ಆದ್ರಿ ಮಳೆ ಹಬ್ಬ
ಆದ್ರಿ ಮಳೆ ಹಬ್ಬ
ಜೂನ್ ತಿಂಗಳಿನಲ್ಲಿ ಬರುವ ಆದ್ರಿ ಬಿರುಸಿನ ಮಳೆ. ಅದರಲ್ಲೂ ಮಲೆನಾಡಿನಲ್ಲಿ ಇದರ ಆರ್ಭಟ ವಿಪರೀತ. ನೆಲ-ಮುಗಿಲು ಒಂದಾಗುವಂತೆ ಸುರಿಯುವ ಈ ಮಳೆಯಲ್ಲಿ ಮಲೆನಾಡಿಗರು ವಿಶಿಷ್ಟ ಹಬ್ಬ ಆಚರಿಸುತ್ತಾರೆ. ದಂಡಾಡಿ ಬಂದವರಿಗೊಂದು ಎಡೆ ಇಡುವ ಈ ಹಬ್ಬದಲ್ಲಿ ಹಲಸಿನ ಹಣ್ಣು ಮತ್ತು ಕೋಳಿಸಾರು ವಿಶೇಷ ಭಕ್ಷ್ಯಗಳು. ಹೆಚ್ಚಾಗಿ ದೀವರ ಜನಾಂಗದವರು ಇದನ್ನು ಆಚರಿಸುತ್ತಾರೆ. ಇದು ಅವರಿಗೆ ಸಂಭ್ರಮದ ಆಚರಣೆ. ನೆಂಟರಿಷ್ಟರು, ಆಪ್ತರು, ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ಹಬ್ಬಕ್ಕೆ ಬರುವುದರಿಂದ ಎಲ್ಲರ ಸಂಭ್ರಮ ದುಪ್ಪಟ್ಟಾಗುತ್ತದೆ. ಇದೊಂದು ಸಾಮೂಹಿಕ ಹಾಗೂ ಕೌಟುಂಬಿಕ ಆಚರಣೆ. ಈ ಹಬ್ಬ ಮಾಡುವ ಹೊತ್ತಿಗೆ ಹೊಲದಲ್ಲಿ ಬಿತ್ತನೆಯಾದ ಬೀಜ ಮೊಳಕೆಯೊಡೆದು ಸಸಿಯಾಗಿರುತ್ತದೆ.
ಹಬ್ಬದ ದಿನ ಊರ ಗಂಡುಮಕ್ಕಳು ಸುರಿವ ಮಳೆ, ರಭಸ ಗಾಳಿಯನ್ನೂ ಲೆಕ್ಕಿಸದೆ ಮುಖಕ್ಕೆ ಗ್ರಾಮದೇವತೆಯ ಹಾಗೂ ದೀವರ ದೈವವಾದ ಕುಮಾರರಾಮನ ಮುಖವಾಡ ಧರಿಸಿ ಬೀದಿ-ಬೀದಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ತಂತಮ್ಮ ಮನೆ ಮುಂದೆ ಮೆರವಣಿಗೆ ಬಂದಾಗ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಮೆರವಣಿಗೆಯ ಜೊತೆಯಲ್ಲೆ ನಡೆಯುವ ಯುವಕರ ಡೊಳ್ಳು ಕುಣಿತ ಮತ್ತೊಂದು ಪ್ರಮುಖ ಆಕರ್ಷಣೆ ಮತ್ತು ರೋಮಾಂಚನ ಹುಟ್ಟಿಸುವ ದೃಶ್ಯ. ಗುಡುಗಿನ ಸದ್ದನ್ನೂ ಮರೆಮಾಚುವ ಡೊಳ್ಳಿನ ಮೊರೆತ, ಕುಣಿತಗಾರರ ಲಯಬದ್ದ ಹೆಜ್ಜೆ, ಮುಗಿಲು ಮುಟ್ಟುವ ಕೇಕೆಯನ್ನು ನೋಡುವುದು ಒಂದು ಅಪೂರ್ವ ಅನುಭವ. ಕಾಲಡಿ ಹರಿಯುವ ಕೆನ್ನೀರು ಮುಗಿಲಿಂದ ಬೀಳುವ ಮಳೆ ಹನಿಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಸುರಿವ ಮಳೆಯಲ್ಲಿ ಹಬ್ಬ ಮಾಡುವ ಕಲ್ಪನೆಯೇ ವಿಶಿಷ್ಟ.
