ಅಕ್ಷಯನಗರ ಕೆರೆಗೆ ನಾಗರಿಕರ ಕಟಾಕ್ಷ

ಅಕ್ಷಯನಗರ ಕೆರೆ
ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಬೇಕೆಂದರೆ, ಅದರ ಅಭಿವೃದ್ಧಿ ಆಗಬೇಕೆಂದರೆ ಸರಕಾರವೇ ಮನಸ್ಸು ಮಾಡಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಮೊದಲು ಕೆಲಸ ಕೈಗೆತ್ತಿಕೊಳ್ಳಬೇಕು. ಇಂತಹ ಸ್ವಘೋಷಿತ ನಿಯಮವೇ ಜಾರಿಯಲ್ಲಿದೆ. ಆದರೆ, ಇದನ್ನು ತೊಡೆದು ಹಾಕುವ ಹಾಗೂ ಇತರೆ ಬಡಾವಣೆಯ ನಾಗರಿಕರಿಗೆ ಮಾದರಿ ಎನಿಸುವ ಕಾರ್ಯವನ್ನು ಅಕ್ಷಯನಗರದ ನಿವಾಸಿಗಳು ಕೈಗೆತ್ತಿಕೊಂಡಿದ್ದಾರೆ.

ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಅತ್ಯಂತ ಪ್ರಮುಖ. ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆರೆಗಳು ಅಭಿವೃದ್ಧಿ ಆಗಬೇಕು ಎಂಬುದೇ ಆಶಯ. ಆದರೆ, ಇಂದಿನ ಯಾಂತ್ರಿಕ ಬದುಕಿನಲ್ಲಿ ಅಂತಹ ಪ್ರಯತ್ನಕ್ಕೆ ಕೈಹಾಕುವವರು ವಿರಳ. ಇಂತಹ ಸಾಹಸವನ್ನು ಅಕ್ಷಯನಗರದ ನಿವಾಸಿಗಳು ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಶ್ರಮದಾನ ಮಾಡುವ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಾವೇ ಹಣ ಒಟ್ಟುಗೂಡಿಸಿ, ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಬೇಗೂರು-ಜಿಗಣಿ ರಸ್ತೆಯಲ್ಲಿರುವ ಅಕ್ಷಯನಗರದಲ್ಲಿ ಸುಮಾರು ೩೦೦ ಮನೆಗಳಿವೆ. 800 ಕ್ಕೂ ಹೆಚ್ಚು ಖಾಲಿ ನಿವೇಶನಗಳೂ ಇವೆ. ಇವರೆಲ್ಲರೂ ಸೇರಿಕೊಂಡಿರುವ, ಅಕ್ಷಯನಗರ ನಿವಾಸಿಗಳು ಮತ್ತು ನಿವೇಶನ ಮಾಲೀಕರ ಕಲ್ಯಾಣ ಸಂಸ್ಥೆ ವತಿಯಿಂದ ಅಕ್ಷಯನಗರ ಕೆರೆಯನ್ನು ಉಳಿಸಲು ಅಕ್ಷಯನಗರ ಕೆರೆ ಅಭಿವೃದ್ಧಿ ಕಾರ್ಯಪಡೆ ರಚಿಸಿಕೊಂಡಿದ್ದಾರೆ. ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಕೆರೆ ಸಂರಕ್ಷಿಸುವ ಹಾಗೂ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

