಯಿಂದ ಹಣ್ಣಿನ ಬೇಟೆಗೆ ಹೊರಡುವ ಪುನಗು ಚುಮುಚುಮು ಬೆಳಕು ಹರಿಯುತ್ತಿದ್ದ ಹೊತ್ತಿನಲ್ಲಿ ಸುದೈವವಶಾತ್ ನೀರಿಲ್ಲದ ಟ್ಯಾಂಕಿನಲ್ಲಿ ತನ್ನ ಸಂಗಾತಿಯೊಂದಿಗೆ ಬಿದ್ದುಬಿಟ್ಟಿತ್ತು. ಆಮೇಲೆ ಮೇಲೇರಲು ಆಯಸಿಗದೇ ಹರಸಾಹಸಪಟ್ಟು ಉಪಾಯಗಾಣದೇ ಕೀರಲು ಧ್ವನಿ ತೆಗೆದು ಕೂಗಲು ಪ್ರಾರಂಭಿಸಿದ್ದವು. "Why one should fall in love? Always one must try to rise in love!" ಹೀಗೆ ಯಾರೋ ಹೇಳಿದ್ದು, ಕೇಳಿಸಿಕೊಂಡ ನೆನಪು ನನಗೆ. ಬಹುಶ: ಪ್ರೇಮಿ ಪುನಗುಗಳು ಆ ಮಾತಿಗೆ ಅನ್ವರ್ಥಕ ಎಂಬಂತೆ; ‘ಪ್ರೀತಿ ಕುರುಡು’ ಎಂದು ಸಾಬೀತುಪಡಿಸಲು ‘ಬಾವಿ’ಯ ಬದಲು ‘ಟ್ಯಾಂಕಿ’ಗೆ ಹಾರಿದ್ದವು ಎಂಬುದು ನನ್ನ ವಿಶ್ಲೇಷಣೆ.
ಆದರೆ ಪರಿಸರವಾದಿ ಪ್ರೊ.ಗಂಗಾಧರ ಕಲ್ಲೂರ್ ಅವರು ಅಭಿಪ್ರಾಯಪಟ್ಟಂತೆ, ಟ್ಯಾಂಕಿನಲ್ಲಿ ಒಂದೆರಡು ಟೊಮೆಟೋ ಹಣ್ಣಿನ ಗಿಡಗಳು ಆಕಸ್ಮಿಕವಾಗಿ ಹುಟ್ಟಿ, ಹಣ್ಣು ಬಿಟ್ಟಿದ್ದರಿಂದ ತಿನ್ನುವ ಆಸೆಗಾಗಿ ಟ್ಯಾಂಕಿಗೆ ಇಳಿದಿವೆ. ಆದರೆ ಕಬಳಿಸಿದ ನಂತರ ಮೇಲೇರಲು ಉಪಾಯಗಾಣದೇ ಸಿಕ್ಕಿಹಾಕಿಕೊಂಡವು. ಸತತ ಜಿನುಗುವ ಮಳೆಗೆ ನೆನೆದು ತೀರ ಬಳಲಿದ್ದವು ಎಂದರು.
ಇತ್ತೀಚೆಗಿನ ಪ್ರವಾಹೋಪಾದಿಯ ಮಳೆ ಅವುಗಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಿತ್ತು. ಆದರೆ ಈ ಬೆಳವಣಿಗೆಗಳಿಗೆ ವಿರುದ್ಧವಾಗಿ ಕಳೆದ ೪ ತಿಂಗಳುಗಳ ಕೆಳಗೆ ಧಾರವಾಡದ ವಿಪರೀತ ಬಿಸಿಲಿಗೆ ಬಳಲಿ, ಬವಳಿ ಬಂದು ಮರಿ ಪುನಗೊಂದು ಇಲ್ಲಿನ ಸಸ್ಯಶಾಸ್ತ್ರ ವಿಭಾಗದ ಎದುರಿಗೆ ಅಸಹಾಯಕವಾಗಿ ಬಿದ್ದಿತ್ತು. ಅದು ಕಣ್ಣೀರು ಸುರಿಸುತ್ತಿದ್ದ ಪರಿ ನೆರೆದವರ ಕಣ್ಣಂಚನ್ನು ತೇವಗೊಳಿಸಿತ್ತು. ಒಟ್ಟಾರೆ ೪ ತಿಂಗಳಲ್ಲಿ ಎರಡು ವೈರುದ್ಧ್ಯಗಳನ್ನು ನಾವು ಧಾರವಾಡಿಗರು ನೋಡುವಂತಾಯಿತು. ಪರೋಕ್ಷವಾಗಿ ಈ ಬೆಳವಣಿಗೆಗಳಿಗೆ ಅಥವಾ ಈ ಪರಿಯ ಪರಿಸರ ಅಸ್ನೇಹಿ ಅಭಿವೃದ್ಧಿಗೆ ನಾವು ಕಾರಣರು ಎಂಬುದು ನಮಗೆ ಹೊಳೆಯುತ್ತಿಲ್ಲ.
ಬೆಳಿಗ್ಗೆ ವಾಯುವಿಹಾರಕ್ಕೆಂದು ಕರ್ನಾಟಕ ಕಾಲೇಜಿನ ಆವರಣಕ್ಕೆ ಗೆಳೆಯ ಅಶೋಕ್ ಮನ್ಸೂರ್ ಅವರೊಂದಿಗೆ ತೆರಳಿದ್ದ ಪ್ರೊ. ಗಂಗಾಧರ್ ಅವರಿಗೆ ಅಲ್ಲಿ ಅಚ್ಚರಿ ಕಾಯ್ದಿತ್ತು. ಮಹಾವಿದ್ಯಾಲಯದ ಆವರಣದಲ್ಲಿರುವ ಸಸ್ಯಶಾಸ್ತ್ರ ವಿಭಾಗದ ಸಸ್ಯೋದ್ಯಾನದಲ್ಲಿ ಉಪಯೋಗಿಸದೇ ಬಿಟ್ಟ ಟ್ಯಾಂಕ್ ಒಂದಿದೆ. ಅಲ್ಲಿ ಏಕಾಏಕಿ ಈ ಎರಡು ಪುನಗುಗಳು ಕಾಲುಜಾರಿ ಬಿದ್ದಿದ್ದವು. ಅವುಗಳ ಕೀರಲು ಧ್ವನಿ ಕೇಳಿ ಕೆಲವರು ಪ್ರೊ. ಗಂಗಾಧರ ಅವರಿಗೆ ಮಾಹಿತಿ ತಲುಪಿಸಿದರು. ಸುದ್ದಿ ತಿಳಿದಿದ್ದೇ ತಡ, ಅವರು ಛತ್ರಿಯೊಂದಿಗೆ ಟ್ಯಾಂಕಿಗೆ ಧುಮುಕಿ, ಪುನಗು ದಂಪತಿಗಳನ್ನು ಟ್ಯಾಂಕಿನಿಂದ ಮೇಲೆತ್ತಲು ಕಾರ್ಯಸನ್ನದ್ಧರಾದರು.
ಅವರನ್ನು ಹಿಂಬಾಲಿಸಿದ್ದ ಗೆಳೆಯ ಅಶೋಕ್ ಮನ್ಸೂರ್ ದೂರದಲ್ಲಿ ಬಿದ್ದಿದ್ದ ದೊಡ್ಡ ಬಿದಿರು ಗಳವನ್ನು ಎತ್ತಿತಂದು ಟ್ಯಾಂಕಿನಲ್ಲಿ ಇಳಿಬಿಟ್ಟರು. ಬಿಟ್ಟಿದ್ದೇ ತಡ ಬಹುಶ: ಗಾತ್ರದಲ್ಲಿ ತುಸು ದೊಡ್ಡದಿದ್ದ ಗಂಡು ಪುನಗು ಬೆಕ್ಕು ದುಡುದುಡು ಬಿದಿರು ಅಪ್ಪಿ ಹಿಡಿದು ಮೇಲೇರಿ ಬಂತು. ಆದರೆ ಹೆಣ್ಣು ಪುನಗು ಬೆಕ್ಕು ಟ್ಯಾಂಕಿನ ಮೂಲೆಯೊಂದರಲ್ಲಿ ಹೆದರಿ ನಡುಗುತ್ತ ಕುಳಿತಿತ್ತು. ಅರ್ಧ ಗಂಟೆಯ ಹರಸಾಹಸ ಪ್ರಯತ್ನದ ನಂತರ ಪ್ರೊ. ಕಲ್ಲೂರ್ ತಮ್ಮ ಛತ್ರಿ ಸಹಾಯದಿಂದ ಪುನಗು ಬೆಕ್ಕನ್ನು ಗಳದ ಮೇಲೇರಿಸುವಲ್ಲಿ ಯಶಸ್ವಿಯಾದರು. ಆದರೆ ಬಳಲಿ ಬೆಂಡಾಗಿದ್ದ ಅದಕ್ಕೆ ಅಶೋಕ್ ಮನ್ಸೂರ್ ಅವರ ಸಹಾಯ ಅನಿವಾರ್ಯವಾಗಿತ್ತು.
ಟ್ಯಾಂಕಿನ ಮೇಲೆ ಮೂಲೆಯೊಂದರ ಬಳಿ ನಿಂತಿದ ಅಶೋಕ್ ಅವರು ಹೆಣ್ಣು ಪುನಗು ಬೆಕ್ಕು ಬಿದಿರನ್ನು ಅಪ್ಪಿಕೊಂಡಿದ್ದು ಗಮನಿಸಿ ಹಾಗೆಯೇ ಎತ್ತಿ ಸಮೀಪದ ಕಟ್ಟಡದ ಮೇಲ್ಛಾವಣಿಗೆ ಒರಗಿಸಿಟ್ಟರು. ಪ್ರಯಾಸಪಟ್ಟು ಹಂಚಿನ ಮೇಲೇರಿ ತನ್ನ ಸಂಗಾತಿಯನ್ನು ಅದು ಸೇರಿಕೊಂಡಿತು. ಎರೆದಿದ್ದವರೆಲ್ಲ ನಿಟ್ಟುಸಿರು ಬಿಡುವಹೊತ್ತಿಗೆ ನಮ್ಮ ಕ್ಯಾಮೆರಾ ಯೋಧ ಕೇದಾರ ಅಣ್ಣ ಹಲವಾರು ವಿಶೇಷ ಭಂಗಿಗಳಲ್ಲಿ ಅವುಗಳನ್ನು ಕ್ಲಿಕ್ಕಿಸಿಯಾಗಿತ್ತು. ಆದರೆ ಮದುವೆಯ ಫೊಟೋ ಕ್ಲಿಕ್ಕಿಸಿದಂತೆ ದಂಪತಿಗಳನ್ನು ಜೋಡಿಯಾಗಿ ಕ್ಲಿಕ್ಕಿಸಲು ಮಾತ್ರ ಸಾಧ್ಯವಾಗಲಿಲ್ಲ ಎಂಬ ಹಳಾಹಳಿ ಕೇದಾರ ಅಣ್ಣನದು!
ಬೆಳಿಗ್ಗೆ ವಾಯು ವಿಹಾರಕ್ಕೆಂದು ಬಂದವರಿಗೆಲ್ಲ ಈ ಆಗಂತುಕ ಅತಿಥಿಗಳು ತಲೆ ಕೆಡಿಸಿಕೊಳ್ಳಲು ಗ್ರಾಸ ಒದಗಿಸಿದ್ದವು. ಪ್ರೊ. ಕಲ್ಲೂರ್ ಆ ಪುನಗು ಬೆಕ್ಕಿನ ವಿಶೇಷತೆಯನ್ನು ಪ್ರತಿಯೊಬ್ಬರಿಗೂ ವಿವರಿಸಿ ಹೇಳುವುದರಲ್ಲಿ ಸುಸ್ತಾಗಿದ್ದರು. ಪುನಗಿನ ಆಹಾರ ಯಾವುದು? ಅವುಗಳ ವಿಹಾರದ ಪರಿ ಏನು? ಅದು ಕಚ್ಚುತ್ತದೆಯೇ? ಅದು ನಿಶಾಚರಿಯೇ? ನೀವೇಕೆ ಅದನ್ನು ಕೈಯಿಂದ ಮುಟ್ಟಲಿಲ್ಲ? ಅದು ನೀರು ಕುಡಿಯುತ್ತದೆಯೇ? ಕುಡಿದರೆ ಎಷ್ಟು ಲೀಟರ್ ಕುಡಿಯುತ್ತದೆ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಅವರು ಉತ್ತರ ಕೋಡಬೇಕಾಗಿತ್ತು!
ಒಟ್ಟಾರೆ ಅವರ ವಿವರಣೆಯ ಸಾರ ಇಷ್ಟು : ಪುನುಗು ಇಲಿ ಅದು ಬೆಕ್ಕಲ್ಲ! -ವಾಸ್ತವದಲ್ಲಿ ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಬೆಕ್ಕಿನ ಕುಟುಂಬಕ್ಕೆ ಸೇರಿದ್ದಲ್ಲ. ಇಲಿಯ ಜಾತಿಗೆ ಸೇರಿದ ಪುನುಗು ಇಲಿ. ರಾತ್ರಿಯ ವೇಳೆ ಮಾತ್ರ ಆಹಾರ ಹೆಕ್ಕಲು ಹೊರಡುವ ಈ ಪುನುಗು ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ ಕಣ್ಣು ಎರಡೂ ಹೊತ್ತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ. ಮಳೆ ಕಾಡುಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಇದು ಬದುಕುತ್ತದೆ. ಹಿಂದಿ ಭಾಷೆಯಲ್ಲಿ ಈ ಬೆಕ್ಕನ್ನು ‘ಸ್ಮಶಾನ ಚೇಳು’ ಎಂದು ಸಹ ಕರೆಯಲಾಗುತ್ತದೆ.
ಜನ ವಸತಿಯಿಂದ ಹಾಗು ಇತರೆ ಪ್ರಾಣಿಗಳ ಆವಾಸದಿಂದ ತೀರ ದೂರ ಇರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚದ ಹಾಗು ನಾಚಿಕೆ ಸ್ವಭಾವದ್ದು. ಹಣ್ಣುಗಳೆಂದರೆ ಪುನುಗಿಗೆ ತೀರ ಇಷ್ಟ. ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ತೀರ ಅಚ್ಚುಮೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪುನಗು ಬೆಕ್ಕುಗಳು ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿ ಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನ್ನುತ್ತವೆ. ಭೂಮಿ ಹಾಗು ಗಿಡ ಎರಡರ ಮೇಲೂ ವಾಸ ಮಾಡಬಲ್ಲ ಈ ಬೆಕ್ಕು ಶಾಖಾ ಹಾಗು ಮಾಂಸಾಹಾರಿ. ಬಿಸಿಲು ಈ ಪ್ರಾಣಿಗೆ ಅಷ್ಟಕ್ಕಷ್ಟೆ. ಮೇಲಿಂದ ಮೇಲೆ ನೀರು ಕುಡಿಯುವುದು ಅವುಗಳ ಸ್ವಭಾವ. ಕೆಲವೊಮ್ಮೆ ಹಣ್ಣುಗಳನ್ನು ತಿಂದು ದಾಹ ತೀರಿಸಿಕೊಳ್ಳುವುದೂ ಉಂಟು.
ಪುನಗು ಬೆಕ್ಕಿನ ಬೆವರಿನಲ್ಲಿ ಸುವಾಸನೆ ಇದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಬೆವರು ಜೇನುತುಪ್ಪದಂತೆ ಗೋಚರಿಸುತ್ತದೆ. ಇದನ್ನು ಸುವಾಸನೆ (ಸೇಂಟ್) ದ್ರವ್ಯಗಳಲ್ಲಿ ಸುವಾಸನೆಯನ್ನು ಸ್ಥಿರಗೊಳಿಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾಮ ಪ್ರಚೋದಕ ಔಷಧಿಯಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾಗಿ ಅದನ್ನು ತೀವ್ರ ಹಿಂಸೆಗೂ ಒಳಪಡಿಸಿ ಬೆವರಿನ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಸಹ ಹೇರಲಾಗುತ್ತದೆ. ಸದ್ಯ ವಿನಾಶದ ಅಂಚಿಗೆ ಪುನುಗು ಬೆಕ್ಕು/ಇಲಿ ಹೋಗಲು ಬಲವಾದ ಕಾರಣ ಇದು.
‘ವಿವಿರಿಡೇ’ ಕುಟುಂಬಕ್ಕೆ ಸೇರಿದ ಪುನುಗಿಗೆ ಆಂಗ್ಲ ಭಾಷೆಯಲ್ಲಿ ‘ಸಿವೆಟ್ ಕ್ಯಾಟ್’ (Civet Cat) ಎಂದು ಕರೆಯಲಾಗುತ್ತದೆ. ಪ್ರಾಯಕ್ಕೆ ಬಂದ ಪುನುಗು ಬೆಕ್ಕು ೧ ರಿಂದ ೩ ಅಡಿ ಉದ್ದವಿರುತ್ತದೆ. ೮ ರಿಂದ ೯ ಪೌಂಡ್ ತೂಗಬಲ್ಲುದು ಎನ್ನುತ್ತಾರೆ ವನ್ಯ ಪ್ರಾಣಿ ತಜ್ಞರು. ಕಪ್ಪು ಬಣ್ಣದಿದ್ದು ಪ್ರಾಯಕ್ಕೆ ಬರುತ್ತ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ಅದರ ದೇಹ ಹಾಗು ತುಪ್ಪಳ ಬಣ್ಣ ತಿರುಗುತ್ತದೆ.
ಆದರೆ ಈ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳಿಲ್ಲ. ಆದರೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಆದರೂ ಪುನಗು ಇಲ್ಲಿಗೆ ಭೇಟಿ ನೀಡಿತ್ತು ಎಂಬುದು ಸೋಜಿಗ. ಇಲ್ಲಿನ ವಸತಿ ಗೃಹಗಳಲ್ಲಿ ವಾಸ ಮಾಡುವ ಮಕ್ಕಳ ಪ್ರಕಾರ ಹಲವಾರು ಬಾರಿ ಈ ಪುನಗು ಬೆಕ್ಕುಗಳು ರಾತ್ರಿಯ ವೇಳೆ ರಸ್ತೆಗಿಳಿದು ಆಹಾರ ಹೆಕ್ಕುತ್ತ ಕುಳಿತಿರುತ್ತವೆ. ಮಹಾವಿದ್ಯಾಲಯದ ಆವರಣದಲ್ಲಿರುವ ನೀರಿನ ಟ್ಯಾಂಕ್ ಗಳಿಗೆ ಇಳಿದು ನೀರು ಸಹ ಕುಡಿಯುತ್ತವೆ ಎನ್ನುತ್ತಾರೆ.
ಇನ್ನಾದರೂ ನಮ್ಮ ಮನೆಗಳ ಸುತ್ತ ಹಣ್ಣಿನ ಗಿಡಗಳನ್ನು ನೆಡೋಣ. ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸೋಣ. ಅಲ್ಲಲ್ಲಿ ಕಾಳು ಕಡಿಗಳ ಪೊಟ್ಟಣ ಕಟ್ಟಿ ಬಹುತೇಕ ನಮ್ಮನ್ನೇ ಆಶ್ರಯಿಸುವ ಅನಿವಾರ್ಯ ಸ್ಥಿತಿ ತಲುಪಿರುವ ಅಸಹಾಯಕ ಮೂಕ ಪ್ರಾಣಿಗಳ ಮೂಕ ರೋದನಕ್ಕೆ ದನಿಯಾಗೋಣ.
ಲೇಖನ
ಹರ್ಷವರ್ಧನ್ ವಿ.ಶೀಲವಂತ
ಚಿತ್ರ
ಬಿಎಂ.ಕೇದಾರನಾಥೇಶ್ವರಸ್ವಾಮಿ.
- 751 reads
Email this page
Printer-friendly version
Similar entries
- ವಿಪರೀತ ಮಳೆಯಿಂದಾಗಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಜಾರಿ ಬಿದ್ದು ಬಸವಳಿದ ಪುನಗು.ಪ್ರೊ. ಗಂಗಾಧರ ಕಲ್ಲೂರ್ ಹಾಗೂ ಅಶೋಕ್ ಮನ್ಸೂರ್ ಚಿತ್ರದಲ್ಲಿದ್ದಾರೆ.
- ಬ್ಯಾಂಕ್ ಅಧಿಕಾರಿ ಉಲ್ಲಾಸ್ ಗುನಗಾ ಅವರ ‘ವಾಟರ್’ ಹಾಗೂ ‘ವೆಜಿಟೆಬಲ್’ ಬ್ಯಾಂಕಿಂಗ್!
- ಕುರಿಗಾರರ ನೀರ ಹಾವಳಿಗೆ ಸೀದು ಹೋದ ಸೈದಾಪುರ.
- ‘ಸ್ವದೇಶ್’ದಲ್ಲಿ ಶಾರುಖ್ ಖಾನ್.. ‘ಹಿಬ್ಬನಕೇರಿ’ಯಲ್ಲಿ ರಾಮಚಂದ್ರ ನಾಯ್ಕ್!
- ಧಾರವಾಡದಲ್ಲಿ ಗಿಡಗಳುರುಳಿ ಸೂಚಿಸಿದ್ದು ‘ಬೆಳವಣಿಗೆಯನ್ನೋ’? ‘ಅಭಿವೃದ್ಧಿಯನ್ನೋ’?
ಲೇಖಕರು
ಹೆಸರು
ಹರ್ಷವರ್ಧನ ವಿ. ಶೀಲವಂತ
ಪರಿಚಯ
ಸಹಾಯಕ ಪ್ರಾಧ್ಯಾಪಕ, ವಿದ್ಯಾಭಾರತಿ ಪ್ರತಿಷ್ಠಾನದ IBMR ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ. ಕೃಷಿ ಮಾಧ್ಯಮ ಕೇಂದ್ರ (ಕಾಮ್) ಫೆಲೋ. ಸಿಡಿಎಸ್ ಸ್ವಯಂಸೇವಕ. ನಾಗರಿಕ ಪತ್ರಿಕೋದ್ಯಮದ ಪ್ರತಿಪಾದಕ. ಹವ್ಯಾಸಿ ಪತ್ರಕರ್ತ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |










Post new comment