ಮೆರವಣಿಗೆ ಮುಗಿದು ಪೂಜೆ ಮಾಡಿ ಭಕ್ತರು ತಮ್ಮ ಹರಕೆ ಪೂರೈಸುತ್ತಾರೆ. ಗ್ರಾಮದ ಒಳಿತನ್ನು ಕೋರಿ ಕುರಿ-ಕೋಳಿ ಬಲಿ ನೀಡಲಾಗುತ್ತದೆ. ಅದೇ ದಿನ ಸಂಜೆ ನಡೆಯುವ ಮತ್ತೊಂದು ವಿಶೇಷ ಕ್ರಿಯೆ ಕೊಂಡ ಹಾಯುವುದು. ಈ ಕ್ರಿಯೆಗೆ ಬಿಂಗಿ ಎನ್ನುತ್ತಾರೆ. ನಿಗಿ-ನಿಗಿ ಹೊಳೆಯುವ ಕೆಂಡದ ರಾಶಿಯ ಮೇಲೆ ಭಕ್ತಾದಿಗಳು, ಡೊಳ್ಳು ಕುಣಿತಗಾರರು ಶ್ರದ್ಧೆಯಿಂದ ನಡೆಯುತ್ತಾರೆ. ಮಲೆನಾಡಿನ ಶ್ರೀಮಂತ ಜನಪದ ಪರಂಪರೆಯ ಪ್ರತೀಕ ಈ ಆದ್ರಿ ಮಳೆ ಹಬ್ಬ.
ಹಿಂದೆ ಈ ಹಬ್ಬ ಕುಮಾರರಾಮನ ವಿಜಯದ ಸಮ್ಕೇತವಾಗಿ ಆಚರಣೆಗೆ ಬಂದಿದೆ ಎಂಬ ಐತಿಹ್ಯವಿದ್ದರೂ ಸಹ ಕ್ರಮೇಣ ತನ್ನ ಸ್ವರೂಪ ಬದಲಿಸಿಕೊಂಡು ಈಗ ಗ್ರಾಮದ ಹಬ್ಬವಾಗಿ ಮಾರ್ಪಟ್ಟಿದೆ. ೧೩ ನೇ ಶತಮಾನದಲ್ಲಿ ಬಳ್ಳಾರಿಯ ಕಂಪ್ಲಿಯನ್ನು ಬೇಡರ ಅರಸ ಕುಮಾರರಾಮ ಆಳುತಿದ್ದ. ಮೊಘಲ್ ದೊರೆಗಳ ಜೊತೆ ನಡೆದ ಕದನದಲ್ಲಿ ವೀರಾವೇಶದಿಂದ ಹೋರಾಡಿ ಮಡಿಯುತ್ತಾನೆ. ಮಲೆನಾಡಿನ ಹಳೆಪೈಕದವರು ಆತನ ಸೈನ್ಯದಲ್ಲಿರುತ್ತಾರೆ, ಅವರು ಕುಮಾರರಾಮನ ಮುಖವಾಡ ಮಾಡಿ ಪೂಜಿಸುವ ಕ್ರಿಯೆ ಶುರುಮಾಡುತ್ತಾರೆ. ಆದ್ರಿ ಮಳೆಯ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಲ್ಲಿ ಯುದ್ಧಕ್ಕೆ ಹೋಗುವ, ಬೆಂಕಿಗೆ ಹಾರುವ ಸಾಂಕೇತಿಕ ಆಚರಣೆಗಳನ್ನು ನಡೆಸುತ್ತಾರೆ.
ಶಿವಮೊಗ್ಗ ಜಿಲ್ಲೆ ಸಾಗರ-ಸೊರಬ ತಾಲೂಕುಗಳಲ್ಲಿ ಈ ಹಬ್ಬದ ಖದರು ಜೋರು.
