ನದಿ ಪಕ್ಕದಲ್ಲೇ ನೀರಡಿಕೆ

ಮಣಿಪುರದ ಜಲಸಮೃದ್ಧಿ

ಹರಿವ ನದಿ ಪಕ್ಕ ಕೂತು ಬಾಯಾರಿಕೆಯಿಂದ ಚಡಪಡಿಸುವ ಸ್ಥಿತಿ ಊಹಿಸಬಲ್ಲಿರಾ?

ಅಂಥ ಪರಿಸ್ಥಿತಿಯಲ್ಲಿದೆ ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್‌. ಇಲ್ಲಿ ಪ್ರತಿ ವಾರ್ಷಿಕ ಮಳೆ ಪ್ರಮಾಣ ೧೪೭೬.೫ ಮಿಮೀ. ಮೇ ತಿಂಗಳಿಂದ ಅಕ್ಟೋಬರ್‌ವರೆಗೆ, ಅಂದರೆ ಸತತ ಆರು ತಿಂಗಳುಗಳ ಇಲ್ಲಿ ಮಳೆಗಾಲ. ಮುಂಗಾರು ಮೋಡಗಳು ಮೊದಲು ತಲುಪುವುದು ದೇಶದ ಈಶಾನ್ಯ ಭಾಗದಲ್ಲಿರುವ ಈ ರಾಜ್ಯಕ್ಕೇ.

ಆದರೆ, ಮಳೆ ಬಂದಷ್ಟೇ ವೇಗವಾಗಿ ಹರಿದುಹೋಗುತ್ತದೆ. ಬೆಟ್ಟಪ್ರದೇಶಗಳಿಂದ ತುಂಬಿದ ಮಣಿಪುರದಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಷ್ಟಕ್ಕಷ್ಟೇ. ಪ್ರಗತಿಯ ಭರಾಟೆಯಲ್ಲಿ ಈ ಮೂಲತತ್ವ ಮರೆಯಾಗಿದೆ.

ಹಾಗೆ ನೋಡಿದರೆ ಮಣಿಪುರದಲ್ಲಿ ನೀರು ಸಂಗ್ರಹಿಸಲು ಸಾಕಷ್ಟು ಅವಕಾಶಗಳಿವೆ. ಕೆಲವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಕೂಡ. ಇಂಫಾಲ್‌, ಇರಿಲ್‌, ನಂಬುಲ್‌, ಚಾಕ್ಪಿ, ಥೌಬಾಲ್‌ ಹಾಗೂ ಕುಂಗಾ ಹೆಸರಿನ ಪ್ರಮುಖ ನದಿಗಳನ್ನು ಹೊಂದಿರುವ ರಾಜ್ಯದಲ್ಲಿ ನೀರಿನ ಹರಿವು ಚೆನ್ನಾಗಿದೆ. ಬೆಟ್ಟದ ಪ್ರದೇಶಗಳಿಂದ ಮೆಕ್ಕಲುಮಣ್ಣನ್ನು ಹೊತ್ತು ತರುವ ನದಿಗಳು, ಫಲವತ್ತಾದ ನದಿ ಕಣಿವೆಗಳನ್ನು ನಿರ್ಮಿಸಿವೆ.

ಹಾಗಾದರೆ, ಮಣಿಪುರ ಸಮೃದ್ಧವಾಗಿರಬೇಕಿತ್ತಲ್ಲ?

ಇಲ್ಲ ಎನ್ನುವುದೇ ಮುಖ್ಯ ದುರಂತ. ಸುಮಾರು ೨೨,೩೨೭ ಚದರ ಕಿ.ಮೀ ವ್ಯಾಪ್ತಿಯ ಪುಟ್ಟ ರಾಜ್ಯ ಮಣಿಪುರ. ೨೦೦೧ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಕೇವಲ ೨೨ ಲಕ್ಷ. ಇಷ್ಟು ಕಡಿಮೆ ಜನಸಂಖ್ಯೆ ಇರುವ ರಾಜ್ಯದಲ್ಲಿ ಮಳೆ ಏರುಪೇರಾದರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ, ವಾರ್ಷಿಕ ೧೪೭೬.೫ ಮಿಮೀ ಮಳೆ ಬಂದರೂ ಅದು ಜನರ ಪಾಲಿಗೆ ದಕ್ಕುತ್ತಿಲ್ಲ.

