ನೀರ ಸ್ವಾವಲಂಬನೆಯ ಚಿಕ್ಕಣ್ಣನಹಳ್ಳಿ ಶಾಲೆ

ಚಿಕ್ಕಣ್ಣನಹಳ್ಳಿ ಶಾಲೆ

ನೀರ ಸ್ವಾವಲಂಬನೆಯ ಚಿಕ್ಕಣ್ಣನಹಳ್ಳಿ ಶಾಲೆ

ಕೊರಟಗೆರೆ ತಾಲ್ಲೂಕು ತೋವಿನಕೆರೆ ಬಳಿಯ ಚಿಕ್ಕಣ್ಣನಹಳ್ಳಿ ಪ್ರೈಮರಿ ಶಾಲೆಯ ಸುತ್ತ ತಂತಿ ಬೇಲಿ. ಕಬ್ಬಿಣದ ಗೇಟು. ಯಾವ ದಿಕ್ಕಿನಿಂದಲೂ ಒಳ ಹೋಗಲು ಸಾಧ್ಯವಿಲ್ಲದಂತಹ ರಕ್ಷಣೆ. ಅರೆ ಶಾಲೆಗೇಕೆ ಈ ಪರಿಯ ಭದ್ರತೆ ಎಂದುಕೊಂಡು ಗ್ರಾಮದ ನಾರಾಯಣಗೌಡರನ್ನು ಕೇಳಿದರೆ ಅವರು " ಸ್ಕೂಲ್ಗೆ ಮಳೆ ನೀರು ಸಂಗ್ರಹಣೆ ಮಾಡೈತೆ, ಮಕ್ಳು ಮರಿ ಹೋಗಿ ಗಲೀಜ್ ಮಾಡ್ದಂಗಿರ್ಲಿ ಮತ್ತೆ ಪೈಪುಗಳ್ನ ಹೊಡಿದಂಗಿರ್ಲಿ ಅಂತ ಬೇಲಿ ಹಾಕಿದಿವಿ" ಎಂದರು.

ಅವರ ಮಾತಿಗೆ ಸಾಕ್ಷಿಯಾಗಿ ಶಾಲೆಯ ಮುಂಭಾಗ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ತೊಟ್ಟಿ ಕಂಡಿತು. ಮುಚ್ಚಳಿಕೆ ಹಾಕಿ ಭದ್ರ ಪಡಿಸಿದ್ದ ಅದಕ್ಕೆ ಶಾಲೆಯ ಛಾವಣಿಯಿಂದ ನೀರು ಹಾಯುವ ಪೈಪುಗಳನ್ನು ಜೋಡಿಸಲಾಗಿತ್ತು. ಪೈಪುಗಳಿಂದ ನೀರು ಬಂದು ತೊಟ್ಟಿಗೆ ಬೀಳುವ ಸ್ಥಳದಲ್ಲಿ ನೀರು ಶೋಧಕವಿದ್ದು  ಛಾವಣಿಯ ನೀರಿನಲ್ಲಿರುವ ಕಸ-ಕಡ್ಡಿ, ಧೂಳು, ಕಲ್ಮಶಗಳು ಅಲ್ಲಿ ಶೋಧಗೊಂಡು ತೊಟ್ಟಿಗೆ ಬೀಳುವ ಅಚ್ಚುಕಟ್ಟಾದ ವ್ಯವಸ್ಥೆ. ತೊಟ್ಟಿಯ ಸುತ್ತಲೂ ಸಹ ನೈರ್ಮಲ್ಯತೆ ಇದ್ದು ಅದನ್ನು ಪ್ರತಿ ದಿನ ತಪ್ಪದಂತೆ ಮಾಡಲು ಮಕ್ಕಳ ತಂಡವನ್ನು ರಚಿಸಲಾಗಿದೆ. ಪ್ರತಿದಿನ ಒಂದೊಂದು ತಂಡದವರು ಮಳೆ ನೀರು ಸಂಗ್ರಹದ ಪ್ರತಿಯೊಂದು ಭಾಗವನ್ನೂ ಸಹ ಗಮನಿಸಬೇಕು ಮತ್ತು ಸ್ವಚ್ಚಗೊಳಿಸಬೇಕು ಎಂದು ಅವರಿಗೆ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗರಾಜು.