ಈ ರೀತಿ ಪ್ರತಿಯೊಂದು ಮಳೆಯ ಬಗೆಗೂ ಅದರದೇ ಆದ ನಂಬಿಕೆಗಳಿದ್ದು, ಕೆಲವು ಮಳೆಗಳ ಬಗ್ಗೆ ಸಾಮೂಹಿಕವಾದ ಮತ್ತು ವೈಯಕ್ತಿಕ ನೆಲೆಯ ಆಚರಣೆಗಳನ್ನು ಕಾಣಬಹುದು.
- ಮಲ್ಲಿಕಾರ್ಜುನ ಹೊಸಪಾಳ್ಯ
- 649 reads
Email this page
Printer-friendly version
ಲೇಖಕರು
ಹೆಸರು
ಧಾನ್ಯ ಸಂಸ್ಥೆ
ಪರಿಚಯ
ಜಲಸಿರಿ ಪತ್ರಿಕೆ ಕುರಿತು ನಾಲ್ಕು ಮಾತು
ಮಾನವ ಮತ್ತು ಪರಿಸರ ಅಭಿವೃದ್ಧಿಯನ್ನು ಮುಖ್ಯ ದ್ಯೇಯವನ್ನಾಗಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ತುಮಕೂರಿನ ‘ದಾನ್ಯ’ ಸಂಸ್ಥೆಯು ಪ್ರಕಟಿಸುತ್ತಿರುವ ತ್ರೈಮಾಸಿಕ ಪತ್ರಿಕೆ “ಜಲಸಿರಿ ನೀರ ನೆಮ್ಮದಿಗಾಗಿ”. ನೀರಿನ ಸುದ್ದಿಗಳಿಗಾಗಿಯೇ ಮೀಸಲಾದ ಈ ಪತ್ರಿಕೆ ೨೦೦೫ರ ಆಗಸ್ಟ್ ನಿಂದ ಪ್ರಕಟಗೊಳ್ಳುತ್ತಿದೆ. ನೀರಿನ ವಿವಿಧ ಆಯಾಮಗಳ ಬಗ್ಗೆ ಸುದ್ದಿ ಪ್ರಕಟಿಸುವ ಮೂಲಕ ಜನಸಾಮಾನ್ಯರಲ್ಲಿ ಜಲ ಸಾಕ್ಷರತೆ ಮೂಡಿಸುವುದು. ಇದರ ಧ್ಯೇಯ.
ಪ್ರಸ್ತುತ ಪರಿಸ್ಥಿತಿಯಲ್ಲಿ ನೀರು ಬಹು ಚರ್ಚಿತ ವಿಷಯ. ಬಳಕೆ ಯೋಗ್ಯ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು, ನೀರಿನ ವ್ಯಾಪಾರೀಕರಣ, ಖಾಸಗೀಕರಣ ಶುರುವಾಗಿರುವ ಈ ಹಂತದಲ್ಲಿ ನೀರಿನ ಸುದ್ದಿಗಳಿಗೇ ಮೀಸಲಾದ ಪತ್ರಿಕೆಯೊಂದರ ಅಗತ್ಯವಿದೆ ಎಂಬ ಆಶಯದಿಂದ ಸಮಾನಾಸಕ್ತ ಗೆಳೆಯರ ಉಸ್ತುವಾರಿಯಲ್ಲಿ ಪತ್ರಿಕೆ ಪ್ರಕಟಗೊಳ್ಳುತ್ತಿದೆ.