ಇಡೀ ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಒಂದೇ ತೆರನಾಗಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಹರಿವ ನೀರು ರಭಸದಿಂದ ಬೆಟ್ಟವಿಳಿದು ನದಿ ಸೇರುತ್ತದೆ. ಅಲ್ಲಿಂದ ಸೀದಾ ಚಿಕ್ಕಪುಟ್ಟ ಅಣೆಕಟ್ಟುಗಳನ್ನು ತುಂಬಿಕೊಂಡು ಹರಿದು ಬಂಗಾಳಕೊಲ್ಲಿಯತ್ತ ಧಾವಿಸುತ್ತದೆ. ಮಳೆ ನೀರನ್ನು ಅಣೆಕಟ್ಟೆಗಿಂತ ಮುಂಚೆಯೇ ಅಲ್ಲಲ್ಲಿ ತಕ್ಕಮಟ್ಟಿಗೆ ಸಂಗ್ರಹಿಸಿಡುವ ವ್ಯವಸ್ಥೆ ಬೆಳೆದಿಲ್ಲ. ಕೊಳಾಯಿ ನೀರನ್ನು ನೆಚ್ಚಿಕೊಂಡ ಜನ ಮಳೆ ನೀರು ಸಂಗ್ರಹದತ್ತ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೂ ಇತ್ತ ಗಮನ ಹರಿದಿಲ್ಲ. ಯಾವುದೋ ವರ್ಷ ಮಳೆ ಪ್ರಮಾಣ ಕಡಿಮೆಯಾದಾಗ ನೀರಿಗಾಗಿ ಹಾಹಾಕಾರವಾಗುತ್ತದೆ. ಆಗೆಲ್ಲ ಮಳೆ ನೀರು ಸಂಗ್ರಹಿಸುವ ಮಾತು ಕೇಳುತ್ತದೆ. ಮುಂದೆ ಭರ್ಜರಿ ಮಳೆ ಶುರುವಾಗುತ್ತಲೇ ಎಲ್ಲವೂ ಮರೆತುಹೋಗುತ್ತದೆ.

ನೀಲಿಬಣ್ಣದ ಪರ್ವತ ಶ್ರೇಣಿಗಳ ನಡುವೆ ಇರುವ ಮಣಿಪುರ ನಿಸರ್ಗ ರಮಣೀಯತೆಯ ಅದ್ಭುತ ಪ್ರದೇಶ. ಹಾಗೆಂದೇ ಪಂಡಿತ್ ಜವಹರಲಾಲ್ ನೆಹರೂ ಮಣಿಪುರವನ್ನು ‘ಭಾರತದ ಆಭರಣ ಎಂದು ಬಣ್ಣಿಸಿದ್ದರು. ಆದರೆ, ಇಂಥ ಪ್ರದೇಶದಲ್ಲಿಯೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರಾವಳಿ, ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳ ಪರಿಸ್ಥಿತಿಯೂ ಹೀಗೇ ಆಗಿದೆಯಲ್ಲವೆ?

ಅತ್ಯಂತ ಕಡಿಮೆ ಮಳೆ ಬೀಳುವ ರಾಜಸ್ತಾನದಲ್ಲಿ ಉಂಟಾಗದ ನೀರಿನ ಸಮಸ್ಯೆ ಅತ್ಯಧಿಕ ಮಳೆ ಬೀಳುವ ಪ್ರದೇಶಗಳನ್ನು ಕಾಡತೊಡಗಿದೆ. ನಾವೇ ಮಾಡಿದ ತಪ್ಪಿದು. ಇದನ್ನು ಸರಿಪಡಿಸಬೇಕಾದವರೂ ನಾವೇ. ಮಳೆ ನೀರು ಸಂಗ್ರಹವೊಂದೇ ಈ ಸಮಸ್ಯೆಗೆ ಪರಿಹಾರ.

- ಚಾಮರಾಜ ಸವಡಿ

ಮಳೆ ನೀರಿನ ಸಂಗ್ರಹಣೆ ಮಣಿಪುರದಲ್ಲಿ ಇಲ್ಲವೆಂದಿಲ್ಲ. ಅಲ್ಲಿ ಜನ, ಮನೆಗಳ ಎದುರು ದೊಡ್ಡ ದೊಡ್ಡ ಕೊಳಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದನ್ನು ಪಶುಗಳಿಗೆ ಬಳಸುತ್ತಾರೆ. ಮಣಿಪುರದ ಇನ್ನೊದು ವೈಶಿಷ್ಟ್ಯ ಎಂದರೆ loktak ಕೆರೆ. ಅದರ ಬಗ್ಗೆ ಫೋಟೋ ಸಮೇತ ಬಹಳ ಬೇಗ ಪೋಸ್ಟ್ ಮಾಡುತ್ತೇನೆ. ಆದರೆ ಮಳೆ ನೀರಿನ ಸದ್ವಿನಿಯೋಗ ಎಲ್ಲಿಯೂ ಆಗುತ್ತಿಲ್ಲ ಎಂಬುದು ಸತ್ಯ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
11 + 4 =
Solve this simple math problem and enter the result. E.g. for 1+3, enter 4.