ತೊಟ್ಟಿಯನ್ನು ಗಮನಿಸಬೇಕಾದರೆ ಅಲ್ಲೆಲ್ಲಿಯೂ ನಲ್ಲಿ ಕಾಣಲಿಲ್ಲ. ನಲ್ಲಿಯೇ ಇಲ್ಲದ ಮೇಲೆ ಮಕ್ಕಳು ನೀರು ಹೇಗೆ ಬಳಸುತ್ತಾರೆ? ಅನುಮಾನ ಮುಂದಿಟ್ಟೆ. ಅದಕ್ಕವರು "ಸ್ವಚ್ಚತೆ ಕಾಪಾಡಲು ಮತ್ತು ಇಲ್ಲಿ ಸಂಗ್ರಹವಾದ ಮಳೆ ನೀರು ಪೋಲಾಗದಂತೆ ತಡೆಯಲು ಶಾಲೆಯ ಆಫೀಸ್ ರೂಮಿನ ಒಳಗೆ ಕೈಬೋರು ಜೋಡಿಸಿದ್ದೇವೆ, ಎಲ್ಲರೂ ಅಲ್ಲಿಯೇ   ನೀರು ಬಳಸಬೇಕು" ಎಂದರು. ನಿಜಕ್ಕೂ ಅತ್ಯುತ್ತಮ ವಿಧಾನ.

೧ ರಿಂದ ೫ ನೇ ತರಗತಿವರೆಗಿನ ಈ ಶಾಲೆಯಲ್ಲಿ ೪೦ ಮಕ್ಕಳಿದ್ದಾರೆ. ಅವರಿಗೆ ನಿತ್ಯ ಕುಡಿಯಲು, ಕೈ ಕಾಲು ತೊಳೆಯಲು, ಬಿಸಿಯೂಟ ತಯಾರಿಸಲು, ತಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಮಳೆ ನೀರನ್ನೇ ಬಳಸಲಾಗುತ್ತಿದೆ. "ಮುಂಚೆ ಈ ಉದ್ದೇಶಗಳಿಗೆ ಮಕ್ಕಳನ್ನು ಹತ್ತಿರದ ಬೋರ್ ವೆಲ್ ಗೆ ಕಳುಹಿಸಬೇಕಾಗುತ್ತಿತ್ತು, ಈಗ ಮಕ್ಕಳಿಗೆ ಆ ಶ್ರಮ ಇಲ್ಲ ಹಾಗೂ ಅಷ್ಟು ಸಮಯವೂ ಸಹ ಉಳಿತಾಯವಾಗುತ್ತಿದೆ, ಎಲ್ಲಕ್ಕಿಂತ ಮುಖ್ಯವಾಗಿ  ಮಿನರಲ್ ವಾಟರ್ ಗಿಂತಲೂ ಉತ್ತಮವಾದ ಮಳೆ ನೀರನ್ನು ನಮ್ಮ ಮಕ್ಕಳು ಕುಡಿಯುತ್ತಿದ್ದಾರೆ" ಎಂದು ಅಭಿಮಾನದಿಂದ ನುಡಿಯುತ್ತಾರೆ ಶಾಲೆಯ ಮುಖ್ಯೋಪಾಧ್ಯಯರಾದ ಚಂದ್ರಪ್ಪ. ಇಲ್ಲಿ ಸಂಗ್ರಹವಾಗುವ ನೀರು ವರ್ಷ ಪೂರ್ತಿ ಶಾಲೆಗೆ ಸಾಕಾಗುತ್ತದೆ.

ಸರ್ಕಾರದ ಸುವರ್ಣಜಲ ಯೋಜನೆಯಡಿಯಲ್ಲಿ ಜಿಲ್ಲೆಯ ೧೩೦೦೦ ಶಾಲೆಗಳಲ್ಲಿ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ ಮಧುಗಿರಿಯ ಕೆ.ಟಿ.ಹಳ್ಳಿ,  ಪಾವಗಡದ ಕ್ಯಾತಗಾನಕೆರೆ, ಶಿರಾದ ಯಾದಲಡಕು ಮತ್ತು ಸದರಿ ಚಿಕ್ಕಣ್ಣನಹಳ್ಳಿ ಶಾಲೆಗಳನ್ನು ಅರ್ಘ್ಯಂ ಮತ್ತು ಬರ್ಡ್-ಕೆ ಸಂಸ್ಥೆಗಳು ಮಾದರಿಯನ್ನಾಗಿಸಬೇಕೆನ್ನುವ ಹಂಬಲದಿಂದ ಹೆಚ್ಚಿನ ಆದ್ಯತೆ ನೀಡಿವೆ. ಇದಕ್ಕೆ ಅರ್ಘ್ಯಂ ಸಂಸ್ಥೆಯು ಹಣಕಾಸು ಒದಗಿಸುತ್ತಿದೆ. ಯೋಜನೆಯ ಸಮಗ್ರ ದಾಖಲಾತಿ ಮಾಡುವ ಸಲುವಾಗಿ ಎರಡು ಹಂತದಲ್ಲಿ ಈ ಸಂಸ್ಥೆಗಳು ಸರ್ವೆ ನಡೆಸುತ್ತವೆ.

ಮೊದಲನೆಯದು ಯೋಜನೆ ಅಳವಡಿಕೆಗೆ ಮುನ್ನ. ಶಾಲೆ ಚಾವಣಿಯ ಅಳತೆ, ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ ಮುಂತಾದ ಮಾಹಿತಿಯನ್ನು ಈ ಹಂತದಲ್ಲಿ ಸಂಗ್ರಹಿಸಿದರೆ ಯೋಜನೆ ಅನುಷ್ಠಾನಗೊಂಡ ನಂತರ ಆಗಿರುವ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡಲಾಗುತ್ತದೆ. ಇದಲ್ಲದೆ ಯೋಜನೆಯ ಸಫಲತೆಗಾಗಿ ತರಬೆತಿಗಳನ್ನೂ ಸಹ ನಡೆಸಲಾಗುತ್ತಿದೆ. "ಈಗಾಗಲೇ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ತಲಾ ೪ ತರಬೆತಿ ನೀಡಲಾಗಿದೆ" ಎನ್ನುತ್ತಾರೆ ಈ ಯೋಜನೆಯ ತಾಲ್ಲೂಕು ಸಂಯೋಜಕರಾದ ನಾಗರಾಜರಾವ್. ಅಂತಿಮವಾಗಿ ನಿರ್ವಹಣೆ ಕುರಿತು ತರಬೇತಿ ನೀಡಿ ಇಡೀ ಘಟಕದ ಉಸ್ತುವಾರಿಯನ್ನು ಎಸ್ ಡಿ ಎಂ ಸಿ ಗೆ ವಹಿಸಲಾಗುತ್ತದೆ.  ಅವರ ಪ್ರಕಾರ ಶಾಲೆಯ ಸಿಬ್ಬಂದಿ ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಮತ್ತಷ್ಟು ಆಸಕ್ತಿ ತೋರಿಸಬೇಕಾಗಿದೆ. ಪ್ರತಿ ವಿದ್ಯಾರ್ಥಿಗೆ ನಿತ್ಯ ಒಂದೂವರೆ ಲೀಟರ್ ನೀರು ಕಲ್ಪಿಸುವ ಉದ್ದೇಶ ಈ ಯೋಜನೆಯದು.

ಶಾಲಾ ಮಕ್ಕಳಿಗೆ ನೀರು ಅತ್ಯಗತ್ಯವಾಗಿ ಬೇಕಾಗಿದೆ. ರಾಜ್ಯದ ಎಷ್ಟೋ ಶಾಲೆಗಳಲ್ಲಿ ಕುಡಿಯಲು ಮತ್ತು ಶೌಚಾಲಯಗಳಲ್ಲಿ ಬಳಸಲು ಅವಶ್ಯ ನೀರೇ ಲಭ್ಯವಿಲ್ಲ. ಆ ಕೊರತೆ ನೀಗಿಸಲು ಬಂದಿರುವ ಈ ಯೋಜನೆಯನ್ನು ಉಪಾಧ್ಯಾಯರು, ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಬಳಸಿಕೊಂಡು ಚಿಕ್ಕಣ್ಣನಹಳ್ಳಿಯ ಶಾಲೆಯಂತೆ ನೀರ ಸ್ವಾವಲಂಬನೆ ಸಾಧಿಸಬೇಕಿದೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
9 + 1 =
Solve this simple math problem and enter the result. E.g. for 1+3, enter 4.