ನೀರಿನ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಚಿಕ್ಕ-ಚಿಕ್ಕ ಪ್ರಯತ್ನಗಳು, ಸಮುದಾಯದ ಮಟ್ಟದಲ್ಲಿ ನಡೆದಿರುವ ಯಶೋಗಾಥೆಗಳನ್ನು ಪ್ರಕಟಿಸುವುದು. ಸರಳ ಮತ್ತು ಸುಲಭ ಜಲ ಸಂರಕ್ಷಣಾ ಪದ್ಧತಿಗಳನ್ನು ಪರಿಚಯಿಸುವುದು. ನೀರಿನ ಸಂರಕ್ಷಣೆ ಹಾಗೂ ಬಳಕೆ ಕುರಿತಾದ ಪಾರಂಪರಿಕ ಜ್ಞಾನದ ಪ್ರಕಟಣೆ ಹಾಗೂ ದಾಖಲಾತಿ. ನೀರುಳಿತಾಯ, ನೀರಿನ ಮರುಬಳಕೆ, ಮಳೆನೀರು ಸಂಗ್ರಹ, ಚಾವಣಿ ನೀರು ಸಂಗ್ರಹ, ಪರಿಸರ ಪೂರಕ ನೈರ್ಮಲ್ಯ ಇತ್ಯಾದಿಗಳ ಬಗ್ಗೆ ಸರಳ ಉಪಾಯಗಳನ್ನು ಪರಿಚಯಿಸುವುದು ಹಾಗೂ ಈ ನಿಟ್ಟಿನಲ್ಲಿ ಯಶಸ್ವಿಯಾದವರ ಬಗ್ಗೆ ಮಾಹಿತಿ ನೀಡುವುದು ಪತ್ರಿಕೆಯ ಆದ್ಯತೆ.
ಪ್ರತಿ ಸಂಚಿಕೆಯನ್ನು ಆಯಾ ಕಾಲದ ಮಳೆ ನಕ್ಷತ್ರಗಳ ಆಧಾರದಲ್ಲಿ ಗುರುತಿಸಲಾಗುತ್ತಿದೆ. ನಮ್ಮ ಗ್ರಾಮೀಣ ಜನತೆಯ ಬದುಕು, ದುಡಿಮೆಗಳೆಲ್ಲಕ್ಕೂ ಮಳೆ ನಕ್ಷತ್ರಗಳೇ ಮೂಲವಾಗಿರುವುದರಿಂದ ಇದು ಸೂಕ್ತ ಎನಿಸುತ್ತದೆ. ‘ಸಂಪುಟ’ ಎಂಬುದಕ್ಕೆ ಬದಲಾಗಿ ‘ವರ್ಷ’ ಎಂದು ಬಳಸಲಾಗುತ್ತಿದೆ. ಜನರ ಆಡು ಮಾತನ್ನೇ ಸಾದ್ಯವಾದಷ್ಟು ಬಳಸಬೇಕೆನ್ನುವುದು ಇದರ ಉದ್ದೇಶ. ಸ್ವಂತ ಅನುಭವದ ಹಾಗೂ ಕೃಷಿಕರ ಬರಹಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆಲ-ಜಲ ಉಳಿವಿಗೆ ಜನಾಂದೋಲನ ರೂಪಿಸುತ್ತಿರುವ ಹಿರಿಯರಾದ ‘ಶ್ರೀ’ ಪಡ್ರೆಯವರು ಆರಂಭದಿಂದಲೂ ಪತ್ರಿಕೆಯ ಆಶಯಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ನೀರು ಮತ್ತು ನೀರ ಬಳಕೆಗೆ ಸಂಬಂಧಪಟ್ಟಂತೆ ಬಳಕೆಯಾಗುವ ಪದ/ಶಬ್ದಗಳನ್ನು ಪರಿಚಯಿಸುವ ‘ನೀರ ಪದ’ ಅಂಕಣವನ್ನು ಪ್ರಾರಂಭಿಸಲಾಗಿದೆ.
ನೀರುಳಿತಾಯ, ನೀರಿನ ಸಮರ್ಥ ನಿರ್ವಹಣೆಯ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಿ ಅವರ ಮನೋಭಾವದಲ್ಲಿ ಬದಲಾವಣೆಯನ್ನುಂಟು ಮಾಡಲು ಪತ್ರಿಕೆ ಆಶಿಸುತ್ತದೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
2 weeks 5 days ago - Re: ಬ್ಯಾಂಕ್ ಅಧಿಕಾರಿ ...
6 weeks 3 days ago - Re: ವೃಷಭಾವತಿ ಎಂಬ ನದಿ ...
6 weeks 3 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 12 hours ago - Re: ಅಕ್ಷಯನಗರ ಕೆರೆಗೆ ...
23 weeks 23 hours ago - Re: ವೃಷಭಾವತಿ ಎಂಬ ನದಿ ...
38 weeks 1 day ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 5 days ago
| Subscribe to IWP Kannada list |
| Visit this group |









Post new comment