ಸುಮಾರು 4 ಎಕರೆ ಪ್ರದೇಶದಲ್ಲಿರುವ ಅಕ್ಷಯನಗರ ಕೆರೆ ಹೂಳು ಹಾಗೂ ಮಾಲಿನ್ಯ ತುಂಬಿಹೋಗಿದೆ. ಅಲ್ಲದೆ ರಾಜಕಾಲುವೆಗಳು ಮುಚ್ಚಿಹೋಗಿವೆ. ಇದರಿಂದ ಮಳೆ ನೀರು ಕೆರೆಗೆ ಹರಿದು ಬರುತ್ತಿಲ್ಲ. ಅಲ್ಲದೆ, ದಂಡೆ ಕೂಡ ದುರ್ಬಲವಾಗಿದ್ದು ನೀರು ನಿಲ್ಲುತ್ತಿಲ್ಲ. ಒಳಚರಂಡಿ ನೀರು ಇಲ್ಲಿಗೆ ಬಂದು ಸೇರುತ್ತಿದೆ. ಇದೆಲ್ಲವನ್ನು ಅರ್ಥೈಸಿಕೊಂಡಿರುವ ಈ ಕೆರೆ ಅಭಿವೃದ್ಧಿ ಕಾರ್ಯಪಡೆ, ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದೆ. ಪ್ರತಿ ಭಾನುವಾರ ಸ್ಥಳೀಯ ನಿವಾಸಿಗಳು ಅವರ ಮಕ್ಕಳೊಂದಿಗೆ ಒಂದು ಗಂಟೆಗಳ ಕಾಲ ಶ್ರಮದಾನದ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ.
ಕೆರೆಯನ್ನು ಅಭಿವೃದ್ಧಿಪಡಿಸಬೇಕಾದರೆ ಸ್ಥಳೀಯ ಜನಸಮೂದಾಯದ ಪಾಲುದಾರಿಕೆ ಹಾಗೂ ವಂತಿಕೆ ಪಡೆಯುವುದು ವಾಡಿಕೆ. ಇದನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುತ್ತಿರುವ ಅಕ್ಷಯನಗರದ ನಿವಾಸಿಗಳು, ಕೆಲವು ಲಕ್ಷಗಳನ್ನು ಇಲ್ಲಿನ ವಾಸಿಗಳು ಹಾಗೂ ಕೊಡುಗೆಯಿಂದ ಬಿಬಿಎಂಪಿಗೆ ನೀಡುವ ಪಣತೊಟ್ಟಿದ್ದಾರೆ. ಇವರ ಈ ಪ್ರಯತ್ನಕ್ಕೆ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಬೆಂಬಲ ಇದ್ದು, ಅವರು ಸಹ ತಮ್ಮ ಶಾಸಕರ ನಿಧಿಯಿಂದ ಹಣವನ್ನು ನೀಡಲಿದ್ದಾರೆ.

ಒಂದು ಕೆರೆಯನ್ನು ಉಳಿಸಲು ಸ್ಥಳೀಯರ ಆಸಕ್ತಿ ಹಾಗೂ ಜವಾಬ್ದಾರಿ ಏನು ಎಂಬುದನ್ನು ಅಕ್ಷಯನಗರದ ನಿವಾಸಿಗಳು ತಿಳಿದುಕೊಂಡಿದ್ದಾರೆ. ಅದರಂತೆ, ಅಕ್ಷಯನಗರ ಕೆರೆಯನ್ನು ಉಳಿಸಲು ಅವರು ಕೇವಲ ಹೋರಾಟ ಮಾಡುತ್ತಿಲ್ಲ. ಬದಲಿಗೆ, ತಾವು ಏನು ಮಾಡಬಹುದು ಎಂಬುದನ್ನು ಅರಿತುಕೊಂಡು ಕಾರ್ಯಪ್ರವೃತರಾಗಿದ್ದಾರೆ. ಇಂತಹುದೇ ಸಂಘಟನೆಗಳು ಅಥವಾ ಕಾರ್ಯಪಡೆಗಳು ನಗರದ ಹಲವು ಬಡಾವಣೆಗಳಲ್ಲಿ ಹುಟ್ಟಿಕೊಂಡರೆ, ನಮ್ಮ ಕೆರೆಗಳು ಉಳಿಯುವುದಷ್ಟೇ ಅಲ್ಲ, ಅಭಿವೃದ್ಧಿ ಕಾಣುವಲ್ಲಿ ಸಂಶಯವಿಲ್ಲ.

ಕೆರೆ ಸಂರಕ್ಷಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸ ಸರಕಾರ ಅಥವಾ ಇಲಾಖೆಗಳದ್ದಷ್ಟೇ ಅಲ್ಲ. ಅವರೇ ಮಾಡಲಿ ಎಂದು ಕೈಕಟ್ಟಿ ಕುಳಿತರೆ, ಇನ್ನಷ್ಟು ಕೆರೆಗಳು ನೆಲಸಮವಾಗುತ್ತದೆ. ಅಕ್ಷಯನಗರದ ನಿವಾಸಿಗಳಂತೆ ಸ್ವಯಂಪ್ರೇರಿತವಾಗಿ ಕಾರ್ಯೋನ್ಮುಖವಾದರೆ, ಬೆಂಗಳೂರು ಮತ್ತೊಮ್ಮೆ "ಕೆರೆಗಳ ನಗರಿ' ಎಂಬ ಖ್ಯಾತಿಗೆ ಪಾತ್ರವಾಗುತ್ತದೆ.

ಆತ್ಮೀಯ ಮಂಜು ಅವರೆ,

ಸಮಯೋಚಿತ ಲೇಖನ. ಸಮುದಾಯದ ಕಣ್ಣು ತೆರೆಸುವಂಥದ್ದು. ಇನ್ನಿತರೆಡೆಗಳಲ್ಲಿ ಇಂತಹ ಪ್ರಯತ್ನಗಳು ಸಾಗಲು ಪ್ರೇರಣೆ ಇಲ್ಲಿದೆ.

ಹರ್ಷವರ್ಧನ ವಿ. ಶೀಲವಂತ

Post new comment

The content of this field is kept private and will not be shown